Advertisement

ಸಾಮಾನ್ಯ ಸಭೆ ಬಹಿಷ್ಕರಿಸಿದ ಸದಸ್ಯರು

01:21 PM Aug 20, 2017 | Team Udayavani |

ಯಾದಗಿರಿ: ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಲವಂತ ರಾಠೊಡ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ತಾಪಂ ಸಾಮಾನ್ಯ ಸಭೆ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಶನಿವಾರ ನಡೆಯಿತು. ಬೆಳಗ್ಗೆ 11:30ಕ್ಕೆ ತಾಪಂ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಿಗೆ ಮಾತನಾಡಲು ಮೈಕ್‌ಗಳಿಲ್ಲ. ಇದ್ದ ಒಂದು ಮೈಕ್‌ ಕೆಟ್ಟು ಹೋಗಿದೆ ಎಂದು ಸದಸ್ಯರು ತಾಪಂ ಅಧ್ಯಕ್ಷ ಭಾಷು ರಾಠೊಡ ಮತ್ತು ತಾಪಂ ಇಒ ಬಲವಂತ ರಾಠೊಡ ಅವರ ವಿರುದ್ಧ ಹರಿದಾಯ್ದರು. ಈ ಮೊದಲು ಸದಸ್ಯರಿಗೆ ಮಾತನಾಡಲು ಬಳಸಲುತ್ತಿದ್ದ ಮೂರು ಮೈಕ್‌ಗಳು ಕೆಟ್ಟಿರುವುದರಿಂದ ಅವುಗಳು ತಂದಿರಲಿಲ್ಲ. ಇನ್ನೊಂದು ಸಭೆಯಲ್ಲಿ ಮೈಕ್‌ ಸಹ ಕೆಟ್ಟಿರುವುದರಿಂದ ಅದನ್ನು ದುರಸ್ತಿ ಮಾಡಲು ಸಿಬ್ಬಂದಿಗಳು ಸುಮಾರು ಅರ್ಧ ಗಂಟೆ ತೆಗೆದುಕೊಂಡು ನಂತರ ಸರಿಪಡಿಸಿ ಸಭೆ ನಡೆಸಲು ಅನುವು ಮಾಡಿಕೊಟ್ಟರು. ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಮಕೂಲ್‌ ಪಟೇಲ್‌ ಮತ್ತು ಜೆಡಿಎಸ್‌ ಸದಸ್ಯ ಮಲ್ಲಿಕಾರ್ಜುನ ಅರುಣಿ ಅವರು ಕಳೆದ ಆ.17ರಂದು ತಾಲೂಕಿನ ಅಲ್ಲಿಪುರ ದೊಡ್ಡ ತಾಂಡಾದಲ್ಲಿ ನಡೆದ ಬಂಜಾರ ಸಮಾಜದ ಧಾರ್ಮಿಕ ಸಭೆಯಲ್ಲಿ ತಾಪಂ ಇಒ ಬಲವಂತ ರಾಠೊಡ ಅವರು
ಗುರುಮಠಕಲ್‌ ಶಾಸಕ ಬಾಬುರಾವ ಚಿಂಚನಸೂರ ಪರ ಮತ ನೀಡಿ ಅವರ ಕೈ ಬಲಪಡಿಸುವಂತೆ ಹೇಳುವ ಮೂಲಕ ರಾಜಕೀಯ ಮಾಡಿದ್ದಾರೆ. ಅವರ ಭಾಷಣ ಮಾಡಿದ ಕುರಿತು ವಿಡಿಯೋ ರಿಕಾರ್ಡಿಂಗ್‌ ಮತ್ತು ಚಿನ್ನಾಕಾರ ಗ್ರಾಪಂ ಅಧ್ಯಕ್ಷ ಸುರೇಶ ರಾಠೊಡ ಅವರು ಕಲಬುರಗಿಯಲ್ಲಿ ಗುರುಮಠಕಲ್‌ ಶಾಸಕ ಬಾಬುರಾವ ಚಿಂಚನಸೂರ ಅವರಿಗೆ ಹೂ ಮಾಲೆ ಹಾಕಿ ಸನ್ಮಾನಿಸುವ ಸಂದರ್ಭದಲ್ಲಿ ಜೊತೆಗಿದ್ದಿರುವ ಚಿತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಾಪಂ ಅಧ್ಯಕ್ಷ ಭಾಷು ರಾಠೊಡ ತಾಪಂ ಇಒ ಅವರ ಪರ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯ ಚಂದಪ್ಪ ತಾಪಂ ಅಧ್ಯಕ್ಷರ ವಿರುದ್ಧ ಹರಿದಾಯ್ದರು. ಈ ನಡುವೆ ಇಬ್ಬರ ನಡುವೆ ಏಕ ವಚನದಲ್ಲಿ ವಾಗ್ಧಾದ ನಡೆಯಿತು. ತಾಪಂ ಅಧ್ಯಕ್ಷರು ಮತ್ತು ಕಾಂಗ್ರೆಸ್‌ ಸದಸ್ಯರು ಯಾವುದೇ ಸ್ಪಷ್ಟನೆ ನೀಡಬಾರದು ತಾಪಂ ಇಒ ಬಲವಂತ ಅವರೇ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಇಒ ಅವರು ಸಮರ್ಪಕ ಉತ್ತರ ನೀಡದೆ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ಅವರೊಂದಿಗೆ ಕಾಂಗ್ರೆಸ್‌ನ ಕೆಲ ಸದಸ್ಯರು ಸಭೆ ಬಹಿಷ್ಕರಿಸಿದರು. ತಾಪಂ ಅಧ್ಯಕ್ಷ ಭಾಷು ರಾಠೊಡ ಸಭೆಯಿಂದ ಹೊರ ಬಂದು ಸದಸ್ಯರನ್ನು ಮನವೊಲಿಸಲು ಯತ್ನಿಸಿದ್ದರು. ಆದರೆ ಸದಸ್ಯರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ದೂರು ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next