Advertisement

ರಾಜ್ಯ ಸರಕಾರ ಬೊಕ್ಕಸಕ್ಕೆ ಪ್ರತಿ ತಿಂಗಳಿಗೆ ಬೇಕು 550 ಕೋಟಿ ರೂ.

11:42 PM Mar 01, 2023 | Team Udayavani |

ಬೆಂಗಳೂರು: ಸರಕಾರಿ ನೌಕರರಿಗೆ ರಾಜ್ಯ ಸರಕಾರ ಶೇ.17ರಷ್ಟು ವೇತನ ಹೆಚ್ಚಿಸಿರುವ ಕಾರಣ ಬೊಕ್ಕಸಕ್ಕೆ ಪ್ರತಿ ತಿಂಗಳು 550ರಿಂದ 600 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

Advertisement

ಕಳೆದ 17 ವರ್ಷಗಳಲ್ಲಿ ನೀಡಿರುವ ಮಧ್ಯಾಂತರ ಪರಿಹಾರದಲ್ಲಿ ಇದುವೇ ಅತಿ ಹೆಚ್ಚಿನದ್ದಾಗಿದೆ. ಹಾಲಿ ಮೂಲ ವೇತನ ಮತ್ತು ತುಟ್ಟಿ ಭತ್ತೆಗೆ ಹೆಚ್ಚುವರಿಯಾಗಿ ಶೇ.17ರಷ್ಟು ವೇತನವನ್ನು ಮಧ್ಯಾಂತರ ಪರಿಹಾರವಾಗಿ ಘೋಷಿಸಲಾಗಿದೆ.

ಹಾಲಿ ವೇತನ ಪಡೆಯುತ್ತಿರುವವರು ಮತ್ತು ಪಿಂಚಣಿದಾರರಿಗೆ ಇದು ಅನ್ವಯವಾಗಲಿದೆ.ಪ್ರಸ್ತುತ ರಾಜ್ಯದಲ್ಲಿ 6 ಲಕ್ಷ ಸರಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರದ 3 ಲಕ್ಷ ನೌಕರರು, ಸುಮಾರು 5 ಲಕ್ಷ ನಿವೃತ್ತ ನೌಕರರು (ಪಿಂಚಣಿದಾರರು) ಸೇರಿ ಒಟ್ಟು 14 ಲಕ್ಷ ನೌಕರರು ಇದ್ದಾರೆ. ಇವರಿಗೆ ಮಧ್ಯಾಂತರ ಪರಿಹಾರ ಶೇ.17 ಸೇರಿಸಿ ವೇತನ, ಭತ್ತೆ, ಪಿಂಚಣಿ ನೀಡಬೇಕಾದರೆ ವರ್ಷಕ್ಕೆ 6 ಸಾವಿರ ಕೋಟಿ ರೂ. ಬೇಕಾಗುತ್ತದೆ.

ರಾಜ್ಯ ಸರಕಾರಿ ನೌಕರರ ವೇತನ ಶ್ರೇಣಿಯಲ್ಲಿ 92 ಹಂತಗಳಿದ್ದು, ಮೂಲ ವೇತನ ಮತ್ತು ತುಟ್ಟಿ ಭತ್ತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದೇ ಆಧಾರದಲ್ಲಿ ಶೇ.17 ಕೂಡ ಅನ್ವಯವಾಗುತ್ತದೆ. ಉದಾಹರಣೆಗೆ ಮೂಲವೇತನ ಮತ್ತು ತುಟ್ಟಿಭತ್ತೆ ಸೇರಿ ಕನಿಷ್ಠ 28 ಸಾವಿರ ವೇತನ ಪಡೆಯುತ್ತಿದ್ದ ಡಿ ಗ್ರೂಪ್‌ ನೌಕರ ಶೇ.17 ಹೆಚ್ಚಳದಿಂದ 40 ಸಾವಿರ ವೇತನ ಪಡೆಯುತ್ತಾನೆ.

17 ವರ್ಷಗಳಲ್ಲೇ ಹೆಚ್ಚು
ಹಿಂದೆ ಹಲವು ಬಾರಿ ಸರಕಾರ ಮಧ್ಯಾಂತರ ಪರಿಹಾರ ನೀಡಿ ವೇತನ ಹೆಚ್ಚಿಸಿತ್ತು. ಕಳೆದ 17 ವರ್ಷಗಳಲ್ಲಿ ಈ ಬಾರಿಯದ್ದೇ ಅತಿ ಹೆಚ್ಚಿನ ಮೊತ್ತವಾಗಿದೆ. 2006ರಲ್ಲಿ ಶೇ.10ರಷ್ಟು ಮಧ್ಯಾಂತರ ಪರಿಹಾರ ನೀಡಲಾಗಿತ್ತು. ಮುಂದೆ 5ನೇ ವೇತನ ಆಯೋಗವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವಾಗ ಶೇ.7.5ರಷ್ಟು ಹೆಚ್ಚಿಸಿ ಅಂತಿಮವಾಗಿ ಶೇ.22ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. 2011ರಲ್ಲಿ ಶೇ.10ರಷ್ಟು ಪರಿಹಾರ ನೀಡಿ ಬಳಿಕ ಅದಕ್ಕೆ ಶೇ.7.5ರಷ್ಟು ಸೇರಿಸಿ ಒಟ್ಟು ಶೇ.17.5 ನೀಡಲಾಗಿತ್ತು. 6ನೇ ವೇತನ ಆಯೋಗ 2018ರಲ್ಲಿ ಜಾರಿಗೆ ತರಲಾಯಿತು. ಆಗ ಚುನಾವಣೆ ಇದ್ದಿದ್ದರಿಂದ ಏಕಕಾಲಕ್ಕೆ ಅದನ್ನು ಒಪ್ಪಿಕೊಂಡಿದ್ದರಿಂದ ಶೇ.30ರಷ್ಟು ಹೆಚ್ಚಿಸಲಾಗಿತ್ತು.

Advertisement

ಸರಕಾರಿ ನೌಕರರ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದಿದ್ದರೂ ರಾಜ್ಯ ಸರಕಾರಿ ನೌಕರರ ಸಂಘ ಮುಷ್ಕರವನ್ನು ಹಿಂದೆಗೆದುಕೊಂಡಿದ್ದು ಮಹಾ ಮೋಸ. 2022ರ ಜುಲೈ 1ರಿಂದ ಶೇ.40 ವೇತನ ಹೆಚ್ಚಬೇಕು ಮತ್ತು ಎನ್‌ಪಿಎಸ್‌ ರದ್ದುಗೊಳ್ಳಬೇಕು ಎಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ ಈ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದಿದ್ದರೂ ಮುಷ್ಕರವನ್ನು ಹಿಂಪಡೆಯಲಾಗಿದೆ. ಇದೊಂದು ವ್ಯವಸ್ಥಿತ ಪ್ರಹಸನ.
-ಉಪನ್ಯಾಸಕರ ಸಂಘ

ಶೇ.25ರಷ್ಟು ವೇತನ ಹೆಚ್ಚಳ
ಗೊಳ್ಳಬೇಕು ಎಂದು ಬಿಗಿಪಟ್ಟು ಹಿಡಿಯಬೇಕಿತ್ತು. 2022ರ ಜುಲೈ 1ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಎ. 1ರಿಂದ ಶೇ.17ರಷ್ಟು ವೇತನ ಹೆಚ್ಚಿಸುವ ಮಧ್ಯಾಂತರ ಪರಿಹಾರ ಸಿಕ್ಕಿದೆ. ಇದರಿಂದಾಗಿ 8 ತಿಂಗಳ ಹೆಚ್ಚುವರಿ ವೇತನವನ್ನು ಕಳೆದುಕೊಂಡಿದ್ದೇವೆ. ಹಾಗೆಯೇ ನಿರೀಕ್ಷಿತ ಪ್ರಮಾಣದಲ್ಲಿ ವೇತನ ಹೆಚ್ಚಾ ಆಗಿಲ್ಲ.
ಚಂದ್ರಶೇಖರ್‌ ಕಾರ್ಯದರ್ಶಿ, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ

ಮಧ್ಯಾಂತರ ಪರಿಹಾರ: ನೌಕರರ ಮಧ್ಯೆ ಬಿರುಕು
ಬೆಂಗಳೂರು: ಸರಕಾರಿ ನೌಕರರಿಗೆ ಮಧ್ಯಾಂತರ ಪರಿಹಾರವಾಗಿ ಶೇ.17ರಷ್ಟು ವೇತನ ಹೆಚ್ಚಿಸಿರುವ ಮತ್ತು ಹಳೆ ಪಿಂಚಣಿ ಯೋಜನೆ ಬಗ್ಗೆ ಅಧ್ಯಯನ ನಡೆಸಲು ಸರಕಾರ ಸಮಿತಿ ರಚಿಸಿರುವ ವಿಚಾರ ಈಗ ನೌಕರರಲ್ಲಿ ಬಿರುಕು ಮೂಡಿಸಿದೆ.

ಸರಕಾರದ ಕ್ರಮವನ್ನು ಸ್ವಾಗತಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮುಷ್ಕರ ಹಿಂಪಡೆದಿದ್ದರೆ, ಸಚಿವಾಲಯ ನೌಕರರ ಸಂಘ ಮತ್ತು ರಾಜ್ಯ ಎನ್‌ಪಿಎಸ್‌ ನೌಕರರ ಸಂಘ, ಸಚಿವಾಲಯದ ಆಪ್ತ ಸಹಾಯಕ/ಆಪ್ತ ಕಾರ್ಯದರ್ಶಿಗಳ ಸಂಘ ಇದಕ್ಕೆ ಅಪಸ್ವರ ಎತ್ತಿವೆ. ಸರಕಾರದ ನಿರ್ಧಾರವನ್ನೂ ಈ ಮೂರು ಸಂಘಗಳು ಒಪ್ಪಿಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಪ್ರತಿಷ್ಠೆ ಈ ರಾದ್ಧಾಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಏಳನೇ ವೇತನ ಆಯೋಗ ರಚನೆ, ಜಾರಿ ಮತ್ತು ಎನ್‌ಪಿಎಸ್‌ ರದ್ದುಗೊಳಿಸಬೇಕೆಂಬ ಸರಕಾರಿ ನೌಕರರ ಪ್ರತಿ ಹಂತದ ಹೋರಾಟದಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟು ಕಂಡು ಬಂದಿದ್ದರೂ, ಆಂತರಿಕವಾಗಿ ಭಿನ್ನಾಭಿಪ್ರಾಯಗಳು ಇದ್ದವು. ಕಳೆದ ನವೆಂಬರ್‌-ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಂಘದ ಹೋರಾಟ ತೀವ್ರಗೊಂಡಾಗ ಭಿನ್ನಾಭಿಪ್ರಾಯ ಗಳು ಬಹಿರಂಗವಾಗಿ ಕೇಳಿ ಬಂದಿದ್ದವು. ಈಗ ಅದು ಸ್ಫೋಟ ಗೊಂಡಿದೆ. ರಾಜ್ಯ ಸರಕಾರಿ ನೌಕರರ ಸಂಘದ ನಡೆಯನ್ನು ಉಳಿದ ಮೂರು ಸಂಘಗಳು ತೀವ್ರವಾಗಿ ಖಂಡಿಸಿವೆ.

ಮುಷ್ಕರ ಹಿಂಪಡೆದಿರುವ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ನಿರ್ಧಾರದ ವಿರುದ್ಧ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಕಿಡಿ ಕಾರಿದ್ದಾರೆ. ಮುಷ್ಕರಕ್ಕೆ ಕರೆ ನೀಡುವಾಗ ನಮ್ಮೊಂದಿಗೆ ಚರ್ಚಿಸಿದ್ದ ಷಡಾಕ್ಷರಿ, ಮುಷ್ಕರ ಹಿಂಪಡೆಯುವ ಬಗ್ಗೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೇ ಸರಕಾರದ ಮಧ್ಯಾಂತರ ಪರಿಹಾರ ಕಣ್ಣೊರೆಸುವ ತಂತ್ರವಾಗಿದ್ದು, ಮುಷ್ಕರವನ್ನು ಹತ್ತಿಕ್ಕುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ಸಚಿವಾಲಯ ನೌಕರರ ಸಂಘದ ಅಧ್ಯಕ್ಷರ ಹೇಳಿಕೆಗೆ ತಮ್ಮ ಬೆಂಬಲವಿದೆ ಎಂದು ಸಚಿವಾಲಯದ ಆಪ್ತ ಸಹಾಯಕ/ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ಎಸ್‌. ಪಂಡಿತ್‌ ಹೇಳಿದ್ದಾರೆ.

ಮುಷ್ಕರವನ್ನು ಕೇವಲ 3 ಗಂಟೆಗಳಲ್ಲಿ ಹಿಂಪಡೆದಿರುವ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾತಾರಾಮು ಖಂಡಿಸಿದ್ದಾರೆ.

ಈ ನಡುವೆ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅಲ್ಲಗಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next