Advertisement

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

01:07 AM Jan 16, 2021 | Team Udayavani |

ಕೋವಿಡ್‌ ಸೋಂಕಿನ ಎರಡನೇ ಅಲೆ ಹಾಗೂ ವಿಶ್ವದ ಹಲವು ಭಾಗಗಳಲ್ಲಿ ರೂಪಾಂತರ ವೈರಸ್‌ ಸುದ್ದಿ­ಯೊಂದಿಗೆ 2020ರ ವರ್ಷ ಮುಕ್ತಾಯಗೊಂಡಿದೆ. ಭರವಸೆ­ಯೊಂದಿಗೆ ಕಾಲಿಟ್ಟಿರುವ 2021 ಮನುಕುಲಕ್ಕೆ ಉತ್ತಮ ವರ್ಷ­ವಾಗಿರಲಿದೆ. ಕೋವಿಡ್‌ ಕಾರ್ಮೋಡದಲ್ಲಿ ಬೆಳ್ಳಿಯ ಗೆರೆಗಳು ಈಗಾಗಲೇ ಗೋಚರಿಸುತ್ತಿವೆ. ದೇಶದಲ್ಲಿ ಕೋವಿಡ್‌ ಲಸಿಕೆ ಲಭ್ಯವಾಗಿದ್ದು, ಈ ವರ್ಷದಲ್ಲಿ ಜನಜೀವನ, ವ್ಯಾಪಾರ ವಹಿ­ವಾಟು ಯಥಾಸ್ಥಿತಿಗೆ ಬರುವ ಆಶಾಭಾವನೆ ಇದೆ.

Advertisement

ಕೋವಿಡ್‌-19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು ಪ್ರಬಲ ವೈಜ್ಞಾನಿಕ ವಿಶ್ಲೇಷಣೆಯ ಆಧಾರದ ಮೇರೆಗೆ ಕೊವ್ಯಾಕ್ಸಿನ್‌ ಹಾಗೂ ಕೊವಿಶೀಲ್ಡ್‌ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಲಸಿಕೆಗಳು ಸುರಕ್ಷಿತ ಹಾಗೂ ಪ್ರತಿರೋಧಕ ಶಕ್ತಿ ನೀಡುವ ಸಾಮರ್ಥಯ ಹೊಂದಿರುವುದು ಔಷಧ ತಯಾರಿಕೆ ಸಂಸ್ಥೆ­ಗಳು ಒದಗಿಸಿರುವ ದತ್ತಾಂಶಗಳಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಇವುಗಳ ಬಳಕೆಗೆ ಅನುಮೋದನೆ ನೀಡಿದೆ.

ಕೊವ್ಯಾಕ್ಸಿನ್‌ :

ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್‌) ಹಾಗೂ ರೋಗ ಸೂಕ್ಷ್ಮಾಣು ಶಾಸ್ತ್ರ ರಾಷ್ಟ್ರೀಯ ಸಂಸ್ಥೆಯ ಸಹಭಾಗಿ­ತ್ವ­ದೊಂದಿಗೆ ಕೊವ್ಯಾಕ್ಸಿನ್‌ ಲಸಿಕೆಯನ್ನು ಉತ್ಪಾದಿ­ಸುತ್ತಿದೆ. ಕೊವ್ಯಾಕ್ಸಿನ್‌ ಲಸಿಕೆಯು ತನ್ನ ಒಂದು ಹಾಗೂ ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಸುರಕ್ಷತೆ ಹಾಗೂ ಪ್ರತಿರೋಧಕ ಶಕ್ತಿ ಹೊಂದಿರುವುದು ಖಚಿತವಾಗಿದೆ. ಈ ಲಸಿಕೆ ಶೇ.50 ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ಕೆಲವು ಷರತ್ತುಗಳೊಂದಿಗೆ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ. ಕೊವ್ಯಾಕ್ಸಿನ್‌ ಲಸಿಕೆ ಪಡೆದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಬೇಕು ಎಂಬ ನಿಬಂಧನೆಗಳನ್ನು ವಿಧಿಸಲಾಗಿದೆ. ಮೂರನೇ ಹಂತದಲ್ಲಿ ದೇಶಾದ್ಯಂತ 26 ಸಾವಿರ ಸ್ವಯಂ ಸೇವಕರ ಮೇಲೆ ಕ್ಲಿನಿಕಲ್‌ ಟ್ರಯಲ್‌ ನಡೆಸಲಾಗುತ್ತಿದೆ. ಇದು ದೇಶದಲ್ಲಿ ಲಸಿಕೆಯೊಂದು ನಡೆಸುತ್ತಿರುವ ಅತೀ ದೊಡ್ಡ ಪ್ರಯೋಗ ಆಗಿದೆ. ಇದರ ದತ್ತಾಂಶಗಳು ಫೆಬ್ರವರಿ ಅಂತ್ಯಕ್ಕೆ ಸಿಗುವ ಸಾಧ್ಯತೆ ಇದೆ.

ಕೊವಿಶೀಲ್ಡ್‌ :

Advertisement

ಕೊವಿಶೀಲ್ಡ್‌ ಲಸಿಕೆಯನ್ನು ಆಕ್ಸ್‌ಫ‌ರ್ಡ್‌ ಯುನಿವರ್ಸಿಟಿ ವಿಜ್ಞಾನಿಗಳು ಅಸ್ಟ್ರಾಜೆನಿಕಾ ಔಷಧ ಸಂಸ್ಥೆಯ ಸಹಯೋಗ­ದೊಂದಿಗೆ ತಯಾರಿಸಿದ್ದಾರೆ. ಭಾರತದ ಪುಣೆಯ ಸೀರಂ

ಇನ್‌ಸ್ಟಿಟ್ಯೂಟ್‌ ಔಷಧ ತಯಾರಿಕೆ ಸಂಸ್ಥೆಯು, ಕೊವಿಶೀಲ್ಡ್‌ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ಭಾರತದಲ್ಲಿ ನಡೆದಿ ರುವ ಕೊವಿಶೀಲ್ಡ್‌ ಲಸಿಕೆ ಕ್ಲಿನಿಕಲ್‌ ಟ್ರಯಲ್‌ಗ‌ಳು ಹಾಗೂ ಜಾಗತಿಕವಾಗಿ ನಡೆಸಲಾಗಿರುವ ಕ್ರಿನಿಕಲ್‌ ಟ್ರಯಲ್‌ಗ‌ಳ ದತ್ತಾಂಶಗಳನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಇದರಲ್ಲಿ ಸುರಕ್ಷತೆ ಹಾಗೂ ಪರಿಣಾಮಕಾರಿ ಪ್ರತಿರೋಧಕ ಶಕ್ತಿ ಹೊಂದಿರುವುದು ದೃಢಪಟ್ಟಿರುವ ಕಾರಣ ಲಸಿಕೆ ಬಳಕೆಗೆ ಅನುಮೋದನೆ ನೀಡಲಾಗಿದೆ.

ಸಾಮಾನ್ಯ ಸಂದರ್ಭದಲ್ಲಿ, ಯಾವುದೇ ಲಸಿಕೆಯು ಒಂದು ವರ್ಷದ ಅವಧಿಯಲ್ಲಿರುವ ನಡೆದಿರುವ ಸುರಕ್ಷತೆ ದತ್ತಾಂಶ ಗಳನ್ನು ನೀಡಬೇಕಾಗಿದೆ. ಆದರೆ, ವಿಶ್ವದಲ್ಲಿ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಲಸಿಕೆ ಕೂಡ ಒಂದು ವರ್ಷ ಅವಧಿಯ ದತ್ತಾಂಶಗಳನ್ನು ಒದಗಿಸಿಲ್ಲ. ಆದರೂ ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ, ಸಾಂಕ್ರಾಮಿಕ ಪಿಡುಗು ಎದುರಿಸುತ್ತಿರುವ ಕಾರಣ ಕಡಿಮೆ ಅವಧಿಯಲ್ಲಿ ನಡೆಸಲಾಗಿರುವ ಕ್ಲಿನಿಕಲ್‌ ಟ್ರಯಲ್‌ಗ‌ಳ ದತ್ತಾಂಶಗಳನ್ನು ಪಡೆದು ಸುರಕ್ಷತೆ, ಪ್ರತಿರೋಧಕ ಶಕ್ತಿ ಆಧಾರದ ಮೇರೆಗೆ ಬಳಕೆಗೆ ಅನುಮತಿ ನೀಡಲಾಗಿದೆ. ದೀರ್ಘಾವಧಿ ಸುರಕ್ಷತೆಯ ದತ್ತಾಂಶಗಳನ್ನು ಕಂಪೆನಿಗಳು ಕ್ರೋಡೀಕರಿಸಬೇಕಾಗಿದೆ.

ಕೊವ್ಯಾಕ್ಸಿನ್‌ ಹಾಗೂ ಕೊವಿಶೀಲ್ಡ್‌ ವ್ಯತ್ಯಾಸ ಏನೆಂದರೆ, ಕೊವಿಶೀಲ್ಡ್‌ ಲಸಿಕೆಯನ್ನು ತುರ್ತಾಗಿ ಜನರ ಮೇಲೆ ಬಳಸಬಹುದಾಗಿದೆ. ಈ ಬಗ್ಗೆ ಯಾವುದೇ ಕ್ಲಿನಿಕಲ್‌ ಟ್ರಯಲ್‌ ವರದಿಯನ್ನು ನೀಡಬೇಕಾಗಿಲ್ಲ. ಆದರೆ ಕೊವ್ಯಾಕ್ಸಿನ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ವ್ಯಕ್ತಿಗಳ ಮೇಲೆ ಸಂಸ್ಥೆಯು ನಿಗಾ ವಹಿಸಬೇಕಾಗಿದೆ. ಕ್ಲಿನಿಕಲ್‌ ಟ್ರಯಲ್‌ನ ವರದಿಯನ್ನು ಪ್ರಾಧಿಕಾರಕ್ಕೆ ಒದಗಿಸಬೇಕಾಗಿದೆ. ಇದು ಸುಲಭದ ಪ್ರಕ್ರಿಯೆ ಅಲ್ಲ. ಫೈಜರ್‌ ಹಾಗೂ ಮಾಡೆರ್ನಾ ಲಸಿಕೆಗಳು ಪ್ರಸ್ತುತ ಭಾರತ ದಲ್ಲಿ ಭಾರೀ ಸವಾಲುಗಳನ್ನು ಎದುರಿಸಬೇಕಾಗಿದೆ. ಈ ಲಸಿಕೆಗಳ ಸಂಗ್ರಹಕ್ಕೆ ಕೋಲ್ಡ್‌ಸ್ಟೋರೇಜ್‌ ಹಾಗೂ ಸಾಗಣೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿದೆ. ಈ ಲಸಿಕೆಗಳನ್ನು ಉತ್ಪಾದಿಸುವ ಸಂಸ್ಥೆಗಳು ನಮ್ಮ ದೇಶದಲ್ಲಿ ಇಲ್ಲ.

ವಿಶ್ವದ ದೊಡ್ಡ ಅಭಿಯಾನ :

ವಿಶ್ವದಲ್ಲೇ ಅತೀ ದೊಡ್ಡ ಲಸಿಕೆ ವಿತರಣೆ ಅಭಿಯಾನ ಭಾರತದಲ್ಲಿ ಶುರುವಾಗುತ್ತಿದ್ದು, ಜುಲೈ ಹೊತ್ತಿಗೆ ಆದ್ಯತೆ ಮೇರೆಗೆ 30 ಕೋಟಿ ವ್ಯಾಕ್ಸಿನ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ. ದೇಶದಲ್ಲಿ ಮುಂಚೂಣಿಯಲ್ಲಿರವ ಆರೋಗ್ಯ ಕಾರ್ಯಕರ್ತರು, ಅಗತ್ಯ ಸೇವೆಗಳ ಪೂರೈಕೆ ಸಿಬಂದಿ ಹಾಗೂ ಬಾಧೆಗೊಳಗಾಗುವ ಜನರಿಗೆ ಈ ಲಸಿಕೆ ದೊರೆಯಲಿದೆ. ಲಸಿಕೆ ವಿತರಣೆ ಕಾರ್ಯದೊಂದಿಗೆ ಹೊಸ ವರ್ಷ ಶುರುವಾಗುತ್ತಿರುವುದು ಸಂತಸ ತಂದಿದೆ. ಇದಕ್ಕಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ಸಾಮರ್ಥ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.  ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ವಿತರಣೆಯ ತಾಲೀಮು ನಡೆಸಲಾಗಿದೆ. ನಾವು ಅತೀ ವೇಗವಾಗಿ ಲಸಿಕೆಗಳನ್ನು ಉತ್ಪಾದಿಸಿ ವಿಶ್ವದ ಹಲವು ಭಾಗಗಳಿಗೆ ವ್ಯಾಪಕವಾಗಿ ವಿತರಿಸಬೇಕಿದೆ. ಇದು ಅತ್ಯುತ್ತಮ ಫ‌ಲಪ್ರದವಾದ ಪ್ರಕ್ರಿಯೆಯಾಗಿದೆ ಎಂಬ ಆಶಾಭಾವನೆ ಹೊಂದಿದ್ದೇನೆ.

ನಿತ್ಯ ಮಿಲಿಯನ್‌ ಡೋಸ್‌ ಬೇಕಿದೆ :

ಲಸಿಕೆ ವಿತರಣೆ ಅಭಿಯಾನದಲ್ಲಿ ನಾವು ದಿನಕ್ಕೆ 10 ಲಕ್ಷ ಡೋಸ್‌ಗಳನ್ನು ನೀಡುವ ಅಗತ್ಯವಿದೆ. ಈ ಅಭಿಯಾನವು ಬೃಹತ್‌ ಪ್ರಮಾಣದಲ್ಲಿ ನೆರವೇರಬೇಕಿದ್ದು, ನಾವು ಹೇಗೆ ವೇಗವಾಗಿ ಲಸಿಕೆಯನ್ನು ತಲುಪಿಸುತ್ತೇವೆ ಎಂಬುದನ್ನು ನೋಡಬೇಕಿದೆ. 2021 ವರ್ಷವು ವಿಶ್ವದಲ್ಲಿ ಭಾರೀ ಪ್ರಮಾಣದ ವೈದ್ಯಕೀಯ ಹಾಗೂ ವೈಜ್ಞಾನಿಕ ಸಂಶೋಧನೆಗಳಿಗೆ ಸಾಕ್ಷಿಯಾಗ ಲಿದೆ. ಸಾಂಕ್ರಾಮಿಕ ಬಿಕ್ಕಟ್ಟುಗಳನ್ನು ನಿವಾರಿಸುವಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಿವೆ.

100 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ದೇಶವನ್ನು ಸಾಂಕ್ರಾಮಿಕ ಪಿಡುಗಿನಿಂದ ರಕ್ಷಿಸಬೇಕಾಗಿದೆ. ಇದು ಖಂಡಿತ ವಾಗಿಯೂ ಸುಲಭವಾಗಿ ನಿರ್ವಹಿಸಬಹುದಾದ ವಿಷಯ ವಲ್ಲ. ಇದಕ್ಕಾಗಿ ಸರಕಾರಗಳು, ಇಂಡಸ್ಟ್ರಿ, ಅಕಾಡೆಮಿಕ್‌ಗಳು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಬೇಕಿವೆ. ಜೈವಿಕ ವೈದ್ಯಕೀಯ ವಲಯದಲ್ಲಿನ ಸಣ್ಣ ಹಾಗೂ ದೊಡ್ಡ ಪ್ರಮಾ ಣದಸಮಸ್ಯೆಗಳಿಗೆ ಹೊಸ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ.

ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯವು ಸಹಭಾಗಿ ತ್ವದಲ್ಲಿ ಸಂಶೋಧನೆ ಸಂಸ್ಕೃತಿಯನ್ನು ಅಳವಡಿಸಿ­ಕೊಳ್ಳಲು ಈ ಕೋವಿಡ್‌-19 ಸಾಂಕ್ರಾಮಿಕ ಪಿಡುಗು ಉತ್ತೇಜನ ನೀಡಿದೆ. ವಿಜ್ಞಾನಿಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸಂಶೋಧನೆಗಳನ್ನು ಕೈಗೊಂಡು  ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರಮಾಣದಲ್ಲಿ ಚಿಕಿತ್ಸೆ ಸಿಗುವಂತೆ ಮಾಡಬೇಕಿದೆ. 2021ರಲ್ಲಿ ಬ್ಯಾಕ್ಟೀರಿಯಾ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುವ ಸಾಧ್ಯತೆ ಇದೆ. ಇದು ಭವಿಷ್ಯದಲ್ಲಿ ಕಾಡಬಹುದಾದ ಪ್ರಬಲ ಸಾಂಕ್ರಾಮಿಕಗಳ ವಿರುದ್ಧ ಹೋರಾಡಲು ನೆರವಾಗಲಿದೆ. ಹೊಸ, ನಿಖರ ಟೆಸ್ಟಿಂಗ್‌ ಪದ್ಧತಿಗಳು, ಲಸಿಕೆ ವಿತರಣೆ, ಕಣ್ಗಾವಲು ವ್ಯವಸ್ಥೆಗಳು ಕೋವಿಡ್‌ನಿಂದ ಅಸ್ತವ್ಯಸ್ತವಾಗಿರುವ ಜನಜೀವನವನ್ನು ಸಹಜ ಸ್ಥಿತಿಗೆ ತರಲಿದೆ ಎಂಬ ಭರವಸೆ ಹೊಂದಿದ್ದೇನೆ.

 

ಕಿರಣ್‌ ಮಜುಂದಾರ್‌ ಶಾ, ಬಯೋಕಾನ್‌ ಮುಖ್ಯಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next