Advertisement

ಯುವ ಚರ್ಚೆ: ನಿರುದ್ಯೋಗ ನೈಜ ಕಾರಣಗಳೇನು?

07:07 PM May 29, 2020 | Hari Prasad |

ಸ್ವತಂತ್ರ ಭಾರತ 72 ವರ್ಷಗಳನ್ನು ಪೂರೈಸಿ 73ನೇ ವಸಂತಕ್ಕೆ ಕಾಲಿಟ್ಟಿದೆ. ಏಳು ದಶಕಗಳ ಹಿಂದೆ ಭಾರತವನ್ನು ಸ್ವತಂತ್ರಗೊಳಿಸಿಕೊಳ್ಳಲು ಹೋರಾಡಿದ ನಾಯಕರ ಬದ್ಧತೆ ಮತ್ತು ತ್ಯಾಗದ ಫ‌ಲವಾಗಿ ಇಂದು ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಆದರೆ, ಸ್ವಾತಂತ್ರ್ಯ ಅನಂತರದ ಇಷ್ಟು ವರ್ಷಗಳ ಅವಧಿಯಲ್ಲಿ ಭಾರತ ತನ್ನೊಳಗಿನ ಸಮಸ್ಯೆಗಳಿಂದ ಮುಕ್ತಿ ಪಡೆದಿದೆಯೇ? ಬಿಕ್ಕಟ್ಟುಗಳಿಂದ ಸ್ವತಂತ್ರವಾಗಿದೆಯೇ ಎಂದು ಪರಾಮರ್ಶಿಸಿದರೆ ಭಾರತವನ್ನು ಇಂದಿಗೂ ಕಾಡುತ್ತಿರುವ ಹಲವು ಸಮಸ್ಯೆಗಳ ಅನಾವರಣವಾಗುತ್ತದೆ. ಬಡತನ, ಹಸಿವು, ಭ್ರಷ್ಟಾಚಾರ, ನಿರುದ್ಯೋಗ ಹೀಗೆ ಕೆಲವು ಜೀವಂತ ಸಮಸ್ಯೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಅದರಲ್ಲಿಯೂ ನಿರುದ್ಯೋಗ ಸಮಸ್ಯೆ ಎನ್ನುವುದು ಬಿಗಡಾಯಿಸುತ್ತಲೇ ಇದ್ದು ಇನ್ನಷ್ಟು ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತಿದೆ. ಜನರ ಕೈಗೆ ಉದ್ಯೋಗ ಲಭಿಸಿದರೆ ಉಳಿದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಹಾಗಾದರೆ, ನಿರುದ್ಯೋಗ ಸಮಸ್ಯೆಗೆ ನೈಜ ಕಾರಣವೇನು? ಯುವ ಜನತೆ ನಿರುದ್ಯೋಗದ ಕುರಿತು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ.

Advertisement

ಅಭಿಪ್ರಾಯ 01: ಎಂಜಿನಿಯರ್‌, ವೈದ್ಯಕೀಯ, ಪತ್ರಿಕೋದ್ಯಮ ಮೊದಲಾದ ವೃತ್ತಿ ಶಿಕ್ಷಣದಲ್ಲಿ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗಬೇಕೇ ವಿನಾಃ ಹೆಚ್ಚು ಪೂರೈಕೆ ಸಲ್ಲದು. ಸದ್ಯ ನಮ್ಮಲ್ಲಿ ಜನಸಂಖ್ಯೆ ಹೆಚ್ಚಾದ ಪರಿಣಾಮ ಹೆಚ್ಚು ಪದವೀಧರರರು ಹೊರಗೆ ಬರುತ್ತಿದ್ದಾರೆ. ಶೈಕ್ಷಣಿಕ ವಲಯ ಹಾಗೂ ಔದ್ಯೋಗಿಕ ವಲಯ ನಿರಂತರ ಸಂಪರ್ಕದಲ್ಲಿದ್ದರೆ ಇದನ್ನು ನಿಭಾಯಿಸಿಬಹುದು.

ಅಭಿಪ್ರಾಯ 02: ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತಿದೆ. ಇಂದು ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾಗಿ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಕೂಡ. ಆದರೆ, ಗ್ರಾಮೀಣ ಭಾಗದ ಬಹುತೇಕ ಹೆಣ್ಣು ಮಕ್ಕಳು ವಿದ್ಯೆ ಪಡೆಯುವುದಕ್ಕೆ ಮಾತ್ರ ಸೀಮೀತವಾಗುತ್ತಿದ್ದಾರೆಯೇ ಹೊರತು ಉದ್ಯೋಗಸ್ಥರಾಗುತ್ತಿಲ್ಲ. ಹೆಣ್ಣುಮಕ್ಕಳು ದುಡಿಯುವ ಅವಶ್ಯಕತೆ ಇಲ್ಲ ಎಂಬ ಮನಃಸ್ಥಿತಿ ಇದಕ್ಕೆ ಮೂಲ ಕಾರಣ. ಅದರಲ್ಲೂ ಹಳ್ಳಿಗಳಲ್ಲಿರುವ ಹೆಣ್ಣು ಮಕ್ಕಳು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಾರಣವಾದ ಮನಃಸ್ಥಿತಿಯನ್ನು ಬದಲಾಯಿಸುವುದು ಅನಿವಾರ್ಯ.

ಅಭಿಪ್ರಾಯ 03: ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರೆ ಅಭಿವೃದ್ಧಿ ಅನ್ನುವುದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಲಯಗಳಲ್ಲಿ ಆಗುತ್ತಿಲ್ಲ. ಬದಲಾಗಿ ಜನಸಂಖ್ಯೆಯಲ್ಲಿ ವೃದ್ಧಿಯಾಗುತ್ತಿದೆ. ಜನಸಂಖ್ಯೆಯ ನಿಯಂತ್ರಣಕ್ಕೆ ಸರಕಾರ ಹಲವಾರು ಮಾಹಿತಿ ಕಾರ್ಯಕ್ರಮಗಳೊಂದಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದರೂ ಅದು ಫ‌ಲ ಕೊಡುತ್ತಿಲ್ಲ. ಹೀಗೆ ಜನಸಂಖ್ಯೆ ಒಂದೇ ಸಮನೆ ಏರುತ್ತಿರುವುದರಿಂದ ಅಷ್ಟೂ ಜನರ ಕೈಗಳಿಗೆ ಉದ್ಯೋಗ ನೀಡುವುದು ಕುಂಠಿತಗೊಂಡಿದೆ. ಇದು ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳಲು ಒಂದು ಕಾರಣವಾಗಿದೆ. ಇದರಿಂದ ದೇಶದ ಸಂಪನ್ಮೂಲ ಹೆಚ್ಚು ಖರ್ಚಾಗುತ್ತದೆ. ಇದರಿಂದ ಉದ್ಯೋಗದ ಸೃಷ್ಠಿ ಆಗದೇ, ಜನ ಸಂಖ್ಯೆ ವೃದ್ಧಿಯಾಗುತ್ತಿರುವುದು ನಿರುದ್ಯೋಗ ಸಮಸ್ಯೆಗೆ ಕಾರಣ.

ಅಭಿಪ್ರಾಯ 04: ಪ್ರಾದೇಶಿಕವಾರು ಉದ್ಯೋಗ ಸೃಷ್ಟಿ ಮಾಡುವುದೂ ಬಹುಮುಖ್ಯ ಕೆಲಸ. ಯಾವುದೇ ಉದ್ಯೋಗವಿದ್ದರೂ ಅಲ್ಲಿನ ಸ್ಥಳೀಯರಿಗೆ ಆದ್ಯತೆಯನ್ನು ನೀಡಲೇಬೇಕೆಂಬ ನಿಯಮವೂ ಜಾರಿಯಾಗಬೇಕು. ಜತೆಗೆ ಸರಕಾರ ಸಣ್ಣ ಕೈಗಾರಿಕೆಗಳನ್ನು ಬೆಳೆಸುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಉದ್ಯೋಗವನ್ನು ಅರಸಿಕೊಂಡು ಪರ ಊರಿಗೆ ಜನರು ತೆರಳುತ್ತಾರೆ. ಇದು ನಿಲ್ಲಬೇಕು.

Advertisement

ಅಭಿಪ್ರಾಯ 05: ‘ಮೇಕ್‌ ಇನ್‌ ಇಂಡಿಯಾ’ ಯೋಜನೆಗೆ ಸರಕಾರ ಹೆಚ್ಚು ಒತ್ತು ನೀಡಬೇಕು. ಯಾವುದೇ ವಸ್ತುಗಳು ಭಾರತದಲ್ಲೇ ಉತ್ಪಾದನೆ ಆಗುತ್ತದೆ ಎಂದರೆ ಅದರಿಂದಾಗಿ ಸ್ವದೇಶಿಗರೇ ಹೆಚ್ಚು ಉದ್ಯೋಗ ಅವಕಾಶಗಳನ್ನು ಪಡೆಯುತ್ತಾರೆ. ಅದರ ಜತೆಗೆ ದೇಶೀಯ ಉದ್ಯಮಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗುತ್ತದೆ.

ಅಭಿಪ್ರಾಯ 06: ಆರ್ಥಿಕವಾಗಿ ಸಬಲರಾಗಿರುವವರು ಸಮಾಜದಲ್ಲಿ ಹೇಗೋ ಒಂದು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಬಡವರಿಗೆ ಮಾತ್ರ ಅಂತಹ ಪರಿಸ್ಥಿತಿ ಇಲ್ಲ. ಭ್ರಷ್ಟಾಚಾರ, ಲಂಚ ಬಾಕರು ಇರುವ ಸಮಾಜದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪರದಾಡಬೇಕಾದ ಸ್ಥಿತಿ ಇದೆ. ರಾಜಕೀಯ ಬಲ, ಹಣಬಲ ಅಥವಾ ಇನ್ನಾವುದೇ ರೀತಿಯ ಪ್ರಭಾವ ಇರದವರು ತೆರೆಮರೆಯಲ್ಲೇ ಉಳಿದುಬಿಡುತ್ತಾರೆ. ಅಂತಹವರನ್ನು ಮುಂದೆ ತಂದು ಉದ್ಯೋಗ ಕಲ್ಪಿಸುವ ಕೆಲಸ ಸರಕಾರದ ವತಿಯಿಂದ ನಡೆದರೆ, ನಿರುದ್ಯೋಗವನ್ನು ಸಂಭಾಳಿಸಿಕೊಂಡು ಹೋಗಬಹುದು.

ಅಭಿಪ್ರಾಯ 07: ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಆದರೆ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ? ಓಡುತ್ತಿರುವ ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಉನ್ನತೀಕರಣಗೊಳ್ಳುತ್ತಿದೆಯೇ? ಎಂಬುದನ್ನು ಆಲೋಚಿಸಲೇಬೇಕಿದೆ. ಶಿಕ್ಷಣ ಪಡೆದವರೆಲ್ಲರೂ ಉದ್ಯೋಗಸ್ಥರಾಗುತ್ತಿಲ್ಲ, ಶಿಕ್ಷಣ ಉದ್ಯೋಗಕ್ಕೆ ಬೇಕಾದ ಕೌಶಲವನ್ನು ಪೂರೈಸುವ ಬದಲು ಅಂಕಗಳಿಕೆಗೆ ಸೀಮಿತವಾಗುತ್ತಿದೆ ಎಂಬುದು ಕಹಿ ಸತ್ಯ.

ಅಭಿಪ್ರಾಯ 08: ಇಂದಿಗೂ ಹೆಚ್ಚಿನ ವಿದ್ಯಾರ್ಥಿಗಳು ಮನೆಯವರ ಇಚ್ಛೆಗಾಗಿ, ಅಂಕಗಳಿಕೆಗಾಗಿ ಓದುತ್ತಿದ್ದಾರೆಯೇ ವಿನಾ ತಮ್ಮ ಆಸಕ್ತಿ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಅರಿತು ಓದುವವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ತಳಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸಿದರೆ ನಿರುದ್ಯೋಗ ಸಮಸ್ಯೆಯ ಪರಿಹಾರವಾಗಬಹುದು.

ಅಭಿಪ್ರಾಯ 09: ಯುವಜನತೆ ಹೆಚ್ಚಿರುವ ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕೂಡಲೇ ಉದ್ಯೋಗ ಸಿಗುವಂತಹ ಸನ್ನಿವೇಶ ಸೃಷ್ಟಿಯಾಗಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಅರೆಕಾಲಿಕ ಉದ್ಯೋಗಗಳನ್ನು ಅವಲಂಬಿಸಿದರೆ ಓದಿನ ಜತೆಗೆ ದುಡಿಮೆಯೂ ಆಗುತ್ತದೆ. ಜತೆಗೆ ಅನುಭವವೂ ದೊರಕಿ, ಪ್ರಪಂಚ ಜ್ಞಾನವೂ ಹೆಚ್ಚುತ್ತದೆ. ಆದರೆ ವಿದ್ಯಾಬ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಅಭಿಪ್ರಾಯ 10: ಉದ್ಯೋಗ ಎಂಬುದನ್ನು ಭಾರತೀಯರು ಹೇಗೆ ಪರಿಗಣಿಸುತ್ತಾರೆ ಎನ್ನುವುದೂ ಮುಖ್ಯ. ಭಾರತದ ಬೆನ್ನೆಲುಬು ಕೃಷಿ. ಆದರೆ ಕೃಷಿಯನ್ನು ಉದ್ಯೋಗ ಎಂದು ಪರಿಗಣಿಸುವ ಮನಸ್ಥಿತಿ ಬಹುತೇಕರಲ್ಲಿ ಇಲ್ಲ. ಯುವಕರು ಕೃಷಿಯಲ್ಲೇ ಮುಂದುವರಿಯುತ್ತೇವೆಂದು ಬಯಸಿದರೆ ಅವರನ್ನು ನಿರುದ್ಯೋಗಿಗಳಂತೆಯೇ ನೋಡಲಾಗುತ್ತದೆ.

ಜತೆಗೆ ಕೃಷಿಯಲ್ಲಿ ಪ್ರತೀ ತಿಂಗಳ ಅಂತ್ಯಕ್ಕೆ ಸಂಬಳ ಬಂದು ಬೀಳುವುದಿಲ್ಲವಾದ್ದರಿಂದ ಬಹುತೇಕರ ಪಾಲಿಗೆ ಅದು ಉದ್ಯೋಗ ಎನ್ನಿಸುವುದಿಲ್ಲ. ಕೃಷಿ ಮಾಡುವವರು ಕೃಷಿಯ ಜತೆ ಇನ್ನೊಂದು ಉದ್ಯೋಗವನ್ನು ಅವಲಂಬಿಸಬೇಕು ಎಂಬ ಅನಿವಾರ್ಯತೆಯನ್ನು ಹೋಗಲಾಡಿಸಿ ಕೃಷಿಗೆ ಪೂರ್ಣಪ್ರಮಾಣದ ಉತ್ತೇಜನ ನೀಡಬೇಕು. ಇದರಿಂದಾಗಿ ಕೃಷಿಯೂ ಉಳಿಯುತ್ತದೆ ಉದ್ಯೋಗದ ಸೃಷ್ಟಿಯೂ ಆಗುತ್ತದೆ.

ಅಭಿಪ್ರಾಯ 11: ಭಾರತೀಯರಲ್ಲಿ ಹಾಸು ಹೊಕ್ಕಾಗಿರುವ ಮೇಲು-ಕೀಳು ಮನಸ್ಥಿತಿ ದೂರವಾಗಬೇಕು. ಪ್ರತಿ ಕೆಲಸವೂ ಮುಖ್ಯ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಯಾವುದೋ ಹಿಂಜರಿಕೆಯ ನೆಪವೊಡ್ಡಿ ಕೆಲಸದಿಂದ ವಂಚಿತರಾಗುವವರೂ ಇದ್ದಾರೆ. ಎಲ್ಲ ಉದ್ಯೋಗವೂ ಸಮಾನ ಎಂಬುದನ್ನು ಸಾರುವುದು ಅನಿವಾರ್ಯ.


ಚರ್ಚೆಯಲ್ಲಿ ಭಾಗವಹಿಸಿದವರು SDM ಕಾಲೇಜಿನ ವಿದ್ಯಾರ್ಥಿಗಳು: ಇತಿಹಾಸ್‌, ಶರತ್‌, ಶೃತಿ ಹೆಗಡೆ, ಪ್ರೀತಿ, ಸಂಧ್ಯಾ.


ನಿರೂಪಣೆ: ಸ್ಕಂದ ಆಗುಂಬೆ

Advertisement

Udayavani is now on Telegram. Click here to join our channel and stay updated with the latest news.

Next