Advertisement
ಬ್ರಾಹ್ಮಣನಾಗಿ ಜನ್ಮಪಡೆದಾಗಲೂ ಭಗವಂತನ ದಯೆಯಿಂದ ತನ್ನ ಹಿಂದಿನ ಜನ್ಮ ಪರಂಪರೆಯ ನೆನಪು ಇದ್ದುದ್ದರಿಂದ ಅವನು “ತನ್ನ ಯೋಗದಲ್ಲಿ ಪುನಃ ವಿಗ್ನವೂ ಒದಗದಿರಲಿ’ ಎಂಬ ಆ ಶಂಕೆಯಿಂದಲೇ ತಮ್ಮ ಬಂಧುಗಳ ಸಹವಾಸದಿಂದಲೂ ಹೆದರುತ್ತಿದ್ದನು. ಯಾರ ಸ್ಮರಣೆ ಮತ್ತು ಗುಣಕೀರ್ತನೆಗಳನ್ನೂ ಸದಾ ಮಾಡುತ್ತಿರುವುದರಿಂದ ಸಕಲ ಕರ್ಮಬಂಧನಗಳು ಕತ್ತರಿಸಿ ಹೋಗುವುದೋ, ಆ ಭಗವಂತನ ಅಡಿದಾವರೆಗಳನ್ನೇ ಸದಾ ನೆನೆಯುತ್ತಾ ತಾನು ಹುಚ್ಚನಂತೆಯೂ, ಮೂರ್ಖನಂತೆಯೂ, ಕುರುಡನಂತೆಯೂ , ಕಿವುಡನಂತೆಯೂ, ತೋರ್ಪಡಿಸಿಕೊಳ್ಳುತ್ತಿದ್ದನು.
Related Articles
Advertisement
ಸ್ವತಃ ಸಿದ್ದವಾದ ಕೇವಲ ಜ್ಞಾನಾನಂದ ಸ್ವರೂಪವಾದ ಆತ್ಮಜ್ಞಾನವು ಆತನಿಗೆ ಉಂಟಾಗಿದ್ದರಿಂದ ಶೀತ-ಉಷ್ಣ, ಮಾನ-ಅಪಮಾನ ಮುಂತಾದ ದ್ವಂದ್ವಗಳಿಂದುಂಟಾಗುವ ಸುಖ-ದುಃಖಾದಿಗಳಲ್ಲಿ ದೇಹಾಭಿಮಾನದ ಸ್ಫೂರ್ತಿಯೇ ಆತನಿಗೆ ಉಂಟಾಗುತ್ತಿರಲಿಲ್ಲ.
ಚಳಿ, ಸೆಕೆ, ಮಳೆ,ಬಿರುಗಾಳಿ ಇವಾವುದನ್ನು ಲೆಕ್ಕಿಸದೆ, ನಡುವಿಗೆ ಒಂದು ಕೊಳೆಯಾದ ವಸ್ತ್ರವನ್ನು ಸುತ್ತಿಕೊಂಡು, ಬರಿಮೈಯಲ್ಲೇ ಎಲ್ಲೆಂದರಲ್ಲಿ ಬರಿ ನೆಲದಮೇಲೆ ಬಿದ್ದುಕೊಂಡಿರುತ್ತಿದ್ದನು. ಆದರೆ ಅವನು ದೃಢಕಾಯನಾಗಿದ್ದನು. ಅವನ ಜನಿವಾರವು ತುಂಬಾ ಕೊಳಕಾಗಿತ್ತು, ಸ್ನಾನವನ್ನು ಮಾಡುತ್ತಿರಲಿಲ್ಲ, ಇದರಿಂದ ಅವನ ದೇಹವು ಕೊಳೆಯಿಂದ ಕೂಡಿರುತ್ತಿತ್ತು. ಆದರೆ ಅವನಿಗೆ ದೇಹದ ಮೇಲೆ ಯಾವುದೇ ವ್ಯಾಮೋಹವಿರಲಿಲ್ಲ ಏಕೆಂದರೆ ವ್ಯಾಮೋಹದಿಂದ ಅವನು ಮೃಗೇಶರೀರ ಪಡೆದು ಯಾತನೆಯನ್ನು ಅನುಭವಿಸಿದ್ದೆಲ್ಲವೂ ಅವನಿಗೆ ಅರಿವಿತ್ತು . ಬಂಗಾರವು ಮಣ್ಣಿನಲ್ಲಿ ಅಡಗಿಕೊಂಡಂತೆ ಅವನ ಬ್ರಹ್ಮಜ್ಞಾನದ ತೇಜಸ್ಸು ಅವನ ಜಡತ್ವದಿಂದ ಮರೆಯದಂತೆ ಕಾಣುತಿತ್ತು. ಆದ್ದರಿಂದ ಅಜ್ಞಾನಿಗಳು ಈತನು ಯಾವನೂ ಒಬ್ಬ ಬ್ರಾಹ್ಮಣನು, ಆದರೆ ಅಧಮ ಬ್ರಾಹ್ಮಣನು ಎಂದು ಹೇಳಿ ಅವನನ್ನು ತಿರಸ್ಕರಿಸುತ್ತಿದ್ದರು. ಆದರೆ ಭರತನು ಅದಾವುದನ್ನೂ ವಿಚಾರ ಮಾಡದೇ ಸ್ವಚ್ಛಂದವಾಗಿ ಓಡಾಡುತ್ತಿದ್ದನು. ಅವನ ಸಹೋದರರು ಸಹ ಅವನನ್ನು ತುಚ್ಛವಾಗಿ ಕಾಣುತ್ತಿದ್ದರು. ಅವನನ್ನು ಕೆಸರುಗದ್ದೆಯ ಕೆಲಸಕ್ಕೆ ನೇಮಿಸಿದರು. ರಾತ್ರಿಯಲ್ಲಿ ಕಾವಲುಕಾಯಲು ಇರುವಂತೆ ಸೂಚಿಸಿದರು, ಅದರಂತೆ ಅವನು ಅಲ್ಲಿಯೆ ಇರುತ್ತಿದ್ದನು.
ಹೀಗಿರುವಾಗ ಒಮ್ಮೆ ಅಧರ್ಮಿಷ್ಠರಾದ ಕಳ್ಳರತಂಡದ ನಾಯಕನು ಪುತ್ರಕಾಮನೆಗಾಗಿ ಭದ್ರಕಾಳಿಗೆ ನರಬಲಿಯನ್ನು ಕೊಡುವ ಸಂಕಲ್ಪ ಮಾಡಿದನು. ಅವನು ಬಲಿಕೊಡುವುದಕ್ಕಾಗಿ ಕಟ್ಟಿಹಾಕಿದ್ದ ಮನುಷ್ಯನು ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದನು, ಇದರಿಂದ ಕೋಪಗೊಂಡ ನಾಯಕನು ಸೇವಕರನ್ನು ಕರೆದು ” ಅವನನ್ನು ಎಳೆದು ತನ್ನಿ ಇಲ್ಲವಾದರೆ ಬೇರೆ ಬಲಿಯನ್ನಾದರೂ ತನ್ನಿ ಎಂದು ಆದೇಶಿಸಿದನು.
ಎಲ್ಲ ಕಡೆಯಲ್ಲಿ ಹುಡುಕಿದರೂ ಕಗ್ಗತ್ತಲೆ ಕವಿದಿದ್ದ ಕಾರಣ ಅವರ ಬಲಿಯ ವ್ಯಕ್ತಿ ಸಿಗಲಿಲ್ಲ. ಅದೇ ಸಮಯದಲ್ಲಿ ಅವರ ದೃಷ್ಟಿಯು ಅಲ್ಲೇ ಜಿಂಕೆ-ಹಂದಿ ಮುಂತಾದ ಪ್ರಾಣಿಗಳಿಂದ ಹೊಲವನ್ನು ರಕ್ಷಿಸುವುದಕ್ಕಾಗಿ ವೀರಾಸನದಲ್ಲಿ ಕುಳಿತಿದ್ದ ಆಂಗೀರಸ ಗೋತ್ರದ ಬ್ರಾಹ್ಮಣ ಕುಮಾರ ಭರತನ ಮೇಲೆ ಬಿತ್ತು. ಆ ಕಳ್ಳರು “ಇವನು ತುಂಬಾ ಒಳ್ಳೆಯ ಲಕ್ಷಣಗಳಿಂದ ಕೂಡಿದ ನರಪಶುವಾಗಿದ್ದಾನೆ, ಇದರಿಂದ ನಮ್ಮ ಒಡೆಯನ ಕಾರ್ಯವು ಖಂಡಿತವಾಗಿ ಸಿದ್ಧಿಸುವುದು”. ಎಂಬ ಭಾವನೆಯಿಂದ ಭರತನನ್ನು ಹಗ್ಗಗಳಿಂದ ಕಟ್ಟಿ ಚಂಡಿಕಾದೇವಿಯ ದೇವಾಲಯಕ್ಕೆ ತಂದರು.
ಅನಂತರ ಆ ಕಳ್ಳರು ತಮ್ಮ ಪದ್ದತಿಯಂತೆ ಆತನಿಗೆ ವಿಧಿಪೂರ್ವಕವಾಗಿ ಸ್ನಾನಮಾಡಿಸಿ, ಹೊಸ ಬಟ್ಟೆಗಳನ್ನು ಉಡಿಸಿ, ಬಗೆ-ಬಗೆಯ ಒಡವೆಗಳಿಂದಲೂ, ಗಂಧ, ಮಳೆ,ತಿಲಕ ಮುಂತಾದವುಗಳಿಂದ ಚೆನ್ನಾಗಿ ಅಲಂಕರಿಸಿ ಊಟ ಮಾಡಿಸಿದರು. ಮತ್ತೆ ಧೂಪ, ದೀಪ ಮುಂತಾದ ಪೂಜಾಸಾಮಗ್ರಿಗಳೊಡನೆ ಬಲಿದಾನದ ವಿಧಿಯಂತೆ ಭಜನೆ ಮಾಡಿ, ವಾದ್ಯಗಳನ್ನು ನುಡಿಸುತ್ತಾ ಭರತನನ್ನು ಭದ್ರಕಾಳಿಯ ಎದುರಿನ ಬಲಿಪೀಠದಲ್ಲಿ ತಲೆಬಾಗಿಸಿ ಕುಳ್ಳಿರಿಸಿದರು. ಅನಂತರ ಕಳ್ಳರ ಪುರೋಹಿತನು ನರಬಲಿಗೆ ಅಣಿಯಾದವನ ರಕ್ತದಿಂದ ದೇವಿಯನ್ನು ತೃಪ್ತಿಪಡಿಸಲಿಕ್ಕಾಗಿ ದೇವಿಮಂತ್ರಗಳಿಂದ ಅಭಿಮಂತ್ರಿಸಿದ ಒಂದು ಹರಿತವಾದ ಖಡ್ಗವನ್ನು ಎತ್ತಿಕೊಂಡನು.
ಆ ದರೋಡೆಕೋರರಾದರೂ ಸ್ವಾಭಾವಿಕವಾಗಿಯೇ ರಜೋಗುಣೀ -ತಮೋಗುಣಿಗಳಾಗಿದ್ದರು. ಅಲ್ಲದೆ ಹಿಂಸೆಯಲ್ಲಿ ಅವರಿಗೆ ಅಭಿರುಚಿಯಿತ್ತು. ಆ ಸಮಯದಲ್ಲಿ ಅವರು “ ಆಪತ್ಕಾಲದಲ್ಲಿ ಯಾವ ಹಿಂಸೆಯನ್ನು ಅನುಮೋದಿಸಲಾಗಿದೆಯೋ ಅದರಲ್ಲಿಯೂ ಬ್ರಾಹ್ಮಣನ ವಧೆಯನ್ನು ಪೂರ್ಣವಾಗಿ ನಿಷೇಧಿಸಲ್ಪಟ್ಟಿದೆ”. ಅದರಲ್ಲಿಯೂ ಇವನು ಸಾಕ್ಷಾತ್ ಬ್ರಹ್ಮಭಾವವನ್ನು ಹೊಂದಿದ , ಬ್ರಾಹ್ಮಣ ಕುಮಾರನನ್ನು ಬಲಿಕೊಡಲು ಬಯಸುತ್ತಿದ್ದರು.
ಇಂತಹ ಭಯಂಕರವಾದ ಕುಕರ್ಮವನ್ನು ಕಂಡು ಭದ್ರ ಕಾಳಿಯ ಶರೀರದಲ್ಲಿ ತಡೆಯಲಸಾಧ್ಯವಾದ ಭರತನ ಬ್ರಹ್ಮ ತೇಜಸ್ಸಿನ ತಾಪವು ತುಂಬಿ ಆಕೆಯು ಇದ್ದಕ್ಕಿದ್ದಂತೆ ಮೂರ್ತಿಯನ್ನು ಒಡೆದುಕೊಂಡು ಅಲ್ಲಿ ಪ್ರಕಟವಾದಳು. ಕಡುರೋಷದಿಂದಲೂ, ಅಸಹನೆಯಿಂದಲೂ ಆಕೆಯ ಹುಬ್ಬುಗಳು ಮೇಲೆದ್ದು ಗಂಟುಹಾಕಿಕೊಂಡಿದ್ದವು. ಕರಾಳವಾದ ಕೋರೆದಾಡೆಗಳು ಹೊರಗೆ ಚಾಚಿಕೊಂಡಿದ್ದವು. ಕಣ್ಣುಗಳು ಕೆಂಪಾಗಿ ಆಕೆಯ ಮುಖವು ಅತ್ಯಂತ ಭೀಕರವಾಗಿತ್ತು. ಆಕೆಯ ಆ ಕರಾಳವಾದ ರೂಪವನ್ನು ನೋಡಿದಾಗ ಆಕೆಯು ಈ ಜಗತ್ತನ್ನೇ ಸಂಹರಿಸಿ ಬಿಡುವಳೆನೋ ಎಂಬಂತೆ ತೋರುತ್ತಿತ್ತು. ದೇವಿಯು ರೋಷಾವೇಶದಿಂದ ಗಟ್ಟಿಯಾಗಿ ಅಟ್ಟಹಾಸ ಮಾಡಿ ಪುರೋಹಿತನ ಕೈಯಿಂದ ಅಭಿಮಂತ್ರಿತವಾದ ಆ ಖಡ್ಗವನ್ನು ಕಿತ್ತುಕೊಂಡು ಅದರಿಂದಲೇ ಆ ಎಲ್ಲ ಪಾಪಿಗಳ ತಲೆಗಳನ್ನು ಹಾರಿಸಿದಳು ಮತ್ತು ತನ್ನ ಗಣಗಳೊಡನೆ ಆ ದುಷ್ಟರ ಕುತ್ತಿಗೆಗಳಿಂದ ಹರಿಯುತ್ತಿದ್ದ ಬಿಸಿರಕ್ತವನ್ನು ಹೀರಿ ಕುಣಿದು ಕುಪ್ಪಳಿಸುತ್ತ ಅವರ ತಲೆಬುರುಡೆಗಳನ್ನು ಚೆಂಡಾಡಿ ಭರತನನ್ನು ರಕ್ಷಿಸಿದಳು.
ಯಾರು ಭಗವಂತನ ನಿರ್ಭಯ ಚರಣಕಮಲಗಳನ್ನು ಆಶ್ರಯಿಸಿರುವನೂ ಅಂತಹ ಭಗವದ್ ಭಕ್ತನಿಗೆ ಎಂತಹ ಆಪತ್ತು ಬಂದರು ಯಾವ ರೀತಿಯ ಕಳವಳವೂ ಉಂಟಾಗುವುದಿಲ್ಲ.. ಆ ಭಗವಂತನು ಒಂದಲ್ಲ ಒಂದು ರೂಪದಲ್ಲಿ ಬಂದು ಭಕ್ತರನ್ನು ರಕ್ಷಿಸಿಯೇ ರಕ್ಷಿಸುತ್ತಾನೆ.
ಮುಂದುವರೆಯುವುದು…
ಪಲ್ಲವಿ