Advertisement

ಕದಿರು ಕಟ್ಟುವ ಸಂಭ್ರಮಕ್ಕೆ ಭತ್ತದ ತೆನೆ ಕೊರತೆ

06:00 AM Oct 11, 2018 | Team Udayavani |

ಮಲ್ಪೆ: ಕೃಷಿ ಬದುಕಿಗೆ ಪೂರಕವಾಗಿ ಹಿಂದಿನಿಂದಲೂ ಆಚರಣೆಯಲ್ಲಿರುವ ವಿಶಿಷ್ಟ ಹಬ್ಬಗಳಲ್ಲಿ ಕದಿರು ಕಟ್ಟುವ ಹಬ್ಬವೂ ಒಂದು. ನವರಾತ್ರಿಯಲ್ಲಿ ಪ್ರಾರಂಭವಾಗುವ ಈ ಸಾಂಪ್ರದಾಯಿಕ ಹಬ್ಬಕ್ಕೆ ಅದರದ್ದೇ ಆದ ಮಹತ್ವ ಇದೆ. ಆಧುನಿಕತೆಯ ಈ ದಿನಗಳಲ್ಲಿ ಸಂಪ್ರದಾಯವನ್ನು ತಪ್ಪದೇ ಪಾಲಿಸುತ್ತಿದ್ದರೂ ಮೊದಲಿನ ಸಂಭ್ರಮ ಮಾತ್ರ ಈಗಿಲ್ಲ.  

Advertisement

ಭತ್ತದ ತೆನೆಯ ಕೊರತೆ
ಕದಿರು ಕಟ್ಟುವ ಹಬ್ಬಕ್ಕೆ ಕರಾವಳಿಯ ಮಂದಿಗೆ ತೆನೆಯ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ಎದುರಾಗುತ್ತಿದ್ದರೂ, ಈ ಬಾರಿ ಆ ಸಮಸ್ಯೆಯ ಬಿಸಿ ಮತ್ತಷ್ಟು ತಟ್ಟಿದೆ. ಕರಾವಳಿಯಲ್ಲಿ ಭತ್ತದ ಕೃಷಿ ನೇಪಥ್ಯಕ್ಕೆ ಸರಿಯತೊಡಗಿದೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ಆದ್ದರಿಂದ ಕೃಷಿಕರು ತಮಗೆ ಎಷ್ಟೊ ಬೇಕೊ ಅಷ್ಟು ಮಾತ್ರ ಕೃಷಿ ಮಾಡುತ್ತಾರೆ. 

ಉಳಿದಂತೆ ತೋಟವಾಗಿ ಮಾರ್ಪಡಿಸಿ ದರೆ ಇನ್ನು ಕೆಲವರು  ಪಾಳು ಬಿಟ್ಟಿದ್ದಾರೆ. ಹಾಗಾಗಿ ಜನರು ಕದಿರಿಗಾಗಿ ಅಲೆದಾಡುವುದು ಸಾಮಾನ್ಯವಾಗಿದೆ. ಚೌತಿ ಹಬ್ಬದ ಜೊತೆಗೆ ಹೊಸತನ್ನು ಆಚರಿಸುವ ಮಂದಿ ಆ ವೇಳೆ ಗದ್ದೆಯಲ್ಲಿ ಭತ್ತದ ತೆನೆ ಬಲಿತಗೊಳ್ಳದ ಕಾರಣ ಈ ಭಾರಿ ಹೆಚ್ಚಿನ ಮಂದಿ ನವರಾತ್ರಿಯಲ್ಲಿ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಅಶೋಕ್‌ ತೊಟ್ಟಂ ಅವರು.

ಕದ್ದುಮುಚ್ಚಿ ಕೊಯ್ಯುವುದು!
ಕೆಲವೊಂದು ಕಡೆಗಳಲ್ಲಿ ಗದ್ದೆಯ ಮಾಲಕರು ಭತ್ತದ ತೆನೆಯನ್ನು ಕೊಯ್ಯಲು ಆಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ  ರಾತ್ರಿ ವೇಳೆ ಕದ್ದು ಮುಚ್ಚಿ ಕೊಯ್ದು ತಂದು ಕಟ್ಟುವ ಪರಿಸ್ಥಿತಿ ನಮ್ಮ ಕರಾವಳಿ ಭಾಗದಲ್ಲಿ ಎದುರಾಗಿದೆ. ಹಾಗಾಗಿ ಈಗೀಗ ಹೆಚ್ಚಿನ ಮಂದಿ ದೇವಸ್ಥಾನಗಳಲ್ಲಿ ನೀಡುವ ಒಂದೆರಡು ತೆನೆಯನ್ನು ತಂದು ಕಟ್ಟಿಕೊಳ್ಳುತ್ತಾರೆ.

ಒಂದು ತೆನೆ ಮಾತ್ರ
ಹಿಂದೆ ಗದ್ದೆಯೇ ಮನೆ ಮಂದಿಯ ಜೀವಾಳವಾಗಿದ್ದ ಕಾಲದಲ್ಲಿ ಮನೆ ಮಂದಿಯಲ್ಲ ಸೇರಿ ಯೆಥೇಚ್ಚ ವಾಗಿ ಕದಿರನ್ನು ತಂದು ತಮ್ಮ ಮನೆಯ ಬಾಗಿಲಿನಿಂದ ಹಿಡಿದು ಹಾರೆ, ಪಿಕ್ಕಾಸು, ಅನ್ನದ ಪಾತ್ರೆ, ಇತ್ಯಾದಿ ಸುಮಾರು 30-40 ಪರಿಕರಗಳಿಗೆ ಕದಿರನ್ನು ಕಟ್ಟುವ ಸಂಪ್ರದಾಯ ಇತ್ತು. ಇಂದು ತೆನೆಯ ಅಭಾವದಿಂದಾಗಿ ದೇವರ ಕೋಣೆಗೆ ಮಾತ್ರ ಒಂದು ಸೀಮಿತಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next