Advertisement

ಮತ್ತೂಂದು ವಾರ ಸಮಯ ಕೋರಿದ ಪಾಲಿಕೆ

11:03 AM Oct 27, 2017 | Team Udayavani |

ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ 15 ದಿನಗಳ ಗಡುವು ಗುರುವಾರ ಮುಗಿದಿದೆ. ಆದರೆ, ಗುಂಡಿಗಳಿಂದ ಜನರಿಗೆ ಮುಕ್ತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಒಂದು ವಾರದ ಕಾಲಾವಕಾಶ ನೀಡುವಂತೆ ಬಿಬಿಎಂಪಿ ಕೋರಿದೆ. 

Advertisement

ನಿರಂತರ ಮಳೆಯಿಂದ ನಗರದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳು ಸೇರಿ 33 ಸಾವಿರ ಗುಂಡಿಗಳಿವೆ ಎಂದು ಅಂದಾಜಿಸಲಾಗಿತ್ತು. ಈ ಪೈಕಿ ಶೇ. 92ರಷ್ಟು ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ ಶೇ. 8ರಷ್ಟು ದುರಸ್ತಿ ಕಾರ್ಯ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಬಿಬಿಎಂಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. 

ಈ ಮಧ್ಯೆ ಗಡುವು ಮುಗಿದ ಬೆನ್ನಲ್ಲೇ ಗುರುವಾರ ಸಂಜೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಎಚ್ಚರಿಸಿದ್ದಾರೆ. ಯಾವುದೇ ಕಾರಣಕ್ಕೂ ಎಲ್ಲಿಯೂ ರಸ್ತೆ ಗುಂಡಿಗಳನ್ನು ಕಾಣಕೂಡದು ಎಂದು ಖಡಕ್‌ ಸೂಚನೆ ನೀಡಿದರು. 

ಮತ್ತೂಂದೆಡೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ನಗರದ ವಿವಿಧ ಭಾಗಗಳಲ್ಲಿ ಮುಂದುವರಿದಿದೆ. ಗುರುವಾರ ರಾಜೇಂದ್ರನಗರ, ಆಡುಗೋಡಿ, ವಿವೇಕಾನಂದ ನಗರ, ಲ್ಯಾಂಗ್‌ಫೋರ್ಡ್‌ ರಸ್ತೆ ಸೇರಿದಂತೆ ನಗರದ ಕೋರ್‌ ಏರಿಯಾದಲ್ಲಿ ಸುಮಾರು 350 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next