Advertisement

ಅಡಿಕೆಯ ಮಾನ

06:35 AM Mar 04, 2018 | Harsha Rao |

ಶತಶತಮಾನಗಳಿಂದ ರೈತರ ಮಾನ ಕಾಪಾಡಿದ ಅಡಿಕೆ ಇದೀಗ ಅವಮಾನಕ್ಕೆ ಒಳಗಾಗಿದೆ. ವರ್ಷಗಟ್ಟಲೆ ಇಡಬೇಕು, ರೇಟು ಬಂದಾಗ ಮಾರಬೇಕೆಂದು ಅಡಿಕೆಗೆ ವಿಷ ಬೆರೆಸಿದರೆ ಕ್ಯಾನ್ಸರ್‌ ಬಾರದೆ ಇದ್ದೀತೆ? ಅಡಿಕೆ ಬೆಳೆಯ ಬುಡ ಬುಡಕ್ಕಾಯಿತು, ಹೂವು-ಸಿಂಗಾರಕ್ಕೂ ವಿಷ ಸಿಂಚನವಾಯಿತು, ಇದೀಗ ನೇರ ಅಡಿಕೆಗೇ ವಿಷ ಸೇರಿಸುವ ರೈತನ ಕ್ರಮದಿಂದ ಅಡಿಕೆಯ ಮಾನ ಉಳಿಯುವುದಾದರೂ ಹೇಗೆ?

Advertisement

ಕೃಷಿ ಸುಖವಿಲ್ಲ, ನಷ್ಟದ ದಾರಿ’ ಎಂದೆಲ್ಲ ಕರಾವಳಿ- ಮಲೆನಾಡು-ಅರೆ ಬಯಲುಸೀಮೆಯ ಲಕ್ಷಾಂತರ ರೈತರು ಪದೇ ಪದೇ ಹೇಳಿದರೂ ಅಡಿಕೆ-ಕಾಫಿ ಅವರನ್ನು ಕೈಬಿಟ್ಟದ್ದು ಕಮ್ಮಿ. ಕರಾವಳಿ-ಮಲೆನಾಡುಗಳ ಭಾಗದಲ್ಲೆಲ್ಲ ಹೆದ್ದಾರಿಯ ಆಚೀಚೆ ಸ್ವಲ್ಪ ಸರಿದು ನೋಡಿ, ಅಡಿಕೆ, ಕಾಫಿ ತೋಟಗಳ ನಡುವೆ ಎದ್ದ ಶ್ರೀಮಂತ ಮಹಾಮನೆಗಳು, ಅವುಗಳ ಮುಂದೆ ನಿಂತಿರುವ ಐಷಾರಾಮಿ ಕಾರುಗಳು, ಆ ಮನೆಯಲ್ಲಾಗುವ ಮದುವೆ-ಮುಂಜಿಗಳು…ಎಲ್ಲವೂ ಅದೇ ತೋಟದ ಉತ್ಪನ್ನಗಳ ಫ‌ಲವೇ. ಇತ್ತೀಚೆಗಂತು ಮೆಣಸೂ ಸೇರಿ ಆ ಭಾಗದ ಬಹುಪಾಲು ಕೃಷಿಕರ ಜೀವನಶೈಲಿ ಬೇರೆಯೇ ಆಗಿದೆ. ಈ ಲೇಖನ ಬರೆಯುವ ನಾನೂ ಅರ್ಧ ರೈತನೇ. ಸರಕಾರಿ ದುಡಿಮೆಯಿಂದ ಬರುವ ಪಗಾರವೂ ಇದೆ. ಆದರೆ ಅಲ್ಲೆಲ್ಲ ತೆರಿಗೆ ಪಾವತಿಸದೆ ನಯಾಪೈಸೆ ಉಳಿಕೆ ಇಲ್ಲ. ಕೃಷಿಕ ಹಾಗಲ್ಲ. ಪಾರಾಗಲೂ, ಲೆಕ್ಕ ತಪ್ಪಿಸಲೂ ಹತ್ತಾರು ದಾರಿಗಳಿವೆ. ರೈತರ ಬೆನ್ನಿಗೆ ನಿಲ್ಲುವ ಹೊಸ ಸರಕಾರಗಳು ಸಬ್ಸಿಡಿ, ಸಾಲಮನ್ನಾ ಎಂದು ಸಾಗುವಳಿದಾರರನ್ನು ಪ್ರೋತ್ಸಾಹಿಸುತ್ತಿವೆ. ತಂಪು ತೋಟದೊಳಗೆ ಶುದ್ಧಗಾಳಿ, ನೀರು, ಹಾಲು, ಹಸಿರು, ವಿಷವಿಲ್ಲದ ಅನ್ನದ ಲೆಕ್ಕ ತೆಗೆದರೆ ಅಲ್ಲೂ ಪರಮಸುಖವೇ. ಇರಲಿ, ಎಲ್ಲವೂ ಇರಲಿ. ಈ ದೇಶದ ರೈತ ಸುಖವಾಗಿ ಬದುಕಲಿ.

ಇಷ್ಟಾದರೂ ಮತ್ತೆ ಮತ್ತೆ ಅದೇ ರಾಗ. ಕೃಷಿ ಸುಖವಿಲ್ಲ ! ಇವರೆಲ್ಲ ತಿಂಗಳ ವೇತನ ಪಡೆಯುವ ನಗರದ ನೌಕರರ ತ್ರಿಶಂಕು ಮನೆಯಲ್ಲಿ ಒಂದು ದಿನ ಇದ್ದು ನೋಡಲಿ. ಉಸಿರುಕಟ್ಟುತ್ತದೆ. ಕರೆಂಟು ಬಿಲ್ಲು, ಹಾಲಿನ ಬಿಲ್ಲು, ಗ್ಯಾಸು, ಪೇಪರ್‌-ನೀರು, ಮಕ್ಕಳ ಓದು, ಗಾಡಿಯ ಪೆಟ್ರೋಲ್‌, ದಿನಸಿ… ತಿಂಗಳ ಒಂದಕ್ಕೆ ಸಂಬಳ ಪಡೆದು ಮೂವ್ವತ್ತಕ್ಕೆ ಮುಗಿಸುವ ಕಷ್ಟ. ಇಂಥವರ ಆಕ್ರಂದನ ಯಾರಿಗೂ ಕೇಳಿಸುವುದಿಲ್ಲ. ಆದರೆ ಅಡಿಕೆ, ಕಾಫಿ ಕೃಷಿಕ ಹಾಗಲ್ಲ. ಅದೇ ಅಡಿಕೆಯಿಂದ ಕಾರು ತೆಗೆದಿದ್ದಾನೆ. ಅದೇ ಅಡಿಕೆಯಿಂದ ಮಹಡಿ ಮೇಲೆ ಮಹಡಿ ಏರಿಸಿದ್ದಾನೆ. ಮಕ್ಕಳಿಗೆ ಡಾಕ್ಟರ್‌ ಓದಿಸಿದ್ದಾನೆ. ಅದೇ ಅಡಿಕೆಯಿಂದ ಓಟ ಗೆದ್ದು ಸ್ಥಳೀಯ ಆಡಳಿತರಂಗದಲ್ಲಿ ಪಾಲು ಪಡೆದಿದ್ದಾನೆ. ಮಗ-ಮಗಳಿಗೆ ಗೌಜಿಯಲ್ಲಿ ಮದುವೆ ಮಾಡಿಸಿದ್ದಾನೆ. ಇಷ್ಟಾದರೂ ಅದೇ ಅಡಿಕೆಗೆ ಮಲೆನಾಡಿನ ಶ್ರೀಮಂತ ರೈತ ಮತ್ತೆ ಮತ್ತೆ “ಇದರಿಂದ ಸುಖವಿಲ್ಲ’ ಎಂದು ಬೈಯುತ್ತಾನೆ!

ಎಲ್ಲಿ ಲೆಕ್ಕ ತಪ್ಪಿದ್ದು?
ಬಹಳಷ್ಟು ರೈತರಿಗೆ ಅಡಿಕೆ ತುಂಬಾ ಕೊಟ್ಟಿದೆ. ಕೊಡಬಾರದ್ದನ್ನು ಕೊಟ್ಟಿದೆ. ಲೆಕ್ಕ ತಪ್ಪಿದ್ದು ರೈತನಲ್ಲೇ. ಯಾವುದೇ ರೈತನಿರಲಿ, ಅವನ ಮನೆಯೆದುರು ಇರುವ ಕೃಷಿ-ತೋಟಕ್ಕೂ ತನಗೂ ಒಂದು ಒಡಂಬಡಿಕೆ ಬೇಕು. “”ನಿನ್ನನ್ನು ನಾನು ಸಾಕುತ್ತೇನೆ. ನೀನು ನನ್ನನ್ನು ಪೋಷಿಸು” ಎಂಬ ಒಪ್ಪಂದ ಅದು. ಆದರೆ ಕೃಷಿಕ ತೊಡುವ ಮಣಭಾರದ ಬಂಗಾರ, ಕಟ್ಟುವ ಬಂಗಲೆ ಎಲ್ಲದಕ್ಕೂ ಅಡಿಕೆಯೇ ಆಗಬೇಕೆಂದರೆ ಹೇಗೆ?

ಶತಶತಮಾನಗಳಿಂದ ಅಡಿಕೆ ಈ ಎಲ್ಲವನ್ನೂ ಸಹಿಸಿಕೊಂಡಿತು. ರೈತ ತೀರಾ ಸ್ವಾರ್ಥಿಯಾದ. ಬುಡ ಬುಡಗಳಿಗಷ್ಟೇ ಅಲ್ಲ, ನೇರವಾಗಿ ಯಾರ್ಯಾರದೋ ಬಾಯಿಗೆ ತಿನ್ನಲು ಹೋಗುವ ಫ‌ಲಕ್ಕೂ ವಿಷ ಬೆರೆಸತೊಡಗಿದ. ಈಗ ಕೇಂದ್ರ ಸರಕಾರದ ಬಾಗಿಲಲ್ಲಿ ನಿಂತಿರುವ ನಿಷೇಧದ ತೂಗುಗತ್ತಿ ಅಡಿಕೆಗೆ ಖಾಯಂ ಆಗಿ ಉರುಳಾದರೆ ನೇರವಾಗಿ ಈ ಬಾರಿ ಅಪರಾಧಿ ಜಾಗದಲ್ಲಿ ನಿಲ್ಲಬೇಕಾದವರು ರೈತನೇ.

Advertisement

ಇದು ದೇವರಾಣೆಗೂ ಸತ್ಯ. ಕೊಯ್ದ ಅಡಿಕೆಯನ್ನು ಒಣಗಿಸಿ ಸುಲಿದು ಒಂದೆರಡು ವರ್ಷ ಕಾಪಿಡಲು ಸಾಧ್ಯವಾದುದೇ ಅದಕ್ಕೆ ಬೆರೆಸುವ ವಿಷಗಳಿಂದ. ಸುಲಿಯುವ ಮುನ್ನ, ಸುಲಿದ ನಂತರ ಅಡಿಕೆ ಚೀಲಕ್ಕೆ ನೇರವಾಗಿ ವಿಷದ ಗುಳಿಗೆ ಹಾಕುವ, ವಿಷದ ಹೊಗೆ ಹಾಕುವ ಮೂಲಕ ಕೀಟ ಸೇರದೆ ಅದು ಬಾಳುವ ಹಾಗೆ ಮಾಡುವ ತಂತ್ರ ಈಗ ಮಲೆನಾಡು-ಕರಾವಳಿಯಲ್ಲಿ ಅವ್ಯಾಹತವಾಗಿದೆ. ಈ ವಿಷದ ಗುಳಿಗೆಗೆ ಬೇಡಿಕೆ ಎಷ್ಟಿದೆಯೆಂದರೆ ಅಕ್ಕಿ-ಬೆಲ್ಲ ಮಾರುವ ಸಾಮಾನ್ಯ ಜೀನಸು ಅಂಗಡಿಗಳಲ್ಲೂ ಈ ಕೀಟಕಂಟಕಗಳು ಲಭ್ಯ.

ಪರಿಣಾಮ ಅದೇ ಅಡಿಕೆಯನ್ನು ಅಳೆದು ಸುರಿದ ಇಲಾಖೆಗಳು ಅಡಿಕೆಯಿಂದ ಕ್ಯಾನ್ಸರ್‌ ಬರಬಹುದು ಎಂದಿವೆ. ಇದನ್ನು ಅಲ್ಲಗಳೆಯಲು, ಇಲ್ಲ ಎನ್ನಲು ನನಗಂತೂ ನೈತಿಕತೆಯೇ ಇಲ್ಲ. ಹೌದು, ಕೈಯಲ್ಲಿ ಕಾಸು ಇದ್ದು ಕೊಯಾÉದ ತತ್‌ಕ್ಷಣ ಮಾರದೆ ವರ್ಷಬಿಟ್ಟು ಹೆಚ್ಚಿನ ಬೆಲೆಗೆ ಮಾರುವ ಎಂದು ಇಟ್ಟುಕೊಳ್ಳುವವರು ವಿಷ ಸೇರಿಸಿಯೇ ಸೇರಿಸುತ್ತಾರೆ. ಮೊದಲ ಬಾರಿ ರೈತನಲ್ಲಿ, ಎರಡನೆಯ ಬಾರಿ ಖರೀದಿದಾರನಲ್ಲಿ, ಮೂರನೆಯ ಬಾರಿ ಸಂಗ್ರಾಹಕನಲ್ಲಿ ಬಗೆಬಗೆಯ ವಿಷದಲ್ಲಿ ಮುಳುಗೆದ್ದು ಬಂದ ಅಡಿಕೆ ಕಾರ್ಕೋಟವಾಗದೆ ಉಳಿಯುವುದಾದರೂ ಹೇಗೆ?

ತಿನ್ನುವವರು ಎಲ್ಲಿಯವರು?
ಸಾವಿರಾರು ವರ್ಷಗಳ ಇತಿಹಾಸವಿರುವ ಅಡಿಕೆ, ಬಹು ಬಗೆಗಳಲ್ಲಿ ಬಳಕೆಯಾಗುತ್ತಿರುವ ಅಡಿಕೆ ಮೂಲತಃ ಅಪಾಯಕಾರಿಯಲ್ಲ. ಬಾಯಿತುಂಬ ಕವಳ ಹಾಕಿ ಪಿಚ್‌ಕ್‌ ಅಂತ ತುಪ್ಪುತ್ತಾ, ಆಗಾಗ ಮೆಲ್ಲುತ್ತಾ ಸಂಭ್ರಮಿಸುವ ಎಂಬತ್ತು-ತೊಂಬತ್ತು ವರ್ಷ ಉಳಿದ ಹಿರಿಯರು ಈಗಲೂ ಇದ್ದಾರೆ. ತಿನ್ನುವುದು ಒಂದೇ ಅಲ್ಲ, ಬಣ್ಣ, ಔಷಧ, ಪಾನೀಯ, ಸೋಪು ಹೀಗೆ ಬಹು ಬಗೆಗಳಲ್ಲಿ ಅಡಿಕೆ ಬಳಕೆಯಾಗಿದೆ.

ಲಕ್ಷಾಂತರ ಟನ್‌ ಅಡಿಕೆ ಬೆಳೆಯುವ ಮಲೆನಾಡು-ಕರಾವಳಿಯ ರೈತರನ್ನೊಮ್ಮೆ ಕೇಳಿ ನೋಡಿ, ಈ ಮೇಲಿನ ಬಹುರೂಪಿ ಅಡಿಕೆಯ ಯಾವ ಬಗೆಯನ್ನು ನೀವು ಬಳಸುತ್ತೀರಿ? ಬೇಡ, ಕನಿಷ್ಠ ನಿಮ್ಮ ಮಕ್ಕಳು, ಮೊಮ್ಮಕ್ಕಳು ತಾಂಬೂಲ ತಿನ್ನುತ್ತಾರಾ ಕೇಳಿ ನೋಡಿ. ಉತ್ತರ ಸೊನ್ನೆ. ಹಾಗಾದರೆ, ಇಲ್ಲಿ ಬೆಳೆದ ಅಡಿಕೆ ಎಲ್ಲಿಗೆ ಹೋಗುತ್ತದೆ? ಯಾಕೆ ಹೋಗುತ್ತದೆ-ಎಲ್ಲವೂ ಬೆಳೆಗಾರರಿಗೆ ಗೊತ್ತಿದೆ. ಗರಿಷ್ಠ ಬಳಕೆಯಾಗುವುದು ಉತ್ತರಭಾರತದಲ್ಲಿ. ದಿನಾ ಮೆಲ್ಲುವವರು ಅವರೇ. ಯಾರೋ ಬೆಳೆಯುವವರು. ಇನ್ಯಾರೋ ತಿನ್ನುವವರು. ಈ ದೂರ ವಿಷಸಿಂಚನಕ್ಕೆ ಕಾರಣವಾಗುವ ಒಂದು ಮಾನಸಿಕ ದೂರವೂ ಹೌದು.

ಹಾಗಂತ ನಮ್ಮ ಅಡಿಕೆಯನ್ನು ಉತ್ತರಕ್ಕೆ ಒಯ್ದು ಅಲ್ಲಿ ಗುಟ್ಕಾ ಮಾಡಿ ರೂಪಾಂತರಗೊಳಿಸಿ ದೇಶಕ್ಕೆಲ್ಲಾ ಹಂಚುವ ಉತ್ಪಾದಕರೂ ಸಾಚಾಗಳಲ್ಲ. ಉತ್ತರ ಕನ್ನಡ, ಶೃಂಗೇರಿ, ಕಡೂರು ಮುಂತಾದ ಕಡೆಯಿಂದ ಮಾರಾಟಗೊಳ್ಳುವ ಬೇಯಿಸಿದ ಅಡಿಕೆ ಗುಟ್ಕಾವಾಗಿ ಬರಲಾಗುವಾಗ ಅದಕ್ಕೆ ಸೇರಿಕೊಳ್ಳುವ ಮರದ ಪುಡಿ, ರೆಡ್‌ ಆಕ್ಸೆ„ಡ್‌, ಫಾಸ್ಟರ್‌ ಆಫ್ ಪ್ಯಾರೀಸ್‌ ಸೃಷ್ಟಿಸುವ ಸಮಸ್ಯೆ ಸಾಮಾನ್ಯವಲ್ಲ. ಬೆಂಗಳೂರಿನ ಕಿದ್ವಾಯಿಯಲ್ಲಿ ಇಂಥ ಗುಟ್ಕಾ ಸೃಷ್ಟಿಸಿದ ಕ್ಯಾನ್ಸರ್‌ ರೋಗಗಳಿಗೆ ಬೇರೆಯೇ ಒಂದು ವಾರ್ಡು ಇದೆ. ಇಂಥ ಗುಟ್ಕಾ ವಿಷವಾದುದು, ಇದಕ್ಕೆ ವಿಷ ಸೇರಿಸಿದುದರ ಬಗ್ಗೆ ಈವರೆಗೆ ಬೆಳೆಗಾರನ ಮೇಲೆ ಯಾವ ಆರೋಪವೂ ಇರಲಿಲ್ಲ. ಇದೆಲ್ಲಾ ನಡೆಯುವುದು ಗುಟ್ಕಾ ಕಾರ್ಖಾನೆಗಳಲ್ಲಿ.

ಮೌಲ್ಯವರ್ಧನೆಯ ದಾರಿಯಲ್ಲಿ. ಜರ್ದಾ-ಹೊಗೆಸೊಪ್ಪು ಸೇರಿ ಸತತವಾಗಿ ಗುಟ್ಕಾವನ್ನು ಪಟಾಪಟಾಂತ ಮೆಲ್ಲುವವರ ಬಾಯಿಯ  ದವಡೆಗೆ ಕ್ಯಾನ್ಸರ್‌ ಹರಡುವುದು ಗ್ಯಾರಂಟಿ ಎಂಬುದು ಈಗಾಗಲೇ ಸಾಬೀತಾಗಿದೆ. ಗುಟ್ಕಾದ ಹೆಸರಲ್ಲಿ ಬರೀ ಅಡಿಕೆಯ ಪುಡಿಯನ್ನಷ್ಟೇ ತಿಂದರೆ ಯಾವ ಸಮಸ್ಯೆಯೂ ಇಲ್ಲ. ಕಿಕ್‌ ಕೊಡಬೇಕು, ಸದಾ ಅಮಲಿನಲ್ಲಿರಬೇಕು, ಇದೆಲ್ಲಾ ಕಡಿಮೆ ಬೆಲೆಗೆ ಲಭ್ಯವಾಗಬೇಕೆಂದಾದಾಗ ಬೇನಾಮರನ್ನೆಲ್ಲಾ ಸೇರಿಸಿಕೊಂಡೇ ಸೃಷ್ಟಿಯಾಗುತ್ತವೆ. ಬಹುಪಾಲು ಇಂಥ ವಿಷಕಾರಿ ಗುಟ್ಕಾಗಳನ್ನು ಹೆಚ್ಚು ಬಳಸುವವರು ಕೂಲಿಕಾರ್ಮಿಕರು, ಜನಸಾಮಾನ್ಯರು, ಬಡವರು.

ಈಗ ಹೊಸದಾಗಿ ಸಮಸ್ಯೆ ಬಂದುದು ಬಿಳಿ ಗೋಟು ಅಡಿಕೆಗೆ. ಮೊನ್ನೆ ಮೊನೆಯವರೆಗೆ ಈ ಒಕ್ಕಣ್ಣ ಸುರಕ್ಷಿತವಾಗಿ ರಾಜನಾಗಿದ್ದ. ತಿನ್ನುವವರಿಗೂ ಮಧುರ ಸುರಕ್ಷಿತ ಸುಖ. ಬೆಳೆಗಾರರಿಗೂ ಆರ್ಥಿಕ ಲಾಭ. ಇದೀಗ ಇಬ್ಬಗೆಯಲ್ಲೂ ರೈತ ಅಡಕತ್ತರಿಗೆ ಒಳಗಾಗಿದ್ದಾನೆ. ರೈತಮುಖೀ ಈ ಸೋಲನ್ನು ಮಾರುಕಟ್ಟೆ ತಂತ್ರವನ್ನಾಗಿಸಿಕೊಂಡಿದೆ. ನಿಮ್ಮ ಅಡಿಕೆಯಲ್ಲಿ ವಿಷವಿದೆ, ಬೇಡ ಎನ್ನುತ್ತ ಬೆಲೆ ಇಳಿಸಿದೆ. ಹಾಗಂತ ವಿಷದ ಕಾರಣಕ್ಕೆ ಬೇಡವೇ ಬೇಡ ಎನ್ನುವವರಿಲ್ಲ. ಬೆಲೆ ಮಾತ್ರ ಕಡಿಮೆ. ಇದು ತಂತ್ರವಲ್ಲದೆ ಇನ್ನೇನು?

ಕೃತಕ ವಿಷದ ಕಾರಣಕ್ಕೆ ಸರಕಾರ ರೈತರಿಗೇ ಬೆರಳಿಟ್ಟರೆ, ದಾಖಲೆ ಸಮೇತ ಅಡಿಕೆಯ ವಿಷವನ್ನು ಸಾಬೀತು ಪಡಿಸಿದರೆ ಗೆಲ್ಲುವುದು ಸವಾಲಿನ ಕಷ್ಟ. ಈ ಕಾರಣಕ್ಕೇ ಅಡಿಕೆಯ ಪಾಲಿಗೆ ಇದು ಅಗ್ನಿಪರೀಕ್ಷೆಯ ಕಾಲ. ನಿತ್ಯ ಯಾವುದಾದರೂ ಒಂದು ಕಾರಣಕ್ಕೆ ಸ್ಥಿತ್ಯಂತರಕ್ಕೆ ಒಳಗಾಗುತ್ತಲೇ ಬಂದ ಅಡಿಕೆಯನ್ನು ಸಂಘಟನೆಗಳು, ಜನಪ್ರತಿನಿಧಿಗಳು ಹೋರಾಟ-ಹಕ್ಕೊತ್ತಾಯ ಮಾಡಿ ಉಳಿಸಿಕೊಂಡರೂ ಈ ಬಾರಿ ಸ್ವಯಂಕೃತ ಅಪರಾಧ ನಮ್ಮನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದು. ಅಡಿಕೆಗೆ ಕೈಯಾರೆ ವಿಷ ಬೆರೆಸಿ ವಿಷ ತಿನ್ನಿ ಎಂದು ಯಾವ ಹೋರಾಟಗಾರನೂ ಹೇಳಲಾರನು. ಹೋರಾಟಗಾರರ ಬಾಯಿಕಟ್ಟಬಹುದಾದ ಈ ಕೃತಕ ವಿಷದಿಂದ ಮೊದಲು ಅಡಿಕೆಯನ್ನು ನಾವೇ ಪಾರು ಮಾಡಬೇಕು.

ಅಂಥ ಅಡಿಕೆಯನ್ನು ಸ್ಥಳೀಯ ಖರೀದಿದಾರರೇ ಖರೀದಿಸದೇ ಬಿಡಬೇಕು. ಆಗ ರೈತರಿಗೆ ಅರಿವಾಗುತ್ತದೆ. ಮುಂದಿನ ಬಾರಿ ವಿಷವಿಲ್ಲದ ಅಡಿಕೆ ಮಾರುಕಟ್ಟೆಗೆ ಬರುತ್ತದೆ. ಹೀಗಂತ ಎಲ್ಲರೂ ವಿಷ ಸೇರಿಸುವುದಿಲ್ಲ. ಹಣವನ್ನಷ್ಟೇ ಪ್ರೀತಿಸುವ ಶ್ರೀಮಂತರ ಪಾಳಿ ಬಡವರಿಗೂ ಉರುಳಾಗುವ, ಎಲ್ಲರೂ ಒಟ್ಟಾಗಿ ಮುಳುಗುವ ಮುನ್ನ ಸಾರ್ವತ್ರಿಕ ಜಾಗೃತಿಯ ಅಗತ್ಯ-ಅರಿವು ತುಂಬಾ ಇದೆ.

– ನರೇಂದ್ರ ರೈ ದೇರ್ಲ

Advertisement

Udayavani is now on Telegram. Click here to join our channel and stay updated with the latest news.

Next