Advertisement

ಚುನಾವಣೆಯ ವಿಷಯ: ವಿಚಾರ-ವಿಮರ್ಶೆ ಅಗತ್ಯ

12:19 AM Aug 25, 2020 | mahesh |

ಕೋವಿಡ್ ಕಾಲದಲ್ಲಿ ಹೊಸ ಸಹಜತೆಗೆ ತಕ್ಕಂತೆ ಒಗ್ಗಿಕೊಳ್ಳಲು ಇಡೀ ದೇಶ ಪ್ರಯತ್ನಿಸುತ್ತಿರುವ ವೇಳೆಯಲ್ಲೇ, ಚುನಾವಣೆಯ ವಿಷಯದಲ್ಲಿ ಏನು ಮಾಡಬೇಕು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಚುನಾವಣ ಆಯೋಗ ಮುಂಬರಲಿರುವ ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶನಗಳನ್ನು ಜಾರಿ ಮಾಡಿದೆ. ಕೊರೊನಾ ಸಮಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಮೊದಲ ರಾಜ್ಯವಾಗಲಿದೆ ಬಿಹಾರ. 243 ಸದಸ್ಯರನ್ನೊಳಗೊಂಡ ಬಿಹಾರ ವಿಧಾನ ಸಭೆಯ ಅವಧಿ ನವೆಂಬರ್‌ನಲ್ಲಿ ಕೊನೆಗೊಳ್ಳಲಿದೆ.

Advertisement

ಇನ್ನು ಮಧ್ಯಪ್ರದೇಶ ಮತ್ತು ಇತರೆ ರಾಜ್ಯಗಳಲ್ಲೂ ಅದರೊಟ್ಟಿಗೇ ಉಪಚುನಾವಣೆಗಳನ್ನೂ ನಡೆಸಲಾಗುತ್ತದೆ. ಉದ್ದೇಶಿತ ದಿನದಂದೇ ಎಲ್ಲ ನಿರ್ದೇಶನಗಳ ಅನುಗುಣವಾಗಿ ಈ ಚುನಾವಣೆಗಳು ನಡೆದರೆ, ನಿಸ್ಸಂಶಯವಾಗಿಯೂ ಮತದಾರರು ಮತ್ತು ರಾಜಕೀಯ ಪಕ್ಷಗಳಿಗೆ ಇದು ಸಂಪೂರ್ಣವಾಗಿ ಹೊಸ ಚುನಾವಣ ಅನುಭವವೆಂದು ಸಾಬೀತಾಗಲಿದೆ.

ಚುನಾವಣ ಆಯೋಗವು ತನ್ನ ಗೈಡ್‌ಲೈನ್ಸ್‌ನಲ್ಲಿ ಸ್ಪಷ್ಟವಾಗಿ ಹಲವು ಅಂಶಗಳನ್ನು ಹೇಳಿದೆ. ನಾಮನಿರ್ದೇಶನ ಸಲ್ಲಿಸಲು ಮುಂದಾಗುವವರ ಜತೆ ಇಬ್ಬರಿಗಿಂತ ಹೆಚ್ಚು ಜನರು ಇರಬಾರದು, ಮನೆ-ಮನೆಗೆ ಹೋಗಿ ನಡೆಸುವ ಪ್ರಚಾರ ಕಾರ್ಯ, ಮತಯಾಚನೆಗಳಲ್ಲಿ ಐದಕ್ಕಿಂತ ಹೆಚ್ಚು ಜನರ ಸಮೂಹವಿರಬಾರದು. ರೋಡ್‌ ಶೋಗಳಲ್ಲಿ ಐದಕ್ಕಿಂತ ಹೆಚ್ಚು ವಾಹನಗಳು ಇರಬಾರದು. ಮತದಾರರು ಮತದಾನದ ವೇಳೆಯಲ್ಲಿ ಸುರಕ್ಷತಾ ಕ್ರಮಗಳ ಪಾಲನೆ ಮಾಡಬೇಕು, ಮುಖ್ಯವಾಗಿ ಅವರಿಗೆ ವಿಶೇಷ ಗ್ಲೌಸ್‌ ನೀಡಬೇಕು ಹಾಗೂ ಸೋಂಕಿತ ಮತದಾರರಿಗೆ ವಿಶೇಷ ವ್ಯವಸ್ಥೆ ಮಾಡಬೇಕು ಎಂಬ ನಿರ್ದೇಶನಗಳು ಇದರಲ್ಲಿವೆ. ಈ ಎಲ್ಲ ಅಂಶಗಳೂ ಕೋವಿಡ್‌ ಸಮಯದಲ್ಲಿ ಅಪಾಯವನ್ನು ತಗ್ಗಿಸುವ ದೃಷ್ಟಿಯಿಂದ ರಚನೆಯಾಗಿದ್ದು, ಅಂದುಕೊಂಡ ಸಮಯಕ್ಕೆ ಚುನಾವಣೆಗಳು ನಡೆದರೆ, ಇವುಗಳ ಪಾಲನೆ, ಅನುಷ್ಠಾನ ಅತಿಮುಖ್ಯ.

ಆದರೆ, ಇಂಥ ಕ್ಲಿಷ್ಟ ಸಮಯದಲ್ಲಿ ಚುನಾವಣೆಗಳನ್ನು ನಡೆಸಬೇಕೇ ಎನ್ನುವ ಪ್ರಶ್ನೆಯೂ ಒಂದು ವರ್ಗದಿಂದ ಕೇಳಿಬರುತ್ತಿದೆ. ಚುನಾವಣೆಗಳನ್ನು ಮುಂದೂಡಿ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವ ಕುರಿತೂ ಸಲಹೆಗಳು ಬರುತ್ತಿವೆ. ಉದಾಹರಣೆಗೆ, ವಿಧಾನಸಭೆಯ ಅವಧಿ ಮುಗಿದ ನಂತರ ಸರಕಾರವನ್ನು ವಿಸರ್ಜಿಸಿ ಕೆಲವು ತಿಂಗಳವರೆಗೆ ರಾಷ್ಟ್ರಪತಿ ಶಾಸನ ತರಲು ಯೋಚಿಸಬೇಕು ಎನ್ನಲಾಗುತ್ತಿದೆ. ಆದರೆ ಕೋವಿಡ್‌ ಕೆಲವೇ ತಿಂಗಳಲ್ಲಿ ದೂರವಾಗುತ್ತದೆ ಎನ್ನುವ ಯಾವ ಲಕ್ಷಣವೂ ಕಾಣಿಸದೇ ಇದ್ದಾಗ, ಚುನಾವಣೆಗಳನ್ನು ಎಷ್ಟು ದಿನ ಮುಂದೂಡಲು ಸಾಧ್ಯ ಎಂಬ ಪ್ರತಿವಾದವೂ ಎದುರಾಗುತ್ತಿದೆ. ಬೆರಳೆಣಿಕೆಯ ಕ್ಷೇತ್ರಗಳನ್ನು ಬಿಟ್ಟು ಬದುಕಿನ ಪ್ರತಿ ಕ್ಷೇತ್ರದಲ್ಲೂ ಅಪಾಯವನ್ನು ಎದುರಿಸುವಂಥ ರಿಸ್ಕ್ ಅನ್ನು ತೆಗೆದುಕೊಳ್ಳಲು ದೇಶ ಸಿದ್ಧವಿರುವಾಗ, ಚುನಾವಣ ವಿಷಯದಲ್ಲೇಕೆ ಸುಮ್ಮನಿರಬೇಕು ಎನ್ನುವುದು ಇದಕ್ಕೆ ಪೂರಕವಾದ. ಒಟ್ಟಲ್ಲಿ ಅಂತಿಮ ನಿರ್ಧಾರವಂತೂ ಚುನಾವಣ ಆಯೋಗಕ್ಕೇ ಬಿಟ್ಟ ವಿಚಾರವಾಗಿದೆ. ಈ ಕಾರಣಕ್ಕಾಗಿಯೇ, ಅದು ಸಂಬಂಧಿತ ಪಕ್ಷಗಳೊಂದಿಗೆ, ಆಯಾ ರಾಜ್ಯಗಳಲ್ಲಿನ ಕೋವಿಡ್‌ ಪರಿಸ್ಥಿತಿಗಳನ್ನು ಅವಲೋಕಿಸಿಯೇ ತೀರ್ಮಾನ ಕೈಗೊಳ್ಳಬಹುದು. ಅಂದರೆ, ನಿಸ್ಸಂಶಯವಾಗಿಯೂ ಈ ವಿಚಾರದಲ್ಲಿ ಕೂಲಂಕಶ ವಿಚಾರ- ವಿಮರ್ಶೆಗಳಂತೂ ಆಗಲಿವೆ, ಆಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next