Advertisement

ಸಂಬಂಜ ಮರೆತವರ ಕಥೆ-ವ್ಯಥೆ

10:31 AM Aug 19, 2017 | |

ಸಾಹಿತಿ ದೇವನೂರು ಮಹಾದೇವ ಅವರ ಕೃತಿಗಳು ಹೆಚ್ಚು ಸಿನಿಮಾಗೆ ಬರುತ್ತಿಲ್ಲ ಎಂಬ ಮಾತು ಸಹಜವಾಗಿ ಕೇಳಿ ಬರುತ್ತಿತ್ತು. ಅವರ ಕಥೆಗಳಲ್ಲಿ ಸೂಕ್ಷ್ಮತೆ ಮತ್ತು ಹೋರಾಟದ ಕಿಚ್ಚು ಹೆಚ್ಚು. ಆದಾಗ್ಯೂ ಕೆಲ ಸೂಕ್ಷ್ಮಸಂವೇದನೆವುಳ್ಳ ಕಥೆಗಳನ್ನು ಆಯ್ಕೆ ಮಾಡಿಕೊಂಡು ಮಾಡಿದ ಸಿನಿಮಾವೇ “ಮಾರಿಕೊಂಡವರು’. “ಊರಿಗೆ ಡಾಂಬರು ಬಂದದ್ದು’, “ಮಾರಿಕೊಂಡವರು’ ಮತ್ತು “ಮೂಡಲ ಸೀಮೆಯಲ್ಲಿ ಕೊಲೆಗಿಲೆ’ ಕಥೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ ಶಿವರುದ್ರಯ್ಯ.

Advertisement

-ಸಂಬಂಜ ಅನ್ನೋದು ದೊಡ್ಡದು ಕಣಾ… ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಕಾದಂಬರಿ ಆಧಾರಿತ “ಮಾರಿಕೊಂಡವರು’ ಚಿತ್ರ ನೋಡಿದ ಮೇಲೆ, ಕೊನೆಯಲ್ಲಿ ಕಾಣಸಿಗುವ ಈ ಭಾವನಾತ್ಮಕ ಪದ ಅಕ್ಷರಶಃ ನಿಜವೆನಿಸದೇ ಇರದು. ಇಲ್ಲಿ ಸಂಬಂಧಗಳ ಮೌಲ್ಯ, ಭಾವನೆಗಳ ಬೆಸುಗೆ, ಒಂದಷ್ಟು ಕಾಮ, ಪ್ರೇಮ, ಬಡತನ, ಹಸಿವು ಎಲ್ಲವೂ ಉಂಟು. ಎಲ್ಲಕ್ಕಿಂತ ಹೆಚ್ಚಾಗಿ ಜಾತಿ ಹಾಗು ಧರ್ಮವನ್ನು ಮೀರಿದ ಒಂದೊಳ್ಳೆ ಸಂದೇಶ ಇಲ್ಲುಂಟು.

ಇದು ಕಮರ್ಷಿಯಲ್‌ ಸಿನಿಮಾ ಜಾತಿಗೆ ಸೇರದಿದ್ದರೂ, ಅಂತಹ ಕೆಲ ಅಂಶಗಳಿಗೆ ಜಾಗವಿದೆ. ಇಲ್ಲಿ ಮುಖ್ಯವಾಗಿ ಸಮಾಜದಲ್ಲಿನ ವಾಸ್ತವತೆ, ಸೂಕ್ಷ್ಮಸಂವೇದನೆಯ ವಿಷಯ, ತುಳಿತಕ್ಕೊಳಗಾದವರ ಪರಿಪಾಟಿಲು, ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಡುವ ಕೆಳವರ್ಗದವರು ಹೀಗೆ ಇನ್ನಷ್ಟು ಭಾವನಾತ್ಮಕ ಅಂಶಗಳು ನೋಡುಗರನ್ನು ಆಗಾಗ ಭಾವುಕತೆಗೆ ದೂಡುತ್ತವೆ. 1975ರಿಂದ 1980ರ ಅವಧಿಯಲ್ಲಿ ನಡೆಯುವಂತಹ ಘಟನೆಗಳೇ ಚಿತ್ರದ ಜೀವಾಳ. ಕುಗ್ರಾಮವೊಂದಕ್ಕೆ ಡಾಂಬರು ರಸ್ತೆಗೆ ಮಂಜೂರು ಸಿಗುತ್ತೆ.

ಆದರೆ, ಅದು ಊರಿನ ರಸ್ತೆಗೆ ಬಿಟ್ಟು, ನದಿ ಪಕ್ಕದ ರಸ್ತೆಗೆ ಡಾಂಬರು ರಸ್ತೆ ಮಾಡಬೇಕು ಎಂಬ ಇಚ್ಛೆ ಆ ಊರಿನ ಪಟೇಲನದು. ಆ ಸಮಯದಲ್ಲಿ ಐವರು ಪ್ರಗತಿಪರ ಯುವಕರು ಆ ವಿರುದ್ಧ ಹೋರಾಡುತ್ತಾರೆ. ಕಾರಣ, ಮರಳು ದಂಧೆಗಾಗಿ ಆ ಊರಿನ ಪಟೇಲ ಡಾಂಬರು ರಸ್ತೆ ಮಂಜೂರು ಮಾಡಿಸಿಕೊಂಡಿದ್ದಾನೆ ಅನ್ನೋದು. ಇಲ್ಲಿ ಅತೀ ಸೂಕ್ಷ್ಮ ವಿಷಯಗಳೊಂದಿಗೆ ಮೇಲ್ವರ್ಗ ಹಾಗು ಕೆಳವರ್ಗದ ನಡುವಿನ ವ್ಯತ್ಯಾಸವನ್ನು ಬಣ್ಣಿಸುವುದರ ಜತೆಗೆ ಸಂಬಂಧಗಳ ಮೌಲ್ಯವನ್ನು ಸಾರಲಾಗಿದೆ.

ಒಟ್ಟಾರೆ ದಲಿತ, ಕುಂಬಾರ, ಕಂಬಾರ, ಬ್ರಾಹ್ಮಣ, ಅಯ್ಯಂಗಾರ್‌ ಹುಡುಗರು ಒಂದಾಗಿ, ಜಾತಿ,-ಧರ್ಮ ಮರೆತು ತಮ್ಮೂರಲ್ಲಿ ನಡೆಯೋ ವ್ಯವಸ್ಥೆ ವಿರುದ್ಧ ಹೇಗೆಲ್ಲಾ ಹೋರಾಡುತ್ತಾರೆ. ಸಂಬಂಧಗಳ ಮೌಲ್ಯಕ್ಕೆ ಎಷ್ಟು ಒದ್ದಾಡುತ್ತಾರೆ ಅನ್ನೋದನ್ನು ನಿರ್ದೇಶಕರು ತುಂಬಾ ಸೂಕ್ಷ್ಮತೆಯಿಂದ ಕಟ್ಟಿಕೊಟ್ಟಿದ್ದಾರೆ. ಅವರ ಕಲ್ಪನೆಯ ದೇವನೂರು, ಅಲ್ಲಿನ ನೆಲ, ಜಲ, ಭಾಷೆ ಮತ್ತು ಆ ಸೊಗಡನ್ನು ಗ್ರಾಮೀಣ್ಯ ಭಾಷೆಯಲ್ಲೇ ಕಟ್ಟಿಕೊಟ್ಟಿರುವುದರಿಂದ “ಮಾರಿಕೊಂಡವರು’ ಇಷ್ಟವಾಗುತ್ತೆ.

Advertisement

ಇಲ್ಲಿ ಮುಖ್ಯವಾಗಿ ಗಮನಸೆಳೆಯೋದು ಸಂಭಾಷಣೆ. ಲಕ್ಷ್ಮೀಪತಿ ಕೋಲಾರ ಹಾಗು ದೇವನೂರು ಬಸವರಾಜು ಅವರು ಕಟ್ಟಿಕೊಟ್ಟಿರುವ ಆ ಭಾಗದ ಹಳ್ಳಿ ಸೊಗಡಿನ ಮಾತುಗಳು ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಇದಕ್ಕೆ ಪೂರಕ ಎಂಬಂತೆ ಎಸ್‌.ಪಿ. ವೆಂಕಟೇಶ್‌ ಅವರ ಸಂಗೀತ ಹಾಗೂ ಇಸಾಕ್‌ ಥಾಮಸ್‌ ಅವರ ಹಿನ್ನೆಲೆ ಸಂಗೀತ ಕೂಡ ಹಿತವೆನಿಸುತ್ತದೆ. ಸಾಹಿತ್ಯವನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದು ತುಸು ಕಷ್ಟದ ಕೆಲಸವೇ.

ಆದರೆ, ಸಾಹಿತ್ಯ ಕಥೆ ಆಧರಿಸಿ, ಸಿನಿಮಾ ಮಾಡಿರುವುದಲ್ಲದೆ, ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ತೆರೆಯ ಮೇಲೆ ಬಿಂಬಿಸಿರುವ ನಿರ್ದೇಶಕರ ಪ್ರಯತ್ನವನ್ನಂತೂ ಮೆಚ್ಚಬೇಕು. ಅವರು ಆಯ್ಕೆ ಮಾಡಿಕೊಂಡ ಕಥೆಗೆ ತಕ್ಕಂತೆಯೇ ಆ ಪರಿಸರ, ಅವರ ಕಲ್ಪನೆಯ ಶಿವ, ಸುಶೀಲ, ಪಟೇಲ, ಕಿಟ್ಟಿ, ಬೀರ, ಲಚ್ಚಿ, ರಾಜ ಇತ್ಯಾದಿ ಪಾತ್ರಗಳು ಕೂಡ ಇಲ್ಲಿ ಸಿನಿಮಾದುದ್ದಕ್ಕೂ ಗಮನಸೆಳೆಯುತ್ತವೆ. ಕೆಲವು ಕಾಡಿದರೆ, ಕೆಲವು ಹಿಡಿ ಶಾಪ ಹಾಕುವಂತೆ ಮಾಡುತ್ತವೆ.

ಇನ್ನೂ ಕೆಲ ಪಾತ್ರಗಳು ಕೀಳುಮಟ್ಟದ ವ್ಯವಸ್ಥೆಗೆ ಹೊಂದಿಕೊಂಡು ದೂರುವಂತೆ ಮಾಡುತ್ತವೆ. ಒಂದು ಚೌಕಟ್ಟಿನಲ್ಲಿ ಮೇಲ್ಜಾತಿ, ಕೆಳಜಾತಿ ನಡುವಿನ ಸಂಘರ್ಷ, ವ್ಯವಸ್ಥೆ ವಿರುದ್ಧ ಹೋರಾಡುವ ಪ್ರಗತಿಪರ ಯುವಕರು, ಕುರುಡು ಕಾಂಚಾಣಕ್ಕೆ ಸೋತು ಸಿಕ್ಕಿಕೊಂಡವರು, ಓಡಿಬಂದವರು, ತನ್ನತನವನ್ನು ಮಾರಿಕೊಂಡವರೆಲ್ಲರೂ ಕಾಣಸಿಗುತ್ತಾರೆ. ಸುನೀಲ್‌ ಇಡೀ ಚಿತ್ರದ ಆಕರ್ಷಣೆ. ಅವರಿಲ್ಲಿ ದಲಿತ ನಾಯಕನಾಗಿ ವ್ಯವಸ್ಥೆ ವಿರುದ್ಧ ಹೋರಾಡುವ ಯುವಕರಾಗಿ ಗಮನಸೆಳೆಯುತ್ತಾರೆ. ಅಸಹಾಯಕ ಕೂಲಿಕಾರನಾಗಿ ಸರ್ದಾರ್‌ ಸತ್ಯ ಇಷ್ಟವಾಗುತ್ತಾರೆ.

ಸಂಯುಕ್ತಾ ಹೊರನಾಡು ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸೋನು ಇನ್ನಷ್ಟು ಚೆನ್ನಾಗಿ ಅಭಿನಯಿಸಬಹುದಿತ್ತು. ಪಟೇಲನ ಕೆಟ್ಟ ಮಗನಾಗಿ ದಿಲೀಪ್‌ರಾಜ್‌ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸಂಚಾರಿ ವಿಜಯ್‌ ಮತ್ತಿತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಕೊನೆಮಾತು: ಸಿನ್ಮಾ ನೋಡಿ ಹೊರಬಂದಾಗ, “ಮಾರಿಕೊಂಡವರು’ ಎಂಬ ಶೀರ್ಷಿಕೆಗಿಂತ, “ಸಂಬಂಜ ಅನ್ನೋದು ದೊಡ್ಡದು ಕಣಾ …’ ಎಂಬ ಶೀರ್ಷಿಕೆಯೇ ಇಟ್ಟಿದ್ದರೆ ಸೂಕ್ತವಾಗಿರುತ್ತಿತ್ತೇನೋ ಅನಿಸುವುದು ಮಾತ್ರ ಸುಳ್ಳಲ್ಲ.

ಚಿತ್ರ: ಮಾರಿಕೊಂಡವರು
ನಿರ್ಮಾಣ: ಎ.ಎಸ್‌.ವೆಂಕಟೇಶ್‌, ಎಂ.ಗುರುರಾಜ್‌ ಶೇಟ್‌
ನಿರ್ದೇಶನ: ಕೆ.ಶಿವರುದ್ರಯ್ಯ
ತಾರಾಗಣ: ಸುನೀಲ್‌, ಸರ್ದಾರ್‌ ಸತ್ಯ, ಸಂಚಾರಿ ವಿಜಯ್‌, ದಿಲೀಪ್‌ರಾಜ್‌, ಸೋನು, ಸಂಯುಕ್ತಾ ಹೊರನಾಡು ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next