ಬೆಂಗಳೂರು: ವೃದ್ಧ ದಂಪತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಎಚ್ಎಎಲ್ ಠಾಣೆ ವ್ಯಾಪ್ತಿಯ ಅಶ್ವತ್ಥನಗರದಲ್ಲಿ ಮಂಗಳವಾರ ನಡೆದಿದೆ. ಗೋವಿಂದನ್ (65), ಸರೋಜಮ್ಮ (60) ಮೃತರು.
ಗೋವಿಂದನ್ ಬಿಇಎಲ್ ನಿವೃತ್ತ ನೌಕರರಾಗಿದ್ದು, ಮೂವರು ಮಕ್ಕಳ ಪೈಕಿ ಒಬ್ಬರು ಮೃತರಾಗಿದ್ದು, ಮತ್ತೂಬ್ಬ ಮಗ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದು, ಪುತ್ರಿ ಮನೆಯ ಪಕ್ಕದಲ್ಲೇ ನೆಲೆಸಿದ್ದಾರೆ. ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿತ್ತು. ಹೀಗಾಗಿ ಮೇಲ್ನೋಟಕ್ಕೆ ಹಣಕ್ಕಾಗಿ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ಕೊಲೆ ನಡೆದಿದ್ದು, ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಈ ಮನೆಯಿಂದ ದುರ್ವಾಸನೆ ಬರತ್ತಿತ್ತು. ಜತೆಗೆ ಮನೆಯ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿ ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮೃತ ದಂಪತಿ ಮನೆಯ ಪಕ್ಕದಲ್ಲಿರುವ ಪುತ್ರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನ ಮಾಡಲು ಬಂದ ದುಷ್ಕರ್ಮಿಗಳು, ದಂಪತಿಯನ್ನು ಇರಿದು ಕೊಂದ ನಂತರ ಗ್ಯಾಸ್ ಸಿಲಿಂಡರ್ ಸ್ಫೋಟ ಮಾಡಿ ಅಸ್ವಾಭವಿಕ ಸಾವು ಎಂದು ಬಿಂಬಿಸಲು ಯತ್ನಿಸಿರುವ ಕುರುಹು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಎಚ್ಎಎಲ್ ಠಾಣೆಯಲ್ಲಿ ದಾಖಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹ್ಮದ್, ಸಿಸಿಬಿ ಜಂಟಿ ನಿರ್ದೇಶಕ ಸತೀಶ್ ಕುಮಾರ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ವಿಧಿವಿಜ್ಞಾನ ಪರೀûಾ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಕಳೆದೆರಡು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ. ದಂಪತಿ ಹತ್ಯೆಗೈದು ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾಗಿದೆ. ಈ ವಿಚಾರವನ್ನು ಸ್ಥಳೀಯರು ದಂಪತಿಯ ಪುತ್ರಿಗೆ ತಿಳಿಸಿದ್ದಾರೆ. ಮೆಲ್ನೋಟಕ್ಕೆ ದರೋಡೆ ಮಾಡಿರುವ ಲಕ್ಷಣಗಳು ಕಾಣುತ್ತಿವೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದರು.