Advertisement

ಶಬರಿಮಲೆ ವಿವಾದಕ್ಕೆ ಸಂವಿಧಾನದಲ್ಲೇ ಉಪಶಮನ ವಿಧಿ ಇದೆ

12:30 AM Nov 25, 2018 | Team Udayavani |

ಇಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಸಮರ್ಪಕ ಅಂಶವೊಂದು ಮಿಂಚುತ್ತದೆ. ಅಯ್ಯಪ್ಪ ಭಕ್ತರ ಧ್ವನಿಗೆಡಿಸುವ ಹಾಗೂ ಹಿಂದೂ ವಿಚಾರಧಾರೆ, ಸಂಪ್ರದಾಯಕ್ಕೆ ನೇರವಾಗಿ ಲಗ್ಗೆ ಇಡುವಲ್ಲಿ ಕೇರಳದ ಕಮ್ಯುನಿಸ್ಟ್‌ ನಿರೀಶ್ವರವಾದಿ ಸರಕಾರ ಹಾಗೂ ಸುಧಾರಣಾವಾದಿ ಸೋಗಿನ ಘಾತಕ ಶಕ್ತಿಯ ಗುಪ್ತ ಅಜೆಂಡಾ ಕೂಡಾ ಇಲ್ಲಿ ಪ್ರಶ್ನಾರ್ಹ. 

Advertisement

ಪುಣ್ಯಕ್ಷೇತ್ರ ಶಬರಿಮಲೆ ಕುರಿತಾದ ಸುಪ್ರೀಂ ಕೋರ್ಟಿನ ತೀರ್ಪು ನಮ್ಮ ಸಂವಿಧಾನದ ಮೂಲ ರೇಖೆಯ ಒಳಗೇ ಮರುಪರಿಶೀಲನೆಗೆ ಯೋಗ್ಯವಾಗಿದೆ. ಭಾರತ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯ ಪರಿಧಿಯೊಳಗಿನ 25 ಹಾಗೂ 26ನೇ ವಿಧಿಗಳನ್ನು ಒತ್ತಟ್ಟಿಗಿರಿಸಿ, ಆಳವಾಗಿ, ತುಲನಾತ್ಮಕವಾಗಿ ಪರಿಶೀಲಿಸಬೇಕಾಗಿದೆ. ಇಲ್ಲಿ ಆತ್ಯಂತ ಸೂಕ್ಷ್ಮ ಹಾಗೂ ಸಮರ್ಪಕ ಅಂಶವೊಂದು ಮಿಂಚುತ್ತದೆ. ಅವರೊಂದಿಗೆ ಅಯ್ಯಪ್ಪ ಭಕ್ತರ ಧ್ವನಿಗೆಡಿಸುವ ಹಾಗೂ ಹಿಂದೂ ವಿಚಾರಧಾರೆ, ಸಂಪ್ರದಾಯಕ್ಕೆ ನೇರವಾಗಿ ಲಗ್ಗೆ ಇಡುವಲ್ಲಿ ಕೇರಳದ ಕಮ್ಯುನಿಸ್ಟ್‌ ನಿರೀಶ್ವರವಾದಿ ಸರಕಾರ ಹಾಗೂ ಸುಧಾರಣಾವಾದಿ ಸೋಗಿನ ಘಾತಕ ಶಕ್ತಿಯ ಗುಪ್ತ ಅಜೆಂಡಾ ಕೂಡಾ ಇಲ್ಲಿ ಪ್ರಶ್ನಾರ್ಹ. 

ಉತ್ತರದ ಬದರಿ, ಕೇದಾರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ, ಪೂರ್ವದ ಕಾಮಾಕ್ಷಿಯಿಂದ ಪಶ್ಚಿಮದ ಸೋಮನಾಥದವರೆಗೆ ಪುರುಷರಷ್ಟೇ ಸ್ತ್ರೀಯರಿಗೂ ದೇವಮಂದಿರಗಳನ್ನು ಸಂದರ್ಶಿಸುವ ಸಮಾನ ಅವಕಾಶವಿದೆ. ಭಕ್ತಿಯಿಂದ ನಮಿಸುವ ಸ್ವಾತಂತ್ರ್ಯವಿದೆ. ಅಷ್ಟೇಕೆ ಮಾತೃಶಕ್ತಿಯ ಆರಾಧನೆ ಕೂಡಾ ಈ ಮಣ್ಣಿನ ಸಹಸ್ರಾರು ವರ್ಷಗಳ ಪರಂಪರೆ. ಇದನ್ನೇ ನಮ್ಮ ಸ್ವಾತಂತ್ರ್ಯೋತ್ತರ ಭಾರತದ ಸಂವಿಧಾನ ಹಾಗೂ ಅದರ ಸಂರಕ್ಷಣೆಯ ಭಾರ ಹೆಗಲಿಗೇರಿಸಿದ ಸರ್ವೋಚ್ಚ ನ್ಯಾಯಾಲಯ ಕೂಡಾ ಎತ್ತಿ ಹಿಡಿಯುತ್ತಿದೆ. ಇದರ ಜೊತೆಗೆ ಪ್ರತಿಯೊಂದು ತೀರ್ಥಕ್ಷೇತ್ರಗಳಿಗೆ, ದೇವ ಮಂದಿರ, ಮಠಗಳಿಗೆ ಅದರದೇ ಆದ ಚಾರಿತ್ರಿಕ ಹಿನ್ನೆಲೆ, ಪೌರಾಣಿಕ ಸ್ಥಳ ಪುರಾಣ, ದೈವಿಕ ವಿಧಿ ನಿಷೇಧಗಳು ಪರಂಪರಾಗತ ನಂಬಿಕೆಯ ಪ್ರಭೆ ಇದೆ ಎಂಬುದೂ ಗಮನಾರ್ಹ.

ಇವೆಲ್ಲವನ್ನೂ, ಯಾವುದೇ ಬಣ್ಣದ ಕನ್ನಡಕ ಧರಿಸದೆ ಅವಲೋಕಿಸಿದಾಗ ಈ ಶಬರಿಮಲೆ ವಿವಾದದ ಧಾರ್ಮಿಕ ನೆಲೆಗಟ್ಟಿನ ವಾದಕ್ಕೆ ಗಟ್ಟಿ ನೆಲೆ ಸಂವಿಧಾನದ 26 (ಬಿ) ಉಪವಿಧಿ “ಸೂರ್ಯನ ಬೆಳಕಿನಷ್ಟೇ’ ಪ್ರಖರವಾಗಿ ಒಳಗೊಂಡಿದೆ. ಇದನ್ನು ಸಮರ್ಥವಾಗಿ ಸುಪ್ರೀಂಕೋರ್ಟಿನ ಮುಂದೆ ಮರು ಪರಿಶೀಲನಾ ಅರ್ಜಿಯ ಮೂಲಕ ಕೇರಳ ಸರಕಾರ ಯತ್ನಿಸುವುದು ತೀರಾ ಅತ್ಯಗತ್ಯ. ಅಂತಹ ಕಾರ್ಯಕ್ಷಮತೆ ಪ್ರಜಾತಂತ್ರ ವಿಧಾನಕ್ಕೂ ತೀರಾ ಪೂರಕ. ಎಳೆ ಹಾಗೂ ಹಿರಿ ವಯಸ್ಸಿನ ಮಹಿಳೆಯರಿಗೂ ದೇವ ದರ್ಶನದ ಕದ ತೆರೆದಿದೆ. ಕೇವಲ ಮಧ್ಯ ವಯೋಮಿತಿಯ ಸ್ತ್ರೀಯರ ಆಗಮನಕ್ಕೆ ಮಾತ್ರ ಆ ಕ್ಷೇತ್ರೀಯ ನಿಷೇಧವಿದೆ. ಆದರೆ ವ್ಯಕ್ತಿಗತ ಅಯ್ಯಪ್ಪ ಆರಾಧನೆ, ಇತರ ಸ್ಥಳಗಳಲ್ಲಿ ಅಥವಾ ಮನೆಗಳಲ್ಲಿ ತಮ್ಮ ಆರಾಧ್ಯ ದೇವರಾಗಿ ಶಾಸ್ತ ಸ್ಮರಣೆಯೇನೂ ನಿಷಿದ್ಧವಲ್ಲ. 

ಪುನಃ ರಾಜ್ಯಾಂಗ ಘಟನೆಯ ಪುಟದೆಡೆಗೇ ಕ್ಷ-ಕಿರಣ ಬೀರಿದಾಗ 26ನೇ ವಿಧಿ ಹೀಗೆ ತೆರೆದುಕೊಳ್ಳುತ್ತದೆ, “ಸಾರ್ವಜನಿಕ ಶಾಂತಿ, ನೈತಿಕತೆ, ಹಾಗೂ ಆರೋಗ್ಯಕ್ಕೆ (Subject to public order, morality and health) ಚ್ಯುತಿ ಇರದಂತೆ, ಪ್ರತಿಯೊಂದು ಮತೀಯ ಪಂಗಡ (Religious Denomination) ಅಥವಾ ಅದರ ಉಪ ಪಂಗಡಕ್ಕೆ – 1) ಧಾರ್ಮಿಕ ಹಾಗೂ ದತ್ತಿ ಸಂಬಂಧಿತ ಸಂಸ್ಥೆಗಳನ್ನು ಸ್ಥಾಪಿಸಲು ಹಾಗೂ ಅದನ್ನು ನಡೆಸಿಕೊಂಡು ಬರಲು;

Advertisement

2) ಅವುಗಳ ಧಾರ್ಮಿಕ ವಿಷಯಗಳನ್ನು ನಡೆಸಿಕೊಂಡು ಬರಲು (to manage its own affairs in matters of religion) ಹಕ್ಕು ಇದೆ. ಇದೇ ಸ್ಪಷ್ಟ ಆಧಾರದಲ್ಲಿ ಈ ದಾವೆಯ ಮರು ಪರಿಶೀಲನೆಗೆ ಅಲ್ಲಿನ ಸರಕಾರ ಮುಂದಾಗಬೇಕಾಗಿದೆ. ಪ್ರಬಲವಾದ ವಾದ ಮಂಡಿಸಿ, ಸಾಂವಿಧಾನಿಕತೆಯ ಆಧಾರದಲ್ಲೇ ಒಂದು ನಿಖರವಾದ ತಿರುವಿನ ಐತಿಹಾಸಿಕ ತೀರ್ಪು ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಹೊರಬಿದ್ದಂತೆ, ಇಲ್ಲಿಯೂ ಹೊಮ್ಮುವಂತೆ ಯತ್ನಿಸಬೇಕು. ಇಲ್ಲವಾದರೆ, ಮುಂದೆಯೂ ಆಯಾಯ ಕ್ಷೇತ್ರಿಯ ನಂಬಿಕೆಯನ್ನು ಯಥಾವತ್ತಾಗಿ ಸಂರಕ್ಷಿಸುವ ಹೆಜ್ಜೆಯನ್ನು ರಾಷ್ಟ್ರವ್ಯಾಪಿ ಆಧ್ಯಾದೇಶ ಹಾಗೂ ಆ ಬಳಿಕ ಸಂಸತ್ತಿನ ಕಾಯಿದೆಯ ರೂಪದಲ್ಲಿ ಕೇಂದ್ರ ಸರಕಾರ ಆರಿಸಲು ಮುಂದಾಗಬೇಕು.

ಡಾ| ಪಿ. ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next