Advertisement

ಊರವರ ಸಹಕಾರದಿಂದಲೇ ಅಭಿವೃದ್ಧಿ ಕಂಡ ಕಾಂತಾವರ ಶಾಲೆ

11:31 PM Oct 13, 2019 | Sriram |

ಕಾಂತಾವರ: ಸರಕಾರಿ ಶಾಲೆಗಳು ಮುಚ್ಚು ತ್ತಿರುವ ಕಾಲಘಟ್ಟದಲ್ಲಿ ಕಾಂತಾವರ ಗ್ರಾಮದ ಪುಟ್ಟ ಹಳ್ಳಿಯಲ್ಲಿ ಇರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಊರಿನ ಜನರ ಶ್ರಮದ ಮೂಲಕ ಬೆಳೆ ಯುತ್ತಿದ್ದು, ತಾಲೂಕಿನ ಇತರ ಅನುದಾನಿತ ಹಾಗೂ ಸರಕಾರಿ ಶಾಲೆಗಳಿಗೂ ಮಾದರಿ ಎನಿಸಿದೆ.

Advertisement

ಪಲಿಮಾರು ಮಠದ ಸುಪರ್ದಿಗೆ
1911ರಲ್ಲಿ ಪ್ರಾರಂಭಗೊಂಡು ಮುಳಿ ಹುಲ್ಲಿನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕಾಂತಾವರ ಅನುದಾನಿತ ಶಾಲೆ ಇಂದು ಸುಸಜ್ಜಿತ ಕಟ್ಟಡಗಳನ್ನೊಳ ಗೊಂಡಿದೆ. ಪ್ರಾರಂಭದಲ್ಲಿ ಜನಾರ್ದನ ಅಯ್ಯ ಟ್ರಸ್ಟ್‌ ಮೂಲಕ ಶಾಲೆಯು ಕಾರ್ಯನಿರ್ವಹಿಸಿ, ಬಳಿಕ ಊರಿನವರ ಸಹಕಾರದಿಂದ ಕಾರ್ಯ ನಿರ್ವಹಿ ಸುತ್ತಿತ್ತು. ಕಳೆದ ಚx ವರ್ಷಗಳಿಂದ ಪಲಿಮಾರು ಮಠದ ಸುಪರ್ದಿಗೆ ಶಾಲೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

ಕಾಂತಾವರ ಅನುದಾನಿತ ಶಾಲೆಯಲ್ಲಿ 78 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. 29 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಶ್ಯಾಮಲಾ ಕುಮಾರಿ ಅವರೇ ಇದೀಗ ಮತ್ತೆ ಮುಖ್ಯ ಶಿಕ್ಷಕಿಯಾಗಿ ಉಚಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕ್ರೀಡೆಯಲ್ಲಿ ಮಾತ್ರ ತರಬೇತಿ ಪಡೆಯಲು ಕ್ರೀಡಾಂಗಣದ ಕೊರತೆಯಿತ್ತು. ಶತಮಾನಕಂಡ ಶಾಲೆಗೆ 108 ವರ್ಷಗಳಿಂದಲೂ ಕ್ರೀಡಾಂಗಣವಿಲ್ಲದೆ ಸಾವಿರಾರು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ ಎನ್ನುವ ಅಳಲು ಹೆತ್ತವರದ್ದಾಗಿತ್ತು.

ಇದನ್ನು ಮನಗಂಡ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಲೇಮಾನ್‌ ಶೇಖ್‌ ಅವರು ಶಾಲೆಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ನಿಟ್ಟಿನಲ್ಲಿ ಸುಮಾರು 0.50 ಎಕ್ರೆ ಜಾಗದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಿಕೊಟ್ಟಿದ್ದಾರೆ. ಕಾಂತಾವರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯ ಎಸ್‌. ಕೋಟ್ಯಾನ್‌ ನೇತೃತ್ವದಲ್ಲಿ ಎಲ್ಲ ಹಳೆ ವಿದ್ಯಾರ್ಥಿಗಳು, ಹೆತ್ತವರ ಪ್ರೋತ್ಸಾಹದೊಂದಿಗೆ ಒಂದು ದಿನಗಳು ನಿರಂತರ ಶ್ರಮದಾನದ ಮಾಡಿ ಮೈದಾನ ನಿರ್ಮಿಸಲಾಗಿದೆ.

Advertisement

ಜನಪ್ರತಿನಿಧಿಗಳು ಗಮನಹರಿಸಲಿ
ಶತಮಾನಕಂಡ ಶಾಲೆಯ ಅಭಿವೃದ್ಧಿಗಾಗಿ ಹೆತ್ತವರು ಹಳೆ ವಿದ್ಯಾರ್ಥಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಶಾಲೆಗೆ ಖಾಯಂ ಶಿಕ್ಷಕರ ನೇಮಕದ ಜತೆ ಇತರ ಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ ಸರಕಾರದ ಗಮನ ಸೆಳೆಯುವ ಕಾರ್ಯವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪೂರ್ಣಕಾಲಿಕ ಶಿಕ್ಷಕರಿಲ್ಲ
ಗೌರವ ಶಿಕ್ಷಕಿಯರಾಗಿ 5 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಾಲೆಗೆ ಪೂರ್ಣಕಾಲಿಕ ಶಿಕ್ಷಕರಿಲ್ಲ ದಿದ್ದರೂ ಗ್ರಾಮಸ್ಥರ ಸಹಕಾರದಿಂದಗೌರವ ಶಿಕ್ಷಕರನ್ನು ನೇಮಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡ ಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ವೃದ್ಧಿಸುತ್ತಿದ್ದರೂ ಸರಕಾರ ಮಾತ್ರ ಶಿಕ್ಷಕರ ನೇಮಿಸುವಲ್ಲಿ ಗಮನಹರಿಸುತ್ತಿಲ್ಲ. ಸರಕಾರವು ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡುವ ಮೂಲಕ ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.

ವಿದ್ಯಾರ್ಥಿಗಳಿಗೆ ಅನುಕೂಲ
ಮಕ್ಕಳಿಗೆ ಕ್ರೀಡಾಂಗಣವಿಲ್ಲದೆ ತೊಡಕಾಗಿತ್ತು. ಈ ಸಮಸ್ಯೆಯನ್ನೂ ಇದೀಗ ಬಗೆಹರಿಸಲಾಗಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
-ಧರ್ಮರಾಜ ಕಂಬಳಿ,
ತರಬೇತಿದಾರರು

ಊರಿನವರ ಪ್ರೋತ್ಸಾಹ
ಊರಿನವರ ಪ್ರೋತ್ಸಾಹದಿಂದ ಶಾಲೆಯು ಅಭಿವೃದ್ಧಿಗೊಳ್ಳುತ್ತಿದ್ದು, ಆಟದ ಮೈದಾನದಜತೆಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೋಬ್ಬರೂ ಕೈ ಜೋಡಿಸುವ ಮೂಲಕ ಕನ್ನಡ ಶಾಲೆ ಉಳಿಸುವ ಕಾರ್ಯವಾಗಬೇಕು.
-ಜಯ ಎಸ್‌. ಕೋಟ್ಯಾನ್‌,
ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ

ಪ್ರತಿಯೊಬ್ಬರೂ ಕೈಜೋಡಿಸಿ
ನಾ ಕಲಿತ ಶಾಲೆಗೆ ಆಟದ ಮೈದಾನ ನಿರ್ಮಿಸುವ ಅವಕಾಶ ಸಿಕ್ಕಿರುವುದಕ್ಕೆ ನಾನು ಕೃತಜ್ಞ. ಈ ಮೂಲಕ ನನ್ನ ಬಹುದಿನಗಳ ಕನಸು ನನಸಾದಂತಾಗಿದೆ. ಹಾಗೆಯೇ ಕನ್ನಡ ಶಾಲೆಯ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು.
– ಸುಲೇಮಾನ್‌ ಶೇಖ್‌,
ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು

-ಸಂದೇಶ್‌ಕುಮಾರ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next