“ಪಡ್ಡೆ ಹುಲಿ’ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್, ಸದ್ಯಕ್ಕೆ ಕನ್ನಡ ಚಿತ್ರರಂಗದ ಬಹುತೇಕ ನಾಯಕಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದಕ್ಕೆ ಕಾರಣ, “ಒಂದು ಮಾತಲ್ಲಿ…’ ಎಂಬ ರೊಮ್ಯಾಂಟಿಕ್ ಸಾಂಗ್. ಹೌದು, ಇತ್ತೀಚೆಗಷ್ಟೇ “ಪಡ್ಡೆಹುಲಿ’ ಚಿತ್ರದ ಇಂಟ್ರೊಡಕ್ಷನ್ ಹಾಡು ಬಿಡುಗಡೆಯಾಗಿತ್ತು.
ಆ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಈಗ ಕನ್ನಡದ ಕೆಲ ನಾಯಕಿಯರು ಶ್ರೇಯಸ್ ಅಭಿನಯದ “ಪಡ್ಡೆಹುಲಿ’ ಚಿತ್ರದ “ಒಂದು ಮಾತಲ್ಲಿ..’ ಹಾಡಿಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಆ ಹಾಡನ್ನು “ಪ್ರೇಮಿಗಳ ದಿನ’ ಆಚರಿಸಿಕೊಳ್ಳುತ್ತಿರುವ ಪ್ರೇಮಿಗಳಿಗೆ ವಿಶೇಷ ಕೊಡುಗೆ ಎಂಬುದು ಚಿತ್ರತಂಡದ ಮಾತು.
“ಒಂದು ಮಾತಲ್ಲಿ… ಎಂದು ಶುರುವಾಗುವ ಈ ಹಾಡನ್ನು ಸ್ವತಃ ಶ್ರೇಯಸ್ ಅವರೇ ಕನ್ನಡದ ನಾಯಕಿಯರ ಬಳಿ ಹೋಗಿ ಅವರಿಗೆ ಕೇಳಿಸಿ, ಅವರಿಂದ ಪ್ರೀತಿ ಮತ್ತು ಆ ಹಾಡಿನ ಬಗ್ಗೆ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ರೊಮ್ಯಾಂಟಿಕ್ ಫೀಲ್ನಲ್ಲಿರುವ “ಒಂದು ಮಾತಲ್ಲಿ..’ ಹಾಡು ಈಗಾಗಲೇ ಪಿಆರ್ಕೆ ಯೂ ಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀವ್ಸ್ ಕೂಡ ಪಡೆದುಕೊಂಡಿದೆ.
ಇಷ್ಟಕ್ಕೂ ಪ್ರೇಮಿಗಳ ದಿನದ ಕೊಡುಗೆಯಾಗಿ ಈ ಹಾಡನ್ನು ಬಿಡುಗಡೆ ಮಾಡಿರುವ ಉದ್ದೇಶವನ್ನು ಹೇಳಿಕೊಳ್ಳುವ ಚಿತ್ರತಂಡ, ಪ್ರೀತಿಗೆ ಮುನ್ನ ತಯಾರಿ ಬಹಳ ಮುಖ್ಯ. ಬದುಕು ಅನ್ನುವುದು ದೊಡ್ಡ ಎಕ್ಸಾಂ. ಅದೇ ಲವ್ ಅನ್ನೋದು ಎಕ್ಸಾಂಗೂ ಮುನ್ನ ಬರುವ ಟೆಸ್ಟ್ ಇದ್ದಂತೆ. ಹಾಗಾಗಿ, ಪ್ರೇಮಿಗಳಿಗೊಂದು ಪಡ್ಡೆ ಹಾಡು ಬಿಡುಗಡೆ ಮಾಡಲಾಗಿದೆ ಎಂಬುದು ಚಿತ್ರತಂಡದ ಮಾತು.
ಇನ್ನು, ಈ ಹಾಡು ಕೇಳಿ ಖುಷಿಗೊಂಡಿರುವ ನಾಯಕಿಯರಾದ ರಾಗಿಣಿ, ಸಂಜನಾ, ಕೃಷಿ ತಾಪಂಡ ಸೇರಿದಂತೆ ಇತರೆ ನಾಯಕಿಯರು ಪ್ರೀತಿ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಚಿತ್ರದ ಟೈಟಲ್ ಸಾಂಗ್ ಆಗಿದ್ದು, ತುಂಬಾ ಅದ್ಧೂರಿಯಾಗಿ ಚಿತ್ರಿಸಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ.
ಗುರು ದೇಶಪಾಂಡೆ ಈ ಚಿತ್ರ ನಿರ್ದೇಶಿಸಿದ್ದು, ಎಂ.ರಮೇಶ್ ರೆಡ್ಡಿ (ನಂಗ್ಲಿ) ಚಿತ್ರದ ನಿರ್ಮಾಪಕರು. ಅಜನೀಶ್ ಲೋಕನಾಥ್ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ. ರವಿವರ್ಮ ಸಾಹಸ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ.