Advertisement

ಹೆಣ್ಣಿನ ತ್ಯಾಗ ಎಲ್ಲಕ್ಕೂ ಮಿಗಿಲು: ಬಾಳೇಕುಂದ್ರಿ

12:40 PM Jan 08, 2018 | |

ಬೀದರ: ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಹೆಣ್ಣಿನ ಆಸರೆಯಲ್ಲಿ ಬದುಕುವನು. ಹೆತ್ತು ಧರೆಗಿಳಿಸಿ, ನಂತರ ಸತ್ತ ಮೇಲೂ ಭೂಮಿ ರೂಪದಲ್ಲಿ ತನ್ನೊಡಲಲ್ಲಿ ಕುಳ್ಳಿರಿಸಿಕೊಳ್ಳುವ ಹೆಣ್ಣಿನ ತ್ಯಾಗ ಮಿಗಿಲಾದದ್ದು. ಆದರೂ ಹೆಣ್ಣನ್ನು ಕುಟುಂಬದ ಕಣ್ಣಾಗಿ ಭಾವಿಸದೇ ಹುಣ್ಣು ಎಂದು ನೋಡುವುದು ದುರಂತ ಎಂದು ಖ್ಯಾತ ಚಿಂತಕಿ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಬಿವಿ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ರವಿವಾರ ವಿಕಾಸ ಅಕಾಡೆಮಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಸಂಗಮ ಕಾರ್ಯಕ್ರಮ ಉದ್ಘಾಟಿಸಿ “ವಾತ್ಸಲ್ಯ ಜಗದ ಬೆಳಕು ಮಾತೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ಹೆಣ್ಣಿಲ್ಲದೆ ವಿಶ್ವ ನಿರ್ಮಾಣವೇ ಅಸಾಧ್ಯ. ಇಂದು ಭ್ರೂಣ ಹತ್ಯೆಯಿಂದ 10 ವರ್ಷದಲ್ಲಿ 10 ಕೋಟಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರೆ. ಈ ಕೃತ್ಯದಲ್ಲಿ ವೈದ್ಯರ ಪಾಲು ಸಹ ಇದೆ ಎಂದರು.

ತಾಯಿ ಇರುವ ಮನೆ ಅದು ಅರಮನೆಗೆ ಸಮಾನ. ಆಕೆ ಇಲ್ಲದ ಮನೆ ಅದು ಬರೀ ಮರಳು ಮನೆಯಷ್ಟೆ. ಹಬ್ಬ, ಹರಿದಿನಗಳು, ಸಂಪ್ರದಾಯ ಉತ್ಸವಗಳು, ಪೂಜಾದಿ ಕಾರ್ಯಗಳು ನಡೆಯಲು ಕಡ್ಡಾಯವಾಗಿ ಹೆಣ್ಣು ಇರಲೇ ಬೇಕು. ಆದರೆ, ಇಂದಿನ ದಿನಮಾನಗಳಲ್ಲಿ ಹೆಣ್ಣಿಗೆ ನಮಸ್ಕಾರ ಮಾಡುವುದಿರಲಿ, ಆಕೆಯನ್ನೇ ನಾಶ ಮಾಡಲು ಹೊರಟಿರುವ ಪರಿ ದಾನವರಿಗಿಂತಲೂ ಕಡುಕಷ್ಟವಾದ ಬೆಳವಣಿಗೆ ಎಂದು ವಿಷಾದಿಸಿದರು.

ಹೆಣ್ಣು ವಾತ್ಸಲ್ಯ ಹಾಗೂ ಮಮಕಾರದ ಸಾಕಾರ ಮೂರ್ತಿ, ಆಕೆಯ ಎದೆ ಹಾಲಿನಲ್ಲಿ ಇಡೀ ಜಗತ್ತನ್ನು ಮೀರಿಸುವ ಅಗಾಧ ಶಕ್ತಿ ತುಂಬಿದೆ. ಹುಟ್ಟಿನಿಂದಲೇ ಆಕೆಯಲ್ಲಿ ಆತ್ಮವಿಶ್ವಾಸ ಹಾಗೂ ಸೌಂದರ್ಯ ಭಾವ ಬೆಳೆದು ಬಂದಿದೆ. ಆದರೆ, ಇಂದು ಹೆಣ್ಣನ್ನು ನಾಶ ಮಾಡಲು ಮತ್ತೂಂದು ಹೆಣ್ಣು ವೈದ್ಯರೊಂದಿಗೆ ಸೇರಿ ಹತ್ತು ವರ್ಷಗಳಲ್ಲಿ 10 ಕೋಟಿ ಹೆಣ್ಣು ಮಕ್ಕಳ ಭ್ರೂಣ ನಾಶ ಮಾಡಿರುವುದು ಕಳವಳಕಾರಿ ಸಂಗತಿ ಎಂದರು.

ಇಂದು ತಾಯಿ ತನ್ನ ಮಗುವಿಗೆ ಸಂಸ್ಕಾರದ ವಾತ್ಸಲ್ಯ ತೋರಬೇಕಿದೆ. ಉತ್ತಮ ಶಿಕ್ಷಣ ನೀಡಿ, ಸ್ವಾಭಿಮಾನಿ ಹಾಗೂ ದೇಶಪ್ರೇಮಿ ಪುತ್ರನನ್ನಾಗಿ ಮಾಡಬೇಕಿದೆ. ಬಾಲ್ಯದಲ್ಲಿ ಮಕ್ಕಳು ಮಾಡುವ ಉತ್ತಮ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ತಪ್ಪು ಎಸಗುವಾಗ ತಿದ್ದುವ ಕಾರ್ಯ ಸಹ ಆಕೆ ಮಾಡುವುದು ಅನಿವಾರ್ಯ. ಸನ್ಮಾರ್ಗದೆಡೆಗೆ ಸಾಗಲು ಮಕ್ಕಳಿಗೆ ತಾಯಿಯೇ ಪ್ರೇರಣೆ. ಆಕೆ ಉತ್ತಮ ಸಮಾಜ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

Advertisement

ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ವೈದ್ಯ ಮತ್ತು ಇಂಜಿನಿಯರೇ ಆಗು ಎಂದು ಹೇಳುವ ಮೂಲಕ ಅವರ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದಾರೆ. ಇಂದು ದೇಶದಲ್ಲಿ 58 ಲಕ್ಷ ಯುವಕರು ಇಂಜಿನಿಯಗಳಿದ್ದು, ಕೇವಲ 5 ಸಾವಿರ ರೂ. ವೇತನದಲ್ಲಿ ದುಡಿಯಲು ಸಿದ್ಧರಿದ್ದಾರೆ. ಶಿಕ್ಷಣ ಜ್ಞಾನಕ್ಕಾಗಿ ಇರಬೇಕೆ ವಿನಹ ನೌಕರರಿಗಾಗಿ ಅಲ್ಲ. ಹಾಗಾಗಿ ನನ್ನ ಮಗ ಕೊಡುವವನಾಗಬೇಕೆ, ಹೊರತು ಬೇಡುವವನಾಗಬಾರದು ಎಂದು ಅತ್ಮಸ್ಥೈರ್ಯ ತಾಯಂದಿರಲ್ಲಿ ಇರಬೇಕು. ಆಗ ಮಾತ್ರ ಭಾರತ ಮಾತೆ ಜಗನ್ಮಾತೆ ಆಗಲು ಸಾಧ್ಯ ಎಂದು ಕರೆ ನೀಡಿದರು.

ಐಎಎಸ್‌ ಪಾಸ್‌ ಆದವರು ಪಂಜರದ ಹಕ್ಕಿಗಳಿದ್ದಂತೆ. ಪ್ರತಿ ಬಾರಿ 12 ಲಕ್ಷ ಯುವಕರು ಐಎಎಸ್‌ಗಾಗಿ ಪ್ರವೇಶ ಪಡೆದರೆ ಈ ಪೈಕಿ ಪಾಸ್‌ ಆಗುವರು 200 ಜನ ಮಾತ್ರ. ಅದರಲ್ಲಿ ಖುಷಿ ಅನುಭವಿಸುವರು 50 ಜನ ಮಾತ್ರ. ತನ್ನಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಹಾರುವ ಹಕ್ಕಿಗಳಾಗಿ ಬದುಕಬೇಕು ಎಂದು ಕಿವಿ ಮಾತು ಹೇಳಿದರು.

ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕಾಡೆಮಿ ಜಿಲ್ಲಾ ಸಂಚಾಲಕ ಕರ್ನಲ್‌ ಶರಣಪ್ಪ ಸಿಕೆನಪುರೆ, ಗುತ್ತಿಗೆದಾರ ಗುರುನಾಥ ಕೊಳ್ಳುರ್‌, ಗುರುದ್ವಾರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಗ್‌, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶಟಕಾರ ವೇದಿಕೆಯಲ್ಲಿದ್ದರು. ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಶಾಂತಕುಮಾರ ಬಿರಾದಾರ ನಿರೂಪಿಸಿದರು. ಕಾಮಶಟ್ಟಿ ಚಿಕಬಸೆ ವಂದಿಸಿದರು. ನಾಟ್ಯಶ್ರೀ ನೃತ್ಯಾಲಯ ಸೇರಿದಂತೆ ಜಿಲ್ಲೆಯ ಇತರೆ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ದೇಶದಲ್ಲಿರುವ 18 ಕೋಟಿ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ವಿಷಯ ಕುರಿತು ಸಂಸತ್‌ನಲ್ಲಿ ಚರ್ಚೆಯ ವೇಳೆ ಎಲ್ಲ ಸಂಸದರು ಸಹಮತ ವ್ಯಕ್ತಪಡಿಸಿರುವುದು ಬೇಸರದ ಸಂಗತಿ. ನಿರುದ್ಯೋಗಿಗಳಿಗೆ ಭತ್ಯೆ ನೀಡಿದರೆ ಯುವಕರಲ್ಲಿನ ಜ್ಞಾನ, ಬುದ್ದಿ ದುಡಿಮೆ ಸತ್ತು ಹೋಗುತ್ತದೆ. ದುಡಿಯುವ ಜನರು ಮನೆಯಲ್ಲಿ ಕುಳಿತರೆ ದೇಶ ಪ್ರಗತಿ ಸಾಧಿಸದು. ಜಗತ್ತಿನ ನಕಲು ಮಾಡಿದರೆ ಭಾರತ ಮುಂದೆ ಬರುವುದಿಲ್ಲ.
 ಬಸವರಾಜ ಪಾಟೀಲ ಸೇಂಡ, ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next