Advertisement

ಸಿಟಿ ಮಾರ್ಕೆಟ್‌ ಸುತ್ತ ಸಿಕ್ಕಾಪಟ್ಟೆ ಸಮಸ್ಯೆ

12:58 AM Sep 14, 2019 | Lakshmi GovindaRaju |

ಬೆಂಗಳೂರು: ಕೃಷ್ಣರಾಜೇಂದ್ರ ಮಾರುಕಟ್ಟೆ ಅಂದರೆ ಬೆಂಗಳೂರಿನ ಇತಿಹಾಸಕ್ಕೆ ಕಳಶ. ನಗರದ ಹೂ-ಹಣ್ಣುಗಳ ಅತಿದೊಡ್ಡ ಮಾರುಕಟ್ಟೆ. ಸುತ್ತಲಿನ ಊರುಗಳ ರೈತರ ಉತ್ಪನ್ನಗಳಿಗೆ ವೇದಿಕೆ. ಖಾಸಗಿ ಬಸ್‌ಗಳ ಹಾವಳಿ. ಇದೆಲ್ಲದರ ಜತೆಗೆ ಕಣ್ಮುಂದೆ ಬರುವುದು ಪ್ರಯಾಣಿಕರು ನಿತ್ಯ ಅನುಭವಿಸುವ ಸಂಚಾರ ದಟ್ಟಣೆ!

Advertisement

ಇಲ್ಲಿ ಫ್ಲೈಓವರ್‌ ನಿರ್ಮಿಸಲಾಗಿದೆ (ಇದು ನಗರದ ಮೊದಲ ಸೇತುವೆ). ನೆಲದಡಿ ಮೆಟ್ರೋ ಮಾರ್ಗ ಹಾದುಹೋಗಿದೆ. ಬಿಎಂಟಿಸಿಯಿಂದ ಅತಿ ಹೆಚ್ಚು ಬಸ್‌ ಸೇವೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ, ಸಂಚಾರ ದಟ್ಟಣೆ ಸಮಸ್ಯೆ ಮಾತ್ರ ಹಾಗೇ ಇದೆ. ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ, ಸಂಚಾರ ಪೊಲೀಸರು ಕೂಡ ಅಸಹಾಯಕರಾಗಿದ್ದಾರೆ. ಪರಿಣಾಮ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವುದು ತಪ್ಪಿಲ್ಲ.

ಈ ಜಂಕ್ಷನ್‌ನಲ್ಲಿ ಒಂದೆಡೆ ಹೂ-ಹಣ್ಣು, ತರಕಾರಿ, ದಿನ ಬಳಕೆ ವಸ್ತುಗಳ ವ್ಯಾಪಾರಿಗಳ ವಾಹನಗಳ ಸಂಚಾರ ನಿರಂತರವಾಗಿರುತ್ತದೆ. ಮತ್ತೂಂದೆಡೆ ಮೈಸೂರು, ಕನಕಪುರ ಹಾಗೂ ಅವೆನ್ಯು ರಸ್ತೆ, ಕಲಾಸಿಪಾಳ್ಯ ಸೇರಿದಂತೆ ಪ್ರಮುಖ ವಾಣಿಜ್ಯ ರಸ್ತೆಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ, ಈ ಮಾರ್ಗದ ಸುತ್ತ ಉಳಿದೆಲ್ಲೆಡೆಗಿಂತ ವಿಪರೀತ ಸಂಚಾರದಟ್ಟಣೆ ಉಂಟಾಗುತ್ತದೆ. ಇದೇ ಕಾರಣಕ್ಕೆ ನಗರದ ರಸೆಲ್‌ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಜಯನಗರ ಮಾರುಕಟ್ಟೆ, ಗಾಂಧಿಬಜಾರ್‌ ಮಾರುಕಟ್ಟೆ ವ್ಯಾಪ್ತಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ವಾಹನಗಳ ವೇಗ ತುಂಬಾ ಕಡಿಮೆ ಇದೆ.

ಸಾಮಾನ್ಯವಾಗಿ ಮೈಸೂರು, ಕನಕಪುರ ಮಾಗಡಿ ಸೇರಿ ದೂರದ ಊರುಗಳಿಗೆ ಹೋಗಬೇಕಾದ ವಾಹನಗಳು ಸಾಮಾನ್ಯವಾಗಿ ಎತ್ತರಿಸಿದ ಸೇತುವೆ ಮೂಲಕ ಹೋಗುತ್ತವೆ. ಆದರೆ, ವಾಣಿವಿಲಾಸ ಆಸ್ಪತ್ರೆ, ಅವೆನ್ಯು ರಸ್ತೆ, ಕಲಾಸಿಪಾಳ್ಯ ಕಡೆ ಹೋಗುವ ವಾಹನಗಳೇ ಅತ್ಯಧಿಕವಾಗಿದೆ. ಸಾಕಷ್ಟು ಎಚ್ಚರಿಕೆ ನಡುವೆಯೂ ಆಟೋ ಮತ್ತು ಬಿಎಂಟಿಸಿ ಬಸ್‌ ಚಾಲಕರು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದಲೂ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಅಲ್ಲದೆ, ಸೇತುವೆ ಕೆಳಭಾಗದ ಎರಡು ರಸ್ತೆಗಳು ಕಿರಿದಾಗಿದ್ದು, ಸಾಕಷ್ಟು ಗುಂಡಿಗಳು ಬಿದ್ದಿವೆ. ಹೀಗಾಗಿ ವಾಹನಗಳ ವೇಗದ ಮಿತಿ ಕಡಿಮೆಯಾಗಿ, ಸಂಚಾರ ದಟ್ಟಣೆಗೆ ಎಡೆಮಾಡಿಕೊಡುತ್ತಿವೆ ಎಂದು ಮಾರುಕಟ್ಟೆ ವೃತ್ತದಲ್ಲಿನ ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಈ ಜಂಕ್ಷನ್‌ನಲ್ಲಿ ಪ್ರತಿ ಗಂಟೆಗೆ 6-7 ಸಾವಿರ ವಾಹನಗಳು ಓಡಾಡುತ್ತವೆ. ನಿತ್ಯ ಒಂದೂವರೆ ಲಕ್ಷಕ್ಕೂ ಅಧಿಕ ವಾಹನಗಳು ಸಂಚಾರ ಮಾಡುತ್ತವೆ. ಹೀಗಾಗಿ, ಈ ಜಂಕ್ಷನ್‌ನ ನಾಲ್ಕು ಕಿ.ಮೀಟರ್‌ ವ್ಯಾಪ್ತಿಯಲ್ಲಿ ಓಡಾಡುವ ವಾಹನಗಳ ವೇಗ ಕೇವಲ 15-20 ಕಿ.ಮೀ. ಬೆಳಿಗ್ಗೆ 8 ರಿಂದ 10 ಗಂಟೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 7ಗಂಟೆವರೆಗೆ ವೇಗಮಿತಿ ಕೇವಲ 10-12 ಕಿ.ಮೀ. ಒಂದು ವೇಳೆ ಎತ್ತರಿಸಿದ ಸೇತುವೆ ಹಾಗೂ ಮೆಟ್ರೋ ನಿಲ್ದಾಣ ನಿರ್ಮಿಸದಿದ್ದರೆ ಈ ಸಮಸ್ಯೆ ದ್ವಿಗುಣಗೊಳ್ಳುತ್ತಿತ್ತು ಎನ್ನುತ್ತಾರೆ ಸಂಚಾರ ಪೊಲೀಸರು.

Advertisement

ಸಮಸ್ಯೆಯ ಮೂಲ ಇಲ್ಲಿದೆ: ಕಿರಿದಾದ ರಸ್ತೆಗಳು, ಹೆಚ್ಚು ವಾಹನಗಳಿಂದ ಮಾತ್ರವಲ್ಲ; ಸಾರ್ವಜನಿಕರ ಓಡಾಟದಿಂದಲೂ ಸಂಚಾರದಟ್ಟಣೆ ಉಂಟಾಗುತ್ತಿದೆ. ಪಾದಚಾರಿಗಳಿಗೆ ಪ್ರತ್ಯೇಕ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರು ಅವುಗಳನ್ನು ಬಳಸದೆ ಏಕಾಏಕಿ ವಾಹನಗಳ ಮಧ್ಯೆಯೇ ನುಗ್ಗುತ್ತಾರೆ. ಈ ಕುರಿತು ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ.

ಈ ಬಗ್ಗೆ ತಿಳಿವಳಿಕೆ ನೀಡಿದರೆ ಸುರಂಗ ಮಾರ್ಗದ ಸ್ವಚ್ಛತೆ ಹಾಗೂ ಸುರಕ್ಷತೆ ಬಗ್ಗೆ ಪ್ರಶ್ನಿಸುತ್ತಾರೆ. ಇನ್ನು ತರಾಕಾರಿಗಳನ್ನು ಹೊತ್ತು ತರುವ ವಾಹನಗಳ ಮಾಲಿಕರು ಮಾರುಕಟ್ಟೆಯ ಕಟ್ಟಡಗಳಲ್ಲಿ ನಿಲ್ಲಿಸಿ ವ್ಯಾಪಾರ ನಡೆಸಬೇಕು. ಆದರೆ, ರಸ್ತೆ ಬದಿಯೇ ನಿಲ್ಲಿಸಿ ವ್ಯಾಪಾರ ಮಾಡುತ್ತಾರೆ. ಅಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದರೆ ಅಮಾಯಕರು, ಕಾರ್ಮಿಕ ವರ್ಗದವರ ಮೇಲೆ ದೌರ್ಜನ್ಯ ಮಾಡುತ್ತಿರಾ ಎಂದೆಲ್ಲ ನಿಂದಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಂಚಾರ ಪೊಲೀಸರು.

ಸಿದ್ದಿಕಟ್ಟೆಯಾಯ್ತು ಸಿಟಿ ಮಾರ್ಕೆಟ್‌!: ಶತಮಾನಗಳ ಹಿಂದೆ ಸಿದ್ಧಿಕಟ್ಟೆ ಮಾರುಕಟ್ಟೆ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶದಲ್ಲಿ ಸಂತೆ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಕೃಷ್ಣರಾಜ ಮಾರುಕಟ್ಟೆಯಾಗಿ ಬದಲಾಯಿತು. ಈ ಮೊದಲು ಜನಸಂದಣಿ ಕೇಂದ್ರವಾಗಿದ್ದ ಈ ಪ್ರದೇಶ, ಇತ್ತೀಚಿನ ವರ್ಷಗಳಲ್ಲಿ ವಾಹನ ಸಂಚಾರ ದಟ್ಟಣೆಯ ಕೇಂದ್ರವಾಗಿ ಪರಿವರ್ತನೆಯಾಗಿದೆ. ಸಾಮಾನ್ಯ ವಾಹನಗಳಿಗಿಂತ ವಾಣಿಜ್ಯೋದ್ಯಮದ ಭಾರೀ ವಾಹನಗಳು ಹೆಚ್ಚಾಗಿ ಈ ಮಾರ್ಗದಲ್ಲಿ ಸಂಚಾರ ಮಾಡುವುದರಿಂದ ಸಂಚಾರ ದಟ್ಟಣೆ ಜತೆಗೆ ಶಬ್ದಮಾಲಿನ್ಯ ಕೂಡ ಅಧಿಕವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇತಿಹಾಸ ತಜ್ಞರು.

ಕೇವಲ 10-14 ಕಿ.ಮೀಟರ್‌ ವೇಗ: ಈ ರಸ್ತೆಗಳಲ್ಲೇ ಪಾದಚಾರಿ ಮಾರ್ಗದಲ್ಲೇ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದು, 3-4 ಅಡಿಗಳಷ್ಟು ರಸ್ತೆ ಜಾಗವನ್ನು ಬಳಸಿಕೊಂಡಿದ್ದಾರೆ. ವ್ಯಾಪಾರಿಗಳನ್ನು ತೆರವುಗೊಳಿಸಿ ಎಂದು ಬಿಬಿಎಂಪಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಖುದ್ದು ಸಂಚಾರ ಪೊಲೀಸರು ತೆರವುಗೊಳಿಸಲು ಮುಂದಾದರೆ, ರಾಜಕೀಯ ಪ್ರಭಾವ ಎದುರಾಗುತ್ತದೆ. ಪೀಕ್‌ ಅವರ್‌ನಲ್ಲಿ ಇದು ಇನ್ನಷ್ಟು ಕ್ಷಿಣ.

ಶಬ್ದಮಾಲಿನ್ಯ ಜತೆಗೆ ಪರಿಸರ ಮಾಲಿನ್ಯ: ಈ ಜಂಕ್ಷನ್‌ಗಳಲ್ಲಿ ವಾಹನಗಳು ಉಗುಳುವ ಹೊಗೆಯ ಜತೆಗೆ ಕಸದ ವಾಸನೆಯಿಂದ ಈ ಮಾರ್ಗದಲ್ಲಿ ಸಾರ್ವಜನಿಕ ಓಡಾಡವೇ ದುಸ್ತರವಾಗಿದೆ. ತಡರಾತ್ರಿ ತರಕಾರಿ ಹೊತ್ತು ತರುವ ವಾಹನಗಳು ಸಿಗ್ನಲ್‌ ಸಮೀಪವೇ ತಾಜ್ಯ ಎಸೆದಿರುತ್ತಾರೆ. ಮತ್ತೂಂದೆಡೆ ಬಿಬಿಎಂಪಿಯ ಕಸದ ಲಾರಿಗಳು ರಸ್ತೆ ಬದಿಯೇ ನಿಲ್ಲುವುದರಿಂದಲೂ ಕೆಟ್ಟವಾಸನೆ ಬರುತ್ತದೆ.

ಪರ್ಯಾಯವೇನು?
* ವಾಹನ ಸವಾರರು ಶಿಸ್ತುಬದ್ಧವಾಗಿ ವಾಹನ ಚಾಲನೆ ಮಾಡಬೇಕು.
* ಪಾದಚಾರಿ ಮಾರ್ಗ ತೆರವುಗೊಳಿಸಿ, ಸುರಂಗ ಮಾರ್ಗ ಬಳಸಲು ಸೂಚಿಸಬೇಕು. ಇದಕ್ಕೂ ಮುನ್ನ ಸುರಂಗಗಳ ನಿರ್ವಹಣೆ ಸಮರ್ಪಕವಾಗಬೇಕು.
* ರಸ್ತೆ ಬದಿಯಲ್ಲಿ ನಡೆಯುತ್ತಿರುವ ಮಾರುಕಟ್ಟೆಯನ್ನು ಸಂಪೂರ್ಣವಾಗಿ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಿಸಬೇಕು.

ಸುರಂಗ ಮಾರ್ಗದಲ್ಲಿ ಸ್ವಚ್ಛತೆ ಇರುವುದಿಲ್ಲ. ಹೀಗಾಗಿ ವಾಹನಗಳ ಮಧ್ಯೆಯೇ ರಸ್ತೆ ದಾಟುತ್ತಾರೆ. ಸಮೀಪದಲ್ಲೇ ಬಸ್‌ ನಿಲ್ದಾಣ ಇದ್ದು, ಅದನ್ನು ಬೇರೆಡೆ ಸ್ಥಳಾಂತರಿಸಿದಾಗ ಮಾತ್ರ ಸಂಚಾರ ದಟ್ಟಣೆ ಜತೆಗೆ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ.
-ಪ್ರೊ.ಎಂ.ಎನ್‌.ಶ್ರೀಹರಿ, ಸಂಚಾರ ತಜ್ಞ

ಅವಿನ್ಯೂ ರಸ್ತೆ, ಟಿಪ್ಪು ಸುಲ್ತಾಲ್‌, ಮೈಸೂರು ರಸ್ತೆ ಸೇರಿ ಐದು ರಸ್ತೆಗಳು ಕೂಡುವ ಜಂಕ್ಷನ್‌ನಲ್ಲಿ ಮೊದಲಿನಿಂದಲೂ ಜನಸಂದಣಿ ಹೆಚ್ಚು. ಜತೆಗೆ ಭಾರೀ ವಾಹನಗಳ ಓಡಾಟದಿಂದ ಸಂಚಾರ ದಟ್ಟಣೆ ಜತೆಗೆ ಶಬ್ಧ ಮಾಲಿನ್ಯ ಕೂಡ ಅಧಿಕ.
-ಎಸ್‌.ಕೆ.ಅರುಣಿ, ಐಸಿಎಚ್‌ಆರ್‌, ಬೆಂಗಳೂರು

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next