Advertisement

ಹಸಿರು ವನಸಿರಿ ಸಂಡೂರಿನ ಸಿರಿ

12:07 PM Sep 01, 2024 | Team Udayavani |

ಬಿರುಬಿಸಿಲಿಗೆ ಹೆಸರಾದ ಬಳ್ಳಾರಿಗೆ ತುಂಬಾ ಹತ್ತಿರದಲ್ಲಿಯೇ ತಂಪು ಹವೆಯ ಸಂಡೂರು ಇರುವುದು ಹಿತವಾದ ಅಚ್ಚರಿ. ಸೆಪ್ಟೆಂಬರ್‌ನಲ್ಲಂತೂ ಈ ಬೀಡು, ಕಾಶ್ಮೀರಕ್ಕೇ ಸೆಡ್ಡು ಹೊಡೆಯುವಂಥ ಸೌಂದರ್ಯದಿಂದ ಕಂಗೊಳಿಸುತ್ತದೆ.
ಗಣಿಗಾರಿಕೆಯ ಕಾರಣಕ್ಕೆ ಇಲ್ಲಿನ ಅರಣ್ಯ ಮತ್ತು ಪ್ರಕೃತಿ ಸಂಪತ್ತನ್ನು ದೋಚುತ್ತಲೇ ಇದ್ದರೂ, ಪ್ರತಿ ಮಳೆಗಾಲದಲ್ಲೂ ಮರುಹುಟ್ಟು ಪಡೆಯುವ ಅಲ್ಲಿನ ಪರಿಸರ, ಹಸಿರು ವನರಾಶಿಯಿಂದ ಕಂಗೊಳಿಸುತ್ತದೆ…

Advertisement

ಈ ಸಲ ನಾಡಿನೆಲ್ಲೆಡೆ ವರ್ಷಧಾರೆ ಆಗುತ್ತಿದೆ. ಮಲೆನಾಡು, ಪಶ್ಚಿಮ ಘಟ್ಟಗಳಲ್ಲಿ ಈ ಬಾರಿ ಸಂಭವಿಸಿದ ಭಾರಿ ಭೂ ಕುಸಿತ, ಪ್ರವಾಹದಂತಹ ಪ್ರಾಕೃತಿಕ ಅವಘಡಗಳಿಂದ ಪ್ರವಾಸಕ್ಕೆ ಹಿನ್ನಡೆ ಆಗಿದೆ. ಹಾಗಾದರೆ ಈ ಮಳೆಗಾಲದಲ್ಲಿ ಎಲ್ಲೂ ಹೋಗಲು ಅವಕಾಶವೇ ಇಲ್ಲವೆ? ಎನ್ನುವ ಕೊರಗು, ಪ್ರಶ್ನೆ ಹಲವರದ್ದು. ಚಿಂತಿಸಬೇಕಿಲ್ಲ. ಪ್ರವಾಸ ಮಾಡಬೇಕು ಅನ್ನುವವರನ್ನು ಬಯಲುಸೀಮೆಯ ಹಸಿರ ತಾಣವೊಂದು ಕೈಬೀಸಿ ಕರೆಯುತ್ತಿದೆ! ಆ ಊರು ಯಾವುದೇ ಅಂದಿರಾ? ಅದು- ಉತ್ತರ ಕರ್ನಾಟಕದ “ಆಕ್ಸಿಜನ್‌ ಬ್ಯಾಂಕ್‌’ ಎಂದೇ ಹೆಸರಾಗಿರುವ ಸಂಡೂರು!

ಗಾಂಧೀಜಿ ಮೆಚ್ಚಿದ್ದ ಸ್ಥಳ…

“ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಇರುವುದು ಎರಡೇ ಕಾಲ: ಒಂದು ಬೇಸಿಗೆ, ಮತ್ತೂಂದು ಬಿರು ಬೇಸಿಗೆ!’- ಹೀಗೆ ಹೇಳಿದ್ದು ಖ್ಯಾತ ಸಾಹಿತಿ ಬೀಚಿ. ಇಂತಿಪ್ಪ ಬಿಸಿಲ ನಾಡಿನಲ್ಲಿಯೇ ಪಶ್ಚಿಮ ಘಟ್ಟಗಳ ಹವಾಗುಣವನ್ನು ಸಂಡೂರಿನ ಪರಿಸರ ಹೋಲುತ್ತದೆ. ಬೆಟ್ಟಗುಡ್ಡಗಳ ಶ್ರೇಣಿಗಳು, ದಟ್ಟ ಕುರುಚಲು ಕಾಡು, ಅಪಾರ ಔಷಧಿ ಸಸ್ಯಗಳು, ಜಲಮೂಲಗಳು, ಬಗೆಬಗೆಯ ಖಗ-ಮೃಗಗಳು… ಇಂಥ ಸಂಪದ್ಭಭರಿತ ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿ ಇಟ್ಟಿ ಕೊಂಡಿರುವ ಸಂಡೂರು ಮಳೆಗಾಲದಲ್ಲಿ ಅಪ್ಪಟ ಕಾಶ್ಮೀರದಂತೆ ಕಂಗೊಳಿಸುತ್ತದೆ! 1934ರಲ್ಲಿ ಸಂಡೂರಿಗೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ “ಸೀ ಸಂಡೂರು ಇನ್‌ ಸೆಪ್ಟೆಂಬರ್‌’ ಎಂದೇ ಉದ್ಗರಿಸಿದ್ದರು. ಆದರೀಗ ಗಣಿಗಾರಿಕೆ ಮತ್ತು ಅದಿರು ಸಾಗಾಣಿಕೆಯಿಂದ ಇಲ್ಲಿಯ ಶೇ.80ರಷ್ಟು ಪರಿಸರ ಹಾಳಾಗಿದೆ. ಅಷ್ಟಾದರೂ ಮರುಹುಟ್ಟು ಪಡೆಯುತ್ತಿರುವ ಅಳಿದುಳಿದ ಪರಿಸರದಿಂದಲೂ ಇಂತಹ ಅನುಭೂತಿ ಆಗುತ್ತಿರುವುದೇ ವಿಶೇಷ, ಸೋಜಿಗ.

ಮುದ ನೀಡುವ “ಮಳೆ’ ನಾಡು…

Advertisement

ಹಾಗೆ ನೋಡಿದರೆ ಬಳ್ಳಾರಿ ಸೀಮೆಯಲ್ಲಿ ಮಳೆ ಅಪರೂಪವೇ. ಆದರೆ ಸಂಡೂರು ಭಾಗದ ಪರಿಸರ ಇದಕ್ಕೆ ವ್ಯತಿರಿಕ್ತ. ಮಳೆಗಾಲದಲ್ಲಿ ಸಂಡೂರು ಅಕ್ಷರಶಃ “ಮಳೆನಾಡು’ ಆಗಿಬಿಡುತ್ತದೆ! ಬಳ್ಳಾರಿ ಜಿಲ್ಲೆಯ ಉಳಿದೆಡೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆ ಕಾಡಿದರೂ ಸಂಡೂರು ಕಾಡಿಗೆ ಮಾತ್ರ ವರುಣನ ಕೃಪೆ ಇದ್ದೇ ಇರುತ್ತದೆ. ಹಾಗಾಗಿ ಅವ್ಯಾಹತ ಗಣಿಗಾರಿಕೆಯಿಂದ ಕೆಂಧೂಳಿನಲ್ಲಿ ಹುದುಗಿ ಹೋಗಿರುವ ಮರಗಿಡಗಳೂ, ಮಳೆ ಮಜ್ಜನದ ಕಾರಣಕ್ಕೆ ಹಚ್ಚ ಹಸಿರಿನಿಂದ ನಳನಳಿಸುತ್ತಾ ಹಸಿರನ್ನೇ ಉಸಿರಾಡುತ್ತವೆ. ಪರಿಣಾಮ; ಸಂಡೂರು ಸೀಮೆಯ ಪರಿಸರ, ಹಸಿರು ಸೀರೆ ತೊಟ್ಟ ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಗಣಿಗಾರಿಕೆಯ ಹಸ್ತಕ್ಷೇಪವಿಲ್ಲದ, ಗಣಿ ಹಾನಿಗೆ ಒಳಗಾದ ಬೆಟ್ಟಗುಡ್ಡ, ಬಯಲುಗಳಲ್ಲಿ ಹಸಿರು ಜಿದ್ದಿಗೆ ಬಿದ್ದು ಟಿಸಿಲೊಡೆಯುವುದನ್ನು ನೋಡುವುದೇ ಒಂದು ಸೊಗಸು! ಒಟ್ಟಾರೆ, ಜಿ.ಎಸ್‌ ಶಿವರುದ್ರಪ್ಪರವರ “ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು; ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿದೆ ಚೆಲುವು…’ ಎಂಬ ಹಾಡಿಗೆ ಅನ್ವರ್ಥದಂತೆ ಕಾಣುತ್ತದೆ ಇಡೀ ಪರಿಸರ.

ಮಳೆ, ಮಂಜು ಜುಗಲ್‌ ಬಂದಿ…

ಇಲ್ಲಿ ಮಳೆ ಮತ್ತು ಮಂಜು ಎರಡೂ ಪ್ರವಾಸಿಗರನ್ನು ಸ್ವಾಗತಿಸಿ, ಮುದಗೊಳಿಸುತ್ತವೆ. ಸಂಡೂರಿನ ಬೆಟ್ಟ-ಬಯಲೆಲ್ಲ ಮಂಜು ಆವರಿಸಿ, ಮಂಜಿನ ನಗರಿ ಆಗಿಬಿಡುತ್ತದೆ. ಬೀಳುವ ಮಂಜಿನಲ್ಲಿ ಮುಖ ಹುದುಗಿಸಿ, ತೀಡುವ ತಂಗಾಳಿಗೆ ಮೈಮನ ತೆರೆದುಕೊಂಡರೆ ಸ್ವರ್ಗಸುಖ ಪ್ರಾಪ್ತಿಯಾ­ದಂಥ ಅನುಭವ! ಇದ್ದಕ್ಕಿದ್ದಂತೆ ಕವಿದ ಕಾರ್ಮೋಡಗಳಿಂದ ಹಗಲಿನಲ್ಲೂ ಗಾಢ ಕತ್ತಲು ಆವರಿಸುವ, ಮೋಡಗಳಿಗೆ ತೂತು ಬಿದ್ದಂತೆ ಧೋ ಎಂದು ಮಳೆ ಸುರಿಯುವ ಕ್ಷಣಗಳಿಗೆ ಸಾಕ್ಷಿ ಅಗುತ್ತೇವೆ. ಅದೆಷ್ಟೋ ಬಾರಿ ಮೋಡಗಳು ಇಡೀ ಬೆಟ್ಟಗಳ ಸಾಲನ್ನೆಲ್ಲ ಆವರಿಸಿ ಅದೃಶ್ಯ ಮಾಡಿಬಿಡುತ್ತವೆ. ಒಮ್ಮೊಮ್ಮೆ ಶುದ್ಧ ಹತ್ತಿಯನ್ನು ಹಿಂಜಿ ಬೆಟ್ಟಗಳ ಮೇಲೆಲ್ಲ ಹರಡಿರುವಂತೆ, ಹತ್ತಿ ಉಂಡೆಗಳನ್ನು ಪೇರಿಸಿಟ್ಟಂತೆ, ಬೆಟ್ಟಗಳ ಬುಡದಲ್ಲಿ ಯಾರೋ ಒಲೆ ಹೊತ್ತಿಸಿ, ಹೊಗೆ ಎಬ್ಬಿಸಿದ ಅನುಭೂತಿಯನ್ನು ಮೋಡಗಳು ನೀಡುತ್ತವೆ. ಮೋಡಗಳ ಈ ವೈಯಾರ, ಮೇಲಾಟ ಒಂದು ಅನಿರ್ವಚನೀಯ ಅನುಭವ ನೀಡುತ್ತದೆ. “ಮಾನ್ಸೂನ್‌ ಟ್ರೆಕ್‌ ಮಾಡಲು ಮಲೆನಾಡಿಗೇ ಹೋಗಬೇಕೆಂದಿಲ್ಲ. ಸಂಡೂರಿನಲ್ಲೂ ಅದು ಸಾಧ್ಯ’ ಎನ್ನುತ್ತಾರೆ ಚಾರಣಿಗ ಶ್ರೀನಿವಾಸ್‌. ಬೀಳುವ ಮಂಜು, ತುಂತುರು ಹನಿಗಳು ಪ್ರಕೃತಿಪ್ರಿಯರ ಭಾವಕೋಶವನ್ನು ಮೀಟುತ್ತಲೇ ಇರುತ್ತವೆ. ಮಂಜು ಕವಿದಾಗ ಸಂಡೂರು ರುದ್ರ ರಮಣೀಯವಾಗಿ ಕಾಣುತ್ತದೆ. “ನೇಸರನ ನೆರಳು ಬೆಳಕಿನ ಆಟ, ಮೋಡಗಳ ಮೇಲಾಟದಲ್ಲಿ ಸಂಡೂರನ್ನು ಕಣ್ತುಂಬಿಕೊಳ್ಳುವುದೇ ಒಂದು ಖುಷಿ. ಮಳೆಗಾಲದಲ್ಲಿ ಸಂಡೂರು ಭೂಲೋಕದ ಸ್ವರ್ಗ ಅನ್ನುವುದು ಪ್ರತಿಕ್ಷಣವೂ ಋಜು ಆಗುತ್ತದೆ. ಹಾಗಾಗಿ ನಾನು ಸೆಪ್ಟೆಂಬರಿನಲ್ಲಿ ಇಲ್ಲಿನ ಪ್ರಕೃತಿ ಮಡಿಲಲ್ಲಿ ಕಳೆದು ಹೋಗಲು ಹಂಬಲಿಸುತ್ತೇನೆದ್ದೆ…’ ಎನ್ನುತ್ತಾರೆ ಚಾರಣಿಗ ನಾಗೇಂದ್ರ ಕಾವೂರು.

ಸಂಡೂರು ಯಾಕೆ ಸ್ಪೆಷಲ್…..?

ಇಲ್ಲಿಯ ಬೆಟ್ಟಗಳ ಶ್ರೇಣಿಗಳು ಸಮುದ್ರ ಮಟ್ಟದಿಂದ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿವೆ. ಬಳ್ಳಾರಿ, ಬೇಸಿಗೆಯಲ್ಲಿ ಗರಿಷ್ಠ ತಾಪಮಾನಕ್ಕೆ ಹೆಸರಾಗಿದ್ದು, ಅದೇ ಜಿಲ್ಲೆಯ ಸಂಡೂರಿನಲ್ಲಿ ಬಳ್ಳಾರಿಗಿಂತ 6-8 ಡಿಗ್ರಿ ಸೆಲ್ಸಿಯಲ್ಸ್ ತಾಪಮಾನ ಕಮ್ಮಿ ಇರುತ್ತದೆ! ಇದರೊಂದಿಗೆ ಪ್ರತಿ ವರ್ಷ ಇಲ್ಲಿ ಸರಾಸರಿ 850-900 ಮಿ.ಮೀ ಮಳೆ ಆಗುತ್ತದೆ. ಸಹಜ ಮತ್ತು ಸಮೃದ್ಧ ಕಾಡು ಇದೆ. ಹೀಗಾಗಿ ಸ್ವಾತಂತ್ರ್ಯಪೂರ್ವ­ ದಲ್ಲಿ ಬ್ರಿಟಿಷ್‌ ಅಧಿಕಾರಿಗಳು ಸಂಡೂರಿನಲ್ಲಿ ಬೇಸಿಗೆ ವಿಹಾರಧಾಮವನ್ನು ನಿರ್ಮಿಸಿಕೊಂಡಿದ್ದರು. ರಾಮಘಡದಲ್ಲಿ ಕ್ರಿ.ಶ. 1846ರಲ್ಲಿ ನಿರ್ಮಾಣವಾದ ರಾಯಲ್‌ ಗೆಸ್ಟ್‌ ಹೌಸ್‌, ಬ್ಯಾರಕ್‌ ಹಾಗೂ ಬ್ರಿಟಿಷ್‌ ಸೈನಿಕರ ಸಮಾಧಿಗಳು ಇದಕ್ಕೆ ಪುರಾವೆಗಳು. ರಾಮಘಡದಲ್ಲಿ ಮಳೆಗಾಲದಲ್ಲಿ ಜನ್ಮ ತಾಳುವ ಅಸಂಖ್ಯಾತ ಝರಿಗಳು, ಅಲ್ಲಲ್ಲಿ ಇರುವ ಅಜ್ಞಾತ ಜಲಪಾತಗಳು, 12 ವರ್ಷಕ್ಕೊಮ್ಮೆ ಅರಳುವ ನೀಲಕುರಂಜಿ ಹೂವುಗಳು,  ಚಿರತೆ, ಚುಕ್ಕೆ ಪುನುಗು… ಇತ್ಯಾದಿಗಳಿಂದ ಸಂಡೂರು ಮಲೆನಾಡಿನಷ್ಟೇ ಮಹತ್ವ ಪಡೆದಿದೆ.

ಸಂಡೂರಿನ ಒಡಲಲ್ಲಿರುವ ಉತ್ಕೃಷ್ಟ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರು ಇಂದು ಈ ಪ್ರಕೃತಿಗೇ ಶಾಪವಾಗಿ ಪರಿಣಮಿಸಿದೆ. ಗಣಿಗಾರಿಕೆಯಿಂದ ಈಗಾಗಲೇ ಇಲ್ಲಿನ ಭಾಗಶಃ ಸಮೃದ್ಧ ಕಾಡನ್ನು ಕಳೆದುಕೊಂಡಾ­ಗಿದೆ. ಈಗ ಹೊಸದಾಗಿ ದೇವದಾರಿ ಮತ್ತು ರಾಮನಮಲೈ ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿರುವ ಸರಕಾರದ ಕ್ರಮಕ್ಕೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಗಣಿಗಾರಿಕೆಯಿಂದ ಆಗಿರುವ ಅಧ್ವಾನಗಳ ಬಗ್ಗೆ ಹಾಗೂ ಅಳಿದುಳಿದಿರುವ ಕಾಡು, ಜೀವ ಸಂಕುಲಗಳು… ಹೀಗೆ ಎರಡನ್ನೂ ಒಂದೆಡೆ ಪರಿಚಯಿಸುವ ಮೂಲಕ ಮನುಷ್ಯನ ಸ್ವಾರ್ಥದ ದುಷ್ಪರಿಣಾಮಗಳು, ಮರಗಿಡಗಳ ಮಹತ್ವದ ಬಗ್ಗೆ ನೈಜ ದೃಶ್ಯವೊಂದನ್ನು ನೋಡುವ ಸುಯೋಗವನ್ನೂ ಸಂಡೂರಿನ ಪರಿಸರ ಒದಗಿಸುತ್ತದೆ.

ಘೋರ್ಪಡೆಯವರನ್ನು ಮರೆಯಲಾದೀತೇ?:

ಸಂಡೂರು ಅಂದಾಕ್ಷಣ ನೆನಪಾಗುವವರು ದಿ. ಎಂ. ವೈ. ಘೋರ್ಪಡೆ. ಸಂಡೂರಿನ ರಾಜ ವಂಶಕ್ಕೆ ಸೇರಿದ ಇವರು ಅಪ್ಪಟ ಪರಿಸರ ಪ್ರೇಮಿ. ಒಂದು ಕಾಲದಲ್ಲಿ ಭಾಗಶಃ ಸಂಡೂರು ಇವರ ವಂಶದ ಸುಪರ್ದಿನಲ್ಲಿ ಯೇ ಇತ್ತು. ಮಾಜಿ ಸಚಿವ, ವನ್ಯಜೀವಿ ಛಾಯಗ್ರಾಹಕರೂ ಆಗಿದ್ದ ಘೋರ್ಪಡೆ ಯವರು, ಪರಿಸರ ಸ್ನೇಹಿ ಗಣಿಗಾರಿಕೆ ನಡೆಸಿ ಸರಕಾರ, ಜನರ ಪ್ರಶಂಸೆಗೆ ಪಾತ್ರರಾದರು. ಕುಮಾರ ಸ್ವಾಮಿ ದೇಗುಲದ ಸಮೀಪದ ತಮ್ಮ ಒಡೆತ ನದ ಕಾರ್ತಿಕೇಯ ಐರನ್‌ ಓರ್‌ ಕಂಪನಿಯನ್ನು ಮುಚ್ಚಿಸಿ ಸರಕಾರದ ಆದೇಶ ಪಾಲಿಸಿದ್ದರು. ಇದರೊಟ್ಟಿಗೆ ದೇಗುಲದ ಸಮೀಪ ಹೆಲಿಕಾಪ್ಟರ್‌ ಹಾರಾಟವನ್ನು ನಿಷೇಧಿಸಿದ್ದರು. ಇಲ್ಲಿನ ಪ್ರಾಕೃತಿಕ, ಧಾರ್ಮಿಕ, ಐತಿಹಾಸಿಕ ಸ್ಥಳಗಳ ಸಂರಕ್ಷಣೆಗಾಗಿ ತಮ್ಮ ಜೀವಿತದುದ್ದಕ್ಕೂ ಶ್ರಮಿಸಿದ್ದರು. ತಮ್ಮ ಸ್ಮಯೋರ್‌ ಮೈನಿಂಗ್‌ ಕಂಪನಿಗಳಲ್ಲಿ ಶೇ.90 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಿದ್ದಲ್ಲದೆ, ಅವರ ಆರೊಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಹಲವು ಸೌಲಭ್ಯಗಳನ್ನು ನೀಡಿದ್ದರು.

ಚಾರಣಕ್ಕೆ ಸೂಕ್ತ ತಾಣ… 

ಕಳೆದ ವರ್ಷದಿಂದ ಅರಣ್ಯ ಇಲಾಖೆಯು “ಸಂಡೂರು ಅನ್ವೇಷಣೆ’ ಅಡಿಯಲ್ಲಿ ನಿಗದಿತ ಶುಲ್ಕ ಪಡೆದು ಭೀಮತೀರ್ಥ ಬಳಿ, ಮೀನುಗೊಳ್ಳದಿಂದ ರಾಮಘಡ ಅರಣ್ಯದವರೆಗೆ, ಉಬ್ಬಳಗುಂಡಿ ಯಿಂದ ಭೈರವ ತೀರ್ಥ­ದವರೆಗೆ, ಹುಲಿಕುಂಟೆ ಕೆರೆಯಿಂದ ಕುಮಾರಸ್ವಾಮಿ ದೇವಸ್ಥಾನಕ್ಕೆ… ಹೀಗೆ ನಾಲ್ಕು ಕಡೆ ಟ್ರೆಕ್ಕಿಂಗ್‌ ಆಯೋಜಿಸುತ್ತಿದೆ. ಇದರೊಂದಿಗೆ ರಸಸಿದ್ಧಪಡಿ ಎಂಬ ಮಧ್ಯ ಶಿಲಾಯುಗದ ಮಾನವನ ನೆಲೆಯ ತಾಣ, ಸಂಡೂರು ಅರಮನೆ, ನಾರಿಹಳ್ಳ ಜಲಾಶಯ, ಕುಮಾರಸ್ವಾಮಿ, ನವಿಲು ಸ್ವಾಮಿ, ಹರಿಶಂಕರ… ಹೀಗೆ ಸಂಡೂರಿನ ಸುತ್ತಮುತ್ತ ನೋಡಬಹುದಾದ ಐತಿಹಾಸಿಕ, ಪೌರಾಣಿಕ ಹಾಗೂ ಧಾರ್ಮಿಕ ಹಿನ್ನೆಲೆಯ ತಾಣಗಳಿವೆ.

-ಸ್ವರೂಪಾನಂದ,ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next