Advertisement

ಟ್ಯಾಂಕರ್‌ ಚಾಲಕನ ಕಾಲಿಗೆ  ಸುತ್ತಿಕೊಂಡ ನಾಗರಹಾವು

09:54 AM Aug 19, 2017 | Team Udayavani |

ಉಪ್ಪಿನಂಗಡಿ: ಚಲಿಸುತ್ತಿದ್ದ ಟ್ಯಾಂಕರ್‌ ಚಾಲಕನ ಕಾಲಿಗೆ ನಾಗರಹಾವೊಂದು ಸುತ್ತಿಕೊಂಡ ಪರಿಣಾಮ ಚಾಲಕ ಕಂಗೆಟ್ಟರೂ ಸಮಯಪ್ರಜ್ಞೆ ಮೆರೆದು ಅಪಘಾತ ತಪ್ಪಿಸಿದ  ಘಟನೆ ಉಪ್ಪಿನಂಗಡಿ ಸಮೀಪ ಸಂಭವಿಸಿದೆ.

Advertisement

ಗ್ಯಾಸ್‌  ಟ್ಯಾಂಕರ್‌ ಒಂದು ಮಂಗಳೂರಿನಿಂದ ಅಡುಗೆ ಅನಿಲವನ್ನು ತುಂಬಿಸಿಕೊಂಡು ಬೆಂಗಳೂರಿನತ್ತ ಸಂಚರಿಸುತ್ತಿತ್ತು. ಟ್ಯಾಂಕರ್‌ ರಾ. ಹೆ. 75ರಲ್ಲಿ ಉಪ್ಪಿನಂಗಡಿಯ ಕೂಟೇಲು ಸೇತುವೆ ದಾಟಿ  ಮುಂದು ವರಿಯುತ್ತಿದ್ದಂತೆಯೇ ಟ್ಯಾಂಕರ್‌ ಚಾಲಕ ಪಳನಿವೇಲು ಅವರ ಕಾಲಿಗೆ ನಾಗರಹಾವು ಸುತ್ತಿಕೊಂಡಿತು.  ಭೀತಿ ಗೊಂಡು ಅವರು, ಸ್ಟೇರಿಂಗ್‌ ಕೈ ಬಿಟ್ಟು ಕಾಲನ್ನು ಕೊಡವಿ ಚಾಲಕನ ಸೀಟಿನ ಮೇಲೇರಿ ಕುಳಿತರು. ಟ್ಯಾಂಕರ್‌ ಚಾಲಕನ ನಿಯಂತ್ರಣವಿಲ್ಲದೆ ಸಂಚರಿಸಿದ ಟ್ಯಾಂಕರ್‌ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಢಿಕ್ಕಿ ಹೊಡೆಯ ಬೇಕೆನ್ನುವಷ್ಟರಲ್ಲಿ  ಪಳನಿವೇಲು ಸಮಯಪ್ರಜ್ಞೆ ಮೆರೆದು ಹ್ಯಾಂಡ್‌ ಬ್ರೇಕ್‌ ಮೂಲಕ ಟ್ಯಾಂಕರನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ಹೆದ್ದಾರಿಯ ನಡುವಿನಲ್ಲೇ ಟ್ಯಾಂಕರ್‌ ನಿಂತಿದ್ದರಿಂದ  1 ಗಂಟೆ ಸಂಚಾರಕ್ಕೂ ತಡೆಯುಂಟಾಗಿತ್ತು. ಟ್ಯಾಂಕರ್‌ನಲ್ಲಿದ್ದ ಕ್ಲೀನರ್‌ ದೊರೈಸ್ವಾಮಿ  ಮತ್ತು ಚಾಲಕ ಪಳನಿವೇಲು ಟ್ಯಾಂಕರ್‌ನಿಂದ ಜಿಗಿದು ಜೀವ ರಕ್ಷಿಸಿ ಕೊಂಡರಾದರೂ  ಲಾರಿಯಲ್ಲಿದ್ದ ಹಾವು ಲಾರಿಯೊಳಗೆ ಅಡಗಿಕೊಂಡ ಕಾರಣ ಲಾರಿಯನ್ನು ಹಿಂದಕ್ಕಾಗಲಿ ಮುಂದಕ್ಕಾಗಲಿ ಕೊಂಡೊಯ್ಯುವುದು ಹೇಗೆ ಎಂಬ ಪ್ರಶ್ನೆ ಕಾಡ ತೊಡಗಿತ್ತು.  ಕೂಡಲೇ ಸ್ಥಳೀಯ ನಿವಾಸಿ ಝಕಾರಿಯಾ ಯಾನೆ ಸ್ನೇಕ್‌ ಝಕಾರಿಯಾ ಅವರನ್ನು ಕರೆಸಲಾಯಿತು.  ಟ್ಯಾಂಕರಿನ ಬ್ಯಾಟರಿ ಬಾಕ್ಸ್‌ ನಲ್ಲಿ ಆಸರೆ ಪಡೆದಿದ್ದ ನಾಗರ ಹಾವನ್ನು  ಅವರು ಸೆರೆ ಹಿಡಿದು ಒಯ್ದರು.     

Advertisement

Udayavani is now on Telegram. Click here to join our channel and stay updated with the latest news.

Next