Advertisement

Private Transport : 30ರವರೆಗೆ ಗಡುವು ನೀಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ

10:01 PM Aug 24, 2023 | Team Udayavani |

ಬೆಂಗಳೂರು: “ಶಕ್ತಿ’ ಯೋಜನೆಯಿಂದಾಗುತ್ತಿರುವ ನಷ್ಟ ಭರಿಸಿಕೊಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆ.30ರ ಗಡುವು ನೀಡಿರುವ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ನಂತರದಲ್ಲಿ ಬಂದ್‌ ಸೇರಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Advertisement

ಈ ಸಂಬಂಧ 32ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟ ಸಭೆ ಸೇರಿ ಒಕ್ಕೊರಲ ತೀರ್ಮಾನ ಕೈಗೊಂಡಿವೆ. ಅದರಂತೆ ಶಕ್ತಿ ಯೋಜನೆಯಿಂದಾಗುತ್ತಿರುವ ನಷ್ಟ ಭರಿಸಿಕೊಡಬೇಕು ಮತ್ತು ತೆರಿಗೆಯಲ್ಲಿ ವಿನಾಯ್ತಿ ನೀಡಬೇಕು. ಈ ಎರಡೂ ಪ್ರಮುಖ ಬೇಡಿಕೆಗಳು ಈಡೇರಿಸಲು ಆ. 30ರವರೆಗೆ ಕಾಲಾವಕಾಶ ನೀಡಲಾಯಿತು. ತದನಂತರ ಅಂದರೆ ಆ. 31ರಂದು ಸಭೆ ಸೇರಿ ರಾಜ್ಯಾದ್ಯಂತ ಬಂದ್‌ ಸೇರಿದಂತೆ ಹಲವು ರೀತಿಯ ಉಗ್ರ ಹೋರಾಟ ನಡೆಸಲು ನಿರ್ಧರಿಸಲಾಯಿತು.

ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮ, “ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಜು. 31ಕ್ಕೆ ಬಂದ್‌ ನಡೆಸಲು ಉದ್ದೇಶಿಸಲಾಗಿತ್ತು. ಸಾರಿಗೆ ಸಚಿವರು ಮಾತುಕತೆಗೆ ಆಹ್ವಾನಿಸಿದ್ದರಿಂದ ಆ. 10ಕ್ಕೆ ಮುಂದೂಡಲಾಯಿತು. ಇದಾದ ಮೇಲೂ ವಿಶ್ವಾಸಕ್ಕೆ ತೆಗೆದುಕೊಂಡು, ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಹಾಗಾಗಿ, ಆ. 30 ಕೊನೆಯ ಗಡುವು’ ಎಂದು ಹೇಳಿದರು.

ಆ. 31ರಂದು ಮತ್ತೆ ಎಲ್ಲ 32 ಸಂಘಟನೆಗಳು ಸಭೆ ಸೇರಿ, ಅಲ್ಲಿ ಬಂದ್‌ ದಿನಾಂಕ ನಿರ್ಧರಿಸಲಾಗುವುದು ಎಂದ ಅವರು, “ಆ. 21ರಂದು ಮುಖ್ಯಮಂತ್ರಿಗಳು ತಮ್ಮ ಸಂಘಟನೆಗಳಿಗೆ ಆಹ್ವಾನ ನೀಡರಲಿಲ್ಲ. ಹಾಗಾಗಿ, ಸಭೆಗೆ ಒಕ್ಕೂಟದ ಯಾವ ಸಂಘಟನೆಯೂ ಹೋಗಿಲ್ಲ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next