Advertisement

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

12:35 PM Jul 15, 2024 | Team Udayavani |

ಪ್ರಾಯ ಕಳೆದಂತೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದು ಸಾಮಾನ್ಯವಾಗಿದೆ. ನಾವು ಬದುಕಿರುವಷ್ಟು ಕಾಲ ವಾತಾವರಣದಲ್ಲಿ ಆಗುಹೋಗುವ ಶಬ್ದಗಳು, ಸುತ್ತಮುತ್ತಲಿನವರ ಜತೆ ಮಾತುಕತೆ, ಸಂಭಾಷಣೆಗಳಲ್ಲಿ ಭಾಗವಹಿಸಿ, ನಾಟಕ, ಸಂಗೀತ, ಯಕ್ಷಗಾನದಂತಹ ಮನೋರಂಜನೆ ಕಾರ್ಯಕ್ರಮಗಳನ್ನು ಕೇಳಿ ಆನಂದಿಸಬೇಕೆಂದು ಎಲ್ಲರ ಬಯಕೆಯಾಗಿರುತ್ತದೆ.

Advertisement

ವಯಸ್ಸಾದ ಕೆಲವರಲ್ಲಿ ಇದು ಸಾಧ್ಯವಾಗದೆ ಹೋಗಬಹುದು. ಕಿವಿಯು ಸರಿಯಾಗಿ ಕೇಳಿಸದೆ ಇದ್ದರೆ ನಮಗೆ ಯಾವುದೇ ಸಂಭಾಷಣೆ, ಚರ್ಚೆ, ಮನೋರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ 50 ವರ್ಷ ಅಥವಾ 60 ವರ್ಷಗಳ ಅನಂತರ ಶ್ರವಣ ನಷ್ಟ ಪ್ರಾರಂಭವಾಗುತ್ತದೆ. ವಯಸ್ಸಿಗೆ ಸಂಬಂಧಿಸಿದ ಶ್ರವಣ ನಷ್ಟವನ್ನು ಪ್ರಸ್‌ಬೈಕಸಿಸ್‌ (presbycusis) ಎಂದು ಕರೆಯಲಾಗುತ್ತದೆ.

ಇದು ನಮಗೆ ವಯಸ್ಸಾದಂತೆ ವಯಸ್ಕರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಪರಿಸ್ಥಿತಿಗಳಲ್ಲಿ ಒಂದಾಗಿದೆ. ಕೆಲವರಿಗೆ ಅದರ ಅರಿವು ಗಮನಕ್ಕೆ ಬರದೆ ಇರಬಹುದು. ಏಕೆಂದರೆ ಇದು ಸಾಮಾನ್ಯವಾಗಿ ನಿಧಾನ ಮತ್ತು ಕ್ರಮೇಣವಾಗಿರುತ್ತದೆ. ಕೆಲವೊಮ್ಮೆ ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇವೆ ಎಂದು ತಿಳಿದರೂ ಅದರ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ.

ಹಿರಿಯ ವಯಸ್ಕರು ಆಗಾಗ ಶ್ರವಣ ತಪಾಸಣೆಯನ್ನು ಮಾಡಿದರೆ ಶ್ರವಣ ಶಕ್ತಿ ಎಷ್ಟು ಇದೆ ಎಂದು ತಿಳಿಯಬಹುದು.

Advertisement

ಶ್ರವಣ ದೋಷ ಇದ್ದರೆ ಶ್ರವಣ ಸಾಧನವನ್ನು ಉಪಯೋಗಿಸಬೇಕೆಂದು ಶ್ರವಣ ತಿಳಿಸಿದರೂ ಉಪಯೋಗಿಸಬೇಕೇ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಹೆಚ್ಚಾಗಿ ಈಗ ಸ್ವಲ್ಪ ಕೇಳಿಸುತ್ತದೆ, ಮುಂದಕ್ಕೆ ನೋಡುವ ಎನ್ನುವವರು ಸಾಮಾನ್ಯವಾಗಿದೆ. ಇನ್ನು ಕೆಲವರು ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಧರಿಸದೆ ಇರುವುದನ್ನು ನಾವು ಕಾಣುತ್ತೇವೆ.

ನಾವು ವಯಸ್ಸಾದಂತೆ ನಮ್ಮ ಶ್ರವಣ ಶಕ್ತಿಯನ್ನು ಏಕೆ ಕಳೆದುಕೊಳ್ಳುತ್ತೇವೆ ?

ಅನೇಕ ವಿಷಯಗಳು ನಮ್ಮ ಶ್ರವಣಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಹಲವಾರು ಕಾರಣಗಳಿರಬಹುದು. ­

  • ಒಳಗಿನ ಕಿವಿಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ­
  • ಕಿವಿಯಿಂದ ಮೆದುಳಿಗೆ ನರಗಳ ಮಾರ್ಗಗಳ ಉದ್ದಕ್ಕೂ ಸಂಕೀರ್ಣ ಬದಲಾವಣೆಗಳು ­
  • ಆನುವಂಶೀಯತೆ ­
  • ದೊಡ್ಡ ಶಬ್ದಗಳಿಗೆ ಪದೇಪದೆ ಒಡ್ಡಿಕೊಳ್ಳುವುದು. ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್‌ಗೆ ಸಂಬಂಧಿಸಿದ ಕಿಮೋಥೆರಪಿಯಂತಹ ಚಿಕಿತ್ಸೆಗಳು, ವೈರಸ್‌ ಅಥವಾ ಬ್ಯಾಕ್ಟೀರಿಯಾದಂತಹ ಸೋಂಕುಗಳು,
  • ­ಥೈರಾಯ್ಡ, ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು ದೀರ್ಘ‌ಕಾಲಿಕ ಕಾಯಿಲೆಗಳು ಇತ್ಯಾದಿ.

ಶ್ರವಣ ಸಾಧನವನ್ನು ಉಪಯೋಗಿಸುವುದರ ಪ್ರಯೋಜನ ­

  • ಎಲ್ಲರೊಂದಿಗೆ ಸಂಭಾಷಣೆ ನಡೆಸಲು, ವಾತಾವರಣದಲ್ಲಿರುವ ಶಬ್ದಗಳನ್ನು ಕೇಳಿಸಿಕೊಳ್ಳಲು ಸಹಕಾರಿಯಾಗಿದೆ.
  • ಗದ್ದಲದ ವಾತಾವರಣದಲ್ಲಿ ಸಂಭಾಷಣೆಗಳನ್ನು ಅನುಸರಿಸಲು ಸುಲಭವಾಗುತ್ತದೆ. ­
  • ವಿವಿಧ ಅಧ್ಯಯನಗಳ ಪ್ರಕಾರ ಅರಿವಿನ ಕುಸಿತದ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಅಂದರೆ ನಮ್ಮ ಮೆದುಳಿನ ಕೋಶಗಳು ನಾವು ವಯಸ್ಸಾದಂತೆ ಪರಸ್ಪರ ಸಂಪರ್ಕಿಸಲು ಕಡಿಮೆ ಸಾಮರ್ಥ್ಯವನ್ನು ಹೊಂದಿರುತ್ತದೆ. ಶ್ರವಣ ನಷ್ಟವು ಅರಿವಿನ ((cognation) ಕುಸಿತವನ್ನು ನಡೆಯುವ ಅಪಾಯವನ್ನು ಹೆಚ್ಚಿಸುತ್ತದೆ. ವ್ಯಕ್ತಿಯ ಶ್ರವಣ ನಷ್ಟಕ್ಕೆ ಚಿಕಿತ್ಸೆ ನೀಡದೆ ಇದ್ದಾಗ ಮಾಡು ಗುರುತಿಸುವಿಕೆಯೊಂದಿಗೆ ವ್ಯವಹರಿಸುವ ಅವರ ಮೆದುಳಿನ ಭಾಗಗಳು ಹದಗೆಡಬಹುದು ಪರಿಣಾಮವಾಗಿ ನಿಮ್ಮ ಅರಿವಿನ ದುರ್ಬಲತೆಯು ಕಾಲಾನಂತರದಲ್ಲಿ ಹೆಚ್ಚಾಗಬಹುದು. ಸಾಧನವನ್ನು ಬಳಸಿದರೆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು.
  • ­ಮಾನಸಿಕ ಆರೋಗ್ಯವು ಸುಧಾರಣೆಯಾಗುತ್ತದೆ. ಖನ್ನತೆಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಬಹುದು.
  • ಟಿನೈಟಸ್‌ (tinnitus) ಕಿವಿಯಲ್ಲಿ ಗುಂಯ್‌ಗಾಟ್ಟುವ ಶಬ್ದವಿದ್ದವರಿಗೆ ಸಾಧನವನ್ನು ಧರಿಸುವುದರಿಂದ ಕೆಲವರಿಗೆ ಟಿನೈಟಸ್‌ ಶಬ್ದಗಳು ಮರೆಮಾಚಿ ಕಿರಿಕಿರಿ ಭಾವನೆಯನ್ನು ಕಡಿಮೆ ಮಾಡಿ ಉತ್ತಮ ಸಂವಹನವನ್ನು ಮಾಡಲು ಸಹಕಾರಿಯಾಗುತ್ತದೆ. ­
  • ಶ್ರವಣ ಸಾಧನಗಳ ಸರಿಯಾದ ಬಳಕೆ ಇದ್ದಾಗ, ಅದು ಆಲಿಸುವಿಕೆ ಮತ್ತು ಮಾತಿನ ಗ್ರಹಿಕೆಯನ್ನು ಸುಧಾರಿಸುತ್ತದೆ, ಆಲಿಸುವ ಆಯಾಸವನ್ನು ಕಡಿಮೆ ಮಾಡುತ್ತದೆ.

ವಯಸ್ಸಿಗೆ ಸಂಬಂಧಿಸಿದ ಶ್ರವಣ ನಷ್ಟದ ಲಕ್ಷಣಗಳು ­

  • ವಿಶೇಷವಾಗಿ ಗದ್ದಲದ ವಾತಾವರಣದಲ್ಲಿ ಅಥವಾ ಅನೇಕ ಜನರು ಏಕಕಾಲದಲ್ಲಿ ಮಾತನಾಡುವಾಗ ಸಂಭಾಷಣೆಗಳನ್ನು ಕೇಳಿಸಿಕೊಳ್ಳುವುದು ಸವಾಲಾಗಿರುತ್ತದೆ. ­
  • ಪುನರಾವರ್ತಿಸಲು ಅಂದರೆ ಪುನಃ ಹೇಳಿ ಎಂದು ವಿನಂತಿಸಬೇಕಾಗುತ್ತದೆ. ­
  • ಕೆಲವು ಸಂದರ್ಭಗಳಲ್ಲಿ ಸರಿಯಾಗಿ ಕೇಳಿಸದೆ ತಪ್ಪಾಗಿ ಅರ್ಥೈಸಿಕೊಂಡು ವಿಚಾರ ವಿನಿಮಯದಲ್ಲಿ ಗೊಂದಲ ಉಂಟಾಗುತ್ತದೆ.
  • ಹೆಚ್ಚಾಗಿ ಏರು ಧ್ವನಿಯಲ್ಲಿ (high frequency)ಯಲ್ಲಿ ತೊಂದರೆ ಇರುವುದರಿಂದ ಮಕ್ಕಳ ಮತ್ತು ಮಹಿಳೆಯರ ಮಾತು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ­
  • ಇನ್ನು ಕೆಲವರು ಸಭೆ ಸಮಾರಂಭಗಳಲ್ಲಿ ಭಾಗವಹಿಸದೆ ಇರುವುದು. ಸರಿಯಾಗಿ ಕೇಳಿಸದೆ ಇರುವುದರಿಂದ ಉದ್ವೇಗ, ಸಿಟ್ಟು , ಮಾನಸಿಕವಾಗಿ ಕುಂದುವುದು. ಏಕಾಂತವನ್ನು ಬಯಸುವುದು ಸಾಮಾನ್ಯವಾಗಿ ಕಂಡುಬರುತ್ತದೆ.
  • ­ಶ್ರವಣ ಸಾಧನವನ್ನು ಬಳಸುವುದರಿಂದ ನಮ್ಮ ಸುತ್ತಮುತ್ತಲಿನ ಬಗ್ಗೆ ಅರಿವು ಹೆಚ್ಚಾಗುತ್ತದೆ. ಇದರಿಂದ ಮೆದುಳಿಗೆ ಅತಿಯಾದ ಹೊರೆಯಾಗದೇ ನಡಿಗೆ ಮತ್ತು ಸಮತೋಲನಕ್ಕೆ ಸಹಕಾರಿಯಾಗಿದೆ.
  • ­ಇದಲ್ಲದೆ ಮನೆಯಲ್ಲಿರುವ ಸದಸ್ಯರಿಗೂ ಏರುಧ್ವನಿಯಲ್ಲಿ ಮಾತನಾಡುವುದು ತಪ್ಪುತ್ತದೆ.
  • ­ಜೀವನದ ಗುಣಮಟ್ಟ ಸುಧಾರಣೆಯಾಗುತ್ತದೆ. ಆಗಾಗ ಶ್ರವಣ ತಪಾಸಣೆಯನ್ನು ಮಾಡುವುದರಿಂದ ನಮ್ಮ ಶ್ರವಣ ನಷ್ಟದ ತೀವ್ರತೆ ಎಷ್ಟು ಇದೆ ಎಂದು ತಿಳಿಯುತ್ತದೆ. ಇದಕ್ಕೆ ಸರಿಯಾಗಿ ಮತ್ತು ನಮ್ಮ ಜೀವನ ಶೈಲಿ ಅಗತ್ಯವಿದೆ. ದೈನಂದಿನ ಚಟುವಟಿಕೆಗಳನ್ನು ಪರಿಗಣಿಸಿ ಶ್ರವಣ ತಜ್ಞರು (ಅuಛಜಿಟlಟಜಜಿsಠಿ)ಸರಿಯಾದ ಶ್ರವಣ ಸಾಧನವನ್ನು ನೀಡಿ ಉಪಯೋಗಿಸುವ ರೀತಿಯನ್ನು ವಿವರಿಸುತ್ತಾರೆ. ಇತ್ತೀಚೆಗೆ ಸುಧಾರಿತ ಶ್ರವಣ ಸಾಧನಗಳು ಮೊಬೈಲ್‌ನ ಬ್ಲೂಟೂತ್‌ನಂತಹ ಮತ್ತು ಹಿನ್ನೆಲೆ ಶಬ್ದ ಕಡಿತದಂತಹ ಅತ್ಯಾಧುನಿಕ ವೈಶಿಷ್ಟéಗಳನ್ನು ನೀಡಲು ಈ ಸಾಧನಗಳು ವಿಕಸನಗೊಂಡಿವೆ. ಆದುದರಿಂದ ಹಿರಿಯ ವಯಸ್ಕರು ಶ್ರವಣ ತಪಾಸಣೆಯನ್ನು ಮಾಡಿ, ಶ್ರವಣ ದೋಷವಿದ್ದರೆ ಚಿಕಿತ್ಸೆಯನ್ನು ಪಡೆದು, ತಮ್ಮ ದೈನಂದಿನ ಚಟುವಟಿಕೆಗಳು ಮತ್ತು ಸಾಮಾಜಿಕ ವಲಯದಲ್ಲಿ ಸಂವಹನಗಳನ್ನು ಆನಂದಿಸಿ. ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು.

-ರೇಖಾ ಪಾಟೀಲ್‌ ಎಸ್‌.,

ಅಸಿಸ್ಟೆಂಟ್‌ ಲೆಕ್ಚರರ್‌,

ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇಎನ್‌ಟಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ ಹಾಗೂ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಎಂಸಿಎಚ್‌ಪಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next