Advertisement

ಹೆಜಮಾಡಿ: ನಿರ್ವಹಿಸಲಸಾಧ್ಯ ತ್ಯಾಜ್ಯ ಸಂಗ್ರಹಕ್ಕೆ ಪರಿಹಾರ ಅಗತ್ಯ

10:16 PM Sep 23, 2019 | Sriram |

ಪಡುಬಿದ್ರಿ: ಹೆಜಮಾಡಿ ಗ್ರಾ. ಪಂ. ವ್ಯಾಪ್ತಿಯ ಮೂಲ್ಕಿ ಅಳಿವೆ ಬಾಗಿಲ ಹೆಜಮಾಡಿ ಭಾಗದಲ್ಲಿ 2 ಕಿಮೀ ಗೂ ಅಧಿಕ ಉದ್ದಕ್ಕೆ ವಿಷಕಾರಿ ತ್ಯಾಜ್ಯಗಳು ಸಂಗ್ರಹಗೊಂಡಿದ್ದು, ಅವುಗಳ ವಿಲೇವಾರಿ ಬಹಳ ಕಷ್ಟಕರವಾಗಿ ಪರಿಣಮಿಸಿದೆ. ಇದೇ ಕಸವನ್ನು ಎತ್ತುವ ಅತ್ಯಾಧುನಿಕ ಯಂತ್ರ ಮಲ್ಪೆಯಲ್ಲಿದ್ದರೂ ಉಪಯೋಗಕ್ಕಿಲ್ಲದೆ ಉಳಿದಿರುವುದನ್ನು ಬಾಡಿಗೆ ಆಧಾರದಲ್ಲಿ ಗ್ರಾ. ಪಂ. ಗಳಿಗೆ ನೀಡಿದಲ್ಲಿ ಇವುಗಳ ವಿಲೇವಾರಿ ಸುಲಭವಾಗಲಿದೆ.

Advertisement

ಶಾಂಭವಿ ಮತ್ತು ನಂದಿನಿ ಹೊಳೆಗಳ ಸಂಗಮ ಸ್ಥಾನ ಅರಬೀ ಸಮುದ್ರಕ್ಕೆ ಸೇರುವ ಮೂಲ್ಕಿ ಅಳಿವೆಯ ಉತ್ತರ ಭಾಗ ಹೆಜಮಾಡಿ ಗ್ರಾ. ಪಂ. ಭಾಗದಲ್ಲಿ ವಿಷಕಾರಿ ಪ್ಲಾಸ್ಟಿಕ್‌, ರಬ್ಬರ್‌ ಮತ್ತು ಗ್ಲಾಸ್‌ ಬಾಟಲಿಗಳ ರಾಶಿ ರಾಶಿ ತೀರದಲ್ಲಿ ಸಂಗ್ರಹಗೊಂಡು ಈ ಭಾಗದಲ್ಲಿ ನಡೆದಾಡಲೂ ಕಷ್ಟಕರವಾಗಿದೆ.

ಪ್ರತೀ ವರ್ಷ ಮಳೆಗಾಲದ ಬಳಿಕ ಸ್ಥಿತಿ ಇದು
ಪ್ರತೀ ವರ್ಷ ಮಳೆಗಾಲದ ಬಳಿಕ ಇಲ್ಲಿ ಬೃಹತ್‌ಮಟ್ಟದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತದೆ. ಶಾಂಭವಿ ಮತ್ತು ನಂದಿನಿ ಹೊಳೆಯ ಮೂಲಕ ಸಮುದ್ರ ಸೇರುವ ನೆರೆ ನೀರಿನಲ್ಲಿ ಈ ಎಲ್ಲಾ ತ್ಯಾಜ್ಯಗಳು ಸಮುದ್ರಕ್ಕೆ ಬಂದು ಅಲ್ಲಿಂದ ನೇರ ಹೆಜಮಾಡಿ ಭಾಗದ ಕಡಲ ತೀರದಲ್ಲಿ ಸಂಗ್ರಹಗೊಳ್ಳುತ್ತದೆ.

ಈಗಿರುವ ಅಳಿವೆ ಪ್ರದೇಶದಲ್ಲಿ ಹಿಂದೆ ಮನೆಗಳಿದ್ದು ಅಳಿವೆ ಸ್ಥಿತ್ಯಂತರಗೊಳ್ಳತ್ತಲೇ ಸುಮಾರು ನಾಲ್ಕು ಬಾರಿ ಮನೆ ಬದಲಾಯಿಸಿ ಪ್ರಸ್ತುತ ಕರಾವಳಿ ಕಾವಲು ಪಡೆಯ ಠಾಣೆ ಬಳಿ ಮನೆ ಹೊಂದಿರುವ ರಾಜೀವಿ ಎಂಬವರು ಹೇಳುವ ಹಾಗೆ 20-30 ವರ್ಷಗಳ ಹಿಂದೆಯೂ ಇದೇ ರೀತಿ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಆದರೆ ವಿಷಕಾರಿ ಪ್ಲಾಸ್ಟಿಕ್‌, ರಬ್ಬರ್‌ ಮತ್ತು ಗ್ಲಾಸ್‌ ಬಾಟಲಿಗಳು ಇತ್ತೀಚಿನ ವರ್ಷಗಳಲ್ಲಿ ಮಾತ್ರ ಕಂಡುಬರುತ್ತಿದೆ. ಇದನ್ನು ವಿಲೇವಾರಿ ಮಾಡಲು ಅಸಾಧ್ಯವಾಗುತ್ತದೆ ಎಂದಿದ್ದಾರೆ.

ಶಾಂಭವಿ ಮತ್ತು ನಂದಿನಿ ಹೊಳೆಗೆ ಮುಖ್ಯವಾಗಿ ಸೇತುವೆಗಳಲ್ಲಿ ದಾರಿಹೋಕರು ವಿಷಕಾರಿ ತ್ಯಾಜ್ಯಗಳನ್ನು ತಂದು ಸುರಿಯುತ್ತಾರೆ. ಅದು ನೇರವಾಗಿ ಸಮುದ್ರದ ಮೂಲಕ ಕಡಲ ತೀರ ಸೇರುತ್ತದೆ. ಇದರೊಂದಿಗೆ ಸತ್ತ ಪ್ರಾಣಿಗಳ ಶವಗಳ ಅವಶೇಷವೂ ಸೇರಿಕೊಂಡಿದೆ. ನೆರೆ ಸಂದರ್ಭ ದೊಡ್ಡ ಮರಗಳೂ ಕಡಲತೀರ ಸೇರಿಕೊಂಡಿದೆ. ಕೆಲವೊಂದು ಬೃಹತ್‌ ಮರಗಳ ಕಾಂಡ ಸಮುದ್ರದ ನೀರಿನಲ್ಲಿ ಹಾಗೂ ಸಮುದ್ರ ತೀರದಲ್ಲಿ ಮರಳಿನಡಿ ಸೇರಿಕೊಂಡು ಸಾಂಪ್ರದಾಯಿಕ ಮೀನು ಗಾರರಿಗೆ ಮುಳುವಾಗಿ ಪರಿಣಮಿಸಿದೆ. ಇಲ್ಲಿ ಸಮುದ್ರ ವಿಹಾರಕ್ಕೆ ಬಂದವರಿಗೂ ನಡೆದಾಡಲು ಬಹಳ ಕಷ್ಟಕರವಾಗಿದೆ.

Advertisement

ಹೊಳೆ ನೀರಲ್ಲಿನ ತ್ಯಾಜ್ಯಗಳಿಂದ ಮೀನಿನ ಸಂತತಿ ಅವನತಿ
ನೀರಿನಲ್ಲಿ ತೇಲುವ ತ್ಯಾಜ್ಯಗಳಷ್ಟೇ ಸಮುದ್ರ ತೀರದಲ್ಲಿ ರಾಶಿ ಬಿದ್ದಿದೆ. ಆದರೆ ನೀರಿನಲ್ಲಿ ತೇಲದೆ ಹೊಳೆಯ ನೀರಿನಡಿ ಸೇರುವ ಅದೆಷ್ಟೋ ವಿಷಕಾರಿ ತ್ಯಾಜ್ಯಗಳಿಂದ ಮೀನಿನ ಸಂತತಿಯಅವನತಿಗೆ ಕಾರಣವಾಗಿದೆ ಎಂದು ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು ಅವಲತ್ತುಕೊಂಡಿದ್ದಾರೆ. ಬಲು ರುಚಿಕರ ಎಂದು ಪ್ರಸಿದ್ದೀ ಪಡೆದ ಶಾಂಭವಿ ಹೊಳೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶೇ. 70 ಕ್ಕಿಂತ ಅಧಿಕ ಮೀನಿನ ಉತ್ಪತ್ತಿ ಕಡಿಮೆಯಾಗಿದೆ ಎಂದವರು ಹೇಳಿಕೊಂಡಿದ್ದಾರೆ.

ಎಸ್‌ಎಲ್‌ಆರ್‌ಎಮ್‌
ಘಟಕ ಸ್ಥಾಪನೆಯಾಗಲಿ
ಇಲ್ಲಿ ಸರಕಾರದ ನಿರ್ದೇಶನದ ಎಸ್‌ಎಲ್‌ಆರ್‌ಎಂ ಘಟಕವೊಂದನ್ನು ಸ್ಥಾಪಿಸಿದರೆ ವರ್ಷಪೂರ್ತಿ ತ್ಯಾಜ್ಯ ವಿಲೇವಾರಿ ಮಾಡಿದರೂ ಮುಗಿಯದಷ್ಟು ಕಸ ಸಂಗ್ರಹವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಇಲ್ಲೊಂದು ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪಿಸಿದಲ್ಲಿ ತ್ಯಾಜ್ಯ ವಿಲೇವಾರಿಗೆ ಸುಲಭವಾಗಬಹುದೆಂದು ಸ್ಥಳೀಯರು ಹೇಳುತ್ತಾರೆ.

ದೇಶ,ವಿದೇಶಗಳ ಸರ್ಫಿಂಗ್‌ ಪ್ರಿಯರಿಗೆ ತ್ಯಾಜ್ಯ ದರ್ಶನ
ಇದೇ ಜಾಗದಲ್ಲಿ ಅಳಿವೆಯ ದಕ್ಷಿಣ ಭಾಗದಲ್ಲಿ ಸಹಿಹಿತ್ಲು ಪ್ರದೇಶವಿದ್ದು ಸರ್ಫಿಂಗ್‌ ತರಬೇತಿ ಕೂಡಾ ನಡೆಯುತ್ತಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಸರ್ಫಿಂಗ್‌ ಪ್ರಿಯರು ಆಗಮಿಸುತ್ತಾರೆ. ಆದರೆ ಅವರಿಗೆ ಇಲ್ಲಿನ ತ್ಯಾಜ್ಯ ದರ್ಶನವಾಗಿ ದಂಗಾಗಿದ್ದಾರೆ. ಬೇರೆ ಯಾವ ದೇಶದಲ್ಲೂ ಈ ರೀತಿಯ ತ್ಯಾಜ್ಯ ಸಂಗ್ರಹ ಇಲ್ಲ ಎಂದು ವಿದೇಶಿಯರು ಹೇಳುತ್ತಾರೆ. ಹಲವು ವಿದೇಶೀಯರು ತಾವೇ ಸ್ವಯಂಸ್ಪೂರ್ತಿಯಿಂದ ಇಲ್ಲಿ ಕಸ ಸಂಗ್ರಹ ಮಾಡುತ್ತಿದ್ದಾರೆ.

ಜಿಲ್ಲಾಡಳಿತ ಸಹಕರಿಸಬೇಕು
ಮಲ್ಪೆಯಲ್ಲಿ ಸಮುದ್ರ ತೀರದ ತ್ಯಾಜ್ಯ ವಿಲೇವಾರಿಗಾಗಿ ಅತ್ಯಾಧುನಿಕ ಯಂತ್ರ ಖರೀದಿಸಿಡಲಾಗಿದೆ. ಅದೀಗ ಉಪಯೋಗವಾಗುತ್ತಿಲ್ಲ. ಅದನ್ನು ಹೆಜಮಾಡಿ ಗ್ರಾಪಂಗೆ ಬಾಡಿಗೆಯಾಧಾರದಲ್ಲಿ ನೀಡಿದಲ್ಲಿ ಇಲ್ಲಿನ ಬƒಹತ್‌ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಹುದಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸಹಕರಿಸಬೇಕು.
-ಸುಧಾಕರ ಕರ್ಕೇರ, ಉಪಾಧ್ಯಕ್ಷರು, ಹೆಜಮಾಡಿ ಗ್ರಾಪಂ.

ಅಳಿವೆ ಭಾಗದಲ್ಲೂ ಸ್ವಚ್ಛತೆ
ಹೆಜಮಾಡಿ ಬೀಚ್‌ ಕ್ಲೀನ್‌ ಉದ್ದೇಶದಿಂದ ಕರಾವಳಿ ಯುವಕ-ಯುವತಿ ವೃಂದ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಅಳಿವೆ ಭಾಗದಲ್ಲೂ ಸ್ವಚ್ಛ ಭಾರತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ.
-ಶರಣ್‌ ಕುಮಾರ್‌ ಮಟ್ಟು, ಕಾರ್ಯದರ್ಶಿ, ಕ.ಯು.-ಯು. ವೃಂದ ಹೆಜಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next