Advertisement

ದಕ್ಷಿಣಕ್ಕೂ ವಿಸ್ತರಿಸಿತು ಜಾರಕಿಹೊಳಿ ಸಾಮ್ರಾಜ್ಯ

10:56 PM Aug 31, 2019 | Lakshmi GovindaRaj |

ಬೆಳಗಾವಿ: ಜಾರಕಿಹೊಳಿ ಸಹೋದರರು ಅಂದುಕೊಂಡಿದ್ದನ್ನು ಮತ್ತೊಮ್ಮೆ ಸಾಧಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹಾಗೂ ವರ್ಚಸ್ಸು ಹೊಂದಿರುವ ಜಾರಕಿಹೊಳಿ ಸಹೋದರರು, ಕೈಹಾಕಿದ ಯಾವ ಕ್ಷೇತ್ರವೂ ಇದು ವರೆಗೆ ಕೈಕೊಟ್ಟಿಲ್ಲ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಗಾದಿಯೇ ಇದಕ್ಕೆ ಸಾಕ್ಷಿ. ಈ ಮೂಲಕ ಜಾರಕಿ ಹೊಳಿ ಕುಟುಂಬದಿಂದ ಮತ್ತೊಂದು ಹೊಸ ಸಾಮ್ರಾಜ್ಯದ ಅಧ್ಯಾಯ ಆರಂಭವಾಗಿದೆ.

Advertisement

ಸರಕಾರದ ಪತನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಸರಕಾರದ ವಿರುದ್ಧ ಅನರ್ಹ ಶಾಸಕರು ನಡೆಸಿದ ರಾಜಕೀಯ ಚಟುವಟಿಕೆಗಳ ಸೂತ್ರಧಾರರಾಗಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲಿ ಯಶಸ್ವಿ ಸಹ ಆಗುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ.

ಆದರೆ, ಮೈತ್ರಿ ಸರಕಾರದ ಪತನವಾಗುತ್ತಿದ್ದಂತೆ ಕೆಎಂಎಫ್‌ ಕಡೆ ಕಣ್ಣು ಹಾಯಿಸಿದ ಜಾರಕಿಹೊಳಿ ಸಹೋದರರು ಅದರ ಮೇಲೆ ಮತ್ತೊಬ್ಬರ ಕಣ್ಣು ಬೀಳದಂತೆ ಯಶಸ್ವಿ ರಹಸ್ಯ ಕಾರ್ಯಾಚರಣೆ ನಡೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಬೆಳಗಾವಿ ಹಾಲು ಒಕ್ಕೂಟಕ್ಕೆ ಸಹೋದರ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಅವರನ್ನು ನಿರ್ದೇಶಕರನ್ನಾಗಿ ಮಾಡುವ ಮೂಲಕ ತಮ್ಮ ಕಣ್ಣು ಕೆಎಂಎಫ್‌ ಮೇಲಿದೆ ಎಂಬ ಸಂದೇಶವನ್ನು ಬಾಲಚಂದ್ರ ಮೊದಲೇ ರವಾನಿಸಿದ್ದರು.

ಮೈತ್ರಿ ಸರಕಾರದ ಪತನ ಹಾಗೂ ಭಿನ್ನಮತೀಯ ಚಟುವಟಿಕೆಗಳಲ್ಲಿ ಬಾಲಚಂದ್ರ ಹಾಗೂ ರಮೇಶ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದ ಶಾಸಕರೂ ಆದ ಮತ್ತೊಬ್ಬ ಸಹೋದರ ಸತೀಶ ಜಾರಕಿ ಹೊಳಿ, ಕೆಎಂಎಫ್‌ ವಿಷಯದಲ್ಲಿ ಸಂಪೂರ್ಣ ಮೌನ ವಹಿಸಿದ್ದು ಇಲ್ಲಿ ಗಮನಿಸಬೇಕಾದ ಸಂಗತಿ. ಬಾಲಚಂದ್ರ ಅವರ ಈ ಪ್ರಯತ್ನದ ಹಿಂದೆ ಸತೀಶ ಅವರ ಬೆಂಬಲವಿದೆ ಎಂಬುದು ಅವರ ಆಪ್ತರ ಹೇಳಿಕೆ.

ಸರ್ಕಾರಗಳಲ್ಲಿ ಮೇಲಿಂದ ಮೇಲೆ ಆಗುತ್ತಿರುವ ಬದಲಾವಣೆ ಹಾಗೂ ರಾಜಕೀಯ ಅಸ್ಥಿರತೆಯಿಂದ ಮಂತ್ರಿಗಿರಿಯಲ್ಲಿ ಅಂತಹ ಮಹತ್ವ ಉಳಿದಿಲ್ಲ. ಕೆಲಸಕ್ಕಿಂತ ಕಿರಿಕಿರಿಯೇ ಹೆಚ್ಚು. ಖಾತೆಗಳಿಗೂ ಕಿತ್ತಾಟ. ಈ ಎಲ್ಲ ಕಾರಣಗಳಿಂದ ಸಚಿವ ಸ್ಥಾನದ ಬದಲು ಕೆಎಂಎಫ್‌ ಅಧ್ಯಕ್ಷ ಹುದ್ದೆಯ ಮೇಲೆ ಬಾಲಚಂದ್ರ ಗಮನವಿಟ್ಟಿದ್ದರು ಎನ್ನುವುದು ಅವರ ಆಪ್ತರ ಮಾತು.

Advertisement

ಮೈತ್ರಿ ಸರಕಾರ ಪತನ, ಹೊಸ ಸರಕಾರ ರಚನೆ, ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಅರೋಪ- ಪ್ರತ್ಯಾರೋಪಗಳು ಬಹಳ ಜೋರಾಗಿ ನಡೆದಿದ್ದ ಸಂದರ್ಭ ಬಾಲಚಂದ್ರ ಜಾರಕಿಹೊಳಿ ಇದಾವುದರ ಕಡೆ ಗಮನ ಕೊಡಲಿಲ್ಲ. ಮೊದಲೇ ನಿರ್ಧಾರ ಮಾಡಿ ದವರಂತೆ ಕೆಎಂಎಫ್‌ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಸಿದ ಅವರು, ಎಲ್ಲಿಯೂ ತಮ್ಮ ಗುಟ್ಟು ಬಿಟ್ಟುಕೊಡಲಿಲ್ಲ. ಎಲ್ಲವೂ ಪಕ್ಕಾ ಆದ ಮೇಲೆಯೇ ಜಾರಕಿಹೊಳಿ ಸಹೋದರರು ಕೆಎಂಎಫ್‌ ಮೇಲೆ ಕಣ್ಣು ಹಾಕಿದ್ದಾರೆ ಎಂಬುದು ಬಹಿರಂಗವಾಯಿತು.

ಇತಿಹಾಸ ನಿರ್ಮಾಣ: ಕರ್ನಾಟಕ ಹಾಲು ಮಹಾಮಂಡಳ ಎಂದರೆ ಇದುವರೆಗೆ ಅದು ಮೈಸೂರು ಭಾಗದ ನಾಯಕರಿಗೆ ಮಾತ್ರ ಮೀಸಲಾಗಿದ್ದು ಎಂಬ ಮಾತಿತ್ತು. ಆದರೆ ಜಾರಕಿಹೊಳಿ ಕುಟುಂಬ ಈ ಪರಂಪರೆ ಮುರಿದು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಕೆಎಂಎಫ್‌ದಲ್ಲಿ ಇನ್ನು ಮುಂದೆ ಉತ್ತರ ಕರ್ನಾಟಕದ ಅಧ್ಯಾಯ ಆರಂಭ. ಎಲ್ಲಕ್ಕಿಂತ ಮುಖ್ಯ ವಾಗಿ ಬಾಲ ಚಂದ್ರ ಮೂಲಕ ಜಾರಕಿಹೊಳಿ ಕುಟುಂ ಬದ ಸಾಮ್ರಾಜ್ಯ ಉತ್ತರದಿಂದ ದಕ್ಷಿಣಕ್ಕೆ ವಿಸ್ತಾರ ಗೊಂಡಿದೆ. ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿ ದ್ದರೂ ಕೆಎಂ ಎಫ್ ಗಾದಿಗೇರಲು ಕಾಂಗ್ರೆಸ್‌ ಬೆಂಬ ಲಿತ ಆರು ಮಂದಿ ನಿರ್ದೇಶಕರು ಬೆಂಬಲ ನೀಡಿದ್ದು ಅವರ ಪ್ರಾಬಲ್ಯಕ್ಕೆ ಸಾಕ್ಷಿ.

ಮಾಯವಾದ ಮರೀಚಿಕೆ: ಕೆಎಂಎಫ್ ಬಗ್ಗೆ ಉತ್ತರ ಕರ್ನಾಟಕದ ಜನರಿಗೆ ಗೊತ್ತಿದ್ದರೂ ಅದರ ಆಳವಾದ ಪ್ರಭಾವ, ಅಲ್ಲಿನ ವ್ಯಾಪಾರ ಹಾಗೂ ವಹಿವಾಟು, ರಾಜ ಕೀಯ ಪ್ರಭಾವದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಇದೇ ಕಾರಣದಿಂದ ಕಳೆದ ಹಲವಾರು ದಶಕಗಳಿಂದ ಕೆಎಂಎಫ್‌ ಉತ್ತರ ಕರ್ನಾಟಕದ ಪಾಲಿಗೆ ಬರೀ ನಿರ್ದೇಶಕ ಸ್ಥಾನಕ್ಕೆ ಮಾತ್ರ ಮೀಸ ಲಾಗಿತ್ತು. ಕೆಎಂಎಫ್‌ ಅಧ್ಯಕ್ಷ ಸ್ಥಾನ ಉತ್ತರ ಕರ್ನಾ ಟಕದ ಜನರಿಗೆ ಮರೀಚಿಕೆಯಾಗಿಯೇ ಉಳಿದಿತ್ತು.

ಕೆಎಂಎಫ್ನಲ್ಲಿ ಕಡಿಮೆ ಎಂದರೂ ವಾರ್ಷಿಕ 16 ಸಾವಿರ ಕೋಟಿ ರೂ. ವಹಿವಾಟು ಇದೆ. ಇದರಲ್ಲಿ ಮುಂದಿನ ರಾಜಕೀಯದ ಭವ್ಯ ಭವಿಷ್ಯವಿದೆ ಎಂಬುದನ್ನು ಸಾಕಷ್ಟು ಅಧ್ಯಯನ ಮಾಡಿದ್ದ ಬಾಲಚಂದ್ರ ಜಾರಕಿಹೊಳಿ, ಮೊದಲು ಬೆಳಗಾವಿ ಹಾಲು ಒಕ್ಕೂಟದ ಮೇಲೆ ಹಿಡಿತ ಸಾಧಿಸಿದರು. ಇಲ್ಲಿಂದ ಹಾಲು ಒಕ್ಕೂ ಟದ ರಾಜಕೀಯದಲ್ಲಿ ಜಾರಕಿಹೊಳಿ ಸಹೋದರರ ಆಟ ಆರಂಭವಾಯಿತು. ಮೊದಲು ತಮಗೆ ಬೇಕಾದ ವಿವೇಕರಾವ ಪಾಟೀಲರನ್ನು ಅಧ್ಯಕ್ಷರನ್ನಾಗಿ ಮಾಡಿದ ಬಾಲಚಂದ್ರ ಜಾರಕಿಹೊಳಿ ನಂತರ ತಮ್ಮ ಸಹೋದರ ರಮೇಶ ಅವರ ಪುತ್ರ ಅಮರನಾಥ ಅವರನ್ನು ನಿರ್ದೇಶಕರನ್ನಾಗಿ ಮಾಡಿ ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿ ಕೆಎಂಎಫ್‌ ಕಡೆಗೆ ದಾಪುಗಾಲು ಹಾಕಿದರು.

ನನ್ನ ಮುಖ್ಯ ಗುರಿ ಕೆಎಂಎಫ್‌ ಆಗಿತ್ತು
ಬಿಜೆಪಿ ಸರಕಾರದಲ್ಲಿ ಸಚಿವನಾಗುವ ಆಸಕ್ತಿ ಎಳ್ಳಷ್ಟೂ ಇರಲಿಲ್ಲ. ನನ್ನ ಮುಖ್ಯ ಗುರಿ ಕೆಎಂಎಫ್‌ ಆಗಿತ್ತು. ಬೆಂಗಳೂರು ಭಾಗದ 11 ಜಿಲ್ಲೆಗಳಲ್ಲಿ ಇದರ ಪ್ರಭಾವ ಬಹಳ ದೊಡ್ಡದಿದೆ. ಅದೇ ಉತ್ತರ ಕರ್ನಾಟಕದಲ್ಲಿ ಇದು ಇದ್ದೂ ಇಲ್ಲದಂತಿದೆ. ಇದಕ್ಕಿಂತ ಮುಖ್ಯವಾಗಿ ಮುಂದಿನ ರಾಜಕೀಯ ಭವಿಷ್ಯದಲ್ಲಿ ಇದರಿಂದ ದೊಡ್ಡಮಟ್ಟದ ಅವಕಾಶವಿದೆ. ಇದೆಲ್ಲವನ್ನೂ ಗಮನಿಸಿಯೇ ಕೆಎಂಎಫ್‌ಗೆ ಕಾಲಿಟ್ಟೆ. ವಿಧಾನಸೌಧ ಹಾಗೂ ವಿಕಾಸಸೌಧಕ್ಕಿಂತ ಇದು ಬಹಳ ದೊಡ್ಡದು.
-ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷ

ದೇಶದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮಹಾರಾಜರಿದ್ದರು. ಈಗ ಅವರೆಲ್ಲ ಅಧಿಕಾರ ಬಿಟ್ಟು ಇಳಿದಿದ್ದಾರೆ. (ರೇವಣ್ಣನವರಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಪ್ರತಿಕ್ರಿಯೆ).
-ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ

* ಕೇಶವ ಆದಿ 

Advertisement

Udayavani is now on Telegram. Click here to join our channel and stay updated with the latest news.

Next