Advertisement

ಮಳೆ ನಿಂತರೂ ನೆಮ್ಮದಿ ಕದಡಿದ ನೆರೆ

11:24 AM Sep 05, 2017 | Team Udayavani |

ಬೆಂಗಳೂರು: ಉಕ್ಕಿಹರಿದ ಕೆರೆಗಳು, ದ್ವೀಪಗಳಾದ ಬಡಾವಣೆಗಳು, ಧರೆಗುರುಳಿದ ಮರಗಳು, ರಾತ್ರಿಯಿಡೀ
ಜಾಗರಣೆ ಮಾಡಿದ ಜನ, ಶಾಲೆಗಳಿಗೆ ರಜೆ ಘೋಷಣೆ, ಜನಪ್ರತಿನಿಧಿಗಳ ಮೇಲೆ ತಿರುಗಿಬಿದ್ದ ಜನ.

Advertisement

ಮಳೆ ನಿಂತ ಮೇಲೆ ನಗರದಲ್ಲಿ ಕಂಡುಬಂದ ಸ್ಥಿತಿ ಇದು. ಕಳೆದ ಮೂರು ದಿನಗಳ ಮಳೆ ಅಬ್ಬರಕ್ಕೆ ಸೋಮವಾರ ತಾತ್ಕಾಲಿಕ ಬ್ರೇಕ್‌ ಬಿದ್ದಿತು. ಹಾಗಂತ, ನಿಟ್ಟುಸಿರು ಬಿಡುವಷ್ಟರಲ್ಲಿ ನೆರೆ ನೆಮ್ಮದಿ ಕದಡಿತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಬಹುತೇಕ ಜನರ ಒಂದು ದಿನದ ದುಡಿಮೆಯೂ ಹೋಯಿತು.

ರಾತ್ರಿಯಿಡೀ ಸುರಿದ ಮಳೆಗೆ ಕೆಲವೆಡೆ ಕೆರೆಗಳ ಕೋಡಿ ಒಡೆದು, ಇನ್ನು ಹಲವೆಡೆ ಕೋಡಿ ಬಿದ್ದು ತಗ್ಗುಪ್ರದೇಶಗಳು
ಸೇರಿದಂತೆ ನಗರದ ಹತ್ತಾರು ಕಡೆಗಳಲ್ಲಿ ಏಕಕಾಲದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿತು. ನಿದ್ರೆಯಲ್ಲಿದ್ದ ಜನರಿಗೆ ಈ “ದಿಢೀರ್‌ ನೆರೆ’ ಕಂಗೆಡಿಸಿತು. ಮಕ್ಕಳು-ಮರಿಗಳು, ಹಿರಿಯ ನಾಗರಿಕರು, ಮಹಿಳೆಯರೆಲ್ಲರೂ ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕುವಲ್ಲಿ ನಿರತರಾದರು. ಆದರೆ, ರಸ್ತೆಗಳಲ್ಲೂ ನೀರು ಆವರಿಸಿದ್ದರಿಂದ ಜನರ ಈ ಪ್ರಯತ್ನ ನಿರರ್ಥಕವಾಯಿತು.

ಇತ್ತ ಬೆಳಗಿನಜಾವ ಬಿಬಿಎಂಪಿ ನಿಯಂತ್ರಣ ಕೊಠಡಿಗಳಿಗೆ ಕರೆಗಳ ಸುರಿಮಳೆಯೇ ಹರಿದುಬಂದಿತ್ತು. ದೂರುಗಳನ್ನು ಆಧರಿಸಿ ಪಾಲಿಕೆಯ ವಿಪತ್ತು ನಿರ್ವಹಣಾ ಮಂಡಳಿ ಸದಸ್ಯರು, ಅಗ್ನಿಶಾಮಕ ದಳದ ಸಹಯೋಗದಲ್ಲಿ ತ್ವರಿತಗತಿಯಲ್ಲಿ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದರು. ಆದರೆ, ಸಕ್ಕಿಂಗ್‌ ಯಂತ್ರಗಳ ಮೂಲಕ ರಸ್ತೆ ಆವರಿಸಿದ್ದ ನೀರನ್ನು ಟ್ಯಾಂಕ್‌ಗಳಿಗೆ ತುಂಬುವ ಕೆಲಸದಲ್ಲಿ ತೊಡಗಿದರು. 

ಶೇಮ್‌ ಶೇಮ್‌, ಮಳೆಯಿಂದಾಗಿ ಸಾಕಷ್ಟು ಅನಾಹುತವಾಗಿದ್ದರೂ, ಸ್ಥಳಕ್ಕೆ ಬಾರದ ಜನಪ್ರತಿನಿಧಿಗಳ ವಿರುದ್ಧ ಸಾರಾಯಿಪಾಳ್ಯ, ಫಾತಿಮಾ ಗಾರ್ಡನ್‌ ಸೇರಿದಂತೆ ಸುತ್ತಲಿನ ಪ್ರದೇಶಗಳ ನಿವಾಸಿಗಳು ರಸ್ತೆಗಿಳಿದರು.

Advertisement

ಬಿಬಿಎಂಪಿ ವಿರುದ್ಧ “ಶೇಮ್‌… ಶೇಮ್‌…’ ಎಂದು ಧಿಕ್ಕಾರ ಹಾಕಿದರು. ಸ್ಥಳದಲ್ಲೇ ಇದ್ದ ರಾಜಕೀಯ ನಾಯಕರ ಬ್ಯಾನರ್‌ಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ 1 ಕೀ.ಮೀ.ವರೆಗೆ ಸಂಚಾರದಟ್ಟಣೆ ಉಂಟಾಯಿತು. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹೆಣ್ಣೂರು ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತುಕತೆ ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವಾಸಿ ಸುನಂದಾ, ಮಗುವಿಗೆ ಹಾಲು ತರಲು ಸಾಧ್ಯವಾಗುತ್ತಿಲ್ಲ. ವೋಟು
ಹಾಕಿದ ಮೇಲೆ ನಮ್ಮನ್ನು ಕೇಳುವವರೂ ಇಲ್ಲ. ಇಂತಹ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಜಾರ್ಜ್‌ಗೆ ಚಾರ್ಜ್‌!: ಮತ್ತೂಂದು ಮಳೆ ಅವಾಂತರ ಪ್ರದೇಶ ನಂದಗೋಕುಲ ಬಡಾವಣೆ ಪರಿಶೀಲನೆಗೆ ಆಗಮಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಸ್ಥಳೀಯ ಕಾರ್ಪೋರೇಟರ್‌ ಸದಸ್ಯ ನಂದಕುಮಾರ್‌ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಸಚಿವರು ಖುದ್ದು ಸ್ಥಳೀಯ ನಿವಾಸಿಗಳು ಕರೆದುಕೊಂಡು ಕೊಳಚೆ ನೀರಿಗೆ ಇಳಿಸಿ, ಮಳೆ ಅನಾಹುತಗಳ
ಮನದಟ್ಟು ಮಾಡಿದ ಪ್ರಸಂಗವೂ ನಡೆಯಿತು. ಚುನಾವಣೆಗೆ ಬಂದಾಗ ಜನಪ್ರತಿನಿಧಿಗಳು ಬಂದು
ಮತದ ಭಿಕ್ಷೆ ಕೇಳುತ್ತಾರೆ. ರಾಜಕಾಲುವೆಗೆ ತಡೆಗೋಡೆ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯವನ್ನು
ಕೈಗೊಳ್ಳುತ್ತೇವೆ ಎಂದು ಭರವಸೆ ನೀಡುವ ಇಲ್ಲಿನ ಕಾರ್ಪೊರೇಟರ್‌ ಈವರೆಗೂ ಯಾವ ಅಭಿವೃದ್ಧಿ
ಕೆಲಸವನ್ನು ಮಾಡಿಲ್ಲ. ಅಲ್ಲದೆ, ಕ್ಷೇತ್ರದ ಶಾಸಕರಾಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌
ಅವರು ಸಹ ನಮ್ಮ ಸಮಸ್ಯೆಗಳನ್ನು ಆಲಿಸದೆ, ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಸ್ಥಳಾಂತರಕ್ಕೆ ಸೂಚನೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜೆ. ಜಾರ್ಜ್‌, ಮಳೆಯಿಂದ ಇಲ್ಲಿನ
ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಹವಾಮಾನ ಇಲಾಖೆ ಪ್ರಕಾರ ಇನ್ನೆರಡು
ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಹೀಗಾಗಿ ಸಂತ್ರಸ್ತರಿಗೆ ತಾತಾಲ್ಕಿಕವಾಗಿ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ವಸತಿ, ಊಟ ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸಬೇಕೆಂದು ಹೇಳಿದ್ದೇನೆ ಎಂದರು.

ಹಾವುಗಳ ಹಾವಳಿ: ನಗರದಲ್ಲಿ ನೆರೆಯ ಜತೆ ಹಾವುಗಳ ಹಾವಳಿ ಕೂಡ ಹೆಚ್ಚಾಗಿದ್ದು, ಕಳೆದ ಮೂರ್‍ನಾಲ್ಕು ದಿನಗಳಲ್ಲಿ 80ಕ್ಕೂ ಹೆಚ್ಚು ಕರೆಗಳು ವಿವಿಧ ಸಂಘ-ಸಂಸ್ಥೆಗಳು ಸೇರಿ ರಚಿಸಲಾದ ಪ್ರಾಣಿ ರಕ್ಷಣಾ ತಂಡಕ್ಕೆ ಬಂದಿವೆ ಎಂದು ತಂಡದ ಸದಸ್ಯ ಹಾಗೂ ಅರಣ್ಯ ಇಲಾಖೆ ವನ್ಯಪರಿಪಾಲಕ ಎ. ಪ್ರಸನ್ನಕುಮಾರ್‌ ತಿಳಿಸಿದ್ದಾರೆ. ಸಾಮಾನ್ಯವಾಗಿ 4ರಿಂದ 5 ಜಾತಿಯ ಹಾವುಗಳು ರಕ್ಷಣೆ ವೇಳೆ ಸಿಗುತ್ತವೆ. ಆದರೆ, ಈ ಬಾರಿ 25 ಜಾತಿಯ ಹಾವುಗಳು ಸಿಕ್ಕಿವೆ. ಇದರಲ್ಲಿ ಕಾಮನ್‌ ಕ್ಯಾಚ್‌ ಸ್ನೇಕ್‌, ಗ್ರೀನ್‌ ಕಿಲ್‌ ಬ್ಯಾಕ್‌, ಶಿಲ್‌ಟೇಲ್‌ ಮತ್ತಿತರ ಜಾತಿಯ ಹಾವುಗಳು ಸೇರಿವೆ. ಪ್ರಸನ್ನಕುಮಾರ್‌ ಮೊ: 99027 94711.

ಶಾಲೆ, ಬಿಇಒ ಕಚೇರಿ ಹೊಕ್ಕ ನೀರು ಕೆ.ಆರ್‌.ಪುರ: ನಗರದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಬಾನುವಾರ ರಾತ್ರೀಯಿಡೀ ಸುರಿದ ಗುಡುಗು, ಮಿಂಚು ಸಹಿತ ಭಾರಿ ಮಳೆಗೆ ಕೆ.ಆರ್‌ .ಪುರ ಕೆರೆ ಕೊಡಿ ಹರಿದು ಪ್ರಮುಖ ರಸ್ತೆ ಶಾಲೆ, ಬಡಾವಣೆಗಳು ಜಲಾವೃತಗೊಂಡಿವೆ.

ಇಲ್ಲಿನ ತ್ರಿವೇಣಿ ನಗರದ ಐಟಿಐ ಬಳಿಯ ರಾಜಕಾಲುವೆ ತುಂಬಿ ಹರಿದ ಪರಿಣಮ ತಗ್ಗು ಪ್ರದೇಶದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಲಾಗಿದೆ. ಶಾಲೆ ಸಮೀಪದಲ್ಲೇ ಇರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೂ ಮಳೆ ನೀರು ನುಗ್ಗಿ ಕಂಪ್ಯೂಟರ್‌ ಉಪಕರಣ, ಕಡತಗಳು ನೀರು ಪಾಲಾಗಿವೆ. 600ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಶಾಲೆಗಳ 2.27ಲಕ್ಷ ವಿದ್ಯಾರ್ಥಿಗಳ ¸‌ವಿಷ್ಯ ಅಡಗಿರುವ ಕಡತಗಳನ್ನು ರಕ್ಷಿಸುವಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.

ಮನೆಗಳಲ್ಲಿ ನೀರು: ಕೆಆರ್‌ಪುರದ ಬಹುತೇಕ ಭಾಗದಲ್ಲಿ ಇದೇ ಪರಿಸ್ಥಿತಿ ಇದ್ದು, ರಾಮ ಮೂರ್ತಿನಗರದ ಮುಖ್ಯರಸ್ತೆ, ವಿಜಿನಾಪುರ, ರೈಲ್ವೆ ಕೆಳಸೇತುವೆ, ಚಿಕ್ಕದೇವಸಂದ್ರದ ಮಂಜುನಾಥ ಬಡಾವಣೆ, ಗಾಯತ್ರಿ ಬಡಾವಣೆ, ನೇತ್ರಾವತಿ
ಬಡಾವಣೆ, ಉದಯನಗರ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳೂ ತುಂಬಿ ಹರಿಯುತ್ತಿರುವ ಕಾರಣ ಸಾರ್ವಜನಿಕರು ಮನೆಗಳಿಂದ ಹೊರಬರುವುದೇ ಕಷ್ಟವಾಗಿದೆ. ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡು ಕಸ ಕಡ್ಡಿ ಕಟ್ಟಿಕೊಂಡಿರುವ ಕಾರಣ ಮುಖ್ಯ ರಸ್ತೆಗಳಲ್ಲಿ 3 ಅಡಿಯಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೂ ತೊಡಕಾಗಿದೆ. 

ತುಂಬಿದ ಕಲ್ಕೆರೆ ಕೆರೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಲ್ಕೆರೆ ಕೆರೆ ತುಂಬಿ ಕೊಡಿ ಹರಿಯುತ್ತಿರುವ ಪರಿಣಾಮ ಚನ್ನಸಂದ್ರ ಮತ್ತು ರಾಂಪುರದ ಮುಖ್ಯ ರಸ್ತೆಗಳು ಜಲಾವೃತಗೊಂಡಿವೆ.

4 ದಿನದಲ್ಲಿ 183 ಮಿ.ಮೀ. ನಗರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಒಟ್ಟಾರೆ 183 ಮಿ.ಮೀ. ಮಳೆ ದಾಖಲಾಗಿದೆ. ನಗರದ ಸೆಪ್ಟೆಂಬರ್‌ ತಿಂಗಳ ವಾಡಿಕೆ ಮಳೆ 212 ಮಿ.ಮೀ. ಆಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಸ್ಪಷ್ಟಪಡಿಸಿದೆ. ಸೆ. 1ರಂದು 72 ಮಿ.ಮೀ., 2ಕ್ಕೆ 33.1 ಮಿ.ಮೀ. 3ರಂದು 21.8 ಹಾಗೂ 4ರಂದು 56.8 ಮಿ.ಮೀ. ಮಳೆ ದಾಖಲಾಗಿದೆ ಎಂದು ಇಲಾಖೆ ನಿರ್ದೇಶಕ ಎಸ್‌.ಎಂ. ಮೆಟ್ರಿ “ಉದಯವಾಣಿ’ಗೆ ತಿಳಿಸಿದ್ದಾರೆ. 

ಎಲ್ಲೆಲ್ಲಿ ನೆರೆ? ವಸಂತಪುರದ ಸತ್ಯವನಕುಂಟೆ ಕೋಡಿ ಒಡೆದು ಶಾಂತಿನಗರ, ವಸಂತವಲ್ಲಭನಗರದಲ್ಲಿ ನೀರು, ಬೇಗೂರು ಕೋಡಿ ಬಿದ್ದು ಎಚ್‌ ಎಸ್‌ಆರ್‌ ಲೇಔಟ್‌ನ 1, 4 ಮತ್ತು 5ನೇ ಸೆಕ್ಟರ್‌ಗಳಲ್ಲಿ ನೀರು, ಬಿಲೇಕಹಳ್ಳಿ, ಶಾಂತಿನಿಕೇತನ ಲೇಔಟ್‌, ಥಣಿಸಂದ್ರದ ನಂದಗೋಕುಲ ಬಡಾವಣೆ, ಫಾತಿಮಾ ಲೇಔಟ್‌, ಕೋರಮಂಗಲ 4ನೇ ಬ್ಲಾಕ್‌, ಹೆಣ್ಣೂರು ಬಂಡೆ ಬೀರೇಶ್ವರ ನಗರ, ಕೆ.ಆರ್‌. ಪುರ, ಎಚ್‌ಬಿಆರ್‌ ಲೇಔಟ್‌, ಡಾನ್‌ ಬಾಸ್ಕೋ ಚರ್ಚ್‌ ಲಿಂಗರಾಜಪುರ, ಹೆಬ್ಟಾಳ, ಕಮ್ಮನಹಳ್ಳಿ, ವಿಕ್ಟೋರಿಯಾ ಲೇಔಟ್‌, ಮುರುಗೇಶ ಪಾಳ್ಯದ ಕೆ.ಆರ್‌. ಗಾರ್ಡನ್‌, ಸರಸ್ವತಿಪುರಂ, ಜೋಗಪಾಳ್ಯ ಅಪ್ಪಯ್ಯ ಗಾರ್ಡನ್‌, ಸಿ.ವಿ. ರಾಮನ್‌ನಗರ, ಪಾಪಣ್ಣ ಲೇಔಟ್‌, ಗೆದ್ದಲಹಳ್ಳಿ, ದೊಡ್ಡಯ್ಯ ಬಡಾವಣೆ, ಮಹದೇವಪುರ, ಮರಿಯನಪಾಳ್ಯ ಥಣಿಸಂದ್ರ, ರಾಮಮೂರ್ತಿನಗರ, ಈಶ್ವರ ಲೇಔಟ್‌ ಇಂದಿರಾನಗರ, ಎಸ್‌ಆರ್‌ಎಲ್‌ ಲೇಔಟ್‌, ದೇವಸಂದ್ರ ಮುಖ್ಯರಸ್ತೆ, ಸಂಜಯಗಾಂಧಿನಗರ, ತ್ರಿವೇಣಿನಗರ, ಸಹಕಾರನಗರ, ಜಕ್ಕೂರು ಸುತ್ತಲಿನ ಮನೆಗಳಿಗೆ ನೀರು ನುಗ್ಗಿದೆ. 

ಎಲ್ಲೆಲ್ಲಿ ಎಷ್ಟು ಮಳೆ ಜಕ್ಕೂರು 122.5 ಮಿ.ಮೀ., ಬೆಂಗಳೂರು ಉತ್ತರದ ಬಂಡಿಕೊಡಿಗೇನಹಳ್ಳಿ 100.5, ಬಾಗಲೂರು 91, ಜಾಲ 49, ಯಲಹಂಕ 47, ಕೊಡಿಗೇಹಳ್ಳಿ 60, ಬಸವೇಶ್ವರನಗರ 51, ಬ್ಯಾಟರಾಯನಪುರ 76, ಗಾಳಿ ಆಂಜನೇಯ ದೇವಸ್ಥಾನ 44, ಶಿವನಗರ 55, ಕಾಟನ್‌ಪೇಟೆ 51.5, ನಾಗಾಪುರ 78.5, ಮರಪ್ಪನಪಾಳ್ಯ 58, ನಂದಿನಿ ಲೇಔಟ್‌ 72.5, ಹಂಪಿನಗರ 45, ಅಗ್ರಹಾರ ದಾಸರಹಳ್ಳಿ 54, ಕೆ.ಆರ್‌. ಪುರ 70.5, ಸಂಪಂಗಿರಾಮನಗರ 65.5, ಮಹದೇವಪುರ 63, ಕಮ್ಮನಹಳ್ಳಿ 83.5, ಬೆಂಗಳೂರು ಉತ್ತರದ ವಿದ್ಯಾಪೀಠ ವೃತ್ತ 42.5, ಬಸವನಗುಡಿ 32, ಕೋಣನಕುಂಟೆ 43, ಕುಮಾರಸ್ವಾಮಿ ಲೇಔಟ್‌ 26.5, ಕೆಂಗೇರಿ 40.5 ಮಿ.ಮೀ. ಮಳೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. 

ಭರ್ತಿಯಾಗಿ ಕೋಡಿ ಹರಿದ ಯಲಹಂಕ ಕೆರೆ 

ಯಲಹಂಕ: ಕೆಲ ವರ್ಷಗಳಿಂದ ಮಳೆಯಿಲ್ಲದೆ ಬರಿದಾಗಿದ್ದ ನಗರದ ಅತೀ ದೊಡ್ಡ ಯಲಹಂಕ ಕೆರೆ, ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಯಿಂದ ಭರ್ತಿಯಾಗಿ ಕೋಡಿ ಬಿದ್ದಿದೆ. 292 ಎಕರೆಯಲ್ಲಿ ವ್ಯಾಪಿಸಿರುವ ಕೆರೆ 2015
ನವಂಬರ್‌ನಲ್ಲಿ ಕೊಡಿ ಹೋಗಿದ್ದು, ಎರಡು ವರ್ಷಗಳಿಂದ ಮಳೆಯಿಲ್ಲದ ಬರಿದಾಗಿತ್ತು. ಇತ್ತೀಚೆಗೆ ಮಳೆಯಾದ ಕಾರಣ ಕೆರೆ ತುಂಬಿದ್ದರಿಂದ ಖುಷಿಯಾಗಿರುವ ಸ್ಥಳೀಯ ನಾಗರಿಕರು, ಗಂಗೆ ಪೂಜೆಗೆ ತಯಾರಿ ನಡೆಸುತ್ತಿದ್ದಾರೆ. ಸುಮಾರು 400 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕೆರೆಗೆ ನಗರದ ಕೊಳಚೆ ನೀರು ಸೇರಿ ಕಲುಷಿತಗೊಂಡಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಸಂಘ ಸಂಸ್ಥೆಗಳು, ನಾಗರಿಕರ ಸಹಕಾರದಿಂದ ಕೈಗೊಂಡ ಸ್ವತ್ಛತೆ ಹಾಗೂ ಭಿವೃದ್ಧಿ ಕಾಮಗಾರಿಯಿಂದಾಗಿ ಕರೆ ಸ್ವತ್ಛವಾಗಿದೆ. ತುಂಬಿದ ಕೆರೆ ನೋಡಲು ನೂರಾರು ಮಂದಿ ಕೆರೆ ಬಳಿ ಬರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next