Advertisement

ಆರು ವಿವಿ ಜಾಗ ಭೂಗಳ್ಳರ ಪಾಲು!

07:43 AM Nov 16, 2017 | |

ವಿಧಾನಸಭೆ: ರಾಜ್ಯದ ಬೆಂಗಳೂರು , ಮೈಸೂರು, ಕಲಬುರಗಿ ಸೇರಿದಂತೆ ಒಟ್ಟು ಆರು ವಿಶ್ವವಿದ್ಯಾಲಯಗಳ ಜಮೀನು ಭೂಗಳ್ಳರ ಪಾಲಾಗಿರುವುದನ್ನು ಉನ್ನತ ಶಿಕ್ಷಣ ಸಚಿವ ಬಸರಾಜ ರಾಯರೆಡ್ಡಿ ಒಪ್ಪಿಕೊಂಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಜೆಡಿಎಸ್‌ ಶಾಸಕ ಕೆ.ಗೋಪಾಲಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ವಿವಿ, ಕಲಬುರಗಿ, ಮೈಸೂರಿನ ಡಾ. ಗಂಗೂಬಾಯಿ ಹಾನಗಲ್‌ ವಿವಿ, ಬೆಂಗಳೂರು , ತುಮಕೂರು ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಜಾಗ ಒತ್ತುವರಿಯಾಗಿದೆ
ಎಂದು ಸ್ಪಷ್ಟಪಡಿಸಿದರು. 

Advertisement

ಮೈಸೂರು ವಿವಿಗೆ ಸೇರಿದಂತೆ ನಗರದ ಕುರುಬರಹಳ್ಳಿಯಲ್ಲಿ 8 ಎಕರೆ, ವಿವಿಯ ಕ್ರಾಫರ್ಡ್‌ ಭವನದ ಉತ್ತರ ಭಾಗದಲ್ಲಿ 8 ಎಕರೆ ಹಾಗೂ ಕುಕ್ಕರಹಳ್ಳಿ ಕೆರೆ ಆವರಣದ 22 ಎಕರೆ ಜಾಗ ಒತ್ತುವರಿಯಾಗಿದೆ. ಇದರ ಮೊದಲೆರಡು ಪ್ರಕರಣ ನ್ಯಾಯಾಲಯದಲ್ಲಿ ದೆ ಎಂದರು. ಗುಲ್ಬರ್ಗ ವಿವಿ ಸ್ನಾತಕೋತ್ತರ ಕೇಂದ್ರ ಆವರಣದ ಹಾಲಿಹಳ್ಳಿಕೆ ಗ್ರಾಮದಲ್ಲಿ 4 ಎಕರೆ ಜಾಗ, ಚರ್ಚ್‌ಗೆಂದು ಹಾಗೂ ಸುಮಾರು 5 ಎಕರೆ ಜಾಗವನ್ನು ಯಲ್ಲಾಲಿಂಗ ಮಠಕ್ಕೆ ಅತಿಕ್ರಮಣ ಆಗಿದ್ದು, ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ಗಂಗೂಬಾಯಿ ಹಾನಗಲ್‌ ವಿವಿಯ ಹುಣಸೂರು ತಾಲೂಕಿನಲ್ಲಿ 12 ಎಕರೆ ಜಾಗ ಒತ್ತುವರಿ ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ವಿವಿಯ ನಾಗರಬಾವಿಯಲ್ಲಿ 5 ಎಕರೆ, ಮಲ್ಲತ್ತಳ್ಳಿಯಲ್ಲಿ 3 ಎಕರೆ ಮತ್ತು ನಾಯಂಡಳ್ಳಿಯಲ್ಲಿ 3 ಎಕರೆ ಜಾಗ ಒತ್ತುವರಿಯಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ನಂದಿಹಳ್ಳಿಯಲ್ಲಿ 18 ಎಕರೆ ಜಾಗ ಒತ್ತುವರಿಯಾಗಿದ್ದು, ಸ್ಥಳೀಯ ಠಾಣೆಯಲ್ಲಿ ದೂರು ನೀಡಲಾಗಿದೆ. ಅಲ್ಲದೆ, ತುಮಕೂರು ವಿವಿಯ ಕ್ಯಾಂಪಸ್‌ ಜಾಗವೂ
ಒತ್ತುವರಿಯಾಗಿದೆ ಎಂದರು. 

ಪ್ರತಿಧ್ವನಿಸಿದ ಅತಿಥಿ ಉಪನ್ಯಾಸಕರ ವೇತನ ವಿಳಂಬ
ವಿಧಾನಸಭೆ: ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ವೇತನ ವಿಳಂಬ ವಿಚಾರ ವಿಧಾನಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿ, ಬಾಕಿ
ವೇತನವನ್ನು ಆದಷ್ಟು ಬೇಗ ಪಾವತಿ ಮಾಡಬೇಕೆಂದು ಪ್ರತಿಪಕ್ಷ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು. ಕಾಂಗ್ರೆಸ್‌ ಶಾಸಕ ಜೆ.ಆರ್‌. ಲೋಬೋ ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಕಳೆದ ಆರು ತಿಂಗಳಿಂದ ಹಲವು ಕಾಲೇಜುಗಳಲ್ಲಿ ಗುತ್ತಿಗೆ ಆಧಾರದಲ್ಲಿ
ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಯಾಗಿಲ್ಲ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ, ಬಹುತೇಕ ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸಕಾಲಕ್ಕೆ ವೇತನ ಪಾವತಿಯಾಗಿದೆ. ಕೆಲವೇ ಕೆಲವು ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಳೆದ ಮೂರು ತಿಂಗಳಿಂದ ವೇತನ ಪಾವತಿ ವಿಳಂಬವಾಗಿದೆ. ಅದನ್ನು ಪಾವತಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್‌ ಹಾಗೂ ಸಿ.ಟಿ.ರವಿ, ಹಲವು ರೀತಿಯ ಸಮಸ್ಯೆಗಳನ್ನು
ಎದುರಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಆರು ತಿಂಗಳಿನಿಂದ ವೇತನ ಪಾವತಿಯಾಗದಿರುವುದು ಗಂಭೀರ ವಿಚಾರ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕು. ಜತೆಗೆ, ಈ ವಿಚಾರದ ಬಗ್ಗೆ ಸದನದಲ್ಲಿ ವಿಸೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಪ್ರತಿಪಕ್ಷದವರ ಕೋರಿಕೆ ಮನ್ನಿಸಿದ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅತಿಥಿ ಉಪನ್ಯಾಸಕರ ವೇತನ ಪಾವತಿ ವಿಳಂಬ ವಿಚಾರದ ಬಗ್ಗೆ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡುವುದಾಗಿ ತಿಳಿಸಿದರು. 

ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ಗೆ ಕೃಪಾಂಕ
ವಿಧಾನಪರಿಷತ್ತು: ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳ ನೇರ ನೇಮಕಾತಿ ವೇಳೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮತ್ತು ಇನ್ನೂ ಅನುಮೋದನೆಗೊಳ್ಳದ ಆಪರೇಟರ್‌ ಗಳ ಸೇವೆಗೆ ವಾರ್ಷಿಕ ಶೇಕಡಾವಾರು ಗುಣಾತ್ಮಕ
ಅಂಕಗಳನ್ನು ನೀಡಲಾಗುವುದು ಎಂದು ಗ್ರಾಮೀಣಾ ಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ನೇರ ನೇಮಕಾತಿ ವೇಳೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ
ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳು 1 ವರ್ಷ ಸೇವೆ ಪೂರ್ಣಗೊಳಿಸಿದ್ದರೆ ಅವರಿಗೆ ಶೇ.3ರಷ್ಟು ಗುಣಾತ್ಮಕ ಅಂಕ ನೀಡಲು
ತೀರ್ಮಾನಿಸಲಾಗಿದೆ. ಡಾಟಾ ಎಂಟ್ರಿ ಆಪರೇಟರ್‌ ಅದೇ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಆಗಿದ್ದರೆ, ಅದಕ್ಕೆ ಶೇ.5ರಷ್ಟು ಗುಣಾತ್ಮಕ ಅಂಕ ನೀಡಲಾಗುವುದು. ಸೇವೆಗೆ ಕನಿಷ್ಠ ಶೇ. 5ರಷ್ಟು ಗುಣಾತ್ಮಕ ಅಂಕಗಳು ನೀಡಬೇಕು ಎಂಬ ಬೇಡಿಕೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next