Advertisement

ಹೋಲಿ ಏಂಜಲ್ಸ್‌ ಸಂಸ್ಥೆಯ ಸಾಹಸಗಾಥೆ

01:17 AM Aug 15, 2019 | Lakshmi GovindaRaj |

ಬೆಂಗಳೂರು: ಗುರುಕುಲದ ಶಿಕ್ಷಣದಲ್ಲಿ ವಿಚಾರ, ಚಿಂತನೆ, ವಿಷಯ ಹೀಗೆ ಎಲ್ಲವೂ ಶ್ರೇಷ್ಠತೆಯಿಂದ ಕೂಡಿತ್ತು. ವಿದೇಶಿಗರ ದಾಳಿಯಿಂದ ನಮ್ಮ ಸಂಸ್ಕೃತಿ, ಶಿಕ್ಷಣ ಪದ್ಧತಿ, ಜೀವನ ಕ್ರಮ ಹೀಗೆ ಎಲ್ಲವೂ ಪಾಶ್ಚಾತ್ಯ ವ್ಯವಸ್ಥೆ ಕಡೆ ವಾಲಿತು. ಪ್ರಸ್ತುತ ನಮ್ಮಲ್ಲಿನ ಶ್ರೇಷ್ಠತೆಯನ್ನು ವಿದೇಶಿಗರು ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತೀಯತೆಯ ಜತೆಗೆ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲು ಬೆಂಗಳೂರಿನ ವಿಜಯನಗರದ ಹಂಪಿನಗರ ಬಡಾವಣೆಯಲ್ಲಿರುವ ಹೋಲಿ ಏಂಜಲ್ಸ್‌ ಶಿಕ್ಷಣ ಸಂಸ್ಥೆ ಸಿದ್ಧವಾಗಿದೆ.

Advertisement

ಅಜ್ಞಾನದಿಂದ ಹೊರಬರಲು ಶಿಕ್ಷಣ ಅವಶ್ಯಕ. ಇದರಿಂದ ವೈಚಾರಿಕತೆ ಬೆಳೆಯುತ್ತದೆ. ಹೀಗಾಗಿ, 1989ರಲ್ಲಿ ರಾಜ್ಯ ಮಟ್ಟದ ಪಠ್ಯಕ್ರಮವನ್ನು ಒಳಗೊಂಡ ಶಿಕ್ಷಣ ಸಂಸ್ಥೆಯನ್ನು ಟಿ. ಪುರುಷೋತ್ತಮ ಅವರು ಸ್ಥಾಪಿಸಿದರು. ಪ್ರಸ್ತುತ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂವತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಈ ಹೋಲಿ ಏಂಜಲ್ಸ್‌ ಸಂಸ್ಥೆ ಪ್ರಾರಂಭದಲ್ಲಿ ಒಂದು ಸಣ್ಣ ಕಟ್ಟಡದಲ್ಲಿ ತನ್ನ ಕಾರ್ಯವನ್ನು ಆರಂಭಿಸಿ, ಇಂದು ಸುಮಾರು ಮೂರು/ ನಾಲ್ಕು ಹಂತಸ್ತಿನ ಎಂಟು ಕಟ್ಟಡಗಳಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿದೆ.

ಕಡಿಮೆ ಅವಧಿಯಲ್ಲಿಯೇ ಇಷ್ಟು ಸಾಧನೆ ಮಾಡಿದ ಶಾಲೆ ಸಾಗಿದ್ದು ಮುಳ್ಳಿನ ಹಾದಿಯಲ್ಲಿ. ಸತತ ಪರಿಶ್ರಮ, ಪ್ರಯತ್ನವಿದ್ದರೆ, ಬೆಳವಣಿಗೆಯ ಉತ್ತುಂಗದ ಶಿಖರದೆತ್ತರಕ್ಕೆ ಹೋಗುವುದು ಅಸಾಧ್ಯವೇನಿಲ್ಲ ಎಂಬುವುದನ್ನು ಹೋಲಿ ಏಂಜಲ್ಸ್‌ ಸಂಸ್ಥೆ ಸಾಧಿಸಿ ತೋರಿಸಿದೆ.

1989ರಲ್ಲಿ ಕೇವಲ 90 ವಿದ್ಯಾರ್ಥಿಗಳಿದ್ದ ಈ ಶಾಲೆ ಪ್ರಸ್ತುತ ರಾಜ್ಯ ಪಠ್ಯಕ್ರಮದಲ್ಲಿ 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂಸ್ಥೆಯ ಅಭಿವೃದ್ಧಿ ಪಥವನ್ನು ಸೂಚಿಸುತ್ತದೆ. ರಾಜ್ಯ ಪಠ್ಯಕ್ರಮವಲ್ಲದೇ ಐಸಿಎಸ್‌ಇ ಪಠ್ಯಕ್ರಮವನ್ನು ಒಳಗೊಂಡ ಸಂಸ್ಥೆಯನ್ನು 2003ರಲ್ಲಿ ಸ್ಥಾಪಿಸಲಾಗಿದ್ದು, ಪ್ರಾರಂಭದಲ್ಲಿ ಈ ಪಠ್ಯಕ್ರಮದಲ್ಲಿ 40 ರಿಂದ 50 ಮಕ್ಕಳಿದ್ದು ಪ್ರಸ್ತುತ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂಸ್ಥೆಯ ಸರ್ವತೋಮುಖ ಪ್ರಗತಿಯನ್ನು ಸೂಚಿಸುತ್ತದೆ.

ಸಂಸ್ಥೆಯ ಅಧ್ಯಕ್ಷ ಟಿ. ಪುರುಷೋತ್ತಮ ಅವರಿಗೆ ಅವರ ಪತ್ನಿ ಹಾಗೂ ಶಾಲೆಯ ಕಾರ್ಯದರ್ಶಿಗಳಾದ ಪಾರ್ವತಿ ಪುರುಷೋತ್ತಮ ಅವರು ಬೆನ್ನುಲುಬಾಗಿ ನಿಂತು ಸ್ಫೂರ್ತಿ ತುಂಬುತ್ತಿದ್ದಾರೆ. ಮೂವತ್ತು ವರ್ಷಗಳ ಹಿಂದೆ 90 ರಿಂದ 100 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಪ್ರಸ್ತುತ ಸುಮಾರು 6000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2018ರವೆರೆಗೆ ರಾಜ್ಯ ಪಠ್ಯಕ್ರಮದ 18 ಎಸ್ಸೆಸ್ಸೆಲ್ಸಿ ಬ್ಯಾಚುಗಳು, ಕೇಂದ್ರ ಪಠ್ಯಕ್ರಮದ 5 ಎಸ್ಸೆಸ್ಸೆಲ್ಸಿ ಬ್ಯಾಚುಗಳು ಉತ್ತಮ ಫ‌ಲಿತಾಂಶದೊಂದಿಗೆ ಹೊರಬಂದಿವೆ.

Advertisement

2019ರಲ್ಲಿ ರಾಜ್ಯ ಪಠ್ಯಕ್ರಮದ 257 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೂ ಹಾಗೂ ಕೇಂದ್ರ ಪಠ್ಯಕ್ರಮದ 79 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಉತ್ತಮ ಫ‌ಲಿತಾಂಶ ಸಾಧಿಸಲು ಸಿದ್ಧತೆ, ಪರಿಶ್ರಮ ಹಾಕುತ್ತಿವೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುವಂತೆ ಮಾಡಿದ ಕೀರ್ತಿ ಶಾಲೆಯ ಪ್ರಾಂಶುಪಾಲ ಪಿ. ಲೋಕೇಶ್‌ ಹಾಗೂ ನಿರ್ದೇಶಕ ಪಿ. ಚಂದ್ರಮೋಹನ್‌ರವರಿಗೆ ಸಲ್ಲುತ್ತದೆ.

ಶಾಲೆಯ ಮುಖ್ಯ ಶಿಕ್ಷಕಿ ಸಿ. ರಾಧಿಕಾರವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಮುಖ ಪಾತ್ರವಹಿಸುತ್ತಿದ್ದು, ಎಲ್ಲ ಪೋಷಕರು, ಶಿಕ್ಷಕರು, ಶಾಲೆಯ ಇನ್ನಿತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಒಟನಾಟವನ್ನು ಹೊಂದಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸದಾ ಉತ್ತಮ ಮಾರ್ಗದರ್ಶನ ಹಾಗೂ ಸಲಹೆ-ಸೂಚನೆ ನೀಡುತ್ತಾ ಶಿಸ್ತು ಸಂಯಮ ಮೂಡಿಸುತ್ತಿದ್ದಾರೆ.

ಕ್ರೀಡೆಯಲ್ಲೂ ಮುಂದು: ಶಾಲೆಯ ಸಾಕಷ್ಟು ವಿದ್ಯಾರ್ಥಿಗಳು ಕ್ಲಸ್ಟರ್‌ ಮಟ್ಟ, ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ರಾಷ್ಟ್ರೀಯ ಕೆಡೆಟ್‌ ಪಡೆಯ ವಿದ್ಯಾರ್ಥಿಗಳು ಕ್ಯಾಂಪ್‌ಗ್ಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ತೋರಿ ಅನೇಕ ಪ್ರಶಸ್ತಿಗಳನ್ನು ಹಾಗೂ ಪದಕಗಳನ್ನು ಪಡೆದಿದ್ದಾರೆ. ಎನ್‌ಸಿಸಿ ಮೊದಲ ಬ್ಯಾಚ್‌ 2013ರಲ್ಲಿ ಪರೀಕ್ಷೆಯನ್ನು ತೆಗೆದುಕೊಂಡು ಎ ದರ್ಜೆಯ ಪ್ರಮಾಣಪತ್ರವನ್ನು ಪಡೆದಿದ್ದಾರೆ.

ಶಾಲೆಯ ಸೌಲಭ್ಯಗಳು: ಸಂಸ್ಥೆಯ ಗುಣಮಟ್ಟ ಮತ್ತು ಮೂಲ ಸೌಕರ್ಯದಲ್ಲಿ ರಾಜಿ ಇಲ್ಲದೆ ಬೃಹತ್‌ ಕಟ್ಟಡಗಳನ್ನು ಹೊಂದಿದೆ. ಲ್ಯಾಬ್‌ನಲ್ಲಿ ಎಲ್‌ಸಿಡಿ, ಪ್ರೊಜೆಕ್ಟರ್‌, ಧ್ವನಿ-ದೃಶ್ಯ ಸಂವಹನ ಸಲಕರಣೆ, ಉತ್ತಮ ದರ್ಜೆಯ ಪೀಠೊಪಕರಣ ಮತ್ತು ಅತ್ಯುನ್ನತ ಶೈಕ್ಷಣಿಕ ಗುಣಮಟ್ಟ. ಕೌನ್ಸಿಲರ್‌ ಜತೆಯಲ್ಲಿ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ಮತ್ತು ಜೀವನ ಕೌಶಲ್ಯ ತಿಳಿಸುವ ಶಿಕ್ಷಣ ಇಲ್ಲಿದೆ.

ಪ್ರಾಂಶುಪಾಲರ ವ್ಯವಸ್ಥಿತ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು, ಮುಖ್ಯ ಶಿಕ್ಷಕರ ಮಾರ್ಗದರ್ಶನ, ಶಾಲೆಯು ಯೋಜಿಸುವ ಶೈಕ್ಷಣಿಕ ವರ್ಷದ ರೂಪರೇಷೆಗಳು, ಸಂಸ್ಥೆಯ ಪರಿಣಿತ ಮತ್ತು ಅನುಭವೀ ಶಿಕ್ಷಕರ ಪರಿಶ್ರಮದಿಂದ ಪ್ರಾರಂಭಿಕ ವರ್ಷದಿಂದಲೂ ಅಂತಿಮ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಹಾಗೂ ಐಸಿಎಸ್ಸಿ ಪಠ್ಯಕ್ರಮದ ವಿದ್ಯಾರ್ಥಿಗಳು ಶೇ.100ರಷ್ಟು ಫ‌ಲಿತಾಂಶವನ್ನು ದಾಖಲಿಸಿದ್ದಾರೆ.

ಹೋಲಿ ಏಂಜಲ್ಸ್‌ ಸಂಸ್ಥೆಯು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಸಂಸ್ಕೃತಿ-2019ನ್ನು ಜನವರಿ 19 ಹಾಗೂ 20ರಂದು ಆರ್‌.ಪಿ.ಸಿ. ಬಡಾವಣೆಯ ಬೃಹತ್‌ ಮೈದಾನದಲ್ಲಿ ಹಮ್ಮಿಕೊಂಡಿತ್ತು.

ಭವಿಷ್ಯದ ಯೋಜನೆ: ಕೇಂದ್ರ ಪಠ್ಯಕ್ರಮದ ಸಿಬಿಎಸ್ಸಿ ಶಾಲೆಯನ್ನು ಸ್ಥಾಪನೆ ಮಾಡುವ ಉದ್ದೇಶವನ್ನು ಶಾಲಾ ಪ್ರಾಂಶುಪಾಲರು ಹೊಂದಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘಟನೆಯೊಂದನ್ನು ಕಟ್ಟುವ ಹಾಗೂ ಮಾಹಿತಿ ತಂತ್ರಜ್ಞಾನವನ್ನು ವಿಸ್ತರಿಸುವ ಉದ್ದೇಶವನ್ನೂ ಹೊಂದಲಾಗಿದೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವುದರಲ್ಲಿ ಅರ್ಥವಿಲ್ಲ. ಅವರಿಗೆ ಸಾಧಕರ ಜೀವನ ಕಥೆ ಹೇಳುತ್ತಾ ಉತ್ಸಾಹ ತುಂಬಿದಾಗ ಗೆಲುವು ಅವರದಾಗುತ್ತದೆ.

ಶಿಸ್ತು- ಕಲಾತ್ಮಕತೆ: ಹೊಲಿ ಏಂಜಲ್ಸ್‌ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತಿಗೆ ಪ್ರಥಮ ಆದ್ಯತೆ. ಸಮಯ ಪಾಲನೆಗೂ ಮಾನ್ಯತೆ ನೀಡಲಾಗಿದೆ. ಸಂಸ್ಥೆಯಲ್ಲಿ ವಸ್ತ್ರಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ, ಗಾಂಧಿ ಜಯಂತಿ, ಮಕ್ಕಳ ದಿನಾಚರಣೆ, ಯೋಗದಿನ, ವಿಶ್ವಪರಿಸರ ದಿನ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ಮಕ್ಕಳು ಶಿಸ್ತು ಸಂಭ್ರಮ ದೇಶಭಕ್ತಿ ಮೇಳೈಸಿ ಭಾಗವಹಿಸುವುದನ್ನು ನೋಡುವುದೇ ಸೊಗಸು.

ಸಂಸ್ಥೆಯು ಜಾತಿ-ಮತ-ಧರ್ಮ ರಾಜಕೀಯ ಆಧಾರದಿಂದ ನಿಂತದ್ದಲ್ಲ. ನಾವು ಅನುಸರಿಸುತ್ತಿರುವುದು ಮಾನವ ಧರ್ಮ ನಾವು ಅನುಸರಿಸುತ್ತಿರುವುದು ಸಾಮಾಜಿಕ ನ್ಯಾಯದ ಮೌಲ್ಯ ಎಂದು ಪ್ರಾಂಶುಪಾಲ ಪಿ. ಲೋಕೇಶ್‌ ತಿಳಿಸಿದರು.

ಶಾಲೆಯಲ್ಲಿ ಮನಸ್ಸು ಕಟ್ಟುವ ಕೆಲಸ: ವಿದ್ಯಾರ್ಥಿಗಳದ್ದು ಚಂಚಲ ಮನಸ್ಸು. ಅವುಗಳನ್ನು ಕಟ್ಟುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ಆ ಮೂಲಕ ಬದುಕಿನ ಹಾದಿಯನ್ನು ತೋರಿಸಲಾಗುತ್ತದೆ. ಅದಕ್ಕಾಗಿ ಬೇಕಾದ ಪರಿಸರ ಸೃಷ್ಟಿಸಲಾಗಿದೆ. ಪಠ್ಯ ಪುಸ್ತಕದಲ್ಲಿನ ವಿಷಯವನ್ನು ಎಲ್ಲರೂ ಬೋಧನೆ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಬುದ್ಧಿ ಮತ್ತು ವಿದ್ಯೆ ನೀಡುತ್ತಾರೆ. ಆದರೆ ಹೊàಲಿ ಏಂಜಲ್ಸ್‌ನಲ್ಲಿ ಇದರೊಂದಿಗೆ ಹಲವು ವಿಶೇಷತೆ ಇದೆ. ವರ್ಷ ಪೂರ್ತಿ ನಾನಾ ಚಟುವಟಿಕೆಗಳು ನಿರಂತರವಾಗಿ ಕ್ಯಾಂಪಸ್‌ನಲ್ಲಿ ನಡೆದುಕೊಂಡು ಬರುತ್ತಿವೆ.

ಪ್ರತಿಯೊಬ್ಬ ವಿದ್ಯಾರ್ಥಿಗೂ ಆತನ ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ಅವಕಾಶ ಕೊಡಬೇಕು. ಶಾಲೆಯ ಎರಡೂ ಪಠ್ಯಕ್ರಮದಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಅರ್ಹರಾಗುವಂತೆ ಹಾಗೂ ಜೀವನದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುತ್ತಿದ್ದೇವೆ.
-ಪಿ.ಲೋಕೇಶ್‌, ಹೋಲಿ ಏಂಜಲ್ಸ್‌ ಸಂಸ್ಥೆ ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next