Advertisement

ಕೃಷಿಯಲ್ಲಿ ಹೊಸ-ಹೊಸ ಆವಿಷ್ಕಾರವೇ ಇವರ ಕಾಯಕ

05:34 PM Mar 18, 2017 | Team Udayavani |

ಕೋಟ : ಕೃಷಿಯಿಂದ ನಷ್ಟವೇ ಜಾಸ್ತಿ ಎನ್ನುವ ಕಾರಣ ನೀಡಿ ಅನೇಕ ಮಂದಿ ಕೃಷಿಯಿಂದ ವಿಮುಖರಾಗುತ್ತಾರೆ. ಇದರ  ಜತೆಗೆ ಒಂದಷ್ಟು ಮಂದಿ ಅದರಲ್ಲೇ ಹೊಸತನವನ್ನು ಹುಡುಕುತ್ತ ಆವಿಷ್ಕಾರಗಳನ್ನು ಮಾಡಿ ಯಶಸ್ವಿಯಾಗಿ ಕೃಷಿಯಲ್ಲೇ ಖುಷಿಪಡುತ್ತಿರುತ್ತಾರೆ. ಇಂಥವರ ಸಾಲಿನಲ್ಲಿ ಗುರುತಿಸ ಬಹುದಾದ ಪ್ರಗತಿಪರ ಕೃಷಿಕರೇ ಕೋಟದ ಪಾರಂಪಳ್ಳಿಯ ರವೀಂದ್ರ  ಐತಾಳ. ಇವರು ಕೃಷಿಯಲ್ಲಿ ಸದಾ ಹೊಸತನವನ್ನು ಹುಡುಕುವ ತುಡಿತ ಹೊಂದಿರುವವರು ಹಾಗೂ ಕೃಷಿಯನ್ನು  ಲಾಭದಾಯಕವಾಗಿಸಿಕೊಳ್ಳಲು ಹೊಸ-ಹೊಸ ಆವಿಷ್ಕಾರಗಳಲ್ಲಿ ತೊಡಗಿರುವವರು.

Advertisement

ಪ್ರತಿ ವರ್ಷ ಹೊಸ ತಳಿಗಳ ಪರಿಚಯ ಬೇರೆ-ಬೇರೆ ಜಿಲ್ಲೆಗಳ ಸಮೃದ್ಧವಾದ ಇಳುವರಿ ನೀಡುವ ಭತ್ತದ ತಳಿಗಳ ಕುರಿತು ಕೃಷಿ ಪರಿಣತರಿಂದ ಮಾಹಿತಿ ಪಡೆದು ಹಾಗೂ ಬೇರೆ-ಬೇರೆ ಕಡೆ ನಡೆಯುವ  ಕೃಷಿ ಮೇಳಗಳಿಗೆ ತೆರಳಿ ಅಲ್ಲಿನ ಹೊಸತನವನ್ನು ಅಧ್ಯಯನ ಮಾಡಿ, ಹೊಸ ತಳಿಯನ್ನು ತನ್ನೂರಿಗೆ ತಂದು ಪ್ರಯೋಗ ರೀತಿಯಲ್ಲಿ ಬೆಳೆ ಬೆಳೆಯುತ್ತಾರೆ ಹಾಗೂ ಇದರಿಂದ ಉತ್ತಮ ಫಲಿತಾಂಶ ಕೂಡ ಪಡೆದಿದ್ದಾರೆ. ಈ ಬಾರಿ ಒಂದು ಎಕ್ರೆ ಜಮೀನಿನಲ್ಲಿ ತೀರ್ಥಳ್ಳಿ ಕರಿದಡಿ, ಬಿಳಿ ಸೋನಾ ಮಸೂರಿ ಮುಂತಾದ ಹೊಸ ತಳಿಗಳನ್ನು ನಾಟಿ ಮಾಡಿ ಯಶಸ್ವಿಯಾಗಿದ್ದಾರೆ.

ಕೃಷಿಯಿಂದ ವಿಮುಖವಾಗುವವರಿಗೆ
ಧೈರ್ಯ ತುಂಬುವ ಕಾರ್ಯ 

ಕಾರ್ಮಿಕರ ಸಮಸ್ಯೆಯಿಂದ ಕೃಷಿಯಿಂದ ವಿಮುಖವಾಗುವ ಆಲೋಚನೆಯಲ್ಲಿರುವ ರೈತರಿಗೆ ಧೈರ್ಯ ತುಂಬುವ ಇವರು, ಅಂತವರ ಜಮೀನಿಗೆ ತನ್ನದೇ ಕಾರ್ಮಿಕರು,  ಟಿಲ್ಲರ್‌  ಮುಂತಾದ ಸಲಕರಣೆಗಳನ್ನು  ತೆಗೆದುಕೊಂಡು ಹೋಗಿ ಅವರ ಶ್ರಮವಿಲ್ಲದಂತೆ  ಕಡಿಮೆ ಮೊತ್ತದಲ್ಲಿ ಪ್ರತಿ ವರ್ಷ ಅನೇಕ ರೈತರಿಗೆ  ನಾಟಿ, ಕಟಾವು ಮಾಡಿಕೊಡುತ್ತಾರೆ. ಈ  ಮೂಲಕ ಅವರಲ್ಲಿ ಕೃಷಿ ಮುಂದುವರಿಸಲು ದೈರ್ಯ ತುಂಬುತ್ತಾರೆ.ಒಟ್ಟಾರೆ ಕೃಷಿ ಲಾಭದಾಯಕವಲ್ಲ, ಕೃಷಿಯಿಂದ ಯಾವುದೇ ಪ್ರಯೋಜನ ವಿಲ್ಲ ಎನ್ನುವವರ ನಡುವೆ ಇಂತಹ ಪ್ರಗತಿಪರ ಕೃಷಿಕರು ಸಮಾಜದಲ್ಲಿ ಮಾದರಿಯಾಗಿ ಕಂಡುಬರುತ್ತಾರೆ. 

ಕೃಷಿ ಯಂತ್ರಗಳ ಆವಿಷ್ಕಾರ 
ಕೃಷಿ ಕಾರ್ಯವನ್ನು ಸರಳಗೊಳಿಸುವ ಸಲುವಾಗಿ ಇವರೇ ಸ್ವತಃ ಹೊಸ-ಹೊಸ ಯಂತ್ರಗಳ  ಆವಿಷ್ಕರಣೆಯಲ್ಲಿ ತೊಡಗುತ್ತಾರೆ. ಆದರಲ್ಲೂ ಇವರು ತಯಾರಿಸಿದ ಭತ್ತ ಬೇರ್ಪಡಿಸುವ ಯಂತ್ರ ಬಹಳ ಜನಪ್ರಿಯತೆ ಗಳಿಸಿದೆ ಹಾಗೂ ಕಳೆ ತೆಗೆಯಲು, ಔಷಧ ಸಿಂಪಡಿಸಲು ಹಲವಾರು ಯಂತ್ರಗಳನ್ನು ತಯಾರಿಸಿದ ಹೆಗ್ಗಳಿಕೆ ಇವರಿಗೆ  ಸಲ್ಲುತ್ತದೆ.

ಕೃಷಿಯಲ್ಲಿ ಕಷ್ಟಪಟ್ಟು ತೊಡಗಿಕೊಂಡರೆ ಖಂಡಿತ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೂ ಕೃಷಿಯಲ್ಲಿ ಸಾಂಪ್ರದಾಯಿಕ ವಿಧಾನಕ್ಕೆ ಜೋತು ಬೀಳದೆ ಹೊಸ-ಹೊಸ ವಿಧಾನಗಳ ಕುರಿತು ಅವಲೋಕಿಸಬೇಕು ಹಾಗೂ ಒಂದಷ್ಟು ಆವಿಷ್ಕಾರಿ ಮನೋಭಾವನೆ ಅಗತ್ಯ.  ಕೆಲವು ಸಂದರ್ಭ ಪ್ರಾಣಿ, ಪಕ್ಷಿಗಳ ಹಾವಳಿಯಿಂದ ಕೃಷಿಯಲ್ಲಿ ನಷ್ಟವಾಗುವ ಸಂಭವವಿರುತ್ತದೆ. ಇವುಗಳ ಹತೋಟಿಗೆ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ.
– ರವೀಂದ್ರ ಐತಾಳ,  ಪ್ರಗತಿಪರ ಕೃಷಿಕರು ಪಾರಂಪಳ್ಳಿ

Advertisement

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next