Advertisement

ಸಮ್ಮಿಶ್ರ ಸರ್ಕಾರ ಉಳಿವಿಗೆ ಅಂತಿಮ ಸೂತ್ರ

10:59 PM Jul 09, 2019 | Lakshmi GovindaRaj |

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಮಧ್ಯರಾತ್ರಿ ಸೂತ್ರವೊಂದು ಸಿದ್ಧಗೊಂಡಿದೆ. ಒಂದು ವೇಳೆ ಸಂಪುಟ ಪುನಾರಚನೆ ಆದಲ್ಲಿ ಈಗಾಗಲೇ ಸಚಿವ ಸ್ಥಾನ ಅನುಭವಿಸಿರುವ ಕೆಲವರಿಗೆ ಅರ್ಧಚಂದ್ರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಡಾ.ಜಿ.ಪರಮೇಶ್ವರ್‌ ಅವರಿಗೆ ನೀಡದಿರುವುದು ಸೂತ್ರದ ತಿರುಳಾಗಿದೆ. ಇದು ಸಂಕಷ್ಟ ನಿವಾರಣೆಗೆ ಮೈತ್ರಿ ಸರ್ಕಾರದ ಕೊನೇ ಪ್ರಯತ್ನದ ಭಾಗವಾಗಿದೆ.

Advertisement

ಆದರೆ, ಇದೆಲ್ಲವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆಯೇ ಅವಲಂಬಿತವಾಗಿದ್ದು, ಬದಲಾವಣೆಯ ನಂತರ ಪಕ್ಷದಲ್ಲಿ ಬಂಡಾಯ ಅಥವಾ ಭಿನ್ನಮತ ಸ್ಫೋಟಗೊಳ್ಳದಂತೆ ನೋಡಿಕೊಳ್ಳುವಂತೆ ಹೈಕಮಾಂಡ್‌ ಅವರಿಗೆ ಸೂಚನೆ ನೀಡಿದೆ.

ಮಹಾರಾಷ್ಟ್ರ -ಹರಿಯಾಣ ವಿಧಾನಸಭೆ ಚುನಾವಣೆ ಸೇರಿ ಮುಂದಿನ ವರ್ಷದ ಫೆಬ್ರವರಿವರೆಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರಲೇಬೇಕು. ಅಲ್ಲಿಯವರೆಗೆ ಉಳಿಸಿಕೊಳ್ಳಿ, ಮುಂದಿನದನ್ನು ಆಮೇಲೆ ನೋಡೋಣ ಎಂಬ ಸಂದೇಶವೂ ಖಡಕ್‌ಆಗಿ ಹೈಕಮಾಂಡ್‌ನಿಂದ ರವಾನೆಯಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಹೀಗಾಗಿ, ಸೋಮವಾರ ತಡರಾತ್ರಿವರೆಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ನಿರಂತರ ಸಭೆ ನಡೆಸಿ ಸರ್ಕಾರ ಉಳಿಸಿಕೊಳ್ಳಲು ಅಂತಿಮ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಿನ ಸೂತ್ರಕ್ಕೆ ಅತೃಪ್ತ ಶಾಸಕರು ಒಪ್ಪಿದರೆ ಶುಕ್ರವಾರವೇ ವಿಶ್ವಾಸಮತ ಯಾಚಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.

ಅದಕ್ಕೆ ಮೊದಲು ಅತೃಪ್ತರ ಜತೆ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಒನ್‌ ಟು ಒನ್‌ ಚರ್ಚೆ ನಡೆಸಲಿದ್ದಾರೆ. ರಾಮಲಿಂಗಾರೆಡ್ಡಿಯವರ ಅತೃಪ್ತಿ ವಿಚಾರವನ್ನೇ ಗಮನದಲ್ಲಿಟ್ಟುಕೊಂಡು ಈ ಸೂತ್ರ ರಚಿಸಲಾಗಿದೆ. ಹೊಸ ಸೂತ್ರಕ್ಕೆ ರಾಜೀನಾಮೆ ನೀಡಿರುವ ಬೆಂಗಳೂರು ನಗರ ಶಾಸಕರ ಸಮ್ಮತಿ ವ್ಯಕ್ತವಾದರೆ ಮಾತ್ರ ಸರ್ಕಾರ ಸೇಫ್ ಆಗಲಿದೆ. ಈ ಪ್ರಯತ್ನ ಕೈಗೂಡದಿದ್ದರೆ ಏನೂ ಮಾಡಲಾಗದೆಂಬ ಮಾತುಗಳೂ ಕೇಳಿ ಬರುತ್ತಿವೆ.

Advertisement

ಹೊಸ ಸೂತ್ರದಂತೆ, ಸಂಪುಟ ಪುನಾರಚನೆ ನಂತರ ಕೆ.ಜೆ.ಜಾರ್ಜ್‌, ಕೃಷ್ಣಬೈರೇಗೌಡ, ಶಿವಶಂಕರೆಡ್ಡಿ, ಜಯಮಾಲಾ, ವೆಂಕಟರಮಣ್ಣಪ್ಪ, ಪರಮೇಶ್ವರ್‌ ನಾಯ್ಕ ಮತ್ತೆ ಸಚಿವರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ಸಹ ಅಗತ್ಯವಾದರೆ ನಾನು ತ್ಯಾಗಕ್ಕೆ ಸಿದ್ಧನಿದ್ದೇನೆ. ಬೇಕಾದರೆ ಸಂಕಷ್ಟ ಸಮಯದಲ್ಲಿ ಪಕ್ಷದ ಅಧ್ಯಕ್ಷಗಿರಿ ವಹಿಸಿಕೊಳ್ಳಲು ನಾನು ಸಿದ್ಧ.

ನನಗೆ ಸಮ್ಮಿಶ್ರ ಸರ್ಕಾರ ಉಳಿಯುವುದು ಮುಖ್ಯ ಎಂದು ಹೈಕಮಾಂಡ್‌ ನಾಯಕರಿಗೆ ಹೇಳಿದ್ದಾರೆ. ಅವರು ದೆಹಲಿಗೆ ದಿಢೀರ್‌ ಹೋಗಿ ನಾಯಕರ ಜತೆ ಮಾತನಾಡಿದ ನಂತರದ ವಿದ್ಯಮಾನಗಳಲ್ಲಿ ಸರ್ಕಾರ ಉಳಿಯುವ ಸಣ್ಣ ಅವಕಾಶವಿದೆ ಎಂಬ ಆಸೆ ಚಿಗುರೊಡೆದಿದೆ. ಹೀಗಾಗಿ, ಮೇಲ್ನೋಟಕ್ಕೆ ಸದ್ಯಕ್ಕೆ ಎದುರಾಗಿರುವ ಬಿಕ್ಕಟ್ಟಿಗೆ ಪರಿಹಾರ ಸಿಗಬಹುದಾ? ಎಂಬ ಆಶಾಭಾವನೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಲಯದಲ್ಲಿ ವ್ಯಕ್ತವಾಗಿದೆ.

ಆಯ್ತು ಬನ್ನಿ ಎಂದು ಸಿಟ್ಟಾದ ಸಿದ್ದರಾಮಯ್ಯ: ಸೋಮವಾರ ರಾತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಅತೃಪ್ತ ಶಾಸಕರನ್ನು ಸಂಪರ್ಕಿಸಿದ್ದರು. ಆ ವೇಳೆ, ಎಲ್ಲ ಸಮಸ್ಯೆ ಬಗೆಹರಿಯುತ್ತದೆ, ನೀವೆಲ್ಲಾ ಬಂದು ಬಿಡಿ ಎಂದು ಹೇಳಿದರು. ಆದರೆ, ಆಗ ನಿಮ್ಮನ್ನು ನಂಬಿದ್ದು ಸಾಕು. ನಮ್ಮನ್ನು ಬಿಟ್ಟು ಬಿಡಿ ಎಂದು ಅವರು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಗರಂ ಆಗಿ, ಹೇ, ಆಯ್ತು ಬನ್ನಿ ಎಂದು ಸಿಟ್ಟಾದರು ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿಯವರ ಜತೆಯೂ ಮಾತನಾಡಿದರು. ಕೆಲವು ಶಾಸಕರು ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸುತ್ತಿರುವ ಬಗ್ಗೆಯೂ ತಿಳಿಸಿದರು. ಜೆಡಿಎಸ್‌ ಶಾಸಕರು ನಾಯಕತ್ವ ಬದಲಾವಣೆಗೆ ಒಪ್ಪುತ್ತಿಲ್ಲ ಎಂಬುದನ್ನು ಅವರ ಗಮನಕ್ಕೆ ತಂದರು.

ರಾಹುಲ್‌ಗಾಂಧಿಯವರು, ನಾಯಕತ್ವ ಬದಲಾವಣೆ ವಿಚಾರ ನಮ್ಮ ಪರಿಶೀಲನೆಯಲ್ಲಿ ಇಲ್ಲ. ಆದರೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಕಾಂಗ್ರೆಸ್‌ ಸಚಿವರ ಇಲಾಖೆಗಳಲ್ಲಿ ಹಸ್ತಕ್ಷೇಪ ಆಗದಂತೆ ನೋಡಿಕೊಳ್ಳಬೇಕಿತ್ತು. ಪರಿಸ್ಥಿತಿ ಈ ಮಟ್ಟಕ್ಕೆ ಹೋಗುವವರೆಗೂ ಬಿಟ್ಟಿದ್ದು ಸರಿಯಲ್ಲ ಎಂದು ಹೇಳಿದರು. ಆಗ, ಇದರಲ್ಲಿ ಕಾಂಗ್ರೆಸ್‌ ನಾಯಕರ ಪಾತ್ರದ ಬಗ್ಗೆಯೂ ಗೌಡರು ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.

ಯಾರ್ಯಾರ ತಲೆದಂಡ?: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ರಚಿಸಿಕೊಂಡಿರುವ ಸೂತ್ರ ಯಶಸ್ವಿಯಾಗಿ, ಸರ್ಕಾರ ಉಳಿದಿದ್ದೇ ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 7 ಶಾಸಕರು ಅತಂತ್ರಗೊಳ್ಳುವ ಸಾಧ್ಯತೆ ಇದೆ. ಪದೇಪದೆ ಸರ್ಕಾರಕ್ಕೆ ಕಾಟ ಕೊಟ್ಟಿದ್ದಕ್ಕೆ ಶಿಕ್ಷೆಯಾಗಿ ಐವರು ಅನರ್ಹತೆಗೆ ಗುರಿಯಾಗಬಹುದು.

ಡಾ.ಜಿ.ಪರಮೆಶ್ವರ್‌ ವಿರುದ್ಧ ರಾಮಲಿಂಗಾರೆಡ್ಡಿ ಸಹಿತ ಬೆಂಗಳೂರು ನಗರದ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಸೋನಿಯಾಗಾಂಧಿವರೆಗೂ ಆ ದೂರು ಸೌಮ್ಯರೆಡ್ಡಿ ಮೂಲಕ ತಲುಪಿರುವುದರಿಂದ ಈ ಎಪಿಸೋಡ್‌ನ‌ಲ್ಲಿ ಡಾ.ಜಿ.ಪರಮೇಶ್ವರ್‌ ತಲೆದಂಡವೂ ಆಗಬಹುದಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಅಪವಾದ ಬರುವುದರಿಂದ ಬೆಂಗಳೂರು ಉಸ್ತುವಾರಿಯನ್ನು ಬೇರೆಯವರಿಗೆ ನೀಡುವ ಸಾಧ್ಯತೆಯಿದೆ. ಸಚಿವರ ಪೈಕಿ ಕೆ.ಜೆ.ಜಾರ್ಜ್‌, ಕೃಷ್ಣಬೈರೇಗೌಡ ಅವರು ಸಂಪುಟದಿಂದ ಹೊರಗುಳಿಯಬಹುದು ಎಂದು ಹೇಳಲಾಗಿದೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next