Advertisement

ಮನದಲ್ಲಿರಲಿ ಪ್ರತಿಮೆ, ಅನವರತ ಸ್ಫೂರ್ತಿಯಾದೀತು

09:00 AM Dec 09, 2018 | |

ಸ್ಥಾವರವನ್ನು ವೈಭವೀಕರಿಸುವ ಆಡಂಬರದಲ್ಲಿ ಜಂಗಮ ಕಳೆದುಹೋದೀತು ಎಂಬ ಶರಣರ ಎಚ್ಚರಿಕೆ ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಸ್ಥಾವರ ಎನ್ನುವ ಪದದಲ್ಲೇ ಸ್ಥಗಿತ ಅಂದರೆ ನಿಂತ ನೀರೆಂಬ ಧ್ವನ್ಯಾರ್ಥವಿದೆ. ನಿಂತಿರುವುದು ಬೀಳುತ್ತದೆ, ಚಲಿಸುತ್ತಿರುವುದು ಉಳಿಯುತ್ತದೆ ಎಂಬ ನುಡಿ “ಮನೆಯನೆಂದೂ ಕಟ್ಟದಿರು, ಆಗು ನೀ ಅನಿಕೇತನ’ ಎನ್ನುವುದಕ್ಕೆ ಸಂವಾದಿಯಾಗಿದೆ.

Advertisement

ಈಗಂತೂ  ಪ್ರತಿಮೆ, ಸ್ಮಾರಕಗಳದ್ದೇ ಸುದ್ದಿ. ಅದು ಅಷ್ಟು ಎತ್ತರವೇ, ಹಾಗಾದರೆ ಇದೋ ಇಲ್ಲಿ ಇನ್ನೊಂದು ಪ್ರತಿಮೆ ಅದಕ್ಕಿಂತಲೂ ಎತ್ತರದ್ದು ನಿರ್ಮಿಸಲಾಗುತ್ತಿದೆ ಎನ್ನುವ  ಪೈಪೋಟಿ ಸಾಗಿದೆ. ಸ್ಥಾವರಗಳನ್ನು ಆಗಸ ಮುಚ್ಚುವಂತೆ ಮುಗಿಲೆತ್ತರಕ್ಕೆ ನೆಲೆಯೂರಿಸಲಾಗುತ್ತಿದೆ. ಸಾಂಕೇತಿಕವಾಗ ಬೇಕಾದ ಪ್ರತಿಮೆಗಳಿಗೂ ವಿಶ್ವದಾಖಲೆ ಮುರಿಯುವ ಗೀಳು ಹಿಡಿದಿದೆ! ಪ್ರತಿಷ್ಠೆಯ ಗರ ಬಡಿದಿದೆ.  ಹನ್ನೆರಡನೆಯ ಶತಮಾನದಲ್ಲೇ ಅಪ್ರತಿಮ ಸಮಾಜ ಸುಧಾರಕ ಬಸವಣ್ಣನವರು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಪುತ್ಥಳಿ, ಮೂರ್ತಿ ನಿರ್ಮಿಸಿ ನೆಲೆಗೊಳಿಸುವುದನ್ನು ವಿರೋಧಿಸಿದ್ದರು. “ಎನ್ನ ಕಾಲೇ ಕಂಬ, ಶಿರವೇ ಹೊನ್ನ ಕಳಶ’ ಎಂಬ ಉದಾತ್ತ ಪರಿಕಲ್ಪನೆ ಎಲ್ಲಿ? ಗುಡಿಗೆ ಕಿ.ಲೋ. ಲೆಕ್ಕದಲ್ಲಿ ಚಿನ್ನ ಹೊದಿಸುವ ಸಡಗರವೆಲ್ಲಿ? 

ಸ್ಥಾವರವನ್ನು ವೈಭವೀಕರಿಸುವ ಆಡಂಬರದಲ್ಲಿ ಜಂಗಮ ಕಳೆದುಹೋದೀತು ಎಂಬ ಶರಣರ ಎಚ್ಚರಿಕೆ ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಸ್ಥಾವರ ಎನ್ನುವ ಪದದಲ್ಲೇ ಸ್ಥಗಿತ ಅಂದರೆ ನಿಂತ ನೀರೆಂಬ ಧ್ವನ್ಯಾರ್ಥವಿದೆ. ನಿಂತಿರುವುದು ಬೀಳುತ್ತದೆ, ಚಲಿಸುತ್ತಿರುವುದು ಉಳಿಯುತ್ತದೆ ಎಂಬ ನುಡಿ “ಮನೆಯನೆಂದೂ ಕಟ್ಟದಿರು, ಆಗು ನೀ ಅನಿಕೇತನ’ ಎನ್ನುವುದಕ್ಕೆ ಸಂವಾದಿಯಾಗಿದೆ. ಯಾರೇ ಮಹಾತ್ಮರು, ಸಂತರು, ವಿಚಾರ ವಾದಿಗಳು, ದಾರ್ಶನಿಕರು, ಮೇಧಾವಿಗಳನ್ನು ಅವರ ಪುತ್ಥಳಿಯಲ್ಲಿ ಬಂಧಿಸಬಾರದು. ಬದಲಿಗೆ ಅವರ ಸಾಧನೆ, ಕೈಂಕರ್ಯ, ಸದಾಶಯಗಳನ್ನು ಪಾಲಿಸುವುದರ ಮೂಲಕ ಬಿಂಬಿಸಬೇಕು. ಪ್ರತಿಮೆ ನೆಲೆಗೊಳಿಸಿದರೆ ಅದೇ ಅಂತಿಮ, ಅಖೈರು ಎನ್ನುವ ಭಾವ ಪ್ರಸರಿಸಿದಂತಾಗುವುದು. ಮೂರ್ತಿಗೆ ಪೂಜೆ, ಪುನಸ್ಕಾರ ಸಲ್ಲಿಸಿದರಾಯಿತು, ಮುಕ್ತಿ ಪ್ರಾಪ್ತಿಯೆಂಬ ಭ್ರಮೆ ನಮ್ಮನ್ನಾಳುವಂತಾಗುತ್ತದೆ. ಶ್ರೇಷ್ಠರ ನಡೆ, ಋಜುಮಾರ್ಗ, ಗೊತ್ತು ಗುರಿ ನಮ್ಮ ಪ್ರಜ್ಞೆ-ಪರಿಕಲ್ಪನೆಯನ್ನು ಜಾಗೃತಗೊಳಿಸಬೇಕು, ಸುಧಾರಿಸಬೇಕು. ಅವರ ಪುತ್ಥಳಿ ಸ್ಥಾಪಿಸಿದರೆ ಈಗಾಗಲೇ ನೆಲೆಗೊಂಡಿರುವ ಮೂರ್ತಿಗಳ ಸಂಖ್ಯೆಗೆ ಇನ್ನೊಂದು ಸೇರುವುದಷ್ಟೆ. ಪ್ರತಿಮೆ, ಸ್ಮಾರಕ, ಸ್ಥಾವರಗಳ ಸ್ಥಾಪನೆಗೆ ತಗಲುವ ಕೋಟಿ ಕೋಟ್ಯಂತರ ರೂಪಾಯಿಗಳ ವೆಚ್ಚವನ್ನು ಸೋರುತ್ತಿರುವ ಶಾಲೆಯ ಸೂರಿಗೆ, ಗ್ರಂಥಾಲಯಗಳಲ್ಲಿನ ಪುಸ್ತಕ ಭಂಡಾರ ವೃದ್ಧಿಗೆ, ಗಿಡ ನೆಡುವ ಯೋಜನೆಗೆ, ರಸ್ತೆ ದುರಸ್ತಿಗೊಳಿಸಲು ಅಥವಾ ದವಾಖಾನೆಗಳಲ್ಲಿ ಮತ್ತಷ್ಟು ವಾರ್ಡ್‌ಗಳ ನಿರ್ಮಾಣಕ್ಕೆ ವ್ಯಯಿಸಬಹುದು.

 ನಮ್ಮ ದೇಶದಲ್ಲಿ ಗಾಮಾಂತರ ಪ್ರದೇಶಗಳಲ್ಲಿ ನೀರಿಗೆ ಕಿ. ಮೀ.ಗಟ್ಟಲೆ ಬಿಂದಿಗೆ ಹೊತ್ತು ಪರದಾಡುವ ಪಾಡು ಇಂದಿಗೂ ಇದೆ. ಬಯಲೇ ಶೌಚಾಲಯವಾಗಿರುವ ಕುಗ್ರಾಮಗಳೆಷ್ಟೋ? ಅಮೆರಿಕದ ಅಧ್ಯಕ್ಷರಾಗಿದ್ದ  ಅಬ್ರಹಾಂ ಲಿಂಕನ್‌ರನ್ನು ಅವರ ಆಪ್ತ ಗೆಳೆಯರೊಬ್ಬರು “ಸಾರ್‌, ನಿಮ್ಮ ಪ್ರತಿಮೆ ಎಲ್ಲೂ ಸ್ಥಾಪಿಸಿಲ್ಲವೇಕೆ?’ ಎಂದು ಕೇಳಿದರಂತೆ. ಅದಕ್ಕೆ ಲಿಂಕನ್‌ ಬಹು ಮಾರ್ಮಿಕವಾಗಿ ಇತ್ತ ಪ್ರತಿಕ್ರಿಯೆ: “ನನ್ನ ಪ್ರತಿಮೆ ಸ್ಥಾಪಿಸಿದ ನಂತರ ಏಕೆ ಸ್ಥಾಪಿಸಲಾಗಿದೆ ಎನ್ನುವುದಕ್ಕಿಂತಲೂ ಈಗ ನೀವು ಕೇಳುವ ಪ್ರಶ್ನೆಯೇ ಹೆಚ್ಚು ಗೌರವಯುತ!’ 

 ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟಿನ್‌ ಎಲ್ಲರನ್ನೂ ವ್ಯಕ್ತಿಯಾಗಿ ಗೌರವಿಸೋಣ, ಆದರೆ ಯಾರನ್ನೇ ಆಗಲಿ ಪ್ರತಿಮೆಯಾಗಿಸುವುದು ಬೇಡ ಎಂದಿದ್ದರು. ಕ್ಯೂಬಾದ ಹತ್ತೂಂಬತ್ತನೆಯ ಶತಮಾನದ ಪ್ರಂಬಂಧಕಾರ, ಪತ್ರಕರ್ತ ಜೋಸ್‌ ಮಾರ್ಟಿ ಹೇಳಿದ‌ಂತೆ ಕಚ್ಚಾ ಅಮೃತಶಿಲೆಯಲ್ಲಿ ಕಾಣದಂತಿ ರುವ ಪುತ್ಥಳಿಯಂತೆ ಪ್ರತಿಯೊಬ್ಬ ಮನುಷ್ಯನೂ ಮಾದರಿಯೇ ಹೌದು. ಸಾಧಕರ ಸ್ಮಾರಕ, ಪುತ್ಥಳಿ ಸ್ಥಾಪಿಸಲು ಒತ್ತಾಯವೇ ಬಾಲಿಶ. ಧೀಮಂತರ ಉನ್ನತ ವಾದ , ಅಸದೃಶವಾದ ಕೈಂಕರ್ಯ ಜನಮಾನಸದಲ್ಲಿ ಸರ್ವದಾ ಸ್ತುತಿಸಲ್ಪಡುತ್ತಿ ರುತ್ತದೆ. ಜನ ಮರೆತುಬಿಟ್ಟಾರೆಂಬ ಅನುಮಾನಕ್ಕೆ ಆಸ್ಪದವಿಲ್ಲ. ಪ್ರಕೃತಿಯಲ್ಲಿ ಜನನ, ಮರಣ ಸಹಜ ವಿದ್ಯಮಾನಗಳು. ಪಂಚಭೂತಗಳಿಂದಾದ ನಿರ್ಮಿತಿ ಅವುಗಳಲ್ಲೇ ಲೀನವಾಗದೆ ವಿಧಿಯಿಲ್ಲ. ಮೃತ್ಯುಂಜಯಿ ಎಂಬ ಅವಕಾಶ ಯಾವ ಜೀವಿಗೂ ಇಲ್ಲ. ಎಂದಮೇಲೆ ಯಾರೊಬ್ಬರ ಅಗಲಿಕೆಗೂ ದಿಗ್ಭ್ರಮೆಗೊಳ್ಳ ¸ ೇಕಿಲ್ಲ. ಅಶಾಶ್ವತತೆ ಎನ್ನುವುದೇ ಸತ್ಯ. ಅಯ್ಯೋ, ಹೀಗಾಗಬೇಕಿತ್ತೇ….ಮುಂದೇನು ಗತಿ ಮುಂತಾಗಿ ಪ್ರಲಾಪಿಸುವುದು ಅಪ್ರಬುದ್ಧವಾಗುತ್ತದೆ.

Advertisement

ಇನ್ನು ಗಣ್ಯರ ಸ್ಮಾರಕ ಕುರಿತ ಏನೆಲ್ಲ ವಿವಾದ, ರಂಪ, ಜಿಜ್ಞಾಸೆಗಳಾಗುತ್ತಿವೆ ಗಮನಿಸುತ್ತಿದ್ದೇವೆ. ಇಂಥಹವರ ಪ್ರತಿಮೆ ಇಲ್ಲೇ ಸ್ಥಾಪಿಸಬೇಕು ಅಂತ ಕೆಲವರ ಹಠ. ಸ್ಥಳಾಂತರ ವಿರೋಧಿಸಿ ಹಲವರ ಚಳವಳಿ. ಸ್ಮಾರಕಗಳ ನಿರ್ವಹಣೆಯೇನು ಸಾಮಾನ್ಯ ಸಂಗತಿಯೇ? ಅದಕ್ಕಾಗುವ ಖರ್ಚು ಕಡಿಮೆಯೇನಿಲ್ಲ.  ಒಂದಲ್ಲೊಂದು ಕಾರಣಕ್ಕೆ ಗೊಂದಲ, ಗೌಜು ಎಬ್ಬಿಸುವ ಕಿಡಿಗೇಡಿಗಳ ಕಾಟ ಸಂಭಾವ್ಯ. ಪ್ರಭುತ್ವವನ್ನು ಪ್ರತಿಮೆಗಾಗಿ ಅವಲತ್ತುಕೊಳ್ಳುವುದು ಬೇಡ. ಅಷ್ಟಕ್ಕೂ ಗಣ್ಯರ ಪುತ್ಥಳಿಗೆ ನೆಲೆ ಕಲ್ಪಿಸುವುದು ಸರ್ಕಾರದ ಪಾಲಿಗೆ ಸಾಧನೆಯೇನೂ ಆಗಬೇಕಿಲ್ಲ.  ಶ್ರೇಷ್ಠರು ಪುತ್ಥಳಿಯಾಗಿರುವುದಕ್ಕೂ ಮೀರಿ ಜನರ ಎದೆಯಲ್ಲಿ ಹೆಚ್ಚು ಶೋಭಿಸುತ್ತಾರೆ. ಈ ನಿಟ್ಟಿನಲ್ಲಿ ಹಿರಿಯ ಕವಿ ಡಾ.ಹೆಚ್‌, ಎಸ್‌, ಶಿವಪ್ರಕಾಶರ ಕವನವೊಂದರ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ;

              ಮಣ್ಣಲ್ಲಿ ಪ್ರತಿಮೆ ಮಾಡದಿರು
              ಮಳೆಗೆ ಕರಗೀತು
              ಕಲ್ಲಲಿ ಪ್ರತಿಮೆ ಬೇಡ
             ಕಾಗೆ, ಗುಬ್ಬಿಗಳು ಹೊಲಸು ಮಾಡಿಯಾವು
             ಲೋಹದಲಿ ಪ್ರತಿಮೆ ಮಾಡಬೇಡ
             ಕಳ್ಳರು ಒಯ್ದಾರು
             ನಿನ್ನ ಮನದಲಿ ಪ್ರತಿಮೆ ಮಾಡು
            ಅನವರತ ನಿನಗೆ ಸ್ಫೂರ್ತಿಯಾದೀತು      

ಬಿಂಡಿಗನವಿಲೆ ಭಗವಾನ್‌ 

Advertisement

Udayavani is now on Telegram. Click here to join our channel and stay updated with the latest news.

Next