Advertisement

ಬಾನುಲಿ ಕೇಂದ್ರಕ್ಕಾಗಿ ಪಂಜಿನ ಮೆರವಣಿಗೆ

01:45 PM Jul 18, 2017 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಬಾನುಲಿ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿ ಕರ್ನಾಟಕ ಜನಮನ ವೇದಿಕೆ ಕಾರ್ಯಕರ್ತರು  ಸೋಮವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.

Advertisement

ಕೆಟಿಜೆ ನಗರದ 8ನೇ ಕ್ರಾಸ್‌ನಲ್ಲಿರುವ ವೇದಿಕೆ ಕಾರ್ಯಾಲಯದಿಂದ ಶ್ರೀ ಜಯದೇವ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದ ಕಾರ್ಯಕರ್ತರು, ದಾವಣಗೆರೆಯಲ್ಲಿ ಆದಷ್ಟು ಬೇಗ ಬಾನುಲಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ದಾವಣಗೆರೆಗೆ ಜಿಲ್ಲೆಯ ಜನರ ಬಹುದಿನದ ಒತ್ತಾಸೆ, ಬೇಡಿಕೆಯಾಗಿರುವ ಬಾನುಲಿ ಕೇಂದ್ರ(ರೇಡಿಯೋ ಸ್ಟೇಷನ್‌) ಮಂಜೂರಾಗಿದೆ ಎಂಬುದಾಗಿ
ಸಂಸದ ಜಿ.ಎಂ. ಸಿದ್ದೇಶ್ವರ್‌ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಬಾನುಲಿ ಕೇಂದ್ರ ಮಂಜೂರಾಗಿದೆಯೇ, ಮಂಜೂರಾಗಿದ್ದರೆ ಎಲ್ಲಿ, ಯಾವಾಗ ಕಾರ್ಯಾರಂಭ ಮಾಡಲಿದೆ…ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡದೇ ಇರುವುದು ವಿಷಾದನೀಯ ಸಂಗತಿ ಎಂದು
ಪ್ರತಿಭಟನಾಕಾರರು ತಿಳಿಸಿದರು. 

ದಾವಣಗೆರೆಯಲ್ಲಿ ಅತ್ಯಗತ್ಯವಾಗಿರುವ ಬಾನುಲಿ ಕೇಂದ್ರದ ಪ್ರಾರಂಭದ ಮಾಹಿತಿಗೆ ಒತ್ತಾಯಿಸಿ ವೇದಿಕೆಯಿಂದ ಮಾ.24 ರಂದು 
ಸೈಕಲ್‌ ಜಾಥಾ ನಡೆಸಿ, ಸಂಸದರ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಮತ್ತೂಮ್ಮೆ
ಸಂಸದರ ಗಮನ ಸೆಳೆಯುವ ಉದ್ದೇಶದಿಂದ ಅವರ ಕಾರ್ಯಾಲಯಕ್ಕೆ ಮನವಿ ತಲುಪಿಸಿ, ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದರೂ
ಎಂದಿನಂತೆ ಪ್ರತಿಕ್ರಿಯೆ ದೊರೆಯಲೇ ಇಲ್ಲ. ಮಾಧ್ಯಮಗಳ ಮೂಲಕವಾದರೂ ಮಾಹಿತಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮನೋರಂಜನಾ ಬೇಡಿಕೆಯೂ ಹೆಚ್ಚುತ್ತಿದೆ. ಹಾಗಾಗಿ ಸ್ವತಂತ್ರ ಅಸ್ತಿತ್ವದ ಬಾನುಲಿ ಕೇಂದ್ರ ಪ್ರಾರಂಭಿಸಬೇಕು. ಬಾನುಲಿ ಕೇಂದ್ರ ಮಂಜೂರಾತಿ ಹಾಗೂ ಈವರೆಗೆ ಕಾರ್ಯಾರಂಭವಾಗದ ಬಗ್ಗೆ ಸಂಸದರು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್‌, ಉಪಾಧ್ಯಕ್ಷ ಬಿ.ಎಸ್‌. ಪ್ರವೀಣ್‌, ಪ್ರಧಾನ ಕಾರ್ಯದರ್ಶಿ ಎಸ್‌. ವಿಷ್ಣು, ಎಂ.
ತಿಪ್ಪೇಶ್‌ ಇತರರು ಇದ್ದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next