Advertisement

ವಾಹನ ವೇಗ ನಿಯಂತ್ರಣ: ಇಂಟರ್‌ಸೆಪ್ಟರ್‌ನ ಪೂರ್ಣ ಬಳಕೆಯಾಗಲಿ

04:36 PM Mar 28, 2017 | Team Udayavani |

ಕೋಟೇಶ್ವರ: ಅಮಿತ ವೇಗದಿಂದ ಸಾಗುವ ವಾಹನಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಪೊಲೀಸ್‌ ಹಾಗೂ ಆರ್‌ಟಿಒ ಇಲಾಖೆ ವಿಫಲ ವಾಗುತ್ತಿದ್ದು ಮಂಗಳೂರಿನಿಂದ ಬೈಂದೂರು ವರೆಗಿನ ರಾ. ಹೆದ್ದಾರಿ 66 ರ ಚತುಷ್ಪಥ ರಸ್ತೆಯಲ್ಲಿ ದಿನಂಪ್ರತಿ ಒಂದಲ್ಲೊಂದು ರೀತಿಯಲ್ಲಿ ವಾಹನ ಅಪಘಾತ ನಡೆಯುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ.

Advertisement

ಸಮೀಪದ ಕೇರಳದಲ್ಲಿ ಪ್ರತಿಯೊಂದು ವಾಹನದ ವೇಗದ ಮಿತಿ ಕಿ.ಮೀ. 70ರಂತೆ ಸಾಗಬೇಕಾದ ನಿರ್ಬಂಧ ಇರುವುದರಿಂದ ಅಲ್ಲಿ ಪ್ರತಿಯೊಂದು ವಾಹನವು ಆ ವೇಗದ ಮಿತಿಯಲ್ಲೇ ಸಾಗುತ್ತಿವೆ. ಅಮಿತ ವೇಗದಲ್ಲಿ ಸಾಗಿದಲ್ಲಿ ಇಂಟರ್‌ಸೆಪ್ಟರ್‌ ಸಹಿತ ಪೆಟ್ರೋಲಿಂಗ್‌ ವಾಹನಗಳು ತಡೆದು ನಿಲ್ಲಿಸಿ ದಂಡ ಹೇರುವುದರೊಡನೆ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಾದ ಕ್ರಮವು ಅಲ್ಲಿನ ಪ್ರತಿಯೊಂದು ವಾಹನ ಚಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಕರ್ನಾಟಕದಲ್ಲಿ ದ್ವಿಚಕ್ರ ವಾಹನ ಸಹಿತ ಘನ ಹಾಗೂ ಲಘು ವಾಹನಗಳು ಕಿ.ಮೀ. 90ರಿಂದ 100ರ ವೇಗದಲ್ಲಿ ಸಾಗುತ್ತಿರುವುದು ಅನೇಕ ಅಪಘಾತಗಳಿಗೆ ಹೇತುವಾಗಿದೆ. ಉಡುಪಿ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಇಂಟರ್‌ಸೆಪ್ಟರ್‌ ಪೊಲೀಸ್‌ ವಾಹನ ಬಳಕೆಯಲ್ಲಿದ್ದರೂ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುವ ಕ್ರಮವನ್ನು ಕೈಗೊಳ್ಳದಿರುವುದು ಈ ಭಾಗದ ವಾಹನ ಚಾಲಕರಿಗೆ ವರದಾನವಾಗಿದೆ. ಕುಂದಾಪುರ ತಾಲೂಕಿಗೆ ಸಂಬಂಧಪಟ್ಟಂತೆ ಸರಿಸುಮಾರು 4 ರಿಂದ 5 ಅಪಘಾತಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನಂಪ್ರತಿ ನಡೆಯುತ್ತಿರುವುದು ಆ ವಾಹನಗಳ ಮಿತವಲ್ಲದ ವೇಗದಿಂದಾಗಿದೆ ಎಂದು ಅಂದಾಜಿಸಲಾಗಿದೆ.

ಬಳಕೆಯಾಗದ ಇಂಡಿಕೇಟರ್‌: ಹಲವು ವಾಹನಗಳಲ್ಲಿ ಇಂಡಿಕೇಟರ್‌ ನಿಷ್ಕ್ರಿಯವಾಗಿದ್ದು ಮಿಕ್ಕುಳಿದ ವಾಹನಗಳಲ್ಲಿ ಇಂಡಿಕೇಟರ್‌ ಬಳಕೆ ಮಾಡದಿರುವುದು ಹಾಗೂ ಬ್ರೇಕ್‌ಲೈಟ್‌ ಇಲ್ಲದಿರುವುದು ವಾಹನ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ಹಲವಾರು ಕಡೆ ಸಿಗ್ನಲ್‌ ನೀಡದೇ ಮನಬಂದಂತೆ ವಾಹನ ಚಲಾಯಿಸುವ ಬೈಕ್‌ ಹಾಗೂ ರಿಕ್ಷಾಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಇಲಾಖೆ ಹೆಚ್ಚಿನ ಕಾಳಜಿ ವಹಿಸದಿದ್ದಲ್ಲಿ ಅಮಾಯಕರು ರಸ್ತೆ ಅಪಘಾತದಲ್ಲಿ ಮೃತಪಟ್ಟು ರಕ್ತದೋಕುಳಿ ಹರಿಯಲಿದೆ. ಉಡುಪಿ ಜಿಲ್ಲೆಗೆ ಮತ್ತೆ ಪ್ರತ್ಯೇಕ 3 ಪೊಲೀಸ್‌ ಗಸ್ತು ವಾಹನ ಅನಾವರಣ ಕಾರ್ಯಕ್ರಮ ರವಿವಾರ ನಡೆದಿರುವ ಈ ದಿಸೆಯಲ್ಲಿ ರಾ. ಹೆದ್ದಾರಿ 66 ಸಹಿತ ರಾಜ್ಯ ಹೆದ್ದಾರಿಗಳಲ್ಲಿ ಸಾಗುವ ವಾಹನಗಳ ವೇಗದ ಮೇಲೆ ನಿಗಾ ವಹಿಸ ಬೇಕಾದ ಕರ್ತವ್ಯ ಪೊಲೀಸರಿಗಿದೆ ಅನ್ನುವುದನ್ನು ಮರೆಯಬಾರದು.

ಸೀಟ್‌ ಬೆಲ್ಟ್ ಬಳಕೆಯಾಗಲಿ 
ಇತರ ರಾಜ್ಯಗಳಲ್ಲಿ ವಾಹನ ಚಾಲಕರಿಗೆ ಸೀಟ್‌ ಬೆಲ್ಟ್ ಬಳಕೆ ಕಡ್ಡಾಯವಾಗಿರುವ ಈ ದಿಸೆಯಲ್ಲಿ ಕರ್ನಾಟಕದ ಬೆಂಗಳೂರು, ಶಿವಮೊಗ್ಗ ಹೊರತುಪಡಿಸಿ ಇನ್ನಿತರ ಕಡೆಗಳಲ್ಲಿ  ಸೀಟ್‌ ಬೆಲ್ಟ್ ಕಡ್ಡಾಯವಿಲ್ಲದಿರುವುದು ಚಾಲಕರ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗಿದೆ. ಅಮಿತ ವೇಗದಲ್ಲಿ ಸಾಗುವ ವಾಹನಗಳ ವೇಗಕ್ಕೆ ನಿಯಂತ್ರಣ ಸಾಧಿಸದಿದ್ದಲ್ಲಿ ಅಮಾಯಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಬೇಕಾದ ಪರಿಸ್ಥಿತಿ ಕಂಡುಬಂದಿದ್ದು ಇದಕ್ಕೊಂದು ಪರ್ಯಾಯ ವ್ಯವಸ್ಥೆಯಾಗಿ ಪೊಲೀಸ್‌ ಇಲಾಖೆ ಆಯ್ದ ಪ್ರದೇಶಗಳಲ್ಲಿ ವಾಹನಗಳ ತಪಾಸಣೆ ಹಾಗೂ ಮಿತ ವೇಗದಲ್ಲಿ ಸಾಗುವ ಪರಿಪಾಠ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಡಾ| ಸುಧಾಕರ ನಂಬಿಯಾರ್‌
 

Advertisement
Advertisement

Udayavani is now on Telegram. Click here to join our channel and stay updated with the latest news.

Next