Advertisement

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

01:05 AM Oct 26, 2024 | Team Udayavani |

ಕಳೆದ 2-3 ವಾರಗಳಿಂದ ರಾಜ್ಯದ ರಾಜಧಾನಿ ಬೆಂಗಳೂರು ಸುತ್ತಮುತ್ತ ವ್ಯಾಪಕ ಮಳೆ ಯಾಗಿದೆ. ಇದರ ಪರಿಣಾಮವಾಗಿ ನಗರದ ಹಲವೆಡೆ ಮಳೆ ನೀರು ನುಗ್ಗಿ ಸಮಸ್ಯೆಯನ್ನು ಸೃಷ್ಟಿಸಿದ್ದರೆ ಮತ್ತೆ ಹಲವೆಡೆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆಯುಂಟಾಗಿತ್ತು. ಇದೇ ವೇಳೆ ಕೆಲವೊಂದು ಅವಘಡ ಸಂಭವಿಸಿ ಜೀವಹಾನಿ, ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿದೆ.

Advertisement

ಪ್ರತೀ ವರ್ಷವೂ ಈ ಸಮಸ್ಯೆ ತಲೆದೋರುತ್ತಿದ್ದು ಇದರ ನಿವಾರಣೆಗಾಗಿ ಸರಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ನಿರಂತರ ಪ್ರಯತ್ನ ನಡೆಸುತ್ತಲೇ ಬಂದಿದೆಯಾದರೂ ಇವೆಲ್ಲವೂ ನಿರೀಕ್ಷಿತ ಫ‌ಲಿತಾಂಶವನ್ನು ತಂದುಕೊಟ್ಟಿಲ್ಲ ಎನ್ನುವುದು ವಾಸ್ತವ. ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರದ ಹಿನ್ನೆಲೆಯಲ್ಲಿ ಕಾರ್ಪೊರೇಟ್‌ ಕಂಪೆನಿಯ ನಿವೃತ್ತ ಅಧಿಕಾರಿಯೋರ್ವರು ಮಾಡಿದ ಟ್ವೀಟ್‌ ಅನ್ನು ಮುಂದಿಟ್ಟು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್‌, ಬೆಂಗಳೂರಿನಲ್ಲಿರುವ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು.

ಈ ಕಂಪೆನಿಗಳಿಗೆ ಅಗತ್ಯವಿರುವ ವಿಶ್ವದರ್ಜೆಯ ಮೂಲಸೌಕರ್ಯವನ್ನು ಒದಗಿಸಲು ನಮ್ಮ ಸರಕಾರ ಸಿದ್ಧ ಎಂದು ಹೇಳಿದ್ದಾರೆ. ಆಂಧ್ರ ಸಚಿವರ ಈ ಆಹ್ವಾನ ತೀರಾ ಬಾಲಿಶ ಮತ್ತು ಅಪ್ರಬುದ್ಧವೇ ಸರಿ.

ಇದೇ ಮಾರ್ಚ್‌ ಮಾಸಾಂತ್ಯದಲ್ಲಿ ಕೇರಳದ ಕೈಗಾರಿಕ ಸಚಿವರು ಬೆಂಗಳೂರಿನಲ್ಲಿನ ನೀರಿನ ಸಮಸ್ಯೆಯನ್ನು ಮುಂದಿಟ್ಟು ಐಟಿ ಕಂಪೆನಿಗಳು ಕೇರಳಕ್ಕೆ ಸ್ಥಳಾಂತರಗೊಳ್ಳುವಂತೆ ಆಹ್ವಾನ ನೀಡುವ ಮೂಲಕ ನಗೆಪಾಟಲಿಗೀಡಾಗಿದ್ದರು. ಜುಲೈಯಲ್ಲಿ ಉದ್ಯೋಗ ಮೀಸಲು ವಿಷಯವಾಗಿ ಚರ್ಚೆ ಏರ್ಪಟ್ಟಾಗ ಆಂಧ್ರದ ಸಚಿವ ನಾರಾ ಲೋಕೇಶ್‌ ಅವರು ಇಂತಹುದೇ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು. ಈ ಎರಡೂ ಸಂದರ್ಭಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಾಗಲೀ, ಐಟಿಬಿಟಿ ಕಂಪೆನಿಗಳಾಗಲೀ ಈ ನಾಯಕರ ಹೇಳಿಕೆಗಳಿಗೆ ಸೊಪ್ಪು ಹಾಕಿರಲಿಲ್ಲ ಎನ್ನುವುದು ಬೇರೆ ಮಾತು. ಆದರೆ ಈ ನಾಯಕರು ಮತ್ತದೇ ಚಾಳಿಯನ್ನು ಮುಂದುವರಿಸಿರುವುದು ವಿಪರ್ಯಾಸ.

ರಾಜ್ಯ ಸರಕಾರಗಳು ತಮ್ಮ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಬಂಡವಾಳ ಆಕರ್ಷಿಸಲು ಹಾಗೂ ಕಂಪೆನಿಗಳು ಮತ್ತು ಬೃಹತ್‌ ಉದ್ಯಮಗಳನ್ನು ಸಳೆಯಲು ವಿವಿಧ ಮೂಲಸೌಕರ್ಯಗಳ ಒದಗಣೆ, ಉತ್ತೇಜನದಾಯಕ ಕ್ರಮಗಳನ್ನು ಕೈಗೊಳ್ಳುವುದು ಹೊಸದೇನಲ್ಲ. ತನ್ಮೂಲಕ ಆಯಾಯ ರಾಜ್ಯದಲ್ಲಿ ಉದ್ಯಮಗಳು ಸ್ಥಾಪನೆಯಾಗಿ, ರಾಜ್ಯದ ಬೊಕ್ಕಸಕ್ಕೆ ಆದಾಯ ಹರಿದುಬರುವುದರ ಜತೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದು ಸಹಜ ಪ್ರಕ್ರಿಯೆ ಕೂಡ. ಆದರೆ ನೈಸರ್ಗಿಕ ಸಮಸ್ಯೆ, ಲೋಪದೋಷಗಳನ್ನು ಮುಂದಿಟ್ಟು ಇನ್ನೊಂದು ರಾಜ್ಯದಲ್ಲಿರುವ ಕಂಪೆನಿಗಳನ್ನು ನಮ್ಮ ರಾಜ್ಯಕ್ಕೆ ಸ್ಥಳಾಂತರಗೊಳ್ಳಿ ಎನ್ನುವುದು ದಾಷ್ಟéìವಲ್ಲದೆ ಇನ್ನೇನು?. ಇಂತಹ ಕಾರಣಗಳನ್ನೇ ಮುಂದಿಟ್ಟು ನಮ್ಮ ರಾಜ್ಯಕ್ಕೆ ಸ್ಥಳಾಂತರಗೊಳ್ಳಿ ಎಂದು ಪ್ರತಿಯೊಂದು ರಾಜ್ಯವೂ ಬೇರೆ ರಾಜ್ಯದಲ್ಲಿನ ಕಂಪೆನಿಗಳಿಗೆ ಸ್ಥಳಾಂತರ ಗೊಳ್ಳುವಂತೆ ಆಹ್ವಾನ ನೀಡಲಾರಂಭಿಸಿದರೆ ರಾಜ್ಯಗಳ ನಡುವೆ ಬಲುದೊಡ್ಡ ಕಾದಾಟವೇ ನಡೆದೀತು. ರಾಜ್ಯ-ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆಯನ್ನು ಆಳುವವರು ಅರ್ಥಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಸದೃಢ ಗಣತಂತ್ರಕ್ಕೆ ಅಪಾಯ ಎದುರಾಗಬಹುದು.

Advertisement

ರಾಜಕೀಯ ಧುರೀಣರ ಬಾಲಿಶತನದ ಹೇಳಿಕೆಗಳೇನೇ ಇರಲಿ, ಅವೆಲ್ಲವನ್ನು ಪಕ್ಕಕ್ಕಿರಿಸಿ, ಆ ಹೇಳಿಕೆಗೆ ಕಾರಣವಾದ ವಿಷಯ, ಅಂಶಗಳತ್ತ ನಮ್ಮ ಸರಕಾರ ಒಂದಿಷ್ಟು ಗಮನ ಹರಿಸಬೇಕು. ಮಳೆ ಬಂದಾಕ್ಷಣ ಇಡೀ ನಗರದಲ್ಲಿನ ಜನಜೀವನ ಅಸ್ತವ್ಯಸ್ತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದನ್ನು ನಿವಾರಿಸಬೇಕಾದ ಅನಿವಾ ರ್ಯತೆಯಂತೂ ಇದ್ದೇ ಇದೆ. ನಗರ ಬೆಳೆದಂತೆ ಈ ಸಮಸ್ಯೆಗಳೆಲ್ಲ ಮಾಮೂಲು ಎಂಬ ಉಡಾಫೆಯ ಮಾತಿಗಿಂತ ದೂರದೃಷ್ಟಿಯಿಂದ ಕೂಡಿದ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅತ್ಯಗತ್ಯ. ಇತ್ತ ರಾಜ್ಯ ಸರಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ತುರ್ತು ಗಮನ ಹರಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next