Advertisement

ಮತ್ತೆ ಮಳೆ ಹುಯ್ಯುತಿದೆ…ಎಲ್ಲ ನೆನಪಾಗುತಿದೆ…!

06:00 AM Jul 10, 2018 | |

ಅರಳು ಹುರಿದಂತೆ ಮಾತಾಡುವಾಗ ಇಷ್ಟಗಲ ಅರಳುವ ನಿನ್ನ ಬೊಗಸೆ ಕಂಗಳು, ಪದೇ ಪದೆ ಹಣೆ ಮೇಲೆ ಬೀಳುತ್ತಾ, ಸೌಂದರ್ಯಕ್ಕೆ ಸಾಥ್‌ ನೀಡುವ ಮುಂಗುರುಳು, ನಕ್ಕಾಗ ಕೆನ್ನೆ ಮೇಲೆ ಬೀಳುವ ಗುಳಿ, ಮೊದಲ ಪರಿಚಯದಲ್ಲಿಯೇ ಎಲ್ಲವನ್ನು ಹೇಳಿಕೊಂಡು ಹತ್ತಿರವಾದ ನಿನ್ನ ಸ್ವಭಾವ… ಎಲ್ಲವೂ ಹಿಡಿಸಿದವು.

Advertisement

ಮೋಡದ ಗರ್ಭ ಸೀಳಿ ಮೊದಲ ಹನಿ ಕುಡಿಯೊಡೆದು, ಭುವಿಯ ತಾಕಿದ ಘಳಿಗೆಯಲ್ಲಿಯೇ ಒಲವ ತುಂತುರಿನ ಸಿಂಚನ ನಮ್ಮಿಬ್ಬರ ಹೃದಯದಲ್ಲಿ ಮೊಳಕೆಯೊಡೆದಿದ್ದು. ಅಂದು ಕಾಲೇಜಿಗೆ ಹೊರಡುವಾಗಲೇ ಅಂದುಕೊಂಡಿದ್ದೆ; ಇಂದು ಖಂಡಿತ ಮಳೆ ಬರುತ್ತದೆ ಅಂತ. ತರಗತಿಯ ಕೋಣೆಯಲ್ಲಿ ಹಿಸ್ಟ್ರಿ ಲೆಕ್ಚರರ್‌ ಪಾಠ ಮಾಡುತ್ತಿದ್ದರೆ, ಹೊರಗೆ ಬಾನಗಲ ತುಂಬ ದಟ್ಟ ಕಪ್ಪು ಮೋಡಗಳ ಮಿಲನ. 

“ಶಿಲೆಯಲ್ಲಿನ ಭಾವಗೀತೆ ತಾಜ್‌ಮಹಲ್‌! ಜಗತ್ತಿನ ಅಮರ ಪ್ರೇಮಿಗಳ ಪ್ರೀತಿಯ ದ್ಯೋತಕ ಅದು. ಅದೆಷ್ಟೋ ಪ್ರೇಮಿಗಳ ಎದೆಯಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡ ಜಗತ್ತಿನ ಅಚ್ಚರಿಗಳಲ್ಲೊಂದು. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಮಮ್ತಾಜ್‌ಳನ್ನು ಮರೆಯಲಾಗದ ಷಹಜಹಾನ್‌, ಅವಳ ನೆನಪಿನಲ್ಲಿಯೇ ಇದನ್ನು ಕಟ್ಟಿಸಿದ…’ ಎಂದು ಭಾವತುಂಬಿ, ಧ್ವನಿಗಳ ಏರಿಳಿತದೊಂದಿಗೆ ಹಿಸ್ಟ್ರಿ ಮೇಸ್ಟ್ರೆ ಪಾಠ ಒಪ್ಪಿಸುತ್ತಿದ್ದರೆ, ನನ್ನ ಕಣ್ಣೆದುರು ತಾಜಮಹಲ್‌ ಎದುರಿನ ಕಟ್ಟೆಯ ಮೇಲೆ ಪ್ರೇಮಿಗಳಿಬ್ಬರು ಭುಜಕ್ಕೆ ಭುಜ ಒರಗಿಸಿ ಮೈಮರೆತು ಕುಳಿತ ದೃಶ್ಯ ಹಾದು ಹೋಗುತ್ತಿತ್ತು..

ಆಗ ಶುರುವಾಯಿತು ನೋಡು ಧೋ ಎಂದು ಸುರಿಯುವ ಮಳೆ. ಎಷ್ಟೋ ದಿನಗಳಿಂದ ದೂರವಾಗಿದ್ದ ನಲ್ಲೆಯ ಮಿಲನಕ್ಕೆ ಕಾತರಿಸಿ ಹರಿದು ಬಂದಂತೆ, ಬಿರಿದ ಭೂಮಿಯನ್ನು ಮಳೆರಾಯ ಬಾಚಿ ತಬ್ಬಿಕೊಳ್ಳುತ್ತಿದ್ದ. ಮೊದಲ ಮಳೆ ಬಿದ್ದ ಮಣ್ಣಿನ ಘಮ ಮೂಗಿಗೆ ಅಡರಿಕೊಂಡು ಪುಳಕಗೊಳ್ಳುತ್ತಿದ್ದ ಘಳಿಗೆಯಲ್ಲಿಯೇ ಪಕ್ಕದಲ್ಲಿ ನೀನು ಬಂದು ನಿಂತಿದ್ದು ಅರಿವಿಗೆ ಬಂದಿರಲಿಲ್ಲ. “ಅಷ್ಟು ಬೇಗ ಈ ಮಳೆ ನಿಲ್ಲೋ ಹಾಗೆ ಕಾಣಿಸೋಲ್ಲರೀ…’ ಅಂದವಳ ಜೇನಿನಷ್ಟೇ ಸಿಹಿಯಾದ ದನಿಗೆ ಕರಗಿ ನೀರಾಗಿದ್ದೆ. “ಹೌದು ಕಣ್ರೀ… ಈ ಮಳೆಗೆ ಆವೇಶ ಜಾಸ್ತಿ. ಬಹಳ ದಿನಗಳ ನಂತರ ಭೂಮಿಗೆ ಬರ್ತಾ ಇದೆ ನೋಡಿ’ ಅಂದವನ ಮಾತಿಗೆ ನಿನ್ನ ನಗೆ ಮುದ ನೀಡಿತ್ತು.

“ನನ್ನ ಹೆಸರು ಖುಷಿ. ಇಲ್ಲೇ ಲೇಡೀಸ್‌ ಹಾಸ್ಟೆಲ್‌ನಲ್ಲಿ ಇರ್ತೀನಿ…’ ಎನ್ನುತ್ತಾ ಒಂದೇ ಸಮನೆ, ಸುರಿವ ಮಳೆಯಂತೆಯೇ ಮಾತಿನ ಮುತ್ತು ಉದುರಿಸುತ್ತಿದ್ದ ನಿನ್ನನ್ನು ಕಂಡು ರೋಮಾಂಚನ ಉಂಟಾಗಿದ್ದಂತೂ ಸುಳ್ಳಲ್ಲ. 

Advertisement

ಅರಳು ಹುರಿದಂತೆ ಮಾತಾಡುವಾಗ ಇಷ್ಟಗಲ ಅರಳುವ ನಿನ್ನ ಬೊಗಸೆ ಕಂಗಳು, ಪದೇ ಪದೆ ಹಣೆ ಮೇಲೆ ಬೀಳುತ್ತಾ, ಸೌಂದರ್ಯಕ್ಕೆ ಸಾಥ್‌ ನೀಡುವ ಮುಂಗುರುಳು, ನಕ್ಕಾಗ ಕೆನ್ನೆ ಮೇಲೆ ಬೀಳುವ ಗುಳಿ, ಮೊದಲ ಪರಿಚಯದಲ್ಲಿಯೇ ಎಲ್ಲವನ್ನು ಹೇಳಿಕೊಂಡು ಹತ್ತಿರವಾದ ನಿನ್ನ ಸ್ವಭಾವ… ಎಲ್ಲವೂ ಹಿಡಿಸಿದವು. ಪ್ರೀತಿಯ ಪರಿಮಳ ಘಮಘಮಿಸಲು ಇಷ್ಟು ಸಾಕಲ್ಲವೇ? ಮಳೆ, ನಿನ್ನಂಥ ಚೆಂದದ ಗೆಳತಿಯನ್ನು ಹತ್ತಿರವಾಗಿಸಿತ್ತು. ಆಮೇಲೆ ಇಳೆಗಿಳಿಯುವ ಮಳೆಯ ನಡುವೆ ಜೊತೆಗೂಡಿ ಹೆಜ್ಜೆ ಹಾಕಿದ್ದು, ಮನಬಿಚ್ಚಿ ಹರಟಿದ್ದು, ನಿನ್ನ ಕಷ್ಟಗಳಿಗೆ ಕಣ್ಣೀರಾಗಿದ್ದು, ಭವಿಷ್ಯದ ಹೊಂಗನಸು ಹೆಣೆದಿದ್ದು ಎಲ್ಲವೂ ಹಚ್ಚ ಹಸಿರು. ಖುಷಿಯೆಂಬ ಹುಡುಗಿ ಬದುಕಿನ ಖುಷಿಯನ್ನೇ ಖಾಯಮ್ಮಾಗಿಸುತ್ತಾಳೆ ಎಂದು ಅದ್ಯಾರಿಗೆ ಗೊತ್ತಿತ್ತು? ಭಗವಂತ ಒಮ್ಮೊಮ್ಮೆ ಏನನ್ನೂ ಕೇಳದೆಯೇ ದಯಪಾಲಿಸಿ ಬಿಡುತ್ತಾನಂತೆ. ಧನ್ಯೋಸ್ಮಿ!

ಮಧ್ಯರಾತ್ರಿ ಮನೆಯ ಕಿಟಕಿಯಾಚೆಗಿಂದ ಜಿಟಿಗುಟ್ಟುವ ಮಳೆಯನ್ನು ದಿಟ್ಟಿಸುತ್ತ ಕುಳಿತ ನನಗೆ ಇಷ್ಟೆಲ್ಲ ನೆನಪುಗಳು ಜೊತೆಯಾದೆವು. ಷೋಕೇಸಿನಲ್ಲಿನ ಮೊಲದ ಬಿಳುಪಿನ ತಾಜ್‌ಮಹಲ್‌ ಅನ್ನು ಒಮ್ಮೆ ನೋಡಿಕೊಂಡೆ. ನಿದ್ದೆಯಲ್ಲಿ ಏನನ್ನೋ ನೆನೆಸಿಕೊಂಡು ನಗುತ್ತಿದ್ದ ನಿನ್ನ ಹಣೆಗೆ ಹೂಮುತ್ತನಿತ್ತು ಕಣ್ತುಂಬಿಕೊಂಡೆ. ಒಳಗೂ, ಹೊರಗೂ ಸಣ್ಣಗೆ ಹನಿಯುವ ಮಳೆ ಖುಷಿಗೆ ಸಾಥ್‌ ನೀಡುತ್ತಿತ್ತು.

ನಾಗೇಶ್‌ ಜೆ. ನಾಯಕ 

Advertisement

Udayavani is now on Telegram. Click here to join our channel and stay updated with the latest news.

Next