Advertisement

ಎಡೆ ಬಿಡದೆ ಸುರಿದ ಮಳೆ; ಗಡಿ ಭಾಗದಲ್ಲಿ ಉಕ್ಕಿ ಹರಿಯುತ್ತಿವೆ ನದಿಗಳು

05:55 PM Jul 24, 2024 | Team Udayavani |

ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೃಷ್ಣಾ, ದೂಧಗಂಗಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದೆ. ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇದುವರೆಗೆ 25 ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಚಾರ ಕಡಿತಗೊಂಡಿದೆ.

Advertisement

ಕೃಷ್ಣಾ, ದೂಧಗಂಗಾ ಜಲಾನಯನ ಪ್ರದೇಶವಾದ ಕೊಯ್ನಾ, ಮಹಾಬಳೇಶ್ವರ, ಉಮದಿ, ಕಣೇರ್‌, ದೂಮ್‌, ನವಜಾ,
ಕಾಳಮ್ಮವಾಡಿ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಬಂದರೆ ದೂಧಗಂಗಾ ನದಿ ಅಪಾಯ ಮಟ್ಟ ಮೀರಿ ಹರಿಯ ತೊಡಗಿದೆ. ದೂಧಗಂಗಾ ನದಿಗೆ ಈಗ ಬರುವ ನೀರಿನ ಪ್ರಮಾಣ ಎರಡು ಅಡಿಯಷ್ಟು ಹೆಚ್ಚಾದರೆ ಅಪಾಯಮಟ್ಟ ತಲುಪಲಿದೆ.

ದೂಧಗಂಗಾ ನದಿ ಪ್ರವಾಹದಿಂದ ಕಾರದಗಾ-ಬೋಜ, ಮಲಿಕವಾಡ-ದತ್ತವಾಡ, ವೇದಗಂಗಾ ನದಿಯಿಂದ ಭೋಜವಾಡಿ-ನಿಪ್ಪಾಣಿ, ಸಿದ್ನಾಳ-ಅಕ್ಕೋಳ, ಭಾರವಾಡ-ಕುನ್ನೂರ, ಭೋಜ-ಕುನ್ನೂರ, ಜತ್ರಾಟ-ಭೀವಸಿ, ಕೃಷ್ಣಾ ನದಿಯಿಂದ ಬಾವನಸವದತ್ತಿ-ಮಾಂಜರಿ, ಹಾಲಹಳ್ಳ, ಚಿಂಚಲಿ-ಬಿರಡಿ, ಕುಡಚಿ, ಉಗಾರ ಖುರ್ದ-ಕುಡಚಿ ಸೇತುವೆಗಳು, ಮಿರಜ್‌- ಜಮಖಂಡಿ ರಸ್ತೆ ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ.ಘಟಪ್ರಭಾ ನದಿ ಪ್ರವಾಹದಿಂದ ಚಿಗಡೊಳ್ಳಿ- ನಲ್ಲಾನಟ್ಟಿ, ಗೋಕಾಕ ಹಿಲ್‌-
ಶಿಂಗಳಾಪುರ, ಗೋಕಾಕ-ಲೊಳಸೂರ, ಮುನ್ಯಾಳ -ಪಿವಿ ಹುಣಶ್ಯಾಳ, ಪಟಗುಂಡಿ-ತಿಗಡಿ, ಸುಣ ಧೋಳಿ-ಮೂಡಲಗಿ, ಅವರಾದಿ-ಮಹಾಲಿಂಗ ಪುರ, ಉದಗಟ್ಟಿ- ವಢೇರಹಟ್ಟಿ, ಶೆಟ್ಟಿಹಳ್ಳಿ- ಮಾರವಳ್ಳಿ, ಹಿರಣ್ಯಕೇಶಿ ನದಿಯಿಂದ ಅರ್ಜುನ ವಾಡ-ಕೋಚರಿ, ಸಂಕೇಶ್ವರ-ನದಿಗಳಲ್ಲಿ, ಕುರಣಿ- ಕೋಚರಿ, ಯರನಾಳ-ಹುಕ್ಕೇರಿ, ಮಲಪ್ರಭಾ ನದಿ ಪ್ರವಾಹದಿಂದ ಚಿಕ್ಕಹಟ್ಟಿಹೋಳಿ-ಚಿಕ್ಕಮುನ್ನೋಳಿ ನಡುವಿನ ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಆದರೆ ಪರ್ಯಾಯ ಮಾರ್ಗಗಳು ಇರುವುದರಿಂದ ಗ್ರಾಮದ ಜನರಿಗೆ ನಿತ್ಯ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಈಗಾಗಲೇ ಚಿಕ್ಕೋಡಿ ಉಪವಿಭಾಗದಲ್ಲಿ ಸಂಭವನೀಯ ನೆರೆ ಭೀತಿ ಎದುರಾಗಿದೆ. ಇನ್ನೂ 1ಲಕ್ಷ ಕ್ಯೂಸೆಕ್‌ ನೀರು ಬಂದರೆ ಪ್ರವಾಹ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 1.20ಲಕ್ಷ ಕ್ಯೂಸೆಕ್‌ ನೀರು ಹರಿದು ಬಂದರೆ, ದೂಧಗಂಗಾ, ವೇದಗಂಗಾ ನದಿಗೆ 31 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಒಟ್ಟು ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1.51ಲಕ್ಷ ಕ್ಯೂಸೆಕ್‌ ನೀರು ಹರಿದು ಹಿಪ್ಪರಗಿ ಬ್ಯಾರೇಜ್‌ಗೆ ಹೋಗುತ್ತಿದೆ. ಹಿಪ್ಪರಗಿ ಬ್ಯಾರೇಜ್‌ ದಿಂದ 1.21ಲಕ್ಷ ಕ್ಯೂಸೆಕ್‌ ನೀರು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ ಎಂದು ತಹಶೀಲ್ದಾರ್‌ ಸಿ.ಎಸ್‌.ಕುಲಕರ್ಣಿ ತಿಳಿಸಿದ್ದಾರೆ.

Advertisement

ಸಾವಂತವಾಡಿ ಮತ್ತು ಅಂಬೋಲಿ ಘಟ್ಟ ಪ್ರದೇಶದಲ್ಲಿ ಮಳೆಯಬ್ಬರ ಸ್ವಲ್ಪ ಕಡಿಮೆಯಾಗಿದೆ. ನೀರಿನ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಖಾನಾಪುರ ತಾಲೂಕಿನ ಕಣಕುಂಬಿ, ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದೆ. ನೀರು ಹರಿವಿನ ಪ್ರಮಾಣ ಇಳಿಕೆಯಾಗಿದೆ. ಈಗ ಮಲಪ್ರಭಾ ನದಿ ಮೂಲಕ ಜಲಾಶಯಕ್ಕೆ 11 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಒಟ್ಟು 2079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2064 ಅಡಿ ನೀರು ಸಂಗ್ರಹವಾಗಿದೆ.

ಮಾರ್ಕಂಡೇಯ ನದಿಗೆ ನಿರ್ಮಿಸಿರುವ ಮಾರ್ಕಂಡೇಯ ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತ ತಲುಪಿದೆ. ಒಟ್ಟು 3.696
ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಪ್ರತಿಶತ 88 ತುಂಬಿದೆ. ಜಲಾಶಯಕ್ಕೆ 4338 ಕ್ಯೂಸೆಕ್‌ ನೀರು ಬರುತ್ತಿದ್ದು, 4083 ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರಗಡೆ ಬಿಡಲಾಗುತ್ತಿದೆ.

ನದಿ ತೀರದ ತೋಟಪಟ್ಟಿ ಜನ ಸ್ಥಳಾಂತರ:
ದಿನದಿಂದ ದಿನಕ್ಕೆ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನದಿ ತೀರದ ಪ್ರದೇಶದ ತೋಟಪಟ್ಟಿ ಜನವಸತಿ ಪ್ರದೇಶಕ್ಕೆ ದೂಧಗಂಗಾ ನದಿ ನೀರು ನುಗ್ಗಿರುವ ಪರಿಣಾಮ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮುಲ್ಲಾನಕ್ಕಿ ಜನವಸತಿ ಪ್ರದೇಶದ ಜನ ಸುರಕ್ಷಿತ ಸ್ಥಳಕ್ಕೆ ಬರುತ್ತಿದ್ದಾರೆ. ಕೃಷ್ಣಾ, ದೂಧಗಂಗಾ, ವೇದ ಗಂಗಾ ನದಿ ತೀರದಲ್ಲಿರುವ ಜನರು ದನಕರುಗ ಳೊಂದಿಗೆ ಎತ್ತರದ ಪ್ರದೇಶಕ್ಕೆ ಬರುತ್ತಿದ್ದಾರೆ.

ಜಲಾಶಯ ನೀರಿನ ಮಟ್ಟ: ಕೋಯ್ನಾ 105 ಟಿಎಂಸಿಯಲ್ಲಿ 64.55 ಟಿಎಂಸಿ, ಧೂಮ್‌-13.50  ಟಿಎಂಸಿಯಲ್ಲಿ 6.63, ಕಣೇರ 10.10 ಟಿಎಂಸಿಯಲ್ಲಿ 6.11, ವಾರಣಾ 34.40 ಟಿಎಂಸಿಯಲ್ಲಿ 28.15 ಕಾಳಮ್ಮವಾಡಿ 25.40 ಟಿಎಂಸಿಯಲ್ಲಿ 16.72, ರಾಧಾನಗರಿ 8.36 ಟಿಎಂಸಿಯಲ್ಲಿ 7.36 ಟಿಎಂಸಿ, ಆಲಮಟ್ಟಿ 123.08 ಟಿಎಂಸಿಯಲ್ಲಿ 92 ಟಿಎಂಸಿ ನೀರು ಸಂಗ್ರಹವಾಗಿದೆ.

ಮಳೆ ವಿವರ: ಮಹಾರಾಷ್ಟ್ರ ಜಲಾನಯನ ಪ್ರದೇಶವಾದ ಕೋಯ್ನಾ-163 ಮಿಮೀ, ವಾರಣಾ-110 ಮಿಮೀ, ಕಾಳಮ್ಮವಾಡಿ-109
ಮಿಮೀ, ಮಹಾಬಳೇಶ್ವರ-140 ಮಿಮೀ, ನವಜಾ-145ಮಿಮೀ, ರಾಧಾನಗರಿ-137 ಮಿಮೀ, ಸಾಂಗಲಿ-27 ಮಿಮೀ, ಕೊಲ್ಲಾಪೂರ-35 ಮಿಮೀ ಮಳೆ ಆಗಿದೆ.  ಚಿಕ್ಕೋಡಿ-28. ಮಿಮೀ, ಅಂಕಲಿ-12.2 ಮಿಮೀ, ನಾಗರಮುನ್ನೊಳ್ಳಿ-11.4 ಮಿಮೀ,
ಸದಲಗಾ-13.8, ಜೋಡಟ್ಟಿ-4.2 ಮಿಮೀ ಮಳೆಯಾಗಿದೆ.

ಮಳೆಯಿಂದ ಈತನಕ ಐದು ಜನ ಸಾವು
ಜಿಲ್ಲೆಯಲ್ಲಿ ಕಳೆದ ಜೂನ್‌ದಿಂದ ಇದುವರೆಗೆ ಐದು ಜನರು ಮಳೆಯಿಂದ ಮೃತಪಟ್ಟಿದ್ದಾರೆ.ಒಟ್ಟು ಮೂರು ಮನೆಗಳು ಸಂಪೂರ್ಣ ಕುಸಿದಿದ್ದರೆ, 46 ಮನೆಗಳು ತೀವ್ರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. 183 ಮನೆಗಳು ಭಾಗಶಃ ಕುಸಿದಿವೆ. 51 ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆ ಮತ್ತು 12.14 ಹೆಕ್ಟೇರ್‌ ಪ್ರದೇಶದ ತೋಟಗಾರಿಕೆ ಬೆಳೆಗಳು ಮಳೆಯಿಂದ ಹಾನಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next