Advertisement

ಕರಂದ್ಲಾಜೆ ಸಾಧನೆಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಪ್ರಮೋದ್‌ಗಿಲ್ಲ: ಬಿಜೆಪಿ

07:39 PM Mar 28, 2019 | Team Udayavani |

ಉಡುಪಿ: ಸಂಸದೆ ಶೋಭಾ ಕರಂದ್ಲಾಜೆಯವರು ಇಡೀ ರಾಜ್ಯ ಹೆಮ್ಮೆ ಪಡುವಂತಹಭಿವೃದ್ಧಿ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಅವರು ತಂದ ಅನುದಾನಗಳಿಗೆ ದಾಖಲೆಗಳಿವೆ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಂತೆ 2 ಸಾವಿರ ಚಿಲ್ಲರೆ ಕೋ.ರೂ.ಅನುದಾನಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆಂದು ಸುಳ್ಳು ಹೇಳಿಲ್ಲ. ಬ್ಯಾನರ್‌, ಫ್ಲೆಕ್ಸ್‌ ಹಾಕಿಕೊಂಡು ಪ್ರಚಾರ ಮಾಡಿಕೊಂಡಿಲ್ಲ. ಭ್ರಷ್ಟಾಚಾರ ನಡೆಸಿಲ್ಲ, ಭ್ರಷ್ಟಚಾರಿಗಳನ್ನೂ ಪೋಷಿಸಿಲ್ಲ ಎಂದು ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಲೇವಡಿ ಮಾಡಿದರು.

Advertisement

ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕರಂದ್ಲಾಜೆಯವರು ಒಂದು ಸಂಸದೀಯ ಅವಧಿಯಲ್ಲಿ ಕ್ಷೇತ್ರಕ್ಕೆ ಹಲವಾರು ಪ್ರಥಮಗಳ ಯೋಜನೆಗಳನ್ನು ಪರಿಚಯಿಸಿದ್ದು, ರಾಜ್ಯ ವಲಯದಲ್ಲಿಯೇ ವಿಶೇಷವಾಗಿ ಶ್ಲಾಘನೆಗೊಳಪಟ್ಟಿದೆ. ಸಂಸತ್‌ನಲ್ಲಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿಶ್ಲೇಷಣೆಯೊಂದರಲ್ಲಿ 53 ಮಹಿಳಾ ಸಂಸದರ ಪೈಕಿ ಪ್ರಪ್ರಥಮ ಸಾಧಕರಾಗಿ ಅವರು ನಿಲ್ಲುತ್ತಾರೆ. ಅವರು ಇದನ್ನು ಎಲ್ಲೂ ಪ್ರಚಾರ ಮಾಡಿಲ್ಲ. ಅವರ ಸಾಧನೆ ಬಗ್ಗೆ ಮಾತನಾಡುವ ನೈತಿಕ ಹಕ್ಕು ಪ್ರಮೋದರಿಗಿಲ್ಲ ಎಂದು ಹೇಳಿದರು.

ಕಾರ್ಯಕರ್ತರ ಮೇಲೆ ಉಕ್ಕಿದ ಪ್ರೇಮ
ಪ್ರಮೋದ್‌ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಕಾರ್ಯಕರ್ತರನ್ನು ಕಡೆಗಣಿಸಿ ಸೋತೆನೆಂದು ಮತ್ತೆ ಕಾರ್ಯಕರ್ತರನ್ನು ಓಲೈಸಲು ಆರಂಭಿಸಿದ್ದಾರೆ. ಅಂದು ಸೋತಾಗ ಉಲ್ಲೇಖವಾಗದ ಕಾರ್ಯಕರ್ತರ ಮೇಲಿನ ಪ್ರೇಮ ಇದ್ದಕಿದ್ದಂತೆ ಅವರಿಗೆ ಈಗ ಏಕೆ ಉಕ್ಕಿ ಹರಿಯುತ್ತಿದೆ ಎಂದು ಪ್ರಭಾಕರ ಪೂಜಾರಿ ಪ್ರಶ್ನಿಸಿದರು.

ಬಿಜೆಪಿ ಬಾಗಿಲಲ್ಲಿ ನಿಂತವರು
ಅಧಿಕಾರದಾಹದಿಂದ ಯಾವುದೇ ಪಕ್ಷವಾದರೂ ಸರಿಯೇ ಎನ್ನುವ ಮನೋಭಾವ ಹೊಂದಿರುವ ಪ್ರಮೋದ್‌ ಅಂತಿಮ ಕ್ಷಣದವರೆಗೂ ಬಿಜೆಪಿ ಬಾಗಿಲಲ್ಲಿ ನಿಂತು, ಅಲ್ಲಿ ಪ್ರವೇಶ ದೊರಕದಿದ್ದಾಗ ಕೊನೆಯ ಕ್ಷಣದಲ್ಲಿ ಜೆಡಿಎಸ್‌ಗೆ ಸೇರಿ ಈಗ ಎರಡೂ ಪಕ್ಷವನ್ನು ನಿರ್ನಾಮಗೊಳಿಸಲು ಪೀಠಿಕೆ ಹಾಕಿದ್ದಾರೆ ಎಂದರು.

ಪಂ.ಗಳಿಗೆ ಹೇರಳ ಅನುದಾನ
ಶೋಭಾ ಕರಂದ್ಲಾಜೆಯವರು ಸಂಸದೆಯಾಗಿ ಜಿ.ಪಂ., ತಾ.ಪಂ., ಗ್ರಾ.ಪಂ.ಗಳಿಗೆ ಹೇರಳ ಅನುದಾನಗಳನ್ನು ತಂದಿದ್ದು, ಈ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಸಂಸದರ ನಿಧಿ ಬಳಕೆಯಾಗಿದೆ. ಯಾವುದೇ ಪಂ. ಸದಸ್ಯನ ಅರ್ಜಿ ತಿರಸ್ಕೃತಗೊಂಡ ದಾಖಲೆಗಳಿಲ್ಲ. ಇದು ಸಂಸದೆಯವರ ಕಾರ್ಯತತ್ಪರತೆ, ಜನಪರ ಕಾಳಜಿಯನ್ನು ಸೂಚಿಸುತ್ತದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು. ನಗರ ಬಿಜೆಪಿ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ಉಪಾಧ್ಯಕ್ಷ ಟಿ.ಜಿ. ಹೆಗ್ಡೆ, ಸತೀಶ್‌ ಶೆಟ್ಟಿ, ನಗರಸಭಾ ಸದಸ್ಯ ಗಿರಿಧರ ಆಚಾರ್ಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next