Advertisement

ಲಲನೆಯರ ರಾಗ ರಸಧಾರೆ

04:07 PM Jul 07, 2017 | |

ನಮ್ಮ ಕರಾವಳಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಯಕ್ಷಗಾನ ಮೇಳಗಳು ಮಳೆಗಾಲ ಆರಂಭವಾಗುತ್ತಿರುವಂತೆ, ಒಳಸರಿದವು. ಪ್ರಸ್ತುತ ಅಲ್ಲಲ್ಲಿ ತಾಳಮದ್ದಳೆ, ಯಕ್ಷನಾಟ್ಯ, ಗಾನ ವೈವಿಧ್ಯ ಬಿರುಸುಗೊಂಡಿವೆ. ಒಂದೆಡೆ ಹಳೆಯ ಶ್ರೇಷ್ಠ ಕಲೋಪಾಸಕರ ಆಳ ಅನುಭವದ ಅನಾವರಣವಾದರೆ, ಮತ್ತೆ ಕೆಲವೆಡೆ ಪ್ರಯತ್ನಶೀಲ ಎಳೆಯರೊಳಗಿನ ಕಲಾಪ್ರಭೆಯ ಪ್ರತಿಫ‌ಲನಕ್ಕೆ ಅವಕಾಶ ಸಂಪ್ರಾಪ್ತಿಯಾಗುತ್ತಿದೆ.

Advertisement

ಕಳೆದ ಜೂನ್‌ ತಿಂಗಳ 27ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಯಕ್ಷಗಾನದ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಲಾಯಿತು. ಭಾಗವತರಾದ ಭವ್ಯಶ್ರೀ, ಅಮೃತಾ ಅಡಿಗ ಮತ್ತು ಕಾವ್ಯಶ್ರೀ ಕಾರ್ಯಕ್ರಮ ನಡೆಸಿಕೊಟ್ಟರು. ಈ ಯುವ ಭಾಗವತರ ಗಾನ ವೈಖರಿಯ ನಾಡಿಮಿಡಿತಕ್ಕೆ ಅನುಗುಣವಾಗಿ, ಉಜಿರೆ ಜನಾರ್ದನ ತೋಳ್ಪಾಡಿತ್ತಾಯರು ಪ್ರಬುದ್ಧವಾಗಿ ಮದ್ದಳೆ ನುಡಿಸಿದರು. ಚೆಂಡೆಯ ಅಬ್ಬರ ತಾಳದಲ್ಲಿ ಮಿಜಾರು ದೇವಾನಂದ ಭಟ್ಟರು ಸಾಥಿಯಾದರು. ಇವರಿಬ್ಬರ ಕೈಚಳಕದ ವಾದನ ಪ್ರಭಾವದಿಂದ ಗಾಯನದ ಭಾವ ಪ್ರತಿಬಿಂಬಿತವಾಯಿತು. 

“ಪಟ್ಟಾಭಿಷೇಕ’ ಪ್ರಸಂಗದ ಪನ್ನೀರ ರಾಮನಿಗೆ ಪಂಕಜಾಕ್ಷಿ ಯರೆರೆದು, “ಶ್ರೀಕೃಷ್ಣ ಸಂಧಾನ’ದ ಸಂಧಿಯೆ ಕಲಿಭೀಮ ನಿನಗಾ|ನಂದವೇ, “ಪಾದುಕಾ ಪ್ರದಾನ’ ಸನ್ನಿವೇಶದ ತ್ರಿವುಡೆ ತಾಳದಲ್ಲಿ ಬಂದೆಯಾ ಇನವಂಶ ವಾರಿಧಿ, “ಅತಿಕಾಯ ಕಾಳಗ’ದಲ್ಲಿ ಕಾಫಿ ರಾಗದ ಏತಕೆ ಮರುಳಾಹೆ ತಾತ, “ಕರ್ಣಪರ್ವ’ದ ಎಲವೋ ಸೂತನ ಮಗನೇ ಮತ್ತು ಅಗರಿ ಭಾಗವತರ “ಭರತೇಶ ವೈಭವ’ ಕೃತಿಯ ಕೆಲ ಹಾಡುಗಳನ್ನು ಆರಿಸಿಕೊಳ್ಳಲಾಗಿತ್ತು. ಭಾವ-ಸ್ವಭಾವವನ್ನರಿತ ಸು#ಟವಾದ ಸಾಹಿತ್ಯ, ಶ್ರುತಿ-ಲಯಶುದ್ಧಿ, ಪರಿಣಾಮ ಬೀರಿದ ಕಂಠಸಿರಿ, ಹೃದ್ಯವೆನಿಸಿದ ಪದ್ಯಗಳು ಕಾರ್ಯಕ್ರಮವನ್ನು ಚೆಂದಗೊಳಿಸಿದವು. ಸುಮಾರು ಮೂರು ತಾಸು ಅವಧಿಯ ಉತ್ತಮ ರಾಗ ರಸಧಾರೆ ಸೇರಿದ ಕಲಾಸಕ್ತರ ಮನಸೂರೆಗೊಳಿಸಿತು. ಈ ತರಳೆಯರು ತಮ್ಮ ಗಾಯನ ವಿದ್ಯೆಯನ್ನು ಮತ್ತಷ್ಟು ಹರಿತಗೊಳಿಸಲು ಉತ್ತೇಜಕವಾಯಿತು. ಕಥಾಭಾಗದ ಕುರಿತು ಅರ್ಥದಾರಿ ಹರೀಶ ಬೊಳಂತಿಮೊಗರು ವಿವರಣೆ ನೀಡಿದರು.

ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ (ರಿ.) ಬೆಳುವಾಯಿ ಇದರ ವಿಂಶತಿ ವರ್ಷ ನಿಮಿತ್ತ ಸರಣಿ -19ರಲ್ಲಿ ಸಂಯೋಜಿತ ಕಾರ್ಯಕ್ರಮವಾಗಿತ್ತು ಇದು. ಬಿ. ಯಶೋವರ್ಮ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಭಾಗವತರಾದ ಧರ್ಮಸ್ಥಳ ದಿವಾಕರ ಆಚಾರ್ಯರನ್ನು ಸಮ್ಮಾನಿಸಲಾಯಿತು. ಬಣ್ಣದ ವೇಷಧಾರಿ ಕೀರ್ತಿಶೇಷ ಕನ್ಯಾಡಿ ಜನಾರ್ದನ ರಾಯರನ್ನು ಸಂಸ್ಮರಿಸಲಾಯಿತು. ಕುದ್ರೆಂತ್ತಾಯ ಬಂಧುಗಳು, ಬಿ. ಭುಜಬಲಿ ಹಾಗೂ ಸ್ಥಳೀಯ ಸಂಘಟಕರು ಒಂದುಗೂಡಿ ಈ ಕಲಾಪ್ರಕ್ರಿಯೆಗೆ  ಹೆಗಲೆಣೆಯಾದರು. 

ಸುಬ್ರಹ್ಮಣ್ಯ ಬೈಪಾಡಿತ್ತಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next