Advertisement

ಉಡುಪಿ : ಅಧ್ಯಯನ ಕೇಂದ್ರವಾಗಿ ರೂಪುಗೊಳ್ಳಲಿದೆ ದ್ವೀಪ

10:43 AM May 04, 2022 | Team Udayavani |

ಮಲ್ಪೆ: ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಇಲ್ಲಿನ ಸೈಂಟ್‌ ಮೇರೀಸ್‌ ದ್ವೀಪ ಇನ್ನು ಮುಂದೆ ವಿದ್ಯಾರ್ಥಿಗಳು, ಸಾರ್ವಜನಿಕರು, ಪ್ರವಾಸಿಗರಿಗೆ ಅಧ್ಯಯನ ಕೇಂದ್ರವಾಗಿ ಪರಿವರ್ತನೆ ಯಾಗಲಿದೆ.
ದ್ವೀಪವನ್ನು ಅಧ್ಯಯನ ಕೇಂದ್ರವನ್ನಾಗಿಸಲು ಜಿಲ್ಲಾಡಳಿತ ಚಿಂತಿಸಿದೆ. ಇದೇ ವೇಳೆ ದ್ವೀಪದ ನಿರ್ವಹಣೆ ಮಾಡುತ್ತಿರುವ ಬೀಚ್‌ ಅಭಿವೃದ್ಧಿ ಸಮಿತಿಯು ಹಸುರಿನ ತಾಣವಾಗಿಸಲು ಆಸಕ್ತಿ ತೋರಿದ್ದು, ದ್ವೀಪವು ಹಚ್ಚ ಹಸುರಿನಿಂದ ಕಂಗೊಳಿಸಲಿದೆ.

Advertisement

ಸೈಂಟ್‌ ಮೇರೀಸ್‌ ದ್ವೀಪವು 13 ಎಕರೆಗೂ ಅಧಿಕ ಪ್ರದೇಶದಲ್ಲಿ ವಿಶಿಷ್ಟ ಬಂಡೆ ಕಲ್ಲುಗಳ ಸಹಿತ ನಾನಾ ವೈಶಿಷ್ಟ್ಯಗಳಿಂದ ಕೂಡಿದೆ. ದೇಶ, ವಿದೇಶಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುವುದರಿಂದ ವಿವಿಧ ಭಾಷೆಗಳ ಅರಿವುಳ್ಳವರಿಗೆ ಸೂಕ್ತ ತರಬೇತಿ ನೀಡಿ ಮಾರ್ಗದರ್ಶಕರ ರೂಪದಲ್ಲಿ ನಿಯೋಜಿಸಲು ಚಿಂತಿಸಲಾಗಿದೆ.

ಪರಿಸರ ಸಹ್ಯ ದ್ವೀಪ
ಎರಡು ಮೂರು ವರ್ಷಗಳ ಹಿಂದೆ ನಿರ್ವಹಣೆ ವಹಿಸಿಕೊಂಡವರು ಕೆಲವು ಬಗೆಯ ಸಸ್ಯಗಳನ್ನು, ಆಲಂಕಾರಿಕ ಗಿಡಗಳನ್ನು ನೆಟ್ಟಿದ್ದರು. ಕೆಲವೊಂದು ಮಾತ್ರ ಜೀವ ಪಡೆದು ಕೊಂಡಿದ್ದವು. ಇದೀಗ ಅವಕಾಶ ಇರುವಲ್ಲೆಲ್ಲ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಹೆಚ್ಚುವರಿ ತೆಂಗಿನ ಸಸಿಗಳು, ಬಾದಾಮಿ ಗಿಡಗಳನ್ನು ಬೆಳಸಲಾಗುತ್ತದೆ. ಪ್ರತೀ ದಿನ 5ರಿಂದ 6 ಟ್ಯಾಂಕ್‌ ನೀರನ್ನು ಬೋಟ್‌ ಮೂಲಕ ದ್ವೀಪಕ್ಕೆ ಕೊಂಡೊಯ್ದು ಅಲ್ಲಿರುವ ತೆಂಗಿನ ಮರ ಮತ್ತು ಎಲ್ಲ ಜಾತಿಯ ಗಿಡಗಳಿಗೆ ಉಣಿಸಲಾಗುತ್ತಿದೆ. ಅಲ್ಲಿರುವ ಔಷಧೀಯ ಸಸ್ಯಗಳನ್ನೂ ಸಂರಕ್ಷಿಸುವ ಯೋಜನೆ ಇದೆ.

ಪ್ರವಾಸಿಗರ ಸುರಕ್ಷೆಗೆ ಆದ್ಯತೆ
ಕೊರೊನಾ ದೂರವಾಗುತ್ತಿದ್ದಂತೆ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ಇದೇ ವೇಳೆ ಬೀಚ್‌ಗಳಲ್ಲಿ ಸುರಕ್ಷೆಯ ಕೊರತೆ ಮತ್ತು ಪ್ರವಾಸಿಗರ ನಿರ್ಲಕ್ಷ್ಯದಿಂದಲೂ ಅವಘಡ ಸಂಭವಿಸುತ್ತಿವೆ. 2 ವಾರದಲ್ಲಿ 6 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸುರಕ್ಷಾ ಕ್ರಮಗಳೇನು?
– ಪಶ್ಚಿಮ ದಿಕ್ಕು ಮತ್ತು ಈಜಲು ಅವಕಾಶ ಕಲ್ಪಿಸಿರುವ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಎರಡು ವಾಚ್‌ಟವರ್‌ ನಿರ್ಮಿಸಲಾಗಿದೆ.
– ಅಪಾಯಕಾರಿ ಪ್ರದೇಶಗಳಲ್ಲಿ ನೀರಿಗೆ ಇಳಿಯದಂತೆ 900 ಮೀಟರ್‌ ಉದ್ದಕ್ಕೆ ಕಬ್ಬಿಣದ ಬೇಲಿ ಹಾಕಲಾಗಿದೆ.
– 10 ಲೈಫ್ಬಾಯ್‌ (ಲೈಫ್‌ರಿಂಗ್‌) ಲಭ್ಯವಿದೆ.
– ಹೆಚ್ಚುವರಿ ಲೈಫ್‌ಗಾರ್ಡ್‌ ಮತ್ತು ಸೆಕ್ಯೂರಿಟ್‌ ಗಾರ್ಡ್‌ಗಳನ್ನು ನೇಮಿಸಲಾಗಿದ್ದು, ಪ್ರಸ್ತುತ 8 ಮಂದಿ ಲೈಫ್‌ಗಾರ್ಡ್‌ ಮತ್ತು 8 ಮಂದಿ ಸೆಕ್ಯೂರಿಟ್‌ ಗಾರ್ಡ್‌ ಇದ್ದಾರೆ.
– ಪ್ರವೇಶ ದ್ವಾರದಲ್ಲಿ 2 ಫಲಕಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಇತೀ¤ಚೆಗೆ ನಡೆದ ಅವಘಡದ ಚಿತ್ರಣವನ್ನು ಬರೆಯಲಾಗಿದೆ.
– ಪ್ರವೇಶ ದ್ವಾರದಲ್ಲಿ ಪ್ರವಾಸಿಗರನ್ನು ನಿಲ್ಲಿಸಿ ಬಂಡೆಯ ಮೇಲೆ ಸೆಲ್ಫಿ ತೆಗೆಯಕೂಡದು, ಅಪಾಯದ ವಲಯಕ್ಕೆ ಹೋಗಕೂಡದು ಎಂದು ಮೈಕ್‌ ಮೂಲಕ ಎಚ್ಚರಿಕೆ ನೀಡಲಾಗುತ್ತದೆ.
– ಪ್ರವಾಸಿ ಬೋಟುಗಳಲ್ಲಿ ಮೈಕ್‌ ಮೂಲಕ ಘೋಷಣೆ ಕೂಗಲಾಗುತ್ತಿದೆ.

Advertisement

ಅಪೂರ್ವ ಭೌಗೋಳಿಕತೆ ಹೊಂದಿರುವ ಈ ದ್ವೀಪವನ್ನು ಅಧ್ಯಯನಕ್ಕೆ ಬಳಸಿಕೊಳ್ಳುವಂತೆ ಅನೇಕರಿಂದ ಸಲಹೆ, ಸೂಚನೆಗಳು ಬಂದಿವೆ.ಅದರಂತೆ ಸೈಂಟ್‌ ಮೇರೀಸ್‌ ದ್ವೀಪದಲ್ಲಿ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
– ಕೂರ್ಮಾ ರಾವ್‌ ಎಂ., ಉಡುಪಿ ಜಿಲ್ಲಾಧಿಕಾರಿ

ದ್ವೀಪವನ್ನು ಪೂರ್ಣ ಹಸುರಾಗಿಸುವುದು ಮತ್ತು ಪ್ರವಾಸಿಗರಿಗೆ ನೆರಳು ನೀಡುವ ಕಾರ್ಯಕ್ಕೆ ಮುಂದಾಗಿದ್ದೇವೆ. ಹೆಚ್ಚುವರಿ ತೆಂಗಿನ ಸಸಿಗಳು, ಬಾದಾಮಿ ಗಿಡಗಳನ್ನು ಬೆಳಸಲಾಗುತ್ತದೆ. ಪ್ರವಾಸಿಗರ ಜೀವ ರಕ್ಷಣೆಗೆ ಗರಿಷ್ಠ ಮಟ್ಟದ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದೇವೆ.
ಪಾಂಡುರಂಗ ಮಲ್ಪೆ,
ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯ ಅಧ್ಯಕ್ಷ

ಮುಂದೆ ಇಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಿ ದ್ವೀಪದ ಭೌಗೋಳಿಕ ವೈಶಿಷ್ಟéದ ಕುರಿತು ಮಾಹಿತಿ ನೀಡಲಾಗುವುದು. ಪ್ರವಾಸಿಗರು ಕೇವಲ ಮೋಜುಮಸ್ತಿಗಾಗಿ ತಾಣಕ್ಕೆ ಬರದೇ ಅಧ್ಯಯನಕ್ಕೂ ಆದ್ಯತೆ ಕೊಡಬೇಕು. ಜೀವರಕ್ಷಕರ ಎಚ್ಚರಿಕೆ ಮಾತನ್ನು ಶಿಸ್ತಿನಿಂದ ಪಾಲಿಸಬೇಕು.
– ಸುದೇಶ್‌ ಶೆಟ್ಟಿ ,
ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯ ನಿರ್ವಾಹಕ

 

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next