Advertisement

ಚಾಮರಾಜನಗರ ಕ್ಷೇತ್ರದಲ್ಲಿ ಗೆಲುವು ನನ್ನದೇ: ವಿ.ಶ್ರೀನಿವಾಸಪ್ರಸಾದ್‌

09:53 PM Apr 16, 2019 | Lakshmi GovindaRaju |

ಮೈಸೂರು: ರಾಷ್ಟ್ರಕ್ಕೆ ಮೋದಿ ಅವರ ನಾಯಕತ್ವ ಬೇಕೆಂದು ಎದ್ದಿರುವ ಅಲೆ, ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವ, ತನ್ನ 42 ವರ್ಷಗಳ ರಾಜಕೀಯ ಅನುಭವ, ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕದಿಂದ ಈ ಚುನಾವಣೆಯಲ್ಲಿ ತನಗೆ ಅನುಕೂಲವಾಗಲಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಇದು ತನಗೆ 9ನೇ ಲೋಕಸಭಾ ಚುನಾವಣೆ. 8 ಬಾರಿ ಸ್ಪರ್ಧಿಸಿ, ಐದು ಬಾರಿ ಗೆಲುವು ಸಾಧಿಸಿದ್ದೇನೆ. ಜನರ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆಂದರು.

46 ವರ್ಷಗಳ ಸುದೀರ್ಘ‌ ರಾಜಕೀಯದಿಂದಾಗಿ ದೈಹಿಕವಾಗಿಯೂ ಬಳಲಿದ್ದೆ, ಹೀಗಾಗಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದು ನಂಜನಗೂಡು ಉಪ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ. ಆದರೆ, ಬದಲಾದ ಸನ್ನಿವೇಶದಲ್ಲಿ ಕ್ಷೇತ್ರದ ಜನರ ಅಭಿಮಾನ, ಆತ್ಮೀಯತೆ, ಪ್ರೀತಿ-ವಿಶ್ವಾಸಕ್ಕೆ ಮನಸೋತು ವರಿಷ್ಠರ ಸೂಚನೆ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆಂದರು.

ತನ್ನ ಅನುಭವದ ಆಧಾರದ ಮೇಲೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ, ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದೇನೆ. 25 ವರ್ಷ ಕ್ಷೇತ್ರದ ಸಂಸದನಾಗಿ, ಕೇಂದ್ರ ಸಚಿವನಾಗಿ ಕ್ಷೇತ್ರಕ್ಕೆ ಏನು ಮಾಡಿದ್ದೇನೆ ಎಂಬುದನ್ನು ಹೇಳಿದ್ದೇನೆ. ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರವೇ ಬರಲಿದ್ದು, ಪ್ರಧಾನಿ ಮೋದಿ, ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಬಿಜೆಪಿ ಮೇಲ್ವರ್ಗದವರ ಪಕ್ಷ ಎನ್ನುವುದು, ಮೇಲ್ವರ್ಗ-ಕೆಳವರ್ಗ, ದಲಿತ ವಿರೋಧಿ, ಕೋಮುವಾದಿ ಇವೆಲ್ಲಾ ಚುನಾವಣಾ ಚರ್ಚೆಗಳು. ಕಳೆದ ಚುನಾವಣೆಯಲ್ಲಿ ಬಿಜೆಪಿ 283 ಸ್ಥಾನ ಗೆಲ್ಲಬೇಕಾದರೆ ಎಲ್ಲ ವರ್ಗದವರ ಬೆಂಬಲ ಇರಲಿಲ್ಲವಾ? ಕಾಂಗ್ರೆಸ್‌ ಎಷ್ಟು ಸ್ಥಾನ ಬರಬೇಕಿತ್ತು ಎಂದು ಪ್ರಶ್ನಿಸಿದರು.

Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರಪರ್ವ ಸಮಾವೇಶ ಮಾಡಿ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಬಗ್ಗೆ ಏನೆಲ್ಲಾ ಮಾತನಾಡಿದ್ದರು. ಸಿದ್ದರಾಮಯ್ಯ ಕೂಡ ಇವರಿಗೆ ಯಾವ ರೀತಿ ಹೀಯಾಳಿಸಿದ್ದರು. ಜೆಡಿಎಸ್‌ ಎಲ್ಲಿದೆ, ಕುಮಾರಸ್ವಾಮಿ ನಿಮ್ಮಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂದಿದ್ದರು.

ಈಗ ಕೋಮುವಾದಿ ಬಿಜೆಪಿ ಸೋಲಿಸಲು ದೋಸ್ತಿ ಮಾಡಿಕೊಂಡಿದ್ದೇವೆ ಎನ್ನುವ ಇವರನ್ನು ಜನ ನಂಬುತ್ತಾರಾ ಎಂದು ಪ್ರಶ್ನಿಸಿದರು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನ ದೇಶದ ಬೇರೆ ಬೇರೆ ರಾಜ್ಯಗಳ 21 ನಾಯಕರು ಬಂದಿದ್ದರು. ಈಗ ರಾಷ್ಟ್ರಮಟ್ಟದಲ್ಲಿ ಇವರ ಮೈತ್ರಿ ಏನಾಯಿತು ಎಂದು ಲೇವಡಿ ಮಾಡಿದರು.

ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಇವರದು ದೋಸ್ತಿ ವರ್ಸಸ್‌ ಬಿಜೆಪಿ ಎನ್ನುವ ಬದಲಿಗೆ ದೋಸ್ತಿ ವರ್ಸಸ್‌ ದೋಸ್ತಿ ಎನ್ನುವಂತಾಗಿದೆ. ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಜೆಡಿಎಸ್‌ಗೆ ಅಭ್ಯರ್ಥಿಗಳೇ ಸಿಗಲಿಲ್ಲ. ಬೆಂಗಳೂರು ಉತ್ತರದಲ್ಲಿ ಅಭ್ಯರ್ಥಿ ಸಿಗದೆ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರು.

ದೋಸ್ತಿಗಳ ಈ ಎಲ್ಲ ಅಂಶಗಳಿಂದ ಬಿಜೆಪಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಟಿಕೆಟ್‌ ಕೊಡದಿದ್ದ ಮಾತ್ರಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿಯಲ್ಲ. ತಂತ್ರಗಾರಿಕೆ ಭಾಗವಾಗಿ ಕೊಡದಿರಬಹುದು,

ಮೈತ್ರಿಪಕ್ಷದವರು ಒಂದು ಕ್ಷೇತ್ರದಲ್ಲಿ ಟಿಕೆಟ್‌ ಕೊಟ್ಟು ಮೆರೆಯುವುದು ಬೇಡ ಎಂದು ಟೀಕಿಸಿದರು. ಕೆ.ಎಸ್‌.ಈಶ್ವರಪ್ಪ ಉದ್ವೇಗದಲ್ಲಿ ನಮಗೆ ಮುಸಲ್ಮಾನರ ಮತ ಬೇಡ ಎಂದಿರುವುದು ಸರಿಯಲ್ಲ. ಎಲ್ಲಾ ವರ್ಗದವರ ಮತಗಳೂ ಬೇಕು ಎಂದರು.

ಸಿದ್ದರಾಮಯ್ಯ ಆಸ್ಥಾನದ ವಿದೂಷಕ ಇಬ್ರಾಹಿಂ
ಮೈಸೂರು: ಸಿದ್ದರಾಮಯ್ಯ ಆಸ್ಥಾನದ ವಿದೂಷಕ ಸಿ.ಎಂ.ಇಬ್ರಾಹಿಂಗೂ ದಾವೂದ್‌ ಇಬ್ರಾಹಿಂಗೂ ಏನಾದರೂ ವ್ಯತ್ಯಾಸವಿದೆಯಾ? ಈತನೊಬ್ಬ ಕ್ರಿಮಿನಲ್‌ ರಾಜಕಾರಣಿ.

ಇತ್ತೀಚೆಗೆ ಸಿ.ಎಂ. ಇಬ್ರಾಹಿಂ ತಮ್ಮ ಬಗ್ಗೆ ಮಾತನಾಡುವಾಗ ಅಂಬೇಡ್ಕರ್‌ ಭವನದಲ್ಲಿ ಬೆಳೆದ ವಿ.ಶ್ರೀನಿವಾಸಪ್ರಸಾದ್‌, ಕೇಶವಕೃಪಾ ಗೆ ಹೋಗಿ ಕುಳಿತಿರುವುದು ತಮಗೆ ನೋವಾಗಿದೆ ಎಂದಿದ್ದಕ್ಕೆ ತಿರುಗೇಟು ನೀಡಿದ ಅವರು, ಕೇಶವಕೃಪಾ ಬಿಜೆಪಿ ಸಂಘಟನೆಯಲ್ಲ.

ಸಾಂಸ್ಕೃತಿಕ ಸಂಘಟನೆ ಆರೆಸ್ಸೆಸ್‌ನ ಕಚೇರಿ, ಈ ವ್ಯತ್ಯಾಸ ಗೊತ್ತಿಲ್ಲದೆ ಇಬ್ರಾಹಿಂ ಮಾತನಾಡಿದ್ದಾರೆ. ರಾಜಕಾರಣದಲ್ಲಿ ಆತನೊಬ್ಬ ಸ್ಪೈ ಇದ್ದಂತೆ. ರೊಲೆಕ್ಸ್‌ ವಾಚ್‌ ಹಗರಣದಲ್ಲಿ ಗುಂಡೂರಾವ್‌ ಮಂತ್ರಿಮಂಡಲದಿಂದ ಇಬ್ರಾಹಿಂನನ್ನು ಕೈಬಿಟ್ಟಿದ್ದರು.

ಇಂದಿರಾಗಾಂಧಿ, ದೇವರಾಜ ಅರಸು ಅವರ ಬಗ್ಗೆ ಏನು ಮಾತನಾಡಿದ್ರು, ಸಿದ್ದರಾಮಯ್ಯ ಜೊತೆಯಲ್ಲಿರುವಾಗ ಎಚ್‌.ಡಿ.ದೇವೇಗೌಡರ ಬಗ್ಗೆ ಏನು ಮಾತನಾಡುತ್ತಿದ್ದೆ. ನಿಮ್ಮ ಹಿನ್ನೆಲೆ ಗೊತ್ತಿದೆ ನನಗೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next