Advertisement

ಶೋಚನೀಯಾವಸ್ಥೆಯಲ್ಲಿರುವ ಜಿಲ್ಲೆಯ ಪ್ರಧಾನ ರಸ್ತೆ

08:08 PM Jul 17, 2019 | Sriram |

ವಿದ್ಯಾನಗರ: ದಶಕಗಳು ಕಳೆದರೂ ಮೋಕ್ಷಪ್ರಾಪ್ತಿಯಾಗದೆ ಅನಾಥವಾದ ರಸ್ತೆ ಯೊಂದು ಪ್ರಯಾಣಿಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ರಸ್ತೆಯಾದ್ಯಂತ ದೊಡ್ಡ ದೊಡ್ಡ ಹೊಂಡಗಳಲ್ಲಿ ಕೆಸರುನೀರು ತುಂಬಿ ನಡೆದಾಡುವುದೇ ಕಷ್ಟ ಎನ್ನುವಂತಾಗಿದೆ. ಸಾವಿರಾರು ಜನರಿಗೆ ಆಶ್ರಯವಾಗುವ ಬದಿಯಡ್ಕ-ಏತಡ್ಕ-ಕಿನ್ನಿಂಗಾರ್‌-ಸುಳ್ಯ ಪದವು ಹೆದ್ದಾರಿಯು ಜನಜೀವನಕ್ಕೆ ಸವಾಲಾಗಿ ಚಾಚಿ ಕೊಂಡಿದ್ದು ಮಳೆಗಾಲ ಪ್ರಾರಂಭವಾ ದಾಗಿನಿಂದ ರೋಡು ತೋಡಾಗಿದೆ.

Advertisement

ಕೇರಳ-ಕರ್ನಾಟಕವನ್ನು ಸೇರಿಸುವ ಬದಿಯಡ್ಕ-ಕುಂಬಾxಜೆ-ಎಣ್ಮಕಜೆ-ಬೆಳ್ಳೂರು ಪಂಚಾಯತ್‌ಗಳ ಮೂಲಕ ಹಾದುಹೋಗುವ ಜಿಲ್ಲೆಯ ಪ್ರಧಾನ ರಸ್ತೆಗಳಲ್ಲಿ ಒಂದಾದ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ರಸ್ತೆಯಾದ್ಯಂತ ಡಾಮರು ಎದ್ದುಹೋಗಿ ಸೃಷ್ಟಿಯಾದ ಹೊಂಡಗಳು, ಜಲ್ಲಿಕಲ್ಲುಗಳು ತುಂಬಿಹೋಗಿದ್ದು ಈ ರಸ್ತೆಯನ್ನು ಆಶ್ರಯಿಸಿರುವ ವಾಹನ ಚಾಲಕರು ಭೀತಿಯಿಂದಲೇ ಗುರಿಯತ್ತ ಸಾಗುವಂತಾಗಿದೆ. ಡಾಮರ್‌ ಸಂಪೂರ್ಣ ಕಿತ್ತುಹೋಗಿ ಜರ್ಝರಿತವಾದ ಸಾರ್ವಜನಿಕ ರಸ್ತೆಯು ರಸ್ತೆಯ ರೂಪವನ್ನೇ ಕಳೆದುಕೊಂಡು ತೋಡಿ ನಂತೆ ಭಾಸವಾಗುತ್ತಿದ್ದು ಹೊಂಡಗಳೇ ತುಂಬಿ ಹೋಗಿರುವುದರಿಂದ ವಾಹನ ಚಾಲಕರು ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯ ಪ್ರಧಾನ ರಸ್ತೆ
2009ರಲ್ಲಿ ಜಿಲ್ಲೆಯ ಪ್ರಧಾನ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೀನ ಸ್ಥಿತಿಯಲ್ಲಿ ಜನರ ಪಾಲಿಗೆ ಮರೀಚಿಕೆಯಾದ ಲೋಕೋಪಯೋಗಿ ಇಲಾಖೆ ಅಧಿಧೀನದ ಬದಿಯಡ್ಕ- ಸುಳ್ಯಪದವು ರಸ್ತೆ ಶೋಚನೀಯವಸ್ಥೆಯಲ್ಲಿದ್ದು ವರ್ಷಗಳಿಂದ ದುರಸ್ತಿ ಮಾಡುವ ಭರವಸೆಗಳು ನೀರ ಮೇಲಿಟ್ಟ ಹೋಮದಂತಾಗುತ್ತಿದೆ. ಮಲೆನಾಡು ಹೆದ್ದಾರಿ ನಿರ್ಮಾಣ ಯೋಜನೆಯಡಿ ಈ ರಸ್ತೆಯ ನವೀಕರಣ ಕಾಮಗಾರಿ ಮಾಡುವ ಭರವಸೆಯೂ ಕೈಗೂಡುವ ಯಾವುದೇ ಸೂಚನೆ ಇದುವರೆಗೂ ಲಭಿಸಿಲ್ಲ. ಶಾಲಾ ಮಕ್ಕಳು ರೋಗಿಗಳು ಸೇರಿದಂತೆ ಇಲ್ಲಿನ ಜನತೆ ಎದುರಿಸುವ ಸಮಸ್ಯೆ ಇಂದು ನಿನ್ನೆಯದಲ್ಲ.

20ವರ್ಷಗಳಿಂದ ಟಾರ್‌ ಕಾಣದ ರಸ್ತೆ
ಸುಮಾರು 2 ದಶಕಗಳಿಂದ ಈ ರಸ್ತೆ ಒಂದೇ ಒಂದು ಹನಿ ಟಾರ್‌ ಕಂಡಿಲ್ಲ ಎನ್ನುವುದು ನಂಬಲೇ ಬೇಕಾದ ಸತ್ಯ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾದ ಕಾಸರಗೋಡಿನ ಎಂಡೋಸಲ್ಫಾನ್‌ ಬಾತ ಪ್ರದೇಶ ಇದಾಗಿದೆ.

ಘನ ವಾಹನಗಳಿಂದ ರಸ್ತೆ ನಾಶ
ಕಗ್ಗಲ್ಲು ಸಾಗಾಟ ಲಾರಿಗಳು ಅಮಿತ ಭಾರ ಹೇರಿ ಸಂಚರಿಸುತ್ತಿರುವುದೇ ಈ ರಸ್ತೆಯ ಶೋಚನೀಯಾವಸ್ಥೆಗೆ ಕಾರಣ. ಸಣ್ಣ ಪುಟ್ಟ ದುರಸ್ಥಿ ಕಾರ್ಯಗಳನ್ನು ಕೈಗೊಂಡರೂ ಈ ಲಾರಿಗಳಿಂದಾಗಿ ಬಹುಬೇಗನೆ ರಸ್ತೆ ನಶಿಸಿ ಹೋಗುತ್ತದೆ ಎಂಬುದು ಸ್ಥಳೀಯರ ದೂರು.

Advertisement

ಗುತ್ತಿಗೆ ಲಭಿಸಿದರೂ ಆರಂಭವಾಗದ ಕೆಲಸ
ಆರ್ಲಪದವು-ಮುಳ್ಳೇರಿಯ ರಸ್ತೆಗೆ ನಾಲ್ಕು ತಿಂಗಳ ಹಿಂದೆಯೇ ಗುತ್ತಿಗೆ ಲಭಿಸಿದ್ದರೂ ಗುತ್ತಿಗೆದಾರರು ಇದುವರೆಗೂ ಯಾವುದೇ ಕೆಲಸ ಪ್ರಾರಂಭಮಾಡದಿರುವುದು ಜನರ ಕ್ರೋಧಕ್ಕೆ ಕಾರಣವಾಗಿದೆ. ಇನ್ನೂ ಕೆಲಸ ಆರಂಭಿಸದಿದ್ದಲ್ಲಿ ಇನ್ನೊಂದು ಪ್ರತಿಭಟನೆಗೆ ಕಾರಣವಾಗಲಿದೆ.

ಪ್ರತಿಭಟನೆಗೂ ಸಿಕ್ಕದ ಫಲ
ಬಿಜೆಪಿ ನೇತೃತ್ವದಲ್ಲಿ ಕರುವಲ್ತಡ್ಕದಿಂದ ಏತಡ್ಕದವರೆಗೆ ಪಾದಯಾತ್ರೆ, ಪಂಪಿಂಗ್‌ ಚಳವಳಿ, ಚಕ್ರಸ್ತಂಭನ, ಯುವ ಮೋರ್ಛಾ ನೇತೃತ್ವದ ಪಂಕ್ಚರ್‌ ಚಳುವಳಿ, ಜನಕೀಯ ಕ್ರಿಯಾಸಮಿತಿ ನೇತೃತ್ವದಲ್ಲಿ ರಾಜ್ಯ ರಾಜಧಾನಿ ತಿರುವನಂತಪುರಂ ಸೆಕ್ರೆಟೇರಿಯೆಟ್‌ ಮುಂದೆ ಅಳುವ ಸಮರ, ವ್ಯಾಪಾರಿ ಏಕೋಪನಾ ಸಮಿತಿ ಮತ್ತಿತರ ಸಂಘಟನೆಗಳು ಹಲವು ಪ್ರತಿಭಟನೆಗಳು ನಡೆದರೂ ರಸ್ತೆಯ ದುರವಸ್ಥೆ ದೂರವಾಗಿಲ್ಲ.

ಬಸ್ಸೂ ಬರುವುದಿಲ್ಲ
ಈ ಹಿಂದೆ ಖಾಸಗಿ, ಸರಕಾರಿ ಬಸ್ಸುಗಳು ಈ ಮಾರ್ಗವಾಗಿ ಸಂಚರಿಸುತ್ತಿದ್ದು ದುಃಸ್ಥಿತಿಯಿಂದಾಗಿ ನಾಲ್ಕು ವರ್ಷಗಳ ಹಿಂದೆಯೇ ಸಂಚಾರ ಮೊಟಕುಗೊಳಿಸಿದ್ದು ಪ್ರಸ್ತುತ ಒಂದೇ ಒಂದು ಬಸ್ಸು ಮಾತ್ರವೇ ದಿನಕ್ಕೆರಡು ಬಾರಿ ಸಂಚರಿಸುತ್ತದೆ. ಮಧ್ಯಾಹ್ನದ ಸಂಚಾರವನ್ನು ಮೊಟಕುಗೊಳಿಸಲಾಗಿದೆ. ಎಂಡೋಸಲ್ಫಾನ್‌ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಹಾದುಹೋಗುವ ಈ ರಸ್ತೆಯಲ್ಲಿ ಆ್ಯಂಬುಲೆನ್ಸ್‌ ಸೇರಿದಂತೆ ಯಾವುದೇ ಲಘು ವಾಹನಗಳು ಸಂಚರಿಸಲು ಹಿಂದೇಟು ಹಾಕುತ್ತಿದ್ದು ತುರ್ತು ಚಿಕಿತ್ಸೆಗೂ ಬದಿಯಡ್ಕ-ಮುಳ್ಳೇರಿಯ ರಸ್ತೆಯನ್ನು ಆಶ್ರಯಿಸಿ ಸುತ್ತುಬಳಸಿ ಸಂಚರಿಸಬೇಕಾದ ಅನಿವಾರ್ಯತೆಯಿದೆ. ಕಿನ್ನಿಂಗಾರು ಭಾಗದ ಜನರು ಬದಿಯಡ್ಕ ತೆರಳಲು ನಾಟೆಕಲ್ಲು, ಬೆಳಿಂಜ, ಸ್ವರ್ಗ, ಪೆರ್ಲ ಅಥವಾ ಮುಳ್ಳೇರಿಯ ದಾರಿಯಾಗಿ 5-10 ಕಿಲೋಮೀಟರ್‌ ಹೆಚ್ಚು ದೂರವನ್ನು ಕ್ರಮಿಸಬೇಕಾಗಿದೆ.

ಗುತ್ತಿಗೆ ಕಾರ್ಯ ಪೂರ್ತಿಯಾಗಲಿದೆ
ಈಗಾಗಲೇ 48.58ಕೋಟಿ ರೂಪಾಯಿಗಳ ಆಡಳಿತಾನುಮತಿ ಲಭಿಸಿದ್ದು ಇನ್ನು 6-8ತಿಂಗಳೊಳಗೆ ಈ ರಸ್ತೆಯ ಕೆಲಸ ಆರಂಭವಾಗಲಿದೆ. ಅತ್ಯುತ್ತಮ ರಸ್ತೆಯಾಗಿ ಈ ರಸ್ತೆಯನ್ನು ಬದಲಾಯಿಸಲಾಗುವುದು. 2017-18 ಬಜೆಟ್‌ನಲ್ಲಿ ರಸ್ತೆ ಪುನರ್ನಿಮಾಣಕ್ಕಿರುವ ಮೊತ್ತವನ್ನು ಮೀಸಲಿಡಲಾಗಿದೆ. ಈ ತಿಂಗಳಲ್ಲೇ ಗುತ್ತಿಗೆ ಕಾರ್ಯ ಪೂರ್ತಿಯಾಗಲಿದೆ.
 -ಎನ್‌.ಎ. ನೆಲ್ಲಿಕುನ್ನು
ಕಾಸರಗೋಡು ಶಾಸಕರು.

 ನಾಯಕರು
ಗಮನ ಹರಿಸಲಿ ಹಲವಾರು ವರ್ಷಗಳಿಂದ ಡಾಮರು ಕಾಣದ ನಮ್ಮೂರ ರಸ್ತೆಯ ಸಂಚಾರ ಯಾತನಾಜನಕವಾಗಿದೆ. ಈ ಸಮಸ್ಯೆಗೆ ಪರಿಹಾರ ಕಾಣ ಬೇಕಾದವರು ಕಣ್ಣಿದ್ದು ಕಾಣದಿರುವಾಗ ಸಾಮಾನ್ಯ ಜನತೆಯ ಗೋಳನ್ನು ಕೇಳುವವರಾರು? ಅಭಿವೃದ್ಧಿ ಎನ್ನುವುದು ಪೇಟೆ ಪಟ್ಟಣಗಳಿಗೆ ಸೀಮಿತವಾಗಿವೆಯೋ? ಗ್ರಾಮವಾಸಿಗಳತ್ತ ನಮ್ಮ ನಾಯಕರು ಗಮನ ಹರಿಸುವಂತಾಗಬೇಕು.
 -ಪ್ರಭಾಕರ ಕಲ್ಲೂರಾಯ ಬನದಗದ್ದೆ,
ಅಧ್ಯಕ್ಷರು ಗ.ಸಾ.ಸಾಂ.ಅಕಾಡೆಮಿ

 -ವಿದ್ಯಾಗಣೇಶ್‌ ಅಣಂಗೂರು

Advertisement

Udayavani is now on Telegram. Click here to join our channel and stay updated with the latest news.

Next