Advertisement

ಇಂದ್ರನ ವಜ್ರಾಯುಧದ ಹಿಂದಿನ ರಹಸ್ಯ… ವೃತ್ರಾಸುರನ ಸಂಹಾರ

01:23 PM Dec 11, 2018 | |

ವಿಶ್ವರೂಪನ ತಂದೆಯಾದ ತ್ವಷ್ಟನಿಗೆ ಪುತ್ರನ ಮರಣದಿಂದಾಗಿ ಮಿತಿಮೀರಿದ ಕ್ರೋಧವು ಉಂಟಾಯಿತು. ಆಗ ಅವನು ಇಂದ್ರನನ್ನು ಸಂಹರಿಸಬೇಕೆಂಬ ಉದ್ದೇಶದಿಂದ, ಇಂದ್ರನ ಶತ್ರುವಾಗಿ ಒಬ್ಬ ಮಗನನ್ನು ಪಡೆಯಲು “ಎಲೈ ಇಂದ್ರಶತ್ರುವೇ! ನಿನ್ನ ಅಭಿವೃದ್ಧಿ ಉಂಟಾಗಿ, ಶೀಘ್ರಾತಿಶೀಘ್ರವಾಗಿ ಶತ್ರುವನ್ನು ಸಂಹರಿಸು ಎಂದು ಉಚ್ಚರಿಸಿ ಮಂತ್ರದಿಂದ ಅಗ್ನಿಯಲ್ಲಿ ಹೋಮ ಮಾಡಿದನು. ಯಜ್ಞವು ಸಮಾಪ್ತವಾಗುತ್ತಿದ್ದಂತೆ ಅನ್ವಹಾರ್ಯಪಚನವೆಂಬ ಅಗ್ನಿ (ದಕ್ಷಿಣಾಗ್ನಿ) ಯಿಂದ ಅತಿಭಯಂಕರ ರೂಪದ “ವೃತ್ರಾಸುರ” ಎಂಬ ದೈತ್ಯನು ಮೇಲೆದ್ದು ಬಂದನು. ಎಲ್ಲಾ ಲೋಕಗಳನ್ನು ನಾಶ ಪಡಿಸಲಿಕ್ಕಾಗಿ ಪ್ರಕಟಗೊಂಡಿರುವ ಕಾಲಮೃತ್ಯುವಿನಂತೆಯೇ ಅವನು ಕಾಣುತ್ತಿದ್ದನು. ತನ್ನ ಕೋರೆದಾಡೆಗಳನ್ನು ಪ್ರಕಟಿಸುತ್ತಾ ಅವನು ತನ್ನ ಭೀಷಣರೂಪವನ್ನು ತೋರಿಸಿ ಎಲ್ಲಾ ಜನರನ್ನು ಭಯಪಡಿಸುತ್ತಾ ಮೂರು ಲೋಕಗಳನ್ನು ಆವರಿಸಿಕೊಂಡಿದ್ದನು.

Advertisement

                     ಇಂದ್ರಾದಿ ದೇವತೆಗಳು ತಮ್ಮ-ತಮ್ಮ ಅನುಯಾಯಿಗಳೊಂದಿಗೆ ಸೇರಿ ಅವನ ಮೇಲೆ ಮುಗಿಬಿದ್ದು , ತಮ್ಮ ದಿವ್ಯಾಸ್ತ್ರಗಳಿಂದ ಹೊಡೆಯತೊಡಗಿದರು. ಆದರೆ ವೃತ್ರಾಸುರನು ಅವರ ಎಲ್ಲ ಶಸ್ತ್ರಾಸ್ತ್ರಗಳನ್ನು ನುಂಗಿಹಾಕಿದನು.  ಆಗ ದೇವತೆಗಳ ತೇಜಸ್ಸು ಉಡುಗಿ ಹೋಯಿತು, ಅವರೆಲ್ಲರೂ ದೀನರಾಗಿ, ಕಳವಳಗೊಂಡು, ತಮ್ಮ ಹೃದಯದಲ್ಲಿ ವಿರಾಜಿಸುತ್ತಿರುವ, ಆದಿಪುರುಷನಾದ ನಾರಾಯಣನಲ್ಲಿ ಏಕಾಗ್ರಚಿತ್ತದಿಂದ ಶರಣಾಗಿ ಪ್ರಾರ್ಥಿಸತೊಡಗಿದರು.

              ಆಗ ಭಗವಂತನು ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ ಅವರ ಮುಂದೆ ಪ್ರಕಟನಾದನು. ಭಗವಂತನ ನೇತ್ರಗಳು ಶರತ್ಕಾಲದ ಕಮಲದಂತೆ ಅರಳಿದ್ದವು. ಅವನೊಡನೆ ಹದಿನಾರು ಪಾರ್ಷದರು ಅವನ ಸೇವೆಯಲ್ಲಿ ತೊಡಗಿದ್ದರು. ಅವರು ಎಲ್ಲಾ ವಿಧದಿಂದಲೂ ಭಗವಂತನಂತೆಯೇ ಕಾಣುತ್ತಿದ್ದರು. ಕೇವಲ ಅವರ ವಕ್ಷಸ್ಥಳದಲ್ಲಿ ಶ್ರೀವತ್ಸಲಾಂಛನ ಮತ್ತು ಕೊರಳಲ್ಲಿ ಕೌಸ್ತುಭ ಮಣಿಯು ಇರಲಿಲ್ಲ. ಭಗವಂತನ ದರ್ಶನ ಪಡೆದು ಎಲ್ಲ ದೇವತೆಗಳು ಆನಂದಮಗ್ನರಾದರು. ಅವರು ಸಾಷ್ಟಾಂಗ ನಮಸ್ಕಾರ ಮಾಡಿ ಭಗವಂತನನ್ನು ಸ್ತುತಿಸತೊಡಗಿದರು.

              ಇದರಿಂದ ಪ್ರಸನ್ನನಾದ ಭಗವಂತನು “ಎಲೈ ದೇವತೆಗಳೇ !  ನೀವೆಲ್ಲರೂ ಸ್ತುತಿಯಿಂದ ಕೂಡಿದ ಭಕ್ತಿ ಜ್ಞಾನದಿಂದ ನನ್ನನ್ನು ಉಪಾಸನೆ ಮಾಡಿದ್ದೀರಿ. ಇದರಿಂದ ನಾನು ನಿಮ್ಮ ಮೇಲೆ ಪ್ರಸನ್ನನಾಗಿರುವೆನು. ಈ ಸ್ತುತಿಯ ಮೂಲಕ ಜೀವರಿಗೆ ತಮ್ಮ ವಾಸ್ತವಿಕ ಸ್ವರೂಪದ ಸ್ಮೃತಿ ಉಂಟಾಗಿ,  ನನ್ನ ಭಕ್ತಿಯು ದೊರೆಯುವುದು. ನನ್ನಲ್ಲಿ ಶರಣಾಗತರಾದವರನ್ನು ಯಾರೂ ಹಿಂಸೆಪಡಿಸಲಾರರು.

Advertisement

             ದೇವೇಂದ್ರನೇ ! ಮುಕ್ತಿಯ ಸ್ವರೂಪವನ್ನು ತಿಳಿದ ಜ್ಞಾನಿಯು , ರೋಗಿಯು ಬಯಸಿದರೂ ಸದ್ವೈದ್ಯನು ಅವನಿಗೆ ಅಪಥ‍್ಯವಾದುದನ್ನು ಕೊಡದಿರುವಂತೆಯೇ ಅಜ್ಞಾನಿಗಳಿಗೆ ಕರ್ಮಗಳಲ್ಲಿ ಸಿಕ್ಕಿಕೊಳ್ಳುವಂತಹ ಉಪದೇಶಗಳನ್ನು ಮಾಡುವುದಿಲ್ಲ. ನಿಮಗೆ ಮಂಗಳವಾಗಲಿ.  ಇನ್ನು ತಡಮಾಡದೆ ಋಷಿ ದಧೀಚಿಯ ಬಳಿಗೆ ಹೋಗಿರಿ. ಅವರ ಶರೀರವು ಉಪಾಸನೆ,ವ್ರತ ಮತ್ತು ತಪಸ್ಸಿನಿಂದಾಗಿ ಅತ್ಯಂತ ಸದೃಢಗೊಂಡಿದೆ. ಅದನ್ನೇ ಕೇಳಿಕೊಳ್ಳಿ . ದಧೀಚಿ ಋಷಿಗಳಿಗೆ ಶುದ್ಧ ಬ್ರಹ್ಮನ  ಜ್ಞಾನವಿದೆ. ಅಶ್ವಿನಿ ಕುಮಾರರಿಗೆ ಕುದುರೆಯ ತಲೆಯಿಂದ ಉಪದೇಶಮಾಡಿದ ಕಾರಣ ಇವರಿಗೆ ‘ ಅಶ್ವಶಿರ’ ಎಂದೂ ಹೆಸರಿದೆ. ಅವರು ಉಪದೇಶಿಸಿದ ಆತ್ಮವಿದ್ಯೆಯ ಪ್ರಭಾವದಿಂದಲೇ ಅಶ್ವಿನಿ ಕುಮಾರರಿಬ್ಬರೂ ಜೀವನ್ಮುಕ್ತರಾಗಿದ್ದಾರೆ.

                 ಅಥರ್ವವೇದೀ ದಧೀಚಿಋಷಿಯು ಮೊಟ್ಟಮೊದಲು ನನ್ನ ಸ್ವರೂಪಭೂತವಾದ ಅಭೇದ್ಯ ನಾರಾಯಣಕವಚವನ್ನು ತ್ವಷ್ಟನಿಗೆ ಉಪದೇಶಿಸಿದನು. ತ್ವಷ್ಟನು ವಿಶ್ವರೂಪನಿಗೆ ಉಪದೇಶಿಸಿದನು, ಅವರು ನಿಮಗೆ ಕರುಣಿಸಿದರು.  ದಧೀಚಿ ಋಷಿಯು ಧರ್ಮದ ಪರಮ ಮರ್ಮಜ್ಞರಾಗಿದ್ದಾರೆ. ಅಶ್ವಿನಿದೇವತೆಗಳು ಪ್ರಾರ್ಥನೆ ಮಾಡಿದರೆ ನಿಮಗೆ ಅವರು ತಮ್ಮ ಶರೀರದ ಅಂಗಾಂಗಗಳನ್ನು ಖಂಡಿತವಾಗಿ ಕೊಡುವರು. ಅನಂತರ ವಿಶ್ವಕರ್ಮನಿಂದ ಆ ಅಂಗಾಂಗಗಳ ಮೂಳೆಗಳಿಂದ ಒಂದು ಶ್ರೇಷ್ಠವಾದ ಆಯುಧವನ್ನು ರಚಿಸಿಕೊಳ್ಳಿರಿ.  ದೇವತೆಗಳಿರಾ ! ವೃತ್ರಾಸುರನ ವಧೆಯಾದ ಬಳಿಕ ನಿಮಗೆ ನಷ್ಠವಾದ ತೇಜಸ್ಸು, ಅಸ್ತ್ರ-ಶಸ್ತ್ರಗಳು, ಎಲ್ಲ ಸಂಪತ್ತುಗಳು ಪುನಃ ದೊರೆಯುವುದು. ನಿಮಗೆ ಅವಶ್ಯವಾಗಿ ಮಂಗಳ ಉಂಟಾಗುವುದು” ಎಂದು ಆದೇಶವನ್ನು ಕೊಟ್ಟು ವಿಶ್ವದ ಜೀವನದಾತನಾದ ಶ್ರೀಹರಿಯು ಅಂತರ್ಧಾನವನ್ನು ಹೊಂದಿದನು.

          ನಂತರ ದೇವತೆಗಳು ಉದಾರಿಯಾದ, ಅಥರ್ವವೇದೀ ದಧೀಚಿಯ ಬಳಿಗೆ ಹೋಗಿ ಭಗವಂತನ ಆಜ್ಞೆಯನ್ನು ಅರುಹಿದರು. ದೇವತೆಗಳ ಮಾತನ‍್ನು ಕೇಳಿ ದಧೀಚಿಗಳಿಗೆ ಬಹಳ ಆನಂದವಾಗಿ ನಾನು ನನ್ನ ಪ್ರಿಯವಾದ ಶರೀರವನ್ನು ಈಗಲೇ ಬಿಟ್ಟುಬಿಡುತ್ತೇನೆ. ಏಕೆಂದರೆ, ಒಂದಲ್ಲಾ ಒಂದುದಿನ ಇದು ತಾನಾಗಿಯೇ ನನ್ನನ್ನು ಬಿಟ್ಟುಹೋಗುವಂತಹುದು. ಈ ವಿನಾಶಿಯಾದ ಶರೀರದಿಂದ ನನಗೆ ಯಾವ ಉಪಯೋಗವೂ ಇಲ್ಲ ಎಂದು ಹೇಳಿ ಭಗವಂತನ ಚಿಂತನೆಯನ್ನು ಮಾಡುತ್ತಾ ಸಮಾಧಿಸ್ಥರಾಗಿ ಶರೀರವನ್ನು ತ್ಯಜಿಸಿದರು. ನಂತರ ವಿಶ್ವಕರ್ಮನು ದಧೀಚಿಋಷಿಗಳ ಅಸ್ಥಿಗಳಿಂದ ವಜ್ರಾಯುಧವನ್ನು ನಿರ್ಮಿಸಿ ಇಂದ್ರನಿಗೆ ಕೊಟ್ಟನು. ಅದನ್ನು ಧರಿಸಿದ ಮಹೇಂದ್ರನು ಐರಾವತವನ್ನು ಏರಿ ದೇವತೆಗಳನ್ನು ಸೇರಿಕೊಂಡು ವೃತ್ರಾಸುರನ ಮೇಲೆ ಮುತ್ತಿಗೆಯನ್ನು ಹಾಕಿದನು. ವೃತ್ರಾಸುರನು ಕೂಡ ದೈತ್ಯ ಸೇನಾಪತಿಗಳ ಸೈನ್ಯದಿಂದೊಡಗೂಡಿ ದೇವಸೈನ್ಯವನ್ನು ಸಮರ್ಥವಾಗಿ ಎದುರಿಸಿ ನಿಂತನು. ಆದರೆ ಭಗವಂತನಿಂದ ಸಂರಕ್ಷಿತರಾದ ದೇವತೆಗಳನ್ನು ಸೋಲಿಸಲು ಮಾಡಿದ ಪ್ರಯತ್ನಗಳೆಲ್ಲವೂ ನಿಷ್ಫಲವಾಗುತ್ತಿರಲು ಉತ್ಸಾಹಗುಂದಿದ ದೈತ್ಯರು ತಮ್ಮ ಅಧಿಪತಿಯಾದ ವೃತ್ರಾಸುರನನ್ನು ಯುದ್ಧ ಭೂಮಿಯಲ್ಲಿ ಬಿಟ್ಟು ಪಲಾಯನ ಮಾಡಿದರು.

               ಆಗ ವೃತ್ರಾಸುರನು ” ಎಲೈ ಇಂದ್ರನೇ ! ನೀನು ಧರಿಸಿರುವ ವಜ್ರಾಯುಧವು ಶ್ರೀಹರಿಯ ತೇಜಸ್ಸು ಮತ್ತು ದಧೀಚಿ ಋಷಿಯ ತಪಸ್ಸಿನಿಂದ ಶಕ್ತಿಶಾಲಿಯಾಗಿದೆ. ಭಗವಂತನು ನನ್ನನ್ನು ಸಂಹರಿಸಲು ನಿನಗೆ ಆಜ್ಞೆಯನ್ನು ನೀಡಿರುವನು ಅದಕ್ಕಾಗಿ ಅದೇ ವಜ್ರಾಯುಧದಿಂದ ನನ್ನ ಸಂಹಾರವಾದರೆ ನಾನು ಮುನಿಗಳಿಗೆ ಉಚಿತವಾದ ಗತಿಯನ್ನು ಪಡೆಯುವೆನು” ಎಂದು ಹೇಳಿದನು.

                  ನಂತರ ಅವನು ನಾರಾಯಣನನ್ನು ಕುರಿತು ” ಪ್ರಭೋ ಮುಂದಿನ ಜನ್ಮದಲ್ಲಾದರೂ ನಿನ್ನ ಚರಣ ಕಮಲವನ್ನು ಆಶ್ರಯಿಸಿರುವ ಸೇವಕರ ಸೇವೆಯನ್ನು ಅನನ್ಯ ಭಾವದಿಂದ ಮಾಡುವ ಯೋಗವು ನನಗೆ ದೊರೆಯುವಂತೆ ಕೃಪೆ ಮಾಡು ” ಎಂದು ಪ್ರಾರ್ಥಿಸಿದನು. ರಣಭೂಮಿಯಲ್ಲಿ ವೀರಮರಣವನ್ನು ಹೊಂದಲು ಬಯಸಿದ ವೃತ್ರಾಸುರನು ತೀಕ್ಷ್ಣವಾದ ತುದಿಯುಳ್ಳ ತ್ರಿಶೂಲವನ್ನು ಇಂದ್ರನ ಮೇಲೆ ಪ್ರಯೋಗ ಮಾಡಿದನು. ಆ ತ್ರಿಶೂಲವನ್ನು ಆಕಾಶದಲ್ಲಿಯೇ ನಾಶಪಡಿಸಿದ ಇಂದ್ರನು ತನ್ನ ಕೈಯಲ್ಲಿರುವ ವಜ್ರಾಯುಧವನ್ನು ಪ್ರಯೋಗಿಸಿ ವೃತ್ರಾಸುರನ ಎರಡು ತೋಳುಗಳನ್ನು ಕತ್ತರಿಸಿದನು. ಇದರಿಂದ ಬಹಳ ಕೋಪಗೊಂಡ ವೃತ್ರಾಸುರನು ತನ್ನ ಕೆಳ ದವಡೆಯನ್ನು ಭೂಮಿಯಲ್ಲಿಯೂ , ಮೇಲ್ದವಡೆಯನ್ನು ಆಕಾಶದೆತ್ತರಕ್ಕೂ ಚಾಚಿ ಮಹಾವೇಗದಿಂದ ಇಂದ್ರನ ಬಳಿಗೆ ಬಂದು ಐರಾವತ ಸಹಿತನಾದ ಇಂದ್ರನನ್ನು ನುಂಗಿಬಿಟ್ಟನು. ಆದರೆ ನಾರಾಯಣ ಕವಚದಿಂದ ಸಂರಕ್ಷಿಸಲ್ಪಟ್ಟ ದೇವರಾಜನಿಗೆ ಯಾವ ಅಪಾಯವೂ ಸಂಭವಿಸಲಿಲ್ಲ. ವೃತ್ರಾಸುರನ ಉದರವನ್ನು ಸೇರಿದ ಇಂದ್ರನು ವಜ್ರಾಯುಧದಿಂದ ರಕ್ಕಸನ ಹೊಟ್ಟೆಯನ್ನು ಸೀಳಿ ಹೊರಗೆ ಬಂದು ಪರ್ವತದ ಶಿಖರದಂತೆ ಉನ್ನತವಾಗಿದ್ದ ವೃತ್ರಾಸುರನ ಶಿರವನ್ನು ಕಡಿದು ದೈತ್ಯ ಸಂಹಾರವನ್ನು ಮಾಡಿದನು. ಆಗ ದೇವತೆಗಳೂ, ಮಹರ್ಷಿಗಳೂ, ಗಂಧರ್ವರೂ ಪರಮಾನಂದ ಭರಿತರಾಗಿ ವೃತ್ರಸಂಹಾರವನ್ನು ಮಾಡಿದ ಇಂದ್ರನನ್ನು ದಿವ್ಯಮಂತ್ರಗಳಿಂದ ಸ್ತುತಿಸಿದರು. ವೃತ್ರಾಸುರನ ದೇಹದಿಂದ ಆಗ ಆತ್ಮಜ್ಯೋತಿಯು ಹೊರಬಂದು ದೇವತೆಗಳು ನೋಡ-ನೋಡುತ್ತಿದಂತೆಯೇ ಭಗವಂತನ ಸ್ವರೂಪದಲ್ಲಿ ಲೀನವಾಗಿ ಹೋಯಿತು.

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next