Advertisement

Karnataka: ಕೈ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಮಾಣ ವಚನ ಕಾರ್ಯಕ್ರಮ

10:56 PM May 20, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ 16ನೇ ವಿಧಾನಸಭೆ ರಚನೆಯ ಹಿನ್ನೆಲೆಯಲ್ಲಿ ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನೂತನ ಸರಕಾರದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬೃಹತ್‌ ವೇದಿಕೆ ಕಾಂಗ್ರೆಸ್‌ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

Advertisement

ಬೃಹತ್‌ ವೇದಿಕೆಯಲ್ಲಿ ಭಾರೀ ಹರ್ಷೋದ್ಗಾರ, ಜಯಘೋಷಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ ಎಂಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಲಕ್ಷೋಪಲಕ್ಷ ಜನ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಒಗ್ಗಟ್ಟು ಪ್ರದರ್ಶನ ಕಸರತ್ತು

ಈ ಕಾರ್ಯಕ್ರಮ ಕಾಂಗ್ರೆಸ್‌ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದಂತೆ, ರಾಜ್ಯ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಆದಂತೆ ಕಂಡು ಬಂದಿಲ್ಲ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ವೇದಿಕೆಗೆ ಬಂದ ಡಿ.ಕೆ. ಶಿವಕುಮಾರ್‌ ಸಿದ್ಧತೆಗಳನ್ನು ಪರಿಶೀಲಿಸಿ ಜನರತ್ತ ಕೈ ಬೀಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ಕೆಲ ಹೊತ್ತಿನ ಬಳಿಕ ವೇದಿಕೆ ಹತ್ತಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಜನರತ್ತ ಕೈ ಬೀಸಿದರು. ಆ ವೇಳೆಗೆ ಡಿ.ಕೆ. ಶಿವಕುಮಾರ್‌ ಅಲ್ಲಿಗೆ ಬಂದಾಗ ಅವರ ಕೈಯನ್ನೂ ಹಿಡಿದು ಖರ್ಗೆಯವರು ಜನರತ್ತ ತೋರಿಸಿದರು. ಇದಾದ ಬಳಿಕ ಸಿದ್ದರಾಮಯ್ಯ ಬಂದು ಒಬ್ಬರೇ ಜನರತ್ತ ಕೈ ಬೀಸಿದರು. ಇದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್‌ ಸಹ ಒಬ್ಬರೇ ಜನರತ್ತ ಕೈ ಬೀಸಿದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್‌ ಅವರ ಕೈ ಹಿಡಿದು ಜೋಡಿಯಾಗಿ ಜನರತ್ತ ಕೈ ಬೀಸಿದರು. ಇಬ್ಬರೇ ಕೈ ಬೀಸುತ್ತಿರುವುದನ್ನು ಕಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ರಾಹುಲ್‌ ಗಾಂಧಿಯವರನ್ನು ಕರೆದು ಇಬ್ಬರ ಮಧ್ಯೆ ನಿಲ್ಲಿಸಿ ಪರಸ್ಪರ ಕೈ ಹಿಡಿದು ಮೇಲೆತ್ತಿ ಜನರತ್ತ ಕೈ ಬೀಸುವಂತೆ ಮಾಡಿದರು.

50:50 ಸಚಿವರು
ಸಮಾರಂಭದ ಬಳಿಕ ರಾಜ್ಯಪಾಲರೊಂದಿಗೆ ಗುಂಪು ಛಾಯಾಚಿತ್ರ ತೆಗಿಸುವಾಗ ನಾಲ್ವರು ಸಚಿವರು ಸಿದ್ದರಾಮಯ್ಯನವರ ಬಲಭಾಗಕ್ಕೆ, ನಾಲ್ವರು ಸಚಿವರು ಡಿ.ಕೆ. ಶಿವಕುಮಾರ್‌ ಎಡ ಭಾಗಕ್ಕೆ ನಿಂತಿದ್ದರು. ಡಾ| ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಪ್ರಿಯಾಂಕ್‌ ಖರ್ಗೆ ಅವರು ಡಿ.ಕೆ. ಶಿವಕುಮಾರ್‌ ಅವರ ಬದಿಯಲ್ಲಿ ನಿಂತಿದ್ದರೆ, ಕೆ.ಜೆ. ಜಾರ್ಜ್‌, ಎಂ.ಬಿ. ಪಾಟೀಲ್‌, ಸತೀಶ್‌ ಜಾರಕಿಹೊಳಿ, ಜಮೀರ್‌ ಅಹ್ಮದ್‌ ಖಾನ್‌ ಸಿದ್ದರಾಮಯ್ಯನವರ ಬದಿಯಲ್ಲಿ ನಿಂತಿದ್ದರು. ಇದನ್ನು ನೋಡಿದ ಜನ ಇಬ್ಬರ ಕೋಟಾದವರು ಅವರವರ ಸೈಡ್‌ನ‌ಲ್ಲಿ ನಿಂತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಇದು ಇಬ್ಬರದ್ದೂ ಅಲ್ಲ, ಪಕ್ಕಾ ಹೈಕಮಾಂಡ್‌ ಕೋಟಾ ಎಂದು ಕೆಲವರು ವಿಶ್ಲೇಷಿಸುತ್ತಿದ್ದರು.

ಅದೇ ಧಿರಿಸು, ಅದೇ ಗತ್ತು
ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು 12.36ಕ್ಕೆ ವೇದಿಕೆಗೆ ಆಗಮಿಸಿದರು. ರಾಷ್ಟ್ರಗೀತೆಯೊಂದಿಗೆ 12.40ಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆರಂಭವಾಯಿತು. ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್‌ ಸಿದ್ದರಾಮಯ್ಯ ಅವರ ಪುತ್ರ, ಪುತ್ರಿ, ಕಿರಿಯ ಪುತ್ರ ಡಾ| ಯತೀಂದ್ರ, ಸಹೋದರ ಸಮಾರಂಭಕ್ಕೆ ಸಾಕ್ಷಿಯಾದರು. ಸಿದ್ದರಾಮಯ್ಯನವರು ತಮ್ಮ ಎಂದಿನ ಜುಬ್ಟಾ -ಪಂಚೆ ಧರಿಸಿದ್ದರು.

Advertisement

ಅನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗಂಗಾಧರ ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರೇಷ್ಮೆ ಅಂಗಿ-ಪಂಚೆ ಧರಿಸಿದ್ದರು. ಡಿ.ಕೆ. ಶಿವಕುಮಾರ್‌ ಅವರ ಸಹೋದರ ಸಂಸದ ಡಿ.ಕೆ.ಸುರೇಶ್‌, ಸೋದರ ಸಂಬಂಧಿ ವಿಧಾನಪರಿಷತ್‌ ಸದಸ್ಯ ಎಸ್‌.ರವಿ ಸೇರಿ ಕುಟುಂಬದ ಇತರ ಸದಸ್ಯರು ಇದ್ದರು. ಡಿ.ಕೆ.ಶಿವಕುಮಾರ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆ, ಎಂ.ಬಿ.ಪಾಟೀಲ್‌ ಅವರು ಸಿದ್ದರಾಮಯ್ಯರ ಕಾಲಿಗೆ, ಪ್ರಿಯಾಂಕ ಖರ್ಗೆ ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಕಾಲಿಗೂ ನಮಸ್ಕರಿಸಿದರು. ಮಧ್ಯಾಹ್ನ 1.16ಕ್ಕೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವೇದಿಕೆಯ ಎಡ ಭಾಗದಲ್ಲಿ ನೂತನ ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ರಾಜ್ಯಸಭೆ, ಲೋಕಸಭೆ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಪದಾಧಿಕಾರಿಗಳು, ವಿಶೇಷ ಆಹ್ವಾನಿತ ಅತಿಥಿಗಳು ಸೇರಿ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ವೇದಿಕೆಯ ಬಲಭಾಗದಲ್ಲಿ ಪರಾಜಿತ ಅಭ್ಯರ್ಥಿಗಳು, ಮಾಜಿ ಸಚಿವರು, ಶಾಸಕರು, ಕೆಪಿಸಿಸಿ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಆಹ್ವಾನಿತ ಗಣ್ಯರು, ಚಿತ್ರರಂಗದ ತಾರೆಯರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಅಚ್ಚುಕಟ್ಟಾಗಿ ನಿರ್ವಹಿಸಿದ ಕೆ.ಸಿ ವೇಣುಗೋಪಾಲ- ಸುರ್ಜೇವಾಲ
ಈ ಸಮಾರಂಭ ಅಪ್ಪಟ ಸರಕಾರಿ ಕಾರ್ಯಕ್ರಮ. ಅಲ್ಲಿ ಸರಕಾರದ ಶಿಷ್ಟಾಚಾರ ಪಾಲನೆ ಮಾಡಲಾಗುತ್ತದೆ. ಆ ಸರಕಾರದ ಶಿಷ್ಟಾಚಾರಗಳನ್ನು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ನೇತೃತ್ವದ ಅಧಿಕಾರಿಗಳ ತಂಡ ಯಶಸ್ವಿಯಾಗಿ ನಿರ್ವಹಿಸಿತು. ಆದರೆ, ಶನಿವಾರ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸರಕಾರಿ ಕಾರ್ಯಕ್ರಮದ ಜತೆಗೆ ರಾಜಕೀಯ ಕಾರ್ಯಕ್ರಮವೂ ಆಗಿತ್ತು. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ವಿಪಕ್ಷಗಳ ನಾಯಕರು, ರಾಜಕೀಯ ಗಣ್ಯರು ಆಗಮಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳಗ್ಗೆ 11.30ರ ಅನಂತರ ಗಣ್ಯರು ವೇದಿಕೆಗೆ ಬರಲು ಆರಂಭಿಸಿದರು. ಆಗ ಕೆ.ಸಿ. ವೇಣುಗೋಪಾಲ ಹಾಗೂ ರಣದೀಪ್‌ ಸಿಂಗ್‌ ಸುಜೇìವಾಲಾ ಇವರಿಬ್ಬರೂ ರಾಜಕೀಯ ಶಿಷ್ಟಾಚಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಣ್ಯರನ್ನು ಅವರ ಆಸನಗಳಲ್ಲಿ ಕೂರಿಸುವ, ಪರಸ್ಪರನ್ನು ಪರಿಚಯಿಸುವ ಕೆಲಸ ಮಾಡಿದರು. ಪ್ರಮಾಣ ವಚನ ಸ್ವೀಕಾರದ ವೇಳೆ ಮತ್ತು ಆನಂತರದಲ್ಲಿ ಪ್ರತಿ ಹಂತದಲ್ಲೂ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಇವರೆಲ್ಲರಿಗೂ ಅಗತ್ಯ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುತ್ತಿದ್ದ ದೃಶ್ಯ ಕಂಡು ಬಂತು. ಕಾರ್ಯಕ್ರಮದುದ್ದಕ್ಕೂ ಇಬ್ಬರೂ ಅತ್ಯಂತ ಸಕ್ರಿಯವಾಗಿ ಪಾದರಸದಂತೆ ಓಡಾಡಿಕೊಂಡಿದ್ದರು.

ಜಮೀರ್‌ ಎಡವಟ್ಟು
ಪ್ರಮಾಣ ವಚನ ಸ್ವೀಕಾರದ ವೇಳೆ ಜಮೀರ್‌ ಅಹ್ಮದ್‌ ಖಾನ್‌ ಎಡವಟ್ಟು ಮಾಡಿಕೊಂಡ ಪ್ರಸಂಗ ನಡೆಯಿತು. ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸುವಾಗ ಇಂಗ್ಲಿಷ್‌ ಭಾಷೆಯಲ್ಲಿ ಮೊದಲ ಭಾಗದ ಪ್ರತಿಜ್ಞಾ ವಿಧಿ ಓದಿದ ಜಮೀರ್‌ ಖಾನ್‌, ಎರಡನೇ ಬಾರಿಗೂ ಮೊದಲ ಭಾಗವನ್ನೇ ಓದಲು ಆರಂಭಿಸಿದರು. ಅರ್ಧ ಓದಿರುವಾಗ ಅಲ್ಲಿದ್ದ ಅಧಿಕಾರಿಯೊಬ್ಬರು ತಡೆದು ಎರಡನೇ ಭಾಗ ಓದುವಂತೆ ಸೂಚಿಸಿದರು. ಆಗ ಜಮೀರ್‌ ಎರಡನೇ ಭಾಗ ಓದಿದರು. ಕೊನೆ ಸಾಲುಗಳನ್ನು ಓದಿರುವುದು ಖಾತರಿಪಡಿಸಿಕೊಂಡ ಅಧಿಕಾರಿ, ಕಡತಕ್ಕೆ ಸಹಿ ಮಾಡುವಂತೆ ಜಮೀರ್‌ ಅವರಲ್ಲಿ ಮನವಿ ಮಾಡಿದರು.

ತಾರಾ ಮೆರಗು
ಸಮಾರಂಭಕ್ಕೆ ಚಿತ್ರರಂಗದ ಗಣ್ಯರ ಉಪಸ್ಥಿತಿ ತಾರಾ ಮೆರಗು ತಂದು ಕೊಟ್ಟಿತ್ತು. ನಟ ಶಿವರಾಜಕುಮಾರ್‌, ಪತ್ನಿ ಗೀತಾ ಶಿವರಾಜ್‌ ಕುಮಾರ್‌, ನಟ ದುನಿಯಾ ವಿಜಯ್‌, ನಟಿ ಭಾವನಾ, ಹಾಸ್ಯನಟ ಸಾಧು ಕೋಕಿಲಾ, ಹಿರಿಯ ಕಲಾವಿದೆ ಹಾಗೂ ಮಾಜಿ ಸಚಿವೆ ಉಮಾಶ್ರೀ ಸೇರಿ ಚಿತ್ರರಂಗದ ಗಣ್ಯರು ವೇದಿಕೆಯ ಬಲಭಾಗದ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು. ನಟ ಶಿವರಾಜಕುಮಾರ್‌, ಗೀತಾ ಶಿವರಾಜಕುಮಾರ್‌, ದುನಿಯಾ ವಿಜಯ್‌ ಜನರತ್ತ ಕೈ ಬೀಸಿದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ರಾಜ್ಯದ ಜನತೆಗೆ ಸೋನಿಯಾ ಅಭಿನಂದನೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ ಪಕ್ಷಕ್ಕೆ ಬಹುಮತ ನೀಡಿದ ಜನತೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ ಸಲ್ಲಿಸಿ, ಇದು ರಾಜ್ಯದ ಬಡವರ, ದುರ್ಬಲ ವರ್ಗದ ಜನರ ಗೆಲುವು ಎಂದು ಬಣ್ಣಿಸಿದ್ದಾರೆ.

ಈ ಕುರಿತು ನೀಡಿರುವ ಸಂದೇಶದಲ್ಲಿ ಕನ್ನಡದಲ್ಲೇ ನಮಸ್ಕಾರ ಎಂದು ಮಾತು ಆರಂಭಿಸಿರುವ ಸೋನಿಯಾಗಾಂಧಿ ಅವರು, ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ನೀಡಿರುವ ಐತಿಹಾಸಿಕ ಗೆಲುವು ಬಡವರ ಪರ ಗೆಲುವು, ಇದು ಭ್ರಷ್ಟಾಚಾರ ಹಾಗೂ ದ್ವೇಷದ ರಾಜಕಾರಣದ ವಿರುದ್ಧದ ತೀರ್ಪು. ಕಾಂಗ್ರೆಸ್‌ ಸರಕಾರ ಇಂದು ಪ್ರಮಾಣ ಸ್ವೀಕರಿಸಿದ್ದು, ನಾವು ನೀಡಿದ ಭರವಸೆ ಈಡೇರಿಸಲು ಬದ್ಧವಾಗಿದೆ.

ಮೊದಲ ಸಂಪುಟದಲ್ಲೇ ನಮ್ಮ ಮೊದಲ ಐದು ಭರವಸೆ ಈಡೇರಿಸಲು ಒಪ್ಪಿಗೆ ಪಡೆದಿರುವುದು ಹೆಮ್ಮೆಯ ಸಂಗತಿ. ಉಳಿದ ಭರವಸೆಗಳನ್ನೂ ಸಹ ಕಾಂಗ್ರೆಸ್‌ ಪಕ್ಷ ಜಾರಿಗೆ ತರಲಿದೆ. ಜೈ ಹಿಂದ್‌ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next