Advertisement
ಕರಾವಳಿಯಲ್ಲಿ ಜೂನ್ ತಿಂಗಳು ಮೊದಲ್ಗೊಂಡು ಅಕ್ಟೋಬರ್ ವರೆಗೆ ಬೆಳೆಯುವ ಪ್ರಮುಖ ಬೆಳೆ ಭತ್ತ. ಭೂಮಿ ತಾಯಿ ನೀಡಿದ ಹೊಸ ಫಲವನ್ನು ಮೊದಲ ಬಾರಿಗೆ ಮನೆಗೆ ತರುವ ಆಚರಣೆ ಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. 600 ವರ್ಷಗಳ ಇತಿಹಾಸ ಹೊಂದಿದ ತೆಕ್ಕಟ್ಟೆ ಶ್ರೀಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಹೊಸಫಲ (ಹೊಸ ಭತ್ತ)ವನ್ನು ಗ್ರಾಮಸ್ಥರು ಒಂದಾಗಿ ಶ್ರೀ ದೇವರಿಗೆ ಸಮರ್ಪಿಸಿ, ನಂತರ ಕೃಷಿಕ ಮನೆತನದವರು ಕೊಂಡೊಯ್ಯುವ ಸಂಪ್ರದಾಯವಿದೆ.
ಭತ್ತದ ತೆನೆ ಕಟಾವಿನ ಮುನ್ನ ಸಂಪ್ರದಾಯದಂತೆ ಕೃಷಿಕರು ಕದಿರನ್ನು ಮನೆಗಳಿಗೆ ಕೊಂಡೊಯ್ದು ವಿವಿಧ ಕೃಷಿ ಪರಿಕರ ಹಾಗೂ ಮನೆಯ ಪ್ರಧಾನ ದ್ವಾರಗಳಿಗೆ ಕದಿರಿನಿಂದ ಅಲಂಕರಿಸುವ ಮೂಲಕ ವಿಶೇಷ ಪೂಜೆಯೊಂದಿಗೆ ಹೊಸತು ಹಬ್ಬವನ್ನು (ಕದಿರು ಹಬ್ಬ) ಕೃಷಿ ಕುಟುಂಬಗಳು ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಹೊಸತು ಹಬ್ಬ (ಕದಿರು ಹಬ್ಬ) ಪೂರ್ವ ತಯಾರಿ ಮುನ್ನ ಶ್ರೀ ಲಕ್ಷ್ಮೀ ಮನೆಗೆ ಪ್ರವೇಶಿಸುತ್ತಿದ್ದಾಳೆ ಎನ್ನುವ ಭಕ್ತಿ ಭಾವದಿಂದ ಮನೆಯನ್ನು ಸ್ವತ್ಛಗೊಳಿಸಿ ಮನೆಯ ಪ್ರಧಾನ ದ್ವಾರ ಸೇರಿದಂತೆ ಹೊಸ್ತಿಲುಗಳನ್ನು ರಂಗೋಲಿ ಹಾಕಿ ಅಲಂಕರಿಸಲಾಗುತ್ತದೆ. ಭತ್ತದ ತೆನೆಯನ್ನು ಪೂಜಿಸಿದ ನಂತರ ಮನೆಯ ಹಿರಿಯರು ಭತ್ತದ ತೆನೆಯನ್ನು ತಲೆಯ ಮೇಲೆ ಇರಿಸಿಕೊಂಡು ಮನೆಯೊಳಗೆ ಪ್ರವೇಶಿಸುತ್ತಾರೆ ಆಗ ಮನೆಯೊಡತಿ ಯಜಮಾನನ ಪಾದ ತೊಳೆದು, ಆರತಿಗೈದು ಹರಸುವ ಈ ಗ್ರಾಮೀಣ ಸಂಸ್ಕೃತಿ ನಿಜಕ್ಕೂ ವಿಶೇಷವಾದುದು.
Related Articles
ಹೊಸತು ಹಬ್ಬ ಆಚರಣೆಯಂದು ವಿಶೇಷವಾಗಿ ಒಂಬತ್ತು ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸಿ ಹೊಸ ಅಕ್ಕಿಯ ಭೋಜನ ಸಿದ್ಧಪಡಿಸಲಾಗುತ್ತದೆ. ಊಟ ಮಾಡುವ ಮೊದಲು ಕಿರಿಯರು ಮನೆಯ ಹಿರಿಯರ ಆಶೀರ್ವಾದ ಪಡೆದ ಅನಂತರ ಊಟ ಮಾಡುವ ಸಂಸ್ಕಾರ ಇಲ್ಲಿದೆ.
Advertisement
ಏನಿದು ಸಂಪ್ರದಾಯ?ಭತ್ತದ ತೆನೆಯಿಂದ ಮನೆಯನ್ನು ನೈಸರ್ಗಿಕವಾಗಿ ಅಲಂಕರಿಸುವ ನಿಟ್ಟಿನಿಂದ ಭತ್ತದ ತೆನೆಯನ್ನು ಪ್ರಧಾನವಾಗಿರಿಸಿ ಹೊರಗೆ ಮಾವಿನ ಎಲೆ, ಹಲಸಿನ ಎಲೆ, ಬಿದಿರಿನ ಎಲೆಗಳನ್ನು ಸಂಯೋಜಿಸಿ ತೆಂಗಿನ ನಾರಿನಿಂದ ಕದಿರನ್ನು ಸಿದ್ಧ ಪಡಿಸಿ ಅದನ್ನು ಕಟ್ಟಲಾಗುತ್ತದೆ. ಹಿಂದಿನಿಂದಲೂ ಕೂಡಾ ಪರಿಸರ ಜಾಗೃತಿ ಮೂಡಿಸುವ ಆಚರಣೆಯೊಂದಿಗೆ ನಮ್ಮ ಮನೆ ಮನದ ಸ್ವತ್ಛತೆ , ಸಂಬಂಧಗಳನ್ನು ಬೆಸೆಯುವ ಕೃಷಿ ಸಂಸ್ಕೃತಿ ಪ್ರತೀಕವೇ ಈ ಹೊಸತು ಹಬ್ಬ. ಇವುಗಳ ಅವನತಿಗೆ ಈಗ ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಭಾವ ಕಾರಣವಾಗುತ್ತಿದೆ.
– ಪಾಂಡುರಂಗ ದೇವಾಡಿಗ ತೆಕ್ಕಟ್ಟೆ, ಕೃಷಿಕರು ವೇಗದ ಬದುಕಿನ ನಡುವೆ ಮರೆಯಾಗುತ್ತಿರುವ ಗ್ರಾಮೀಣ ಕೃಷಿ ಸಂಸ್ಕೃತಿಯ ವಿವಿಧ ಆಯಾಮಗಳ ಬಗ್ಗೆ ಯುವ ಸಮುದಾಯಗಳು ಆಸಕ್ತಿ ತಳೆಯಬೇಕಾದ ಅನಿವಾರ್ಯತೆ ಇದೆ.
– ಗೋವಿಂದ ದೇವಾಡಿಗ, ಸಾಂಪ್ರದಾಯಿಕ ಕೃಷಿಕರು