Advertisement

ಅಸಮಾನತೆ ನಿವಾರಣೆಗೆ ಸಾಮಾಜಿಕ ಕ್ರಾಂತಿ ಅಗತ್ಯ

05:55 PM Apr 30, 2022 | Team Udayavani |

ಧಾರವಾಡ: ಸಮಾಜದ ಎಲ್ಲ ಅಸಮಾನತೆ, ಶೋಷಣೆಗಳು ತೊಲಗಬೇಕಾದರೆ ಸಮಾಜವಾದಿ ಕ್ರಾಂತಿಯಾಗಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಶಂಕರ್‌ ಘೋಷ್‌ ಹೇಳಿದರು.

Advertisement

ನಗರದ ನೌಕರರ ಭವನದಲ್ಲಿ ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು ಹಮ್ಮಿಕೊಂಡಿದ್ದ ಎರಡನೇ ರಾಜ್ಯಮಟ್ಟದ ರೈತ ಕೃಷಿ ಕಾರ್ಮಿಕರ ಸಮ್ಮೇಳನದ ಎರಡನೇ ದಿನದ ಪ್ರತಿನಿಧಿ ಅಧಿವೇಶನದಲ್ಲಿ ಅವರು ಮಾತನಾಡಿದರು.

ಮಹಾನ್‌ ಮಾರ್ಕ್ಸ್ ವಾದಿ ಚಿಂತಕರಾದ ಕಾಮ್ರೆಡ್‌ ಶಿವದಾಸ್‌ ಘೋಷ್‌ ಮಾರ್ಗದರ್ಶನದಲ್ಲಿ ನಾವು ಸಂಘಟನೆ ಕಟ್ಟುತ್ತಿದ್ದೇವೆ. 1947ರಲ್ಲಿ ಸಾಮ್ರಾಜ್ಯಶಾಹಿಗಳಿಂದ ಸ್ವಾತಂತ್ರ್ಯಗಳಿಸಿದ್ದು ಸಂಭ್ರಮವಾದರೆ ಅದು ದುಡಿಯುವ ಜನರಿಗೆ ದೊರೆತಿಲ್ಲ ಎನ್ನುವುದು ದುಃಖದ ಸಂಗತಿ ಎಂದು
ಶಿವದಾಸ್‌ ಘೋಷ್‌ ಭಾವಿಸಿದ್ದರು.

ಸಂಘಟನಾಕಾರರಿಗೆ ಕ್ರಾಂತಿಕಾರಿ ದಿಟ್ಟತನ ಬೇಕು. ಪ್ರತಿಕೂಲ ಸನ್ನಿವೇಶವನ್ನೂ ಅನುಕೂಲಕರವಾಗಿ ಬದಲಾಯಿಸುವ ಛಾತಿ ದುಡಿಯುವ ಜನರ ಶಕ್ತಿಯನ್ನು ಅರಿತಾಗ ಬರುತ್ತದೆ. ಅದಕ್ಕಾಗಿ ಕಾರ್ಮಿಕ ವರ್ಗದ ಶಕ್ತಿಯನ್ನು ಒಗ್ಗೂಡಿಸಿ ಸಮಾಜದ ಆಮೂಲಾಗ್ರ ಬದಲಾವಣೆಗೆ ಶ್ರಮಿಸಬೇಕು ಎಂದರು.ದೆಹಲಿ ರೈತ ಹೋರಾಟವನ್ನು ನಮ್ಮ ಸಂಘಟನೆ ಮುನ್ನಡೆಸಿಲ್ಲ.

ಆದರೆ ಮುಂಚೂಣಿ ಸಂಘಟನೆಗಳು ದಾರಿ ತಪ್ಪದಂತೆ ನಮ್ಮ ಸಂಘಟನೆ ಕಾವಲಾಯಿತು. ಸರ್ಕಾರದ ಪ್ರಸ್ತಾವನೆಗಳನ್ನು ಒಪ್ಪಿ ಚಳವಳಿಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕೆಲವು ಸಂಘಟನೆಗಳು ಬಂದಾಗ ನಮ್ಮ ಸಂಘಟನೆ ರೈತರನ್ನು ಒಗ್ಗೂಡಿಸಿ ಚಳವಳಿಗೆ ಹೊಸ ಶಕ್ತಿ ತುಂಬಿತು ಎಂದು ಹೇಳಿದರು.

Advertisement

ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ಕಮ್ಯೂನಿಸ್ಟ್‌ ಸರ್ಕಾರದ ಹೆಸರಿನಲ್ಲಿ ನಕಲಿ ಕಮ್ಯುನಿಸ್ಟರು ಜಾಗತೀಕರಣ ನೀತಿಗಳನ್ನು ಬಂಗಾಳ ಮತ್ತು ಕೇರಳಗಳಲ್ಲಿ ಜಾರಿಗೊಳಿಸಲು ಪ್ರಯತ್ನಿಸಿದರು. ನಂದಿಗ್ರಾಮ, ಸಿಂಗೂರ್‌ಗಳಲ್ಲಿ ಸಲೀಮ್‌ ಮತ್ತು ಟಾಟಾದಂತಹ ಕಾರ್ಪೊರೇಟ್‌ ಕಂಪನಿಗಳಿಗೆ ರೈತರ ಫಲವತ್ತಾದ ಭೂಮಿ ಧಾರೆಯೆರೆಯಲು ಹೊರಟಿದ್ದರು.ಆದರೆ ಇದರ ವಿರುದ್ಧ ರಕ್ತಸಿಕ್ತ ಹೋರಾಟ ನಡೆಯಿತು. ಕಾರ್ಪೊರೇಟ್‌ ದೈತ್ಯರು ಜನತೆಯ ಶಕ್ತಿಯ ಮುಂದೆ ನಿಲ್ಲದೇ ಓಡಿಹೋಗಬೇಕಾಯಿತು.

ಈ ಹೋರಾಟದ ನೇತೃತ್ವ ವಹಿಸಿದ್ದು ನಮ್ಮ ಏಐಕೆಕೆಎಂಎಸ್‌ ಸಂಘಟನೆ ಎಂಬುದು ಹೆಮ್ಮೆಯ ಸಂಗತಿ ಎಂದರು. ಅಧಿವೇಶನದಲ್ಲಿ ಸಂಘಟನಾತ್ಮಕ ವರದಿ, ಕೋಮು ಸೌಹಾರ್ದ ಕಾಪಾಡುವ ಕುರಿತು ಗೊತ್ತುವಳಿ ಮಂಡಿಸಲಾಯಿತು. ಸಂಘಟನೆಯ ಹೊಸ ರಾಜ್ಯ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಎಚ್‌.ವಿ. ದಿವಾಕರ, ಉಪಾಧ್ಯಕ್ಷರಾಗಿ ಭಗವಾನ್‌ರೆಡ್ಡಿ, ವಿ. ನಾಗಮ್ಮಾಳ್‌, ಎಚ್‌.ಪಿ. ಶಿವಪ್ರಕಾಶ, ಲಕ್ಷ್ಮಣ ಜಡಗನ್ನವರ, ಶರಣಗೌಡ ಗೂಗಲ್‌, ಕಾರ್ಯದರ್ಶಿಯಾಗಿ ಎಂ.ಶಶಿಧರ, ಸಹ ಕಾರ್ಯದರ್ಶಿಗಳಾಗಿ ಎಸ್‌.ಬಿ. ಮಹೇಶ್‌, ವಿ. ದೀಪಾ, ಗೋವಿಂದ ಬಳ್ಳಾರಿ, ಕಚೇರಿ ಕಾರ್ಯದರ್ಶಿಯಾಗಿ ಎಸ್‌.ಎನ್‌. ಸ್ವಾಮಿ ಮತ್ತು ಖಜಾಂಚಿಯಾಗಿ ಗಣಪತ್‌ ರಾವ್‌ ಮಾನೆ ಆಯ್ಕೆಯಾದರು. 20 ಜನ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು 107 ಜನ ಕೌನ್ಸಿಲ್‌ ಸದಸ್ಯರನ್ನೂ ಆಯ್ಕೆ ಮಾಡಲಾಯಿತು. ಎಸ್‌ ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಗಂಗಾಧರ ಬಡಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next