Advertisement

ವಾರದಲ್ಲಿ ವರದಿ ನೀಡುವಂತೆ ಸೂಚನೆ

12:37 PM Feb 18, 2017 | |

ಬೆಂಗಳೂರು: ಚಲ್ಲಘಟ್ಟ ಕಾಲುವೆ ಬಫ‌ರ್‌ ಪ್ರದೇಶದಲ್ಲಿ ಕಟ್ಟಡಗಳು ತಲೆ ಎತ್ತುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೆರೆ ಒತ್ತುವರಿ ತೆರವು ಸದನ ಸಮಿತಿ ಉಪಸಮಿತಿಯು ಈ ಬಗ್ಗೆ ವಾರದಲ್ಲಿ ಸರ್ವೇ ನಡೆಸಿ ವರದಿ ನೀಡುವಂತೆ ನಗರ ಜಿಲ್ಲಾಧಿಕಾರಿಗೆ ಸೂಚಿಸಿದೆ.

Advertisement

ನಗರದ ವಿವಿಧೆಡೆ ಶುಕ್ರವಾರ ಪರಿಶೀಲನೆ ನಡೆಸಿದ ಶಾಸಕ ಎನ್‌.ಎ.ಹ್ಯಾರಿಸ್‌ ನೇತೃತ್ವದ ಉಪಸಮಿತಿಯು ಕಾಲುವೆ ಸರ್ವೇ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸರ್ವೇ ವರದಿ ಪಡೆದು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತು.

ಮೊದಲಿಗೆ ಚಲ್ಲಘಟ್ಟ ಕಣಿವೆಯು ಎಚ್‌ಎಸ್‌ಆರ್‌ ಲೇಔಟ್‌ ಬಳಿಯ ಅಗರ ಕೆರೆ ಸೇರುವ ಸ್ಥಳದಲ್ಲಿ ಉಪ ಸಮಿತಿಯು ಪರಿಶೀಲನೆ ನಡೆಸಿತು. ಈ ವೇಳೆ ಹ್ಯಾರಿಸ್‌, ಕಾಲುವೆಯ ಸ್ವರೂಪ ನೋಡಿದರೆ ಪ್ರಾಥಮಿಕ ಹಂತದ ಪ್ರಧಾನ ಕಾಲುವೆಯಂತೆ ಕಾಣುತ್ತದೆ. ಆದರೆ ಅಧಿಕಾರಿಗಳು ಇದನ್ನು ದ್ವಿತೀಯ ಹಂತದ ಕಾಲುವೆಯೆಂದು ದಾಖಲಿಸಿದ್ದಾರೆ. ಹಾಗಾಗಿ ಬಫ‌ರ್‌ ಪ್ರದೇಶ ಪ್ರಮಾಣ ಇಳಿಕೆಯಾಗಿದ್ದು, ಕಾಲುವೆಗೆ ಸಮೀಪದಲ್ಲೇ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಂದೇಹ ವ್ಯಕ್ತಪಡಿಸಿದರು.

ಕೆಲ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲೆಂದೇ ಚಲ್ಲಘಟ್ಟ ಪ್ರಾಥಮಿಕ ಕಾಲುವೆಯನ್ನು ದ್ವಿತೀಯ ಹಂತದ ಕಾಲುವೆ ಎಂದು ಗುರುತಿಸಿ ವಂಚಿಸಲಾಗಿದೆ ಎಂದು ದೂರು ಕೇಳಿಬಂದಿತ್ತು. ಚಲ್ಲಘಟ್ಟ ಪ್ರಾಥಮಿಕ ಕಾಲುವೆ ಎಂದು ದೃಢಪಟ್ಟರೆ ಪ್ರತಿಷ್ಠಿತ ಡೆವಲಪರ್‌ ಸಂಸ್ಥೆಯ ವಸತಿ ಸಮುಚ್ಚಯ ಸೇರಿ ಇತರೆ ನಿರ್ಮಾಣ ಹಂತದ ಕಟ್ಟಡಗಳು ಬಫ‌ರ್‌ ಜೋನ್‌ ವ್ಯಾಪ್ತಿಗೆ ಒಳಪಡಲಿವೆ ಎಂದರು.

ಕೂಡಲೇ ಕಾಲುವೆಯ ಸರ್ವೇ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕೆಂದು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಅವರಿಗೆ ಸೂಚನೆ ನೀಡಿದ ಹ್ಯಾರಿಸ್‌, ವರದಿ ಪಡೆದ ನಂತರ ಒಂದೊಮ್ಮೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದ್ವಿತೀಯ ಹಂತದ ಕಾಲುವೆ ಎಂದು ಗುರುತಿಸಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಬಫ‌ರ್‌ ಜೋನ್‌ ವ್ಯಾಪ್ತಿಯಲ್ಲಿದ್ದರೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದರೆ ಅಂತಹ ಅಧಿಕಾರಿಗಳ ವಿವರವನ್ನೂ ನೀಡಬೇಕು ಎಂದು ಜಿಲ್ಲಾಧಿಕಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇಬ್ಬಲೂರು ಕೆರೆ ಪರಿಶೀಲನೆ: ಭಾರಿ ನೊರೆಯಿಂದ ಗುರುವಾರ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದ ಇಬ್ಬಲೂರು ಕೆರೆ ಸ್ಥಳಕ್ಕೆ ಭೇಟಿ ನೀಡಿದ ಉಪಸಮಿತಿಯು ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌, ಬೆಳ್ಳಂದೂರು ಕೆರೆಯಲ್ಲಿ ಭಾರಿ ನೊರೆ ಹಾಗೂ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆರೆಯಲ್ಲಿ ಮಿಥೇನ್‌ ಹಾಗೂ ಸಲರ್‌ ಪ್ರಮಾಣ ಹೆಚ್ಚಾಗಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಸಾಧ್ಯತೆ ಇದೆ. ಪ್ರಯೋಗಾಲಯ ವರದಿ ಪಡೆದ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದರು.

ಬೆಳ್ಳಂದೂರು ಕೆರೆ ಮತ್ತು ಅದಕ್ಕೆ ಸಂಪರ್ಕಿಸುವ ಕಣಿವೆ ವ್ಯಾಪ್ತಿಯಲ್ಲಿರುವ ಬಡಾವಣೆಗಳ ಕೊಳಚೆ ನೀರು ಹಾಗೂ ಕೈಗಾರಿಕೆಗಳ ವಿಷಕಾರಕ ಕಲುಷಿತ ನೀರು ಕಳೆದ 20 ವರ್ಷಗಳಿಂದ ಕೆರೆಗೆ ಹರಿಯುತ್ತಿದೆ. ಹಾಗಾಗಿ ರಾಸಾಯನಿಕ ಅಂಶಗಳು ಕೆರೆಯಲ್ಲಿ ಶೇಖರಣೆಯಾಗಿವೆ. ಜಲಮಂಡಳಿಯು ನಿತ್ಯ 600 ದಶಲಕ್ಷ ಲೀಟರ್‌ ಕೊಳಚೆ ನೀರು ಸಂಸ್ಕರಣಾ ಸಾಮರ್ಥಯದ ಘಟಕ ನಿರ್ಮಿಸಿದ್ದರೂ ಅದರಲ್ಲಿ ಶೇ.50ರಷ್ಟು ಕೊಳಚೆ ನೀರನ್ನಷ್ಟೇ ಸಂಸ್ಕರಿಸಲಾಗುತ್ತಿದೆ ಎಂದರು. ಭೂದಾಖಲೆ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ್‌ ಇತರರು ಉಪಸ್ಥಿತರಿದ್ದರು.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ತನಿಖೆಗೆ ಕೇಂದ್ರ ಸೂಚನೆ
ನವದೆಹಲಿ:
ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ ಸೂಕ್ತ ಕಾರಣ ತಿಳಿದು, ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಂತೆ ಕೇಂದ್ರ ಪರಿಸರ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. “ನಾವು ಈ ಬಗ್ಗೆ ತನಿಖೆಗೆ ಮುಂದಾಗಿದ್ದೇವೆ. ವರದಿ ಕೈಗೆ ಬಂದ ಮೇಲೆ, ಇದರ ಹಿಂದಿನ ಕಾರಣ ಸಂಗ್ರಹಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಪರಿಸರ ಸಚಿವ ಅನಿಲ್‌ ಮಾಧವ್‌ ದವೆ ಹೇಳಿದ್ದಾರೆ.

ಇಬ್ಬಲೂರು ಸಮೀಪದ ಬೆಳ್ಳಂದೂರು ಕೆರೆಯಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ನಾಗರಿಕರು ಭಯಭೀತರಾಗಿದ್ದರು. ಕೆರೆಯ ಸುತ್ತಮುತ್ತ ಬಿಬಿಎಂಪಿ ಕಸ ಸುರಿದಿದ್ದರಿಂದಲೇ ಹೀಗಾಗಿದೆ ಎಂದು ಕೆಲವರು ದೂರಿದ್ದರು. ಈ ಹಿಂದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ಈ ಬಗ್ಗೆ ಪ್ರತಿಕ್ರಿಯಿಸಿ, “ಬಿಬಿಎಂಪಿ, ಬೆಂಗಳೂರು ನೀರು ಪೂರೈಕೆ ಮತ್ತು ತ್ಯಾಜ್ಯ ನಿರ್ವಹಣೆ ಮಂಡಳಿ ಹಾಗೂ ಸಂಬಂಧಪಟ್ಟ ಇತರೆ ಸಂಸ್ಥೆಗಳಿಗೂ ನೋಟಿಸ್‌ ನೀಡಲಾಗಿದೆ’ ಎಂದಿದ್ದಾರೆ.

ರಾಜಕಾಲುವೆ ಸ್ಪತ್ಛಗೊಳಿಸಲು ಮೇಯರ್‌ ಪದ್ಮಾವತಿ ಸೂಚನೆ
ಬೆಂಗಳೂರು:
ಮನೋರಾಯನಪಾಳ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಬೃಹತ್‌ ರಾಜಕಾಲುವೆಯನ್ನು ಒಂದೂವರೆ ತಿಂಗಳಲ್ಲಿ ಸ್ವತ್ಛಗೊಳಿಸುವಂತೆ ಮೇಯರ್‌ ಜಿ. ಪದ್ಮಾವತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜಕಾಲುವೆ ಅಮರ್ಪಕ ನಿರ್ವಹಣೆಯಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಸಾರ್ವಜನಿಕ ರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದಅವರು, ರಾಜಕಾಲುವೆಯಿಂದ ಹರಡುತ್ತಿರುವ ದುರ್ನಾತ, ಕಸದಿಂದ ತುಂಬಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಒಂದೂವರೆ ತಿಂಗಳಲ್ಲಿ ರಾಜಕಾಲುವೆ ಸ್ವತ್ಛಗೊಳಿಸಬೇಕು ಎಂದು ಆದೇಶಿಸಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮಾವತಿ, ನಗರದಲ್ಲಿರುವ ದೇವಸ್ಥಾನಗಳು, ಶಾಲೆಗಳು ಹಾಗೂ ಜನದಟ್ಟಣೆ ಇರುವ ಪ್ರದೇಶಗಳಲ್ಲಿನ ರಾಜಕಾಲುವೆಯನ್ನು ಸ್ವತ್ಛಗೊಳಿಸಿ, ವಾಸನೆ ಬಾರದಂತೆ ಮುಚ್ಚಲಾಗುವುದು. ಸಾರ್ವಜನಿಕರು ಕೂಡ ಕಸ ಮತ್ತು ಇತರೆ ತ್ಯಾಜ್ಯವನ್ನು ಮನೆ ಮುಂದೆಬರುವ ಪಾಲಿಕೆಯ ತಳ್ಳುವಗಾಡಿಗಳಿಗೇ ನೀಡಬೇಕು ಎಂದು ಮನವಿ ಮಾಡಿದರು. 

22ರಂದು ಸಭೆ
ಅಗರ ಕೆರೆಯ ರಾಜ ಕಾಲುವೆಗೆ ಸಂಬಂಧಪಟ್ಟಂತೆ ಚರ್ಚಿಸಲು ಫೆ.22ರಂದು ಮಧ್ಯಾಹ್ನ 3.30ಕ್ಕೆ ಸಭೆ ಕರೆಯಲಾಗುವುದು. ಬಿಬಿಎಂಪಿ, ಬಿಡಿಎ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹ್ಯಾರಿಸ್‌ ತಿಳಿಸಿದರು.

ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಕ್ರಮ
ಬೆಳ್ಳಂದೂರು  ಕೆರೆ ಶುದ್ಧೀಕರಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಟೆಂಡರ್‌ ಆಹ್ವಾನಿಸಿದೆ. ಇನ್ನು 2- 3 ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ಶುದ್ಧೀಕರಿಸಿದ ನೀರನ್ನು ಕೋಲಾರದ ಕೆರೆಗಳಿಗೆ ಹರಿಸುವ ಯೋಜನೆಯೂ ಇದೆ. ಇದಕ್ಕಾಗಿ ವಿದೇಶಿ ತಂತ್ರಜ್ಞಾನ ಬಳಸಲು ಚಿಂತಿಸಲಾಗಿದ್ದು, 2020ರ ವೇಳೆಗೆ ಕೆರೆಯನ್ನು ಸಂಪೂರ್ಣ ಶುದ್ದೀಕರಿಸಲು ಪ್ರಯತ್ನಿಸಲಾಗುವುದು.
-ಎನ್‌.ಎ.ಹ್ಯಾರಿಸ್‌

Advertisement

Udayavani is now on Telegram. Click here to join our channel and stay updated with the latest news.

Next