Advertisement

ಕಾನೂನು ಅನ್ಯಾಯಕ್ಕೊಳಗಾದವರ ಅಸ್ತ್ರ

03:51 PM Sep 18, 2021 | Team Udayavani |

ವಾಡಿ: ಕಾನೂನಿನ ಅರಿವಿನ ಕೊರತೆಯಿಂದಾಗಿ ಸಮಾಜದಲ್ಲಿ ಅನೇಕರು ವಿವಿಧ ರೀತಿಯ ದೌರ್ಜನ್ಯಗಳಿಗೆ ಬಲಿಯಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಕಾನೂನು ಅರಿವು ಎನ್ನುವುದು ಅನ್ಯಾಯಕ್ಕೊಳಗಾದ ಸಂತ್ರಸ್ತರ ಕೈಗಳಿಗೆ ಅಸ್ತ್ರವಿದ್ದಂತೆ. ಬದುಕಿನಲ್ಲಿ ನ್ಯಾಯ ಸ್ಥಾಪಿಸಲು ಪ್ರತಿಯೊಬ್ಬರೂ ಕಾನೂನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಚಿತ್ತಾಪುರ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಸುಭಾಶ್ಚಂದ್ರ
ರಾಠೊಡ ಹೇಳಿದರು.

Advertisement

ಕಲ್ಯಾಣ ಕರ್ನಾಟಕ ಉತ್ಸವದ 75ನೇ ಅಮೃತ ಮಹೋತ್ಸವ ನಿಮಿತ್ತ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಪೊಲೀಸ್‌ ಇಲಾಖೆ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಪಟ್ಟಣದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನ ತಿಳಿವಳಿಕೆ ಇದ್ದರೆ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಧೈರ್ಯ ಬರುತ್ತದೆ. ಅನಗತ್ಯವಾಗಿ ದಾಖಲಾಗುವ ಎಫ್‌ಐಆರ್‌ ಪ್ರಶ್ನಿಸಲು ಶಕ್ತಿ ನೀಡುತ್ತದೆ. ಪೊಲೀಸರು ನಮ್ಮ ವೈರಿಗಳಲ್ಲ. ಅವರಿಗೆ ಹೆದರಬೇಕಾದ ಅವಶ್ಯಕತೆಯೂ ಇಲ್ಲ. ಏಕಾಏಕಿ ಯಾರನ್ನೂ ಅವರು ಬಂ ಧಿಸುವಂತಿಲ್ಲ. ಕಾನೂನಿಗೂ ನಮಗೂ ಸಂಬಂಧವೇ ಇಲ್ಲದಂತೆ ಇರುವುದರಿಂದ ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ ಎಂದರು.

ಗಂಡು, ಹೆಣ್ಣು ಮಗು ಎನ್ನುವ ತಾರತಮ್ಯದ ಮನಸ್ಥಿತಿಯಿಂದ ಹೊರಬರಬೇಕು ಎನ್ನುವ ಕಾರಣಕ್ಕೆ ಕಾನೂನಿನಲ್ಲಿ ಸಮಾನತೆ ಬೋಧಿ ಸಲಾಗಿದೆ. 6ರಿಂದ 14 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವ ಹಕ್ಕು ನೀಡಲಾಗಿದೆ. ಅಪ್ರಾಪ್ತರನ್ನು ದುಡಿಸಿಕೊಳ್ಳುವುದಾಗಲಿ ಅಥವಾ ಮದುವೆ ಮಾಡುವುದಾಗಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಶಿಕ್ಷಣದಿಂದ ವಂಚಿತವಾಗುವ ಮಗು ಸಮಾಜವನ್ನು ಅರ್ಥ ಮಾಡಿಕೊಳ್ಳುವಲ್ಲಿ
ವಿಫಲವಾಗುತ್ತದೆ. ಅಂಥಹ ಮಕ್ಕಳು ದೌರ್ಜನ್ಯ, ದಬ್ಟಾಳಿಕೆ, ಶೋಷಣೆ ಹಾಗೂ ಅಸಮಾನತೆಗೆ ತುತ್ತಾಗುತ್ತಾರೆ ಎಂದರು.

ಆಸ್ತಿಗಾಗಿ ಕುಟುಂಬ ಕಲಹ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ವಿಶೇಷವಾಗಿ ಮಹಿಳೆಯರು ಪೋಷಕರ ಆಸ್ತಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಪುರುಷರು ನಮಗೆ ಅಕ್ಕ ತಂಗಿಯರಿಲ್ಲ ಎಂದು ಸುಳ್ಳು ಮಾಹಿತಿ ನೀಡಿ ಸಂಪೂರ್ಣ ಆಸ್ತಿ ಕಬಳಿಸುತ್ತಿದ್ದಾರೆ. ಆದ್ದರಿಂದ ನೀವು ಸತ್ತನಂತರವೂ ಮಕ್ಕಳು ಖುಷಿಯಾಗಿರಬೇಕು ಎಂದಾದರೆ ಬದುಕಿರುವಾಗಲೇ ವ್ಹಿಲ್‌ ಬರೆದಿಡಿ ಎಂದು ಹೇಳಿದರು.

Advertisement

ವಕೀಲರಾದ ಸುಜಾತಾ ಎಸ್‌.ಮೊಸಲಗಿ ಮಾತನಾಡಿ,ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಹಕ್ಕುಗಳ ಅರಿವು ಮೂಡುವಂತಾಗಬೇಕು ಎಂಬುದು ಡಾ|ಬಾಬಾಸಾಹೇಬ ಅಂಬೇಡ್ಕರ್‌ ಅವರ ಕನಸಾಗಿತ್ತು ಎಂದರು. ನ್ಯಾಯವಾದಿ ಪಿ.ಎಂ.ಗಾಯಕವಾಡ ನೋಟರಿ ಕಾಯ್ದೆ ಕುರಿತು ಮಾಹಿತಿ ನೀಡಿದರು. ಸಿಪಿಐ ಕೃಷ್ಣಪ್ಪ ಕಲ್ಲೆದೇವರು ಹಾಗೂ ಪುರಸಭೆ ಗ್ರೇಡ್‌-1 ಮುಖ್ಯಾಧಿಕಾರಿ ಡಾ| ಚಿದಾನಂದಸ್ವಾಮಿ ಸಾಮಾಜಿಕ ಅಪರಾಧ ಮತ್ತು ಮೋಟಾರು ವಾಹನ ಕಾಯ್ದೆಗಳ ಮೇಲೆ ಬೆಳಕು ಚೆಲ್ಲಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ, ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜಿರೊಳ್ಳಿ, ಮುಖಂಡರಾದ ಬಸವರಾಜ ಪಂಚಾಳ, ಫಿರೋಜ್‌ ಖಾನ್‌, ಬಾಬುಮಿಯ್ನಾ, ಗಿರಿಮಲ್ಲಪ್ಪ ಕಟ್ಟಿಮನಿ, ಶರಣಬಸು ಸಿರೂರಕರ, ಅಂಬಾದಾಸ ಜಾಧವ ಮತ್ತಿತರರು ಇದ್ದರು. ನ್ಯಾಯವಾದಿ ಶ್ರವಣಕುಮಾರ ಮೊಸಲಗಿ ಸ್ವಾಗತಿಸಿದರು. ಕಾನೂನು ಸಲಹಾ ಸಮಿತಿ ಸದಸ್ಯ ಗಂಗಣ್ಣ ನಿರೂಪಿಸಿದರು. ಪಿಎಸ್‌ಐ ವಿಜಯಕುಮಾರ ಭಾವಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next