Advertisement

ತೈಲ ಸಂಗ್ರಹಿಸಲು ಬಂದು 150 ಮಂದಿ ಸುಟ್ಟು ಭಸ್ಮ

03:45 AM Jun 26, 2017 | Team Udayavani |

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಭಾವಲ್ಪುರದಲ್ಲಿ ತೈಲ ತುಂಬಿದ ಟ್ಯಾಂಕರ್‌ ಪಲ್ಟಿಯಾಗಿ, ಸ್ಫೋಟಗೊಂಡು ಉರಿದ ಕಾರಣ ಕನಿಷ್ಠ 150 ಮಂದಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ 117 ಮಂದಿ ಗಾಯಗೊಂಡಿದ್ದಾರೆ.

Advertisement

ಇದನ್ನು ಪಾಕ್‌ ಇತಿಹಾಸದಲ್ಲೇ ಅತಿ ಭೀಕರ ದುರಂತ ಎಂದು ಬಣ್ಣಿಸಲಾಗಿದೆ. ಅವರನ್ನೆಲ್ಲ ವಿವಿಧ ಆಸ್ಪತ್ರೆಗಳಿಗೆ
ದಾಖಲಿಸಲಾಗಿದೆ. ಟ್ಯಾಂಕರ್‌ ಪಲ್ಟಿಯಾಗಿದೆ ಎಂದು ತಿಳಿದು ತೈಲ ಸಂಗ್ರಹಿಸಿಕೊಳ್ಳಲು ಬಂದ ನೂರಾರು ಮಂದಿ
ಸ್ಥಳೀಯರು ಬೆಂಕಿಗೆ ಆಹುತಿಯಾಗಿದ್ದಾರೆ.

ಜತೆಗೆ ಸ್ಥಳದಲ್ಲೇ ಇದ್ದ ಹಲವು ವಾಹನಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ರಂಜಾನ್‌ ವೇಳೆಯಲ್ಲಿ ಈ ದುರಂತ ಸಂಭವಿಸಿದ್ದು, ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್ ಅವರು ಇದನ್ನು “ರಾಷ್ಟ್ರೀಯ ದುರಂತ’ ಎಂದು ಘೋಷಿಸಿದ್ದಾರೆ.

ಆಗಿದ್ದೇನು?: ಕರಾಚಿಯಿಂದ ಲಾಹೋರ್‌ಗೆ ತೆರಳುತ್ತಿದ್ದ ತೈಲ ಟ್ಯಾಂಕರ್‌ ಪಂಜಾಬ್‌ ಪ್ರಾಂತ್ಯದ ಭಾವಲ್ಪುರದ ಅಹ್ಮದ್‌ಪುರ ಪೂರ್ವದಲ್ಲಿ ಟೈರ್‌ ಸ್ಫೋಟಗೊಂಡು ಪಲ್ಟಿಯಾಯಿತು. ಅದೇ ಸಂದರ್ಭದಲ್ಲಿ ಟ್ಯಾಂಕರ್‌ನಲ್ಲಿದ್ದ ತೈಲ ನೆಲಕ್ಕೆ ಚೆಲ್ಲತೊಡಗಿತು. ಸ್ಥಳೀಯರು ಕುತೂಹಲದಿಂದ ಅಲ್ಲಿಗೆ ಓಡೋಡಿ ಬಂದು ರಕ್ಷಣಾ ಕಾರ್ಯಕ್ಕೂ ನೆರವಾದರು.

ಅವರ ನಡುವೆಯೇ ವ್ಯರ್ಥವಾಗುತ್ತಿರುವ ತೈಲವನ್ನು ಏಕೆ ಸಂಗ್ರಹಿಸಬಾರದು ಎಂದು ಅದಕ್ಕೂ ಮುಂದಾದರು. ಹಲವರು ತೈಲ ಸಂಗ್ರಹದಲ್ಲಿ ನಿರತರಾದರು. ಅದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಸಿಗರೇಟು ಸೇದಿ ಅದನ್ನು ತೈಲದ ಮೇಲೆ ಹಾಕಿದ. ಕೂಡಲೇ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ವ್ಯಾಪಿಸಿತು. ನೋಡ ನೋಡುತ್ತಿದ್ದಂತೆಯೇ ಘಟನಾ ಸ್ಥಳದಲ್ಲಿ ಸೇರಿದ್ದ ಜನರ ಪೈಕಿ 150 ಮಂದಿ ಸುಟ್ಟು ಕರಕಲಾಗಿ ಹೋದರು. 117ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

Advertisement

ಭಾವಲ್ಪುರ ಜಿಲ್ಲಾಡಳಿತ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ರಾಣಾ ಸಲೀಮ್‌ ಮಾತನಾಡಿ, ಈ ಘಟನೆ
ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಬೀಭತ್ಸ ಘಟನೆ ಎಂದು ಹೇಳಿದ್ದಾರೆ. ವೈದ್ಯಕೀಯ ನೆರವು ಸಿಗುವುದಕ್ಕಿಂತ
ಮೊದಲೇ 123 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳ ಪೈಕಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿಯೇ ಇದೆ. ಟ್ಯಾಂಕರ್‌ನಿಂದ ಸುಮಾರು 50 ಸಾವಿರ ಲೀಟರ್‌ಗಳಷ್ಟು ತೈಲ ಸೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿ ಮೊಹಮ್ಮದ್‌ ಹನೀಫ್ ಎಂಬುವರು ಮಾಧ್ಯಮ ಪ್ರತಿನಿಧಿಗಳಿಗೆ ಆಸ್ಪತ್ರೆಯಲ್ಲಿ ಹೇಳಿದ ಪ್ರಕಾರ,
“ಉಚಿತವಾಗಿ ತೈಲ ನೀಡಲಾಗುತ್ತದೆ ಎಂದು ಸೋದರ ಸಂಬಂಧಿ ಕರೆದ. ಬಾಟಲಿಗಳನ್ನು ತೆಗೆದುಕೊಂಡು
ಮನೆಯಿಂದ ಹೊರಕ್ಕೆ ಬರುವ ವೇಳೆಯಲ್ಲಿ ಹಲವಾರು ಮಂದಿ ಹೆದ್ದಾರಿಯತ್ತ ಓಡುತ್ತಿದ್ದರು. ನಾನೂ ಅವರ ಜತೆ
ಸೇರಿಕೊಂಡೆ. ಅದೇ ಸಂದರ್ಭದಲ್ಲಿ ಟ್ಯಾಂಕರ್‌ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು. ಅದರ ಹತ್ತಿರ ಇದ್ದವರು ಸುಟ್ಟು ಕರಕಲಾಗಿ ಹೋದರು’ ಎಂದಿದ್ದಾರೆ.

ವಾಹನಗಳು ಭಸ್ಮ: ಸ್ಫೋಟದಿಂದ ಉಂಟಾದ ಬೆಂಕಿಯ ಕೆನ್ನಾಲಿಗೆಗೆ ಬೈಕ್‌ಗಳು, ಕಾರುಗಳು ಸೇರಿದಂತೆ ಹಲವು
ವಾಹನಗಳು ಆಹುತಿಯಾಗಿವೆ. ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಶಭಾಜ್‌ ಷರೀಫ್ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್, ರಾಷ್ಟ್ರಪತಿ ಮಮೂ°ನ್‌ ಹುಸೇನ್‌, ಪಾಕಿಸ್ತಾನ ತೆಹ್ರಿಕ್‌-ಇ- ಇನ್ಸಾಫ್ ಮುಖ್ಯಸ್ಥ ಇಮ್ರಾನ್‌ ಖಾನ್‌, ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಬಿಲಾವಲ್‌ ಭುಟ್ಟೋ, ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next