Advertisement

ಕಾದಂಬರಿ ಚಿತ್ರಕ್ಕೆ ತಾಳ್ಮೆ-ಜಾಣ್ಮೆ ಬೇಕು- ಬಿ.ಎಲ್‌.ವೇಣು

06:00 AM Nov 23, 2018 | |

ಕನ್ನಡ ಚಿತ್ರರಂಗ ಇದೀಗ ಗರಿಗೆದರಿ ನಿಂತಿದೆ. ಒಂದು ಕಡೆ ಹೊಸಬರು ಹೊಸ ಕಥೆಯೊಂದಿಗೆ ಪ್ರತಿಭೆ ಅನಾವರಣಗೊಳಿಸುತ್ತಿದ್ದರೆ, ಇನ್ನೊಂದು ಕಡೆ ಈಗಿನ ಟ್ರೆಂಡ್‌ಗೂ ಮೀರಿ ಐತಿಹಾಸಿಕ ಚಿತ್ರಗಳು ಸದ್ದು ಮಾಡುತ್ತಿವೆ. ಒಂದೊಳ್ಳೆಯ ಕಥೆ ಕಟ್ಟಿ ಸಿನಿಮಾ ಮಾಡುವುದು ಕಷ್ಟವಲ್ಲ. ಆದರೆ, ಐತಿಹಾಸಿಕ ಕಾದಂಬರಿ ಇಟ್ಟುಕೊಂಡು “ದಾಖಲೆ’ ಚಿತ್ರ ಕಟ್ಟಿಕೊಡುವ ಪ್ರಯತ್ನ ಮೆಚ್ಚಲೇಬೇಕು. ಕನ್ನಡದಲ್ಲೀಗ ಐತಿಹಾಸಿಕ ಚಿತ್ರಗಳ ಪರ್ವ ಅಂದರೆ ತಪ್ಪಿಲ್ಲ. ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನಲ್ಲೇ ದರ್ಶನ್‌ಗಾಗಿ “ಗಂಡುಗಲಿ ಮದಕರಿ ನಾಯಕ’ ಚಿತ್ರದ ತಯಾರಿ ನಡೆಯುತ್ತಿದೆ. ಇನ್ನು, ಸುದೀಪ್‌ ಅಭಿನಯದಲ್ಲಿ ಮತ್ತೂಂದು “ಮದಕರಿ ನಾಯಕ’ ಕುರಿತ ಚಿತ್ರವೂ ಸೆಟ್ಟೇರುತ್ತಿದೆ. ಈ ಮಧ್ಯೆ “ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ’ ಎಂಬ ಇನ್ನೊಂದು ಐತಿಹಾಸಿಕ ಚಿತ್ರವೂ ಶುರುವಾಗುತ್ತಿದೆ. ಈ ಐತಿಹಾಸಿಕ ಚಿತ್ರಗಳು ಹುಟ್ಟು ಪಡೆಯಲು ಕಾರಣ ಯಾರೆಂಬ ಪ್ರಶ್ನೆ ಎದುರಾದರೆ, ಮದಕರಿ ನಾಯಕರ ಕುರಿತು ಐತಿಹಾಸಿಕ ಕಾದಂಬರಿ ಬರೆದಿರುವ ಬಿ.ಎಲ್‌.ವೇಣು ಎಂಬ ಉತ್ತರ ಬರುತ್ತೆ. ಹೌದು, ಬಿ.ಎಲ್‌. ವೇಣು ಅವರ ಐತಿಹಾಸಿಕ ಕಾದಂಬರಿಯೊಂದು ಅದಾಗಲೇ ಚಿತ್ರವಾಗಿ, ರಾಷ್ಟ್ರಪ್ರಶಸ್ತಿ ಪಡೆದಿದ್ದು ಗೊತ್ತೇ ಇದೆ. ಈಗ ಅವರ ಎರಡು ಐತಿಹಾಸಿಕ ಕೃತಿಗಳು ಐತಿಹಾಸಿಕ ಚಿತ್ರಗಳಾಗುತ್ತಿವೆ ಎಂಬುದೇ ವಿಶೇಷ.

Advertisement

ಚಿತ್ರ ರೂಪ ತಾಳುತ್ತಿರುವ ಐತಿಹಾಸಿಕ ಕಾದಂಬರಿ
 ಬಿ.ಎಲ್‌.ವೇಣು ಗಂಡುಮೆಟ್ಟಿದ ನಾಡು ಚಿತ್ರದುರ್ಗದ ಮಣ್ಣಲ್ಲಿ ಹುಟ್ಟಿ, ಆಡಿ, ಬೆಳೆದವರು. ಅವರು ಸಿನಿಮಾಗಾಗಿ ಕಾದಂಬರಿ ಬರೆದವರಲ್ಲ. ಕಾದಂಬರಿ ಸಲುವಾಗಿ ಯೋಚಿಸಿ, ವಸ್ತು ಆಯ್ಕೆ ಮಾಡಿ ಧಾರಾವಾಹಿಗಳಾಗಿ ಬರೆದು ಪತ್ರಿಕೆಗಳಿಗೆ ಕಳುಹಿಸುವ ಹವ್ಯಾಸ ಅವರದ್ದಾಗಿತ್ತು. ಅವರ ಕಾದಂಬರಿಗಳಲ್ಲಿ ಸಿನಿಮಾ ಆಗಿ ಹಣಗಳಿಸುವ ಗುಣಗಳಿವೆ ಎಂಬುದನ್ನು ಮನಗಂಡ ನಿರ್ದೇಶಕರು, ಅವರ ಕೃತಿಗಳನ್ನು ಆಯ್ಕೆ ಮಾಡಿ, ಅವರ ಕಾದಂಬರಿಯಲ್ಲಿನ ಸಂಭಾಷಣೆಗಳ ನಾವೀನ್ಯತೆ ಆ ನಿರ್ದೇಶಕರಿಗೆ ಹಿಡಿಸಿದ್ದರಿಂದಲೇ ವೇಣು ಅವರಿಗೆ, ಸಿನಿಮಾಗೂ ಸಂಭಾಷಣೆ ಬರೆಯುವ ಅವಕಾಶ ಕೊಟ್ಟರು. ಜೊತೆಗೊಂದು ಷರತ್ತು ಇಟ್ಟರು. ಸಂಭಾಷಣೆ ಚೆನ್ನಾಗಿದ್ದರೆ ಇಟ್ಕೊತೇವೆ. ಇಲ್ಲವಾದರೆ ಉದಯಶಂಕರ್‌ ಹತ್ತಿರ ಬರೆಸ್ತೇವೆ ಎಂಬ ಕಂಡೀಷನ್‌ ಹಾಕಿಯೇ ಬರೆಸಿದ್ದುಂಟು. ವೇಣು ಸಹ, ಸಿಕ್ಕ ಅವಕಾಶ ಬಿಡದೆ, ಬರೆದುಕೊಟ್ಟಿದ್ದೂ ಉಂಟು. ಅವರ ಸಿನಿಮಾ ಸಂಭಾಷಣೆ ನಿರ್ದೇಶಕರಿಗೆ ಇಷ್ಟವಾಯಿತು. ಮುಖ್ಯವಾಗಿ ಆ ಚಿತ್ರ ಬಿಡುಗಡೆ ನಂತರ ಜನರಿಗೂ ಹಿಡಿಸಿತು. ಅಲ್ಲಿಂದ ವೇಣು ಸಿನಿಪಯಣ ಶುರುವಾಯಿತು.

ವೇಣು ಅವರಿಗೆ ಸರಿ ಸುಮಾರು ನಾಲ್ಕು ದಶಕಗಳಿಂದಲೂ ಚಿತ್ರರಂಗದ ನಂಟಿದೆ. ಇಷ್ಟು ವರ್ಷಗಳಲ್ಲಿ ವೇಣು ಅವರ ಕಾದಂಬರಿಯ ಚಿತ್ರಗಳಾವು? ಈ ಪ್ರಶ್ನೆಗೆ ಸ್ವತಃ ವೇಣು ಕಾದಂಬರಿ ಪಟ್ಟಿ ಹೇಳುವುದು ಹೀಗೆ. “ನನ್ನ ಮೊದಲ ಕಾದಂಬರಿ “ದೊಡ್ಡಮನೆ ಎಸ್ಟೇಟ್‌’ ಚಿತ್ರವಾಯ್ತು. ಆ ಬಳಿಕ “ಬೆತ್ತಲೆಸೇವೆ’, “ಪರಾಜಿತ’, “ಪ್ರೇಮಪರ್ವ’, “ಅಜೇಯ’, “ಪ್ರೀತಿ ವಾತ್ಸಲ್ಯ’, “ಪ್ರೇಮಜಾಲ’, “ರಾಮ ರಾಜ್ಯದಲ್ಲಿ ರಾಕ್ಷಸರು”, ಐತಿಹಾಸಿಕ ಕಾದಂಬರಿ “ಕಲ್ಲರಳಿ ಹೂವಾಗಿ’, “ತಿಪ್ಪಜ್ಜಿ ಸರ್ಕಲ್‌’ ಕಾದಂಬರಿಗಳು ಚಿತ್ರವಾಗಿವೆ. ಈ ಪೈಕಿ “ಕಲ್ಲರಳಿ ಹೂವಾಗಿ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ವಿಶೇಷ. ಇನ್ನು, ಮುಕ್ತಾಯ ಹಂತದಲ್ಲಿರುವ ಐತಿಹಾಸಿಕ ಕಾದಂಬರಿ ಆಧಾರಿತ “ಚಿತ್ರದುರ್ಗದ ಒನಕೆ ಓಬವ್ವ’. ಕಥೆಗಳ ಆಧಾರಿತ “ದನಗಳು’ ಮತ್ತು “ಕಾಲೇಜ್‌’ ಚಿತ್ರಗಳು ಚಿತ್ರೀಕರಣ ಮುಗಿಸಿವೆ. ಈಗ ದರ್ಶನ್‌ ಅಭಿನಯಿಸುತ್ತಿರುವ “ಗಂಡುಗಲಿ ಮದಕರಿ ನಾಯಕ’ ಹಾಗೂ ಹೊಸಬರು ಮಾಡುತ್ತಿರುವ “ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ’ ಐತಿಹಾಸಿಕ ಕೃತಿಗಳು ಚಿತ್ರಗಳಾಗುವ ಸಿದ್ಧತೆ ನಡೆದಿದೆ. ಈ ಎರಡೂ ಚಿತ್ರಗಳಿಗೆ ನಾನೀಗ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದೇನೆ. ಸಂತಸವೆಂದರೆ, ನನ್ನ ನಾಲ್ಕು ಐತಿಹಾಸಿಕ ಕಾದಂಬರಿಗಳು ಚಿತ್ರಗಳಾಗುತ್ತಿರುವುದು ವಿಶೇಷತೆಗಳಲ್ಲೊಂದು’ ಎಂದು ಖುಷಿಗೊಳ್ಳುತ್ತಾರೆ ವೇಣು.

ಮೂರು ತಲೆಮಾರಿನ ನಟರಿಗೆ ಮಾತು ಬರೆದ ಖ್ಯಾತಿ
ಹಾಗೆ ನೋಡಿದರೆ, ವೇಣು ಅವರು ಸಾಹಿತಿ. ಅವರಿಗೆ ಸಿನಿಮಾ ನಂಟು ಬೆಳೆದದ್ದು ಹೇಗೆ? ಇದಕ್ಕೆ ಉತ್ತರಿಸುವ ವೇಣು, “ನಾನಾಗಿಯೇ ಈ ಚಿತ್ರರಂಗಕ್ಕೆ ಬರಲಿಲ್ಲ. ನಾನೊಬ್ಬ ಮೂಲತಃ ಸರ್ಕಾರಿ ನೌಕರ. ಮೂಲಭೂತವಾಗಿ ಸಾಹಿತಿ. ನನ್ನ ಕಾದಂಬರಿಗಳ ಮೂಲಕ ಚಿತ್ರರಂಗ ಪ್ರವೇಶಿಸಿದೆ. ನನ್ನಿಂದಲೇ ಸಂಭಾಷಣೆಯನ್ನೂ ಬರೆಸಿದರು. ಆಗ ಸಿನಿಮಾ ಸಾಹಿತ್ಯ ದಿಗ್ಗಜರಾದ ಚಿ. ಉದಯಶಂಕರ್‌, ಜಯಗೋಪಾಲ್‌, ಕುಣಿಗಲ್‌ ನಾಗಭೂಷಣ್‌, ಹುಣಸೂರು ಕೃಷ್ಣಮೂರ್ತಿಯಂತಹ ಮಹನೀಯರುಗಳಿದ್ದರು. ಹೊರಗಿನಿಂದ ಹೋದವನು ನಾನು ಹೇಗೋ ಈ ಚಿತ್ರರಂಗದಲ್ಲಿ ಉಳಿದುಕೊಂಡೆ. ಅದಕ್ಕೆ ಚಿತ್ರಗಳ ಯಶಸ್ಸು, ಸಿನಿಮಾ ಪ್ರೇಕ್ಷಕರು ಹಾಗೆಯೇ ನನ್ನಿಂದ ಬರೆಸಿದ ನಿರ್ಮಾಪಕ, ನಿರ್ದೇಶಕರುಗಳು ಇದಕ್ಕೆ ಮುಖ್ಯ ಕಾರಣ. ನಾನು ಕಥೆ, ಸಂಭಾಷಣೆ ಬರೆದ ಚಿತ್ರಗಳ ಸಂಖ್ಯೆ ಇಲ್ಲಿಯವರೆಗೆ 70 ರಗಡಿಯಲ್ಲಿದೆ. ಸರ್ಕಾರಿ ನೌಕರಿ (ಈಗ ನಿವೃತ್ತಿ) ಬಿಡೆದೆ, ಕಾದಂಬರಿ ರಚನೆಯನ್ನೂ ಬಿಡದೆ, ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೇನೆ. ಇದೆಲ್ಲಾ ಬಯಸದೆ ದೊರೆತ ಭಾಗ್ಯ. ಇಲ್ಲಿ ನನಗಾವ ಗಾಡ್‌ಫಾದರ್‌ಗಳಿಲ್ಲ. ಗಾಡೇ ಫಾದರ್‌’ ಎಂಬುದು ವೇಣು ಪ್ರೀತಿಯ ಮಾತು.

ಕಾದಂಬರಿಯೊಳಗಿನ ಸಾರವೇ ಬೇರೆ, ಸಿನಿಮಾದೊಳಗಿನ ಸತ್ವವೇ ಬೇರೆ. ಕಾದಂಬರಿ ಮಾತುಗಳು ಸಿನಿಮಾಗೆಷ್ಟು ಪೂರಕವಾಗುತ್ತವೆ ಎಂಬ ಮಾತಿಗೆ, ದನಿಯಾಗುವ ವೇಣು, “ಕಾದಂಬರಿ ಮಾತುಗಳು ಸಿನಿಮಾಗೆ ಉಪಯೋಗ ಎಂಬುದೆಲ್ಲ ಅಸಾಧ್ಯ. ಸಿನಿಮಾ ಬಯಸುವುದೇ ಬೇರೆ. ಕಾದಂಬರಿ ತೆಗೆದುಕೊಂಡು ದೃಶ್ಯ ಮಾಧ್ಯಮಕ್ಕೆ ಬೇಕಾದಂತೆ ಚಿತ್ರಕಥೆ ಹೆಣೆದಾಗ, ಅದರ ಸ್ವರೂಪ, ಸನ್ನಿವೇಶ, ಪಾತ್ರಗಳ ಸ್ವಭಾವ ಸಾಹಿತ್ಯದ ಎಲ್ಲೆಯನ್ನೂ ಮೀರಿ ಬೆಳೆಯುತ್ತವೆ. ಅನಕ್ಷರಸ್ಥರಿಗೂ ತಲುಪಬೇಕಿರುತ್ತದೆ. ರಂಜನೆ, ಬೋಧನೆಯೂ ಇರಬೇಕು. ಮಾತಿಗೆ ಶೀಟಿ, ಚಪ್ಪಾಳೆ ಬೀಳಬೇಕು. ಅಳುವೂ ಬೇಕು, ನಗುವೂ ಬೇಕು. ಸಿನಿಮಾದಲ್ಲಿ ಹಲವು ಸೂತ್ರಗಳಿರುತ್ತವೆ. ಹೀಗಾಗಿ ಬಹಳಷ್ಟು ತಾಳ್ಮೆ, ಜಾಣ್ಮೆ, ಶ್ರಮವನ್ನು ಸಿನಿಮಾ ಬರಹ ಬಯಸುತ್ತದೆ. ಅದ್ಯಾವ ಮಹಾ ಸಿನಿಮಾಕ್ಕೆ ಬರೆಯೋದು ಅನ್ನುವ ಮಂದಿಯೂ ಇದ್ದಾರೆ. ಅಂಥವರಿಗೆ ಚಲನಚಿತ್ರ ಸಂಭಾಷಣೆ, ಗೀತೆಗಳಿಗಿರುವ ಸಾಮರ್ಥ್ಯವಾಗಲಿ, ಅವುಗಳು ಸಮಾಜದ ಮೇಲೆ ಬೀರುವ ಪ್ರಭಾವ ಎಷ್ಟಿರುತ್ತೆ ಎಂಬುದು ಅಷ್ಟಾಗಿ ಗೊತ್ತಿರಲ್ಲ. ಹೀಗೆಂದಾಕ್ಷಣ, ಬರೆದದ್ದೆಲ್ಲಾ ಅಮೋಘವಲ್ಲ. ಈ ಮಾತು ಸಾಹಿತ್ಯ ಕೃತಿಗಳಿಗೂ ಅನ್ವಯಿಸುತ್ತದೆ ಎನ್ನುವ ವೇಣು, ಇಷ್ಟು ವರ್ಷಗಳ ಕಾಲ ಮಹನೀಯ ನಟರ ಜೊತೆ ಕೆಲಸ ಮಾಡಿದ್ದನ್ನು ಹೇಳಿಕೊಳ್ಳುತ್ತಾರೆ. “ಡಾ. ರಾಜ್‌ಕುಮಾರ್‌ ಉಳಿದಂತೆ ಆಗಿನ ಎಲ್ಲಾ ನಟರುಗಳ ಚಿತ್ರಗಳಿಗೂ ಬರೆದೆ. ಈಗಲೂ ಬರೆಯುತ್ತಿದ್ದೇನೆ.  ಮೂರು ತಲೆಮಾರಿನ ನಟರಿಗೆ ಸಂಭಾಷಣೆ ರಚಿಸಿದ ಏಕೈಕ ಸಂಭಾಷಣಾಕಾರ ಎಂದು ಚಿತ್ರರಂಗ ಗುರುತಿಸಿದೆ. ಅದೊಂದು ಖುಷಿಯ ವಿಷಯ. ಆಗಿನ ಹಿರಿಯ ನಟರಾದ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಜಮಾನದಲ್ಲಿ ವಿಷ್ಣು, ಅಂಬಿ, ಅನಂತನಾಗ್‌ ಅವರಿಗೆ, ನಂತರ ಬಂದ ಉಪೇಂದ್ರ ಸಾಯಿಕುಮಾರ್‌ ಈಗಿನ ಮಾಸ್‌ ಹೀರೋ ದರ್ಶನ್‌, ನಟರಾದ ವಿಜಯ ರಾಘವೇಂದ್ರ ಸೇರಿದಂತೆ ಇತರರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅಂತೆಯೇ ಪ್ರತಿಭಾನ್ವಿತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ, ದೊರೆ-ಭಗವಾನ್‌, ಕೆ.ವಿ.ಜಯರಾಮ್‌, ಟಿ.ಎಸ್‌. ನಾಗಾಭರಣ, ಭಾರ್ಗವ, ರಾಜೇಂದ್ರಸಿಂಗ್‌ ಬಾಬು, ಡಿ. ರಾಜೇಂದ್ರಬಾಬು, ಶಿವಮಣಿ, ವಿಜಯ್‌, ಸೋಮಶೇಖರ್‌, ಸಾಯಿಪ್ರಕಾಶ್‌, ಮಹೇಂದರ್‌, ಆದಿತ್ಯ ಚಿಕ್ಕಣ್ಣ ರಿಂದ ಇಂದಿನ ಯುವ ನಿರ್ದೇಶಕ ಹರಿಸಂತೋಷ್‌ ಅವರ ಜೊತೆಗೂ ದುಡಿಯುತ್ತಿದ್ದೇನೆ ಎಂಬ ಹೆಮ್ಮೆ ಅವರದು.

Advertisement

ಕಾದಂಬರಿ ಚಿತ್ರವಾಗುತ್ತಿರೋದು ಶುಭ ಸೂಚನೆ
ಇದೆಲ್ಲಾ ಸರಿ, ಕನ್ನಡದಲ್ಲಿ ಸಾಕಷ್ಟು ಕಾದಂಬರಿಗಳಿವೆ. ಆದರೂ ಅವುಗಳ ಆಧಾರಿತ ಚಿತ್ರಗಳ ನಿರ್ಮಾಣವಾಗುತ್ತಿಲ್ಲವಲ್ಲ ಅಂತ ಪ್ರಶ್ನೆ ಮುಂದಿಟ್ಟರೆ, “ನಮ್ಮ ಸಿನಿಮಾದವರಲ್ಲಿ ಓದುವ ಆಸಕ್ತಿಯೇ ಇಲ್ಲವಲ್ಲ…! ಎಂದು ಹೇಳಿ ಹಾಗೊಂದು ಸಣ್ಣ ನಗು ಹೊರಹಾಕುತ್ತಾರೆ. ಇಲ್ಲಿ ಬಹು ಮುಖ್ಯವಾಗಿ ಈಗಿನ ಕೆಲ ನಿರ್ದೇಶಕರಲ್ಲಿ ಅಂತಹ ಅಭಿರುಚಿ ಇಲ್ಲ. ಇನ್ನು ಹೀರೋಗಳ ಮಾತು ದೂರವೇ ಉಳಿಯಿತು. ಹಿಂದೆಲ್ಲಾ ಡಾ. ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌, ಅನಂತ್‌ನಾಗ್‌ ಅಂಥವರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು.  ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ, ದೊರೆ-ಭಗವಾನ್‌, ಕೆ.ವಿ. ಜಯರಾಮ್‌, ಟಿ.ಎಸ್‌. ನಾಗಾಭರಣ, ಗೀತಪ್ರಿಯರಂಥವರು ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿ ಗೆದ್ದವರು. ಅದು ಕೂಡ ಗೆಲುವಿನ ಸೂತ್ರವಾಗಿತ್ತು. ಈಗಿನವರಿಗೆ ಕಾದಂಬರಿ ಆಧಾರಿತ ಚಿತ್ರಗಳಿಗೆ ಚಿತ್ರಕಥೆ ಮಾಡುವ ತಾಳ್ಮೆಯಾಗಲಿ, ಜಾಣ್ಮೆಯಾಗಲಿ ಇದ್ದಂತಿಲ್ಲ. ರಿಮೇಕ್‌ ಸಿನಿಮಾ ಭಟ್ಟಿ ಇಳಿಸುವವರಿಗೆ ಓದು ಹಿಡಿಸುವುದೂ ಇಲ್ಲ ಬಿಡಿ. ಇಂತಹ ಸಂಕೀರ್ಣತೆಯಲ್ಲಿ ಕೆಲವರ ಕಥೆ ಕಾದಂಬರಿಗಳಾದರೂ ಚಲನಚಿತ್ರ ರೂಪ ತಾಳುತ್ತಿರುವುದು ಶುಭ ಸೂಚನೆ. ಅದರಲ್ಲೂ ಐತಿಹಾಸಿಕ ಕಾದಂಬರಿಗಳು ಚಲನಚಿತ್ರಗಳಾಗುತ್ತಿರುವುದು ಹೆಗ್ಗಳಿಕೆಯ ಸಂಗತಿ. ಇದಕ್ಕೆ ಹೆಚ್ಚು ಹಣವೂ, ಶ್ರಮವೂ ಬೇಕು. ಇದೊಂಥರಾ ಟ್ರೆಂಡ್‌ ಸೃಷ್ಟಿಸಿದರೆ ಒಳ್ಳೆಯದೇ’ ಎಂಬುದು ವೇಣು ಮಾತು.

ಅದೇನೆ ಇರಲಿ, ವೇಣು ಅವರ ಐತಿಹಾಸಿಕ ಕಾದಂಬರಿ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದು, ಆ ಚಿತ್ರಗಳಿಗೆ ವೇಣು ಅವರ ಮಾತುಗಳೇ ತುಂಬಿರುವುದು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಹಾಗೆ ನೋಡಿದರೆ, ವೇಣು ಅವರೀಗ ಚಿತ್ರರಂಗದಲ್ಲಿ ಫ‌ುಲ್‌ಟೈಮ್‌ ಬಿಝಿಯಂತೂ ಹೌದು.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next