Advertisement

ದೇವರಾಗಿದ್ದ ಅನ್ನವೀಗ ಕೇವಲ ಅಂಗಡಿಯಲ್ಲಿ ಸಿಗುವ ವಸ್ತು 

10:20 PM Feb 24, 2017 | |

ಆಯ್ಕೆ ಎಂಬುದು ತಂದಿಟ್ಟಿರುವ ಸಮಸ್ಯೆಗಳು ಹಲವು. ಆಹಾರ ವ್ಯರ್ಥವೂ ಅದರಲ್ಲಿ ಒಂದು. ಒಂದು ಸಂಬಂಧವು ಕೇವಲ ಅಂಗಡಿಯಲ್ಲಿ ಸಿಗುವ ವಸ್ತುವಾಗಿ ಪರಿಗಣಿತವಾದಾಗ ಆಗುವ ಅನಾಹುತ ಏನೆಂಬುದಕ್ಕೆ ನಮ್ಮ ಮನೆಗಳಲ್ಲಿ ಆಗುತ್ತಿರುವ ಆಹಾರ ಪೋಲು ಕೂಡ ಒಂದು ಸ್ಪಷ್ಟ ಉದಾಹರಣೆ. 

Advertisement

ಆಹಾರ ತ್ಯಾಜ್ಯಗಳ ಬಗ್ಗೆ ಎಷ್ಟು ಬರೆದರೂ ಮುಗಿಯದಷ್ಟು ಇದೆ. ನಗರೀಕರಣ, ಬದಲಾಗುತ್ತಿರುವ ಜೀವನಶೈಲಿ, ಆರ್ಥಿಕ ಸ್ಥಿತಿ ಸುಧಾರಣೆ, ಹಸಿರು ಕ್ರಾಂತಿ ಎಲ್ಲವೂ ಕಳೆದ ನಾಲ್ಕು ದಶಕಗಳಲ್ಲಿ ಆಹಾರ ತ್ಯಾಜ್ಯದ ಪ್ರಮಾಣ ಹೆಚ್ಚಲು ಕಾರಣವಾಗಿದೆ ಎಂದು ಹೇಳಿದರೆ ತಪ್ಪಲ್ಲ. 

ಕೆಲವೊಮ್ಮೆ ಹಸಿರು ಕ್ರಾಂತಿ ದೇಶದ ಆಹಾರ ಕ್ಷೇತ್ರಕ್ಕೆ ಸ್ವಾವಲಂಬನೆ ತಂದುಕೊಟ್ಟಿರಬಹುದು. ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ಕೈಗೊಂಡ ಹಲವು ಉದ್ದೇಶಿತ ಕಾರ್ಯಕ್ರಮಗಳು ಗಮನಾರ್ಹ ಪ್ರಮಾಣದಲ್ಲಿ ಒಟ್ಟೂ ಆಹಾರ ಉತ್ಪಾದನೆಗೆ ಪೂರಕವಾಗಿವೆ. ಇದಾವುದೂ ಸುಳ್ಳಲ್ಲ. ಇದರ ಹಿನ್ನೆಲೆಯಲ್ಲೇ ಆರ್ಥಿಕ ಸ್ಥಿತಿ ಸುಧಾರಣೆ ಮತ್ತು ವಿಪರೀತ ಲಭ್ಯತೆ ಆಹಾರವನ್ನು ವ್ಯರ್ಥ ಮಾಡುವ ಪದ್ಧತಿಗೆ ಕಾರಣವಾಗುತ್ತಿದೆ ಎಂದು ನನಗೆ ಬಹಳ ಬಾರಿ ಅನಿಸಿದೆ. 

ಅದಕ್ಕೆ ಕಾರಣಗಳು ಇಲ್ಲದಿಲ್ಲ. ನಾವು ಸಣ್ಣವರಿದ್ದಾಗ ಆಹಾರ ಧಾನ್ಯಗಳಿಗೆ ಕೊರತೆಯಿತ್ತು. ಅದು ಮನೆಯಲ್ಲೂ ಮತ್ತು ದೇಶದಲ್ಲೂ. ಆಗಿನ್ನೂ ಹಸಿರು ಕ್ರಾಂತಿ ಆರಂಭವಾಗಿತ್ತಷ್ಟೇ. ವಿದೇಶಗಳಿಂದ ಅಪಾರ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ ಪ್ರಾಥಮಿಕ- ಪ್ರೌಢ ಶಾಲೆಗಳಲ್ಲಿ ಜಾರಿಯಲ್ಲಿದ್ದ ಮಧ್ಯಾಹ್ನದ ತಿಂಡಿಯ ಪದ್ಧತಿ ಈಗಿನ ಅಕ್ಷರ ದಾಸೋಹದಷ್ಟು ಸಮೃದ್ಧವಾಗಿರಲಿಲ್ಲ. ಪ್ರತಿನಿತ್ಯ ಕೊಡುತ್ತಿದ್ದುದು ಗೋಧಿ ಉಪ್ಪಿಟ್ಟು. ಇದು ಶಿವಮೊಗ್ಗ ಬದಿಯ ಕಥೆ. ಪ್ರತಿ ಶಾಲೆಗೂ ಒಂದು ಅಥವಾ ಎರಡು ಕುದುರೆಗಾಡಿಗಳಲ್ಲಿ ತಿಂಡಿ ಬರುತ್ತಿತ್ತು. ಆಗ, ಎಲೆಗೆ ಹಾಕಿಸಿಕೊಂಡವರು ಒಂದು ಅಗುಳನ್ನೂ ಬಿಡುವಂತಿರಲಿಲ್ಲ. ಅದನ್ನು ನೋಡಿಕೊಳ್ಳಲಿಕ್ಕೆ ಇಬ್ಬರು ಮೇಸ್ಟ್ರೆಗಳು ನಮ್ಮ ತಿಂಡಿ ಮುಗಿಯುವವರೆಗೂ ಅತ್ತಿಂದಿತ್ತ ತಿರುಗಾಡುತ್ತಿದ್ದರು. ನಾವು ಒಂದುವೇಳೆ ಮನೆಗೆ ಹೋಗಿ ತಿನ್ನುತ್ತೇವೆಂದು ತೆಗೆದುಕೊಂಡು ಹೋಗಿ ಹೊರಗೆಲ್ಲೋ ಚೆಲ್ಲಿದರೆ, ನಾಯಿಗೆ ಹಾಕಿದರೆ ಮಾರನೆಯ ದಿನ ಅದನ್ನು ಪತ್ತೆ ಹಚ್ಚಿ ಬುದ್ಧಿ ಹೇಳಲಾಗುತ್ತಿತ್ತು. ಕೆಲವೊಮ್ಮೆ ಖೋತಾ ಆದಾಗ ಮೇಸ್ಟ್ರೆಗಳು ನೀಡುತ್ತಿದ್ದ ಕಾರಣ ಅಂಥದ್ದೇ ಒಂದಾಗಿತ್ತು. “ಅಮೆರಿಕದಿಂದ ಗೋಧಿ ಈ ತಿಂಗಳು ಕಡಿಮೆ ಬಂದದ್ದು. ಹಾಗಾಗಿ ತಿಂಗಳು ಪೂರ್ತಿ ತಿಂಡಿ ಸಿಗದು’ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿದ್ದ ಕಾರಣ. 

ಮನೆಯಲ್ಲೂ ಒಂದು ಅಗುಳನ್ನು ನಾವು ಬಿಡುವಂತಿರಲಿಲ್ಲ. ಅಂಥದ್ದೇನಾದರೂ ಕಂಡರೆ ಅಪ್ಪನಿಂದ ಹಿಡಿದು ಹಿರಿಯರೆಲ್ಲರೂ, “ಒಂದು ಅಗುಳಿಗೆ ಎಷ್ಟು ಕಷ್ಟ ಪಡಬೇಕೆಂಬುದು ನಮಗಷ್ಟೆ ಗೊತ್ತು. ಇದು ಅನ್ನವಲ್ಲ; ದೇವರು’ ಎನ್ನುತ್ತಿದ್ದರು. ತಾವೇ ಬೆಳೆದ ಬೆಳೆಯಾಗಿದ್ದರಿಂದ ಆ ಬೆವರಿನ ಬೆಲೆ ತಿಳಿದಿರುತ್ತಿತ್ತು. ಇದು ಯಾವುದೋ ಒಂದು ಮನೆಗೆ ಸೀಮಿತವಾಗಿರಲಿಲ್ಲ. ಎಲ್ಲರಲ್ಲೂ ಇದ್ದ ಭಾವ. ಅದೇ ಕಾರಣದಿಂದ ಹಳ್ಳಿಗಳಲ್ಲಿ ಎಲ್ಲೂ ಆಹಾರ ವ್ಯರ್ಥ ಮಾಡುವುದು, ತ್ಯಾಜ್ಯವನ್ನಾಗಿ ಗೊಬ್ಬರದ ಗುಂಡಿಗೆ ಎಸೆಯುವ ಕ್ರಮ ಕಂಡಿಲ್ಲ. ಯಾರ ಮನೆಯಲ್ಲೂ ತಂಗಳು ಎಂದು ಎಸೆಯುವ ಆಚಾರವೇ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. 

Advertisement

ಈ ಮನೆಯೊಳಗಿದ್ದ ಆಚರಣೆ, ಹೊರಗಿದ್ದ ಪದ್ಧತಿಗಳೆಲ್ಲ ನಮ್ಮೊಳಗೆ ಆಹಾರದ ಬಗ್ಗೆ ಬರಿಯ ಭಕ್ತಿ ಭಾವ ಮೂಡಿಸಿರಲಿಲ್ಲ. ಗಳಿಸುವಿಕೆಯ ಕಷ್ಟವನ್ನೂ ತಿಳಿಸಿಕೊಡುತ್ತಿತ್ತು. ಹಾಗಾಗಿಯೇ ಬಹುಶಃ ಆಹಾರವನ್ನು ವ್ಯರ್ಥ ಮಾಡುವ ದಾಷ್ಟéì ನಮಗೆ ಬಂದಿರಲಿಲ್ಲ. ಆಗಿನ ಬಡತನ ಮತ್ತು ಆಹಾರ ಧಾನ್ಯ ಕೊರತೆ ಎಲ್ಲವೂ ಇಂಥದೊಂದು ಸಂಸ್ಕೃತಿಯನ್ನು ಕಟ್ಟಿಕೊಟ್ಟಿರಲಿಕ್ಕೆ ಸಾಕು. 

ಕೇವಲ ವಸ್ತುವೆನ್ನುವ ವ್ಯಾಖ್ಯಾನ

ಇತ್ತೀಚಿನ ಎರಡು ದಶಕಗಳಲ್ಲಿ ನಮ್ಮ ದೇಶವೂ ಸೇರಿದಂತೆ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಆರ್ಥಿಕ ಚೈತನ್ಯ ಪ್ರತಿ ಊರಿನ ನಲ್ಲಿಗಳಲ್ಲೂ ಹರಿದ ಪರಿಣಾಮ ನಗರೀಕರಣದ ಪ್ರಕ್ರಿಯೆಗೆ ವೇಗ ದೊರಕಿತು. ನೋಡ ನೋಡುತ್ತಿದ್ದಂತೆ ಹಳ್ಳಿಗಳಲ್ಲಿ ಅಂಗಡಿಗಳು ಬಂದವು. ಶಾಲೆಯಲ್ಲಿ ಓದಿದವನೊಬ್ಬ ದೂರದ ಮುಂಬಯಿಗೋ ಬೆಂಗಳೂರಿಗೋ ಹೋಗಿ ಬರುವಾಗ ವಿಚಿತ್ರ ವೇಷ ಧರಿಸಿ ಬಂದ. ಜತೆಗೆ ನಗರದ ಪದ್ಧತಿ, ಸಂಸ್ಕೃತಿಯನ್ನೂ ತಂದ. ಅದು ಹಳ್ಳಿಯಲ್ಲಿದ್ದ ನಮಗೂ ವಿಶೇಷವೆನಿಸಿತು. ಮೆಲ್ಲಗೆ ಅವೆಲ್ಲವೂ ಅವತಾರ ಎತ್ತಲು ಶುರುವಾದವು. 

ಇದು ಒಂದು ಗತಿಯಲ್ಲಿ ಸಾಗುತ್ತಿದ್ದರೆ, ನಮಗೂ ವಸ್ತುಗಳ ಪ್ರಪಂಚ ಅರಿವು ಹೆಚ್ಚಾಯಿತು. ಎಲ್ಲವನ್ನೂ ವಸ್ತುಗಳೆಂದು ಪರಿಗಣಿಸುವ ಕ್ರಮವನ್ನು ರೂಢಿಸಿಕೊಳ್ಳತೊಡಗಿದೆವು. ಇದು ಅಮೆರಿಕ ಸೇರಿದಂತೆ ಪಾಶ್ಚಾತ್ಯ ನೆಲೆಯ ದೃಷ್ಟಿಕೋನ. ಅಲ್ಲಿ ಎಲ್ಲವೂ ವಸ್ತುವಿನ ರೀತಿಯಲ್ಲೇ ಪರಿಗಣಿತವಾದಂಥವು. ಮಾನವ ಸಂಬಂಧಗಳೂ ಸಹ. ಯಾವಾಗ ನಮಗೆ ಅನಿವಾರ್ಯತೆ ಇರುವುದೆಲ್ಲವೋ ಅಲ್ಲೆಲ್ಲ ಆಯ್ಕೆ ವಿಜೃಂಭಿಸುತ್ತದೆ. ಈ ಆಯ್ಕೆ ಎನ್ನುವುದು ಆ ಕ್ಷಣಕ್ಕೆ ಸ್ವಾತಂತ್ರ್ಯದ ಲೇಪವನ್ನು ಹೊಂದಿದ್ದರೂ ಕ್ರಮೇಣ ಅದೊಂದು ಚಟವಾಗಿ ಮಾರ್ಪಡುವ ಹೊತ್ತಿನಲ್ಲಿ ಎಲ್ಲ ಬಂಧವನ್ನೂ ಕಳಚಿಬಿಡುತ್ತದೆ. ಪ್ರಕೃತಿಕದತ್ತವಾಗಿ ಬಂದಿರುವ ಕೆಲವು ಅವಲಂಬನೆಯ ನೆಲೆಗಳೂ ಛಿದ್ರವಾಗುತ್ತವೆ. ಅದು ಮತ್ತಷ್ಟು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಅದಕ್ಕೆ ಈಗಾಗಲೇ ನಮ್ಮ ದೇಶವೂ ಸೇರಿ ಎಲ್ಲೆಡೆ ಮಾನವ ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಸ್ಪಷ್ಟ ಉದಾಹರಣೆ. 

ಈ ನಗರದಲ್ಲಿ ಸಿಗುವ ಹಣ, ಅದುವರೆಗೆ ದೇವರೆಂದು ಕಾಣುತ್ತಿದ್ದ ಅನ್ನವನ್ನೂ ಅಂಗಡಿಯಲ್ಲಿ ಬಿಕರಿಗಿಟ್ಟ ಒಂದು ಸಾಮಾನ್ಯ ವಸ್ತುವನ್ನಾಗಿಸಿತು. ಹಣ ಕೊಟ್ಟರೆ ಮೂಟೆಗಟ್ಟಲೆ ಅಕ್ಕಿ ಸಿಗುವುದಾದರೆ ಯಾವುದಕ್ಕೆ ಮೌಲ್ಯ ಬಂದೀತಲ್ಲವೇ? ಅದೇ ದೃಷ್ಟಿಕೋನ ನಮ್ಮನ್ನೂ ಈ ಹಂತಕ್ಕೆ ತಂದು ನಿಲ್ಲಿಸಿದೆ. ಸಂಬಂಧಗಳ ಕಲ್ಪನೆಯೇ ಬದಲಾದ ಹಿನ್ನೆಲೆಯಲ್ಲಿ, ಅನ್ನದ ಮೇಲಿನ ಭಕ್ತಿ ಭಾವ/ ಬಂಧ ಕಳಚಿದೆ. ಹಾಗಾಗಿ ಒಂದು ಮುಷ್ಟಿ ಅನ್ನ ಗೊಬ್ಬರದ ಗುಂಡಿಗೆ ಬಿದ್ದರೂ ನಮಗೆ ಯಾವ ಬೇಸರವೂ ಆಗುವುದಿಲ್ಲ. 

 ಇಂದು ಆಗಿರುವುದು ಇದೇ
ನಗರವೂ ಸೇರಿದಂತೆ ಇಂದಿನ ಮನೆಗಳಲ್ಲಿ ಸೃಷ್ಟಿಯಾಗುತ್ತಿರುವ ಆಹಾರ ತ್ಯಾಜ್ಯಗಳ ಹಿಂದೆ ಇಂಥದೊಂದು ಭಾವವೂ ಕೆಲಸ ಮಾಡುತ್ತಿದೆ ಎಂಬುದು ನನ್ನ ಬಲವಾದ ನಂಬಿಕೆ. ರುಚಿಯತ್ತ ನಾಲಗೆಯನ್ನು ಹರಿಬಿಟ್ಟಿರುವುದರಿಂದ ಆಗಿರುವ ಅನಾಹುತಗಳಲ್ಲಿ ಹೆಚ್ಚುತ್ತಿರುವ ಆಹಾರ ತ್ಯಾಜ್ಯವೂ ಒಂದು. ಹಲವು ಮನೆಗಳಲ್ಲಿ ಮಕ್ಕಳಿಗೆ ಕೊಟ್ಟ ಆಹಾರ ಅವುಗಳಿಗೆ ರುಚಿಸದಿದ್ದರೆ ಕಸದ ಬುಟ್ಟಿಗೆ ನೇರವಾಗಿ ಎಸೆಯುವ ಪ್ರಸಂಗಗಳಿವೆ. ಇದೇ ಉದಾಹರಣೆಯನ್ನು ಮೂವತ್ತು ವರ್ಷಕ್ಕೆ ಹಿಂತಿರುಗಿಸಿದರೆ (ಫ್ಲ್ಯಾಶ್‌ ಬ್ಯಾಕ್‌), ಎಷ್ಟು ಕಷ್ಟವಾದರೂ ಬಟ್ಟಲಿಗೆ ಹಾಕಿಕೊಂಡ ಅನ್ನವನ್ನು ಊಟ ಮಾಡಿಯೇ ಏಳಬೇಕಿತ್ತು. ಮಕ್ಕಳು ಬಹಳ ಚಿಕ್ಕವರಾಗಿದ್ದು, ಹೆಚ್ಚು ಅನ್ನ ಹಾಕಿದ್ದ ಸಂದರ್ಭಗಳಲ್ಲಿ ಅಪ್ಪ, ಅಮ್ಮನನ್ನೋ, ಅಕ್ಕನನ್ನೋ ಜಾಡಿಸುತ್ತಿದ್ದರು. ಜತೆಗೆ ಆ ಮಿಕ್ಕಿದ್ದನ್ನು ಅವರೇ ತಿಂದು ಮುಗಿಸಬೇಕಿತ್ತೇ ಹೊರತು ಎಂದಿಗೂ ಕಸದ ಬುಟ್ಟಿ ಸೇರುತ್ತಿರಲಿಲ್ಲ. 

ಹೊಟೇಲ್‌ಗ‌ಳಲ್ಲಿ ಆಗುತ್ತಿರುವ ತ್ಯಾಜ್ಯದ ಬಗ್ಗೆ ನಾನಿನ್ನೂ ಪ್ರಸ್ತಾಪಿ ಸಿಯೇ ಇಲ್ಲ. ಅಲ್ಲಿಯೂ ನಮ್ಮ ಅಮೆರಿಕದ ಆಲೋಚನಾ ಕ್ರಮ ಯಾವ ಬಗೆಯ ಅನಾಹುತವನ್ನು ಸೃಷ್ಟಿಸಿದೆ ಎಂದು ಹೇಳಿದರೆ ಅಚ್ಚರಿ ಪಡುತ್ತೀರಿ. ಸಂಪನ್ಮೂಲಕ್ಕೆ ಮಹತ್ವ ನೀಡಬೇಕೋ ತನ್ನ ಲಾಭಕ್ಕೆ ಪ್ರಾಮುಖ್ಯವನ್ನು ನೀಡಬೇಕೋ ಎಂಬುದರ ಬಗೆಗಿನ ಜಿಜ್ಞಾಸೆಯನ್ನು ಹೊಟೇಲ್‌ಗ‌ಳಲ್ಲಿ ಈಗಿರುವ ಕ್ರಮ ಮುಂದುವರಿಸಿದೆ. ಅದು ಬೇರೆಯೇ ಎಳೆ.

ಒಂದಿಷ್ಟು ಬದಲಾವಣೆ ಅನಿವಾರ್ಯ
ನನ್ನ ಮನೆಯಲ್ಲಿ ಉಳಿದು ಕೊಳೆಯುವ ಹತ್ತು ಅಗುಳು ಅನ್ನ ಪರಿಸರ ನಾಶಕ್ಕೆ ಕೊಡಬಹುದಾದ ಕೊಡುಗೆ ಏನೆಂಬುದು ಎಲ್ಲರಿಗೂ ಅರ್ಥವಾಗಬೇಕಾದ ಕಾಲವಿದು. ಇದು ಬರಿದೆ ಸಂಪನ್ಮೂಲದ ಪೋಲು ಆಗಿರದೇ, ಮುಂದಿನ ತಲೆಮಾರುಗಳನ್ನೂ ಸಂಕಷ್ಟದಲ್ಲಿ ಸಿಲುಕಿಸುವ ಕ್ರಿಯೆಯಾಗಿರುವುದು ಸುಳ್ಳಲ್ಲ. ಇದೆಲ್ಲವನ್ನೂ ಚರ್ಚೆಯ ಮುನ್ನೆಲೆಗೆ ತಂದರಷ್ಟೆ ಸಾಲದು. ನಮ್ಮ ಮನೆಗಳಲ್ಲಿ ಸಣ್ಣದೊಂದು ಧನಾತ್ಮಕ ಬದಲಾವಣೆ ಆರಂಭವಾಗಬೇಕು. ಆಹಾರ ವ್ಯರ್ಥ ಮಾಡುವುದಕ್ಕೆ ಪೂರ್ಣವಿರಾಮ ನೀಡುವುದಾದರೆ, ನಮ್ಮ ಸ್ವತ್ಛ ಭೂಮಿ, ಸ್ವತ್ಛ ನೀರು, ಸ್ವತ್ಛ ಪರಿಸರವನ್ನು ಮುಂದಿನ ಪೀಳಿಗೆಗೆ ಬಿಟ್ಟುಕೊಡಲು ಬದ್ಧರಾಗಿದ್ದೇವೆಂದೇ ಅರ್ಥ. ಅಂಥದೊಂದು ಸಂಗತಿ ನಮ್ಮೆಲ್ಲರಲ್ಲೂ ಸಾಧ್ಯವಾಗಬೇಕು. ಅದೇ ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯಂಥ ಸಂಗತಿಗಳಿಗೆ ನಾವು ಕೊಡುವ ಉತ್ತರವಾಗಬಲ್ಲದು.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next