Advertisement

ಮಾಸಾಂತ್ಯಕ್ಕೆ ಕರಾವಳಿಯಲ್ಲಿ ನೀರಿನ ಸಮಸ್ಯೆ ಉಲ್ಬಣ ಸಾಧ್ಯತೆ

01:15 AM Mar 19, 2023 | Team Udayavani |

ಉಡುಪಿ: ಬಿಸಿಲಿನ ತಾಪ ದಿನೇದಿನೆ ಹೆಚ್ಚುತ್ತಿರುವ ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ. ಮಂಗಳೂರು ಮಹಾನಗರ, ಉಡುಪಿ ನಗರಸಭೆ, ನಗರ ಸ್ಥಳೀಯ ಸಂಸ್ಥೆಗಳ ಕೆಲವು ಕಡೆ ಹೊಟೇಲ್‌, ರೆಸ್ಟೋರೆಂಟ್‌, ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಟ್ಯಾಂಕರ್‌ ನೀರು ಪೂರೈಕೆಯೂ ಆರಂಭಗೊಂಡಿದೆ. ಎಪ್ರಿಲ್‌ ಮೊದಲ ವಾರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ.

Advertisement

ನೀರಿನ ಸಮಸ್ಯೆಯ ನಿಯಂತ್ರಣ ಹಾಗೂ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿರ್ವಹಣೆಗಾಗಿ ಉಭಯ ಜಿಲ್ಲಾಡಳಿತಗಳು ಪ್ರತ್ಯೇಕವಾಗಿ ಸಭೆ ನಡೆಸಿ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿವೆ. ಮುಂದಿನ ಕೆಲವು ದಿನಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸಬಲ್ಲ ಪ್ರದೇಶಗಳ ಮಾಹಿತಿಯನ್ನು ಪಡೆಯಲಾಗಿದೆ. ಅಂಥ ಕಡೆಗಳಲ್ಲಿ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.

ಉಡುಪಿಯಲ್ಲಿ 27, ದ.ಕ.ದಲ್ಲಿ 5
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಲವು ಗ್ರಾಮಗಳ ಕೆಲವು ಪ್ರದೇಶ, ಕುಂದಾಪುರ, ಬೈಂದೂರು, ಹೆಬ್ರಿ, ಕಾಪು, ಉಡುಪಿ ಹಾಗೂ ಬ್ರಹ್ಮಾವರ ತಾಲೂಕುಗಳ ಕೆಲವು ಗ್ರಾಮಗಳಲ್ಲಿ ತಿಂಗಳ ಅಂತ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ 27 ಪ್ರದೇಶಗಳ ಪಟ್ಟಿಯನ್ನು ಜಿ.ಪಂ. ಸಿದ್ಧಪಡಿಸಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ದ.ಕ. ಜಿಲ್ಲೆಯ ಬಾಳೆಪುಣಿ, ನರಿಕೊಂಬು, ಕೊಣಾಜೆ, ತಲಪಾಡಿ ಹಾಗೂ ಮಂಜನಾಡಿ ಗ್ರಾಮಗಳ ಕೆಲವು ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲಿದೆ ಎಂದು ಜಿ.ಪಂ. ಪಟ್ಟಿ ಮಾಡಿದೆ. ಮಂಗಳೂರು ಮಹಾನಗರ, ನಗರ ಸ್ಥಳೀಯ ಸಂಸ್ಥೆಗಳಾದ ಮೂಲ್ಕಿ, ಮೂಡುಬಿದರೆ, ಸೊಮೇಶ್ವರ ಕಡೆಗಳಲ್ಲೂ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಜಲ ಜೀವನ್‌ ಮಿಶನ್‌
ಪ್ರತೀ ಮನೆಗೂ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವ ಜಲಜೀವನ್‌ ಮಿಶನ್‌ ಕಾಮಗಾರಿ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ 2,47,189 ಮನೆಗಳಲ್ಲಿ 1,80,300 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಮೂಲಕ ಶೇ. 72.94ರಷ್ಟು ಸಾಧನೆಯಾಗಿದೆ. ದ.ಕ.ದ 3,34,184 ಮನೆಗಳಲ್ಲಿ 2,85,573 ಮನೆಗಳಿಗೆ ಸಂಪರ್ಕ ಕಲ್ಪಿಸಿ ಶೇ. 85.45ರಷ್ಟು ಸಾಧನೆ ಮಾಡಲಾಗಿದೆ. ಆದರೆ ನಲ್ಲಿ ಸಂಪರ್ಕ ಕಲ್ಪಿಸಿರುವ ಎಲ್ಲ ಮನೆಗಳಿಗೂ
ನೀರು ಪೂರೈಕೆ ಆಗುತ್ತಿಲ್ಲ. ಕೆಲವು ಕಡೆ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾಗಬೇಕಿದೆ. ಇನ್ನು ಕೆಲವು ಕಡೆಗಳಲ್ಲಿ ಸಂಪರ್ಕ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಜತೆಗೆ ಬಾವಿ, ಕೊಳವೆ ಬಾವಿ ನಿರ್ಮಾಣ ಇತ್ಯಾದಿ ನಡೆಯುತ್ತಿದೆ. ಹೀಗಾಗಿ ಜಲ ಜೀವನ್‌ ಮಿಷನ್‌ ಅಡಿಯಲ್ಲಿ ಈ ಬೇಸಗೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಿಗುವುದು ಕಷ್ಟ. 2024ರಲ್ಲಿ ಇದು ಫ‌ಲ ಕೊಡಬಹುದು ಎಂದು ಹೇಳಲಾಗುತ್ತಿದೆ.

ಅಂತರ್ಜಲ ಹೆಚ್ಚಳಕ್ಕೆ ಕ್ರಮ
ಸದ್ಯಕ್ಕೆ ಟ್ಯಾಂಕರ್‌ ನೀರು ಸರಬರಾಜಿಗೆ ಆದ್ಯತೆ ನೀಡದೆ, ಗ್ರಾಮಗಳಲ್ಲಿ ಇರುವ ಜಲಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಹಾಗೂ ಅಂತರ್ಜಲ ಮಟ್ಟ ಕಡಿಮೆ ಇರುವ ಪ್ರದೇಶಗಳಲ್ಲಿ ಕೊಳವೆ ಬಾವಿಗಳ ಡೀಪನಿಂಗ್‌, ಫ್ಲಷಿಂಗ್‌ ಮಾಡಲು ಜಿ.ಪಂ.ಗಳಿಂದ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದ ಕಡೆಗಳಲ್ಲಿ ಬೋರ್‌ವೆಲ್‌ ಕೊರೆಸುವ ಅವಕಾಶವನ್ನು ಮುಕ್ತವಾಗಿಟ್ಟುಕೊಳ್ಳಲಾಗಿದೆ. ಅಂತರ್ಜಲ ಹೆಚ್ಚಿಸಲು ಜಲ ಮರುಪೂರಣದಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

Advertisement

ತಾಲೂಕು ಹಂತದಲ್ಲೇ ಕ್ರಮ
ನೀರಿನ ಸಮಸ್ಯೆ ತೀವ್ರವಾದ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಜಿಲ್ಲಾ ಅಥವಾ ರಾಜ್ಯಮಟ್ಟದ ಸೂಚನೆಗೆ ಕಾಯಬೇಕಾಗಿಲ್ಲ. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ನೇತೃತ್ವದ ಸಮಿತಿಯೇ ಈ ತೀರ್ಮಾನ ತೆಗೆದು ಕೊಳ್ಳಬಹುದಾಗಿದೆ. ಈ ಸಂಬಂಧ ಉಭಯ ಜಿಲ್ಲಾಡಳಿತದಿಂದ ಸೂಚನೆಯನ್ನು ನೀಡಲಾಗಿದೆ.

ಗ್ರಾಮೀಣ ಭಾಗದಲ್ಲಿ ನೀರು ಸರಬರಾಜು ಮಾಡಲು ಅನುದಾನದ ಕೊರತೆಯಿಲ್ಲ. 15ನೇ ಹಣಕಾಸು ಆಯೋಗದಿಂದ ಇದಕ್ಕಾಗಿ ಪ್ರತ್ಯೇಕ ಅನುದಾನವೂ ಸಿಗಲಿದೆ. ನೀರಿನ ಮೂಲಗಳನ್ನು ಉಳಿಸಿಕೊಂಡು, ಸಮರ್ಪಕವಾಗಿ ನೀರು ಪೂರೈಕೆ ಮಾಡುವ ಸವಾಲಿದೆ. ತಾಲೂಕು ಹಾಗೂ ಗ್ರಾ.ಪಂ.ಗಳಿಗೆ ಸಮರ್ಥ ನಿರ್ವಹಣೆಗೆ ಸೂಚನೆ ನೀಡಲಾಗಿದೆ.
-ಪ್ರಸನ್ನ ಎಚ್‌., ಡಾ| ಕುಮಾರ್‌ ಜಿ.ಪಂ. ಸಿಇಒ, ಉಡುಪಿ, ದ.ಕ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next