Advertisement

ನಮ್ಮನ್ನು ನಾಪತ್ತೆಯಾಗಿಸುವ ಅಂತರ್ಜಾಲ

10:16 AM Jan 11, 2018 | |

ಇಡೀ ದಿನ ಅಂತರ್ಜಾಲದಲ್ಲೇ ವಿಹರಿಸುವುದರಿಂದ ಕುಟುಂಬ ಜೀವನ ದೂರವಾಗಿದೆ. ಬೇಕು ಬೇಡಗಳನ್ನು, ಕನಿಷ್ಠ ಪಕ್ಷ ನಮ್ಮದೇ ಹಸಿವಿನ ಪರಿಜ್ಞಾನವೂ ಇಲ್ಲವಾಗಿದೆ. ಗಂಡ-ಹೆಂಡತಿ ನಡುವೆ ಪರಸ್ಪರ ಕಷ್ಟ ಸುಖದ ಸಂವಹನವೂ ಇಲ್ಲವಾಗಿ ಸಮಯವೆಲ್ಲ ಜಾಲತಾಣದಲ್ಲಿ ಅನ್ಯಾಯವಾಗಿ ವ್ಯಯವಾಗುತ್ತಿದೆ. ಗೆಳೆಯರು, ಸಹೋದ್ಯೋಗಿಗಳು, ಹೆತ್ತವರು ದೂರವಾಗಿದ್ದಾರೆ. ಚಾಟಿಂಗ್‌ ನಡೆಸುವವರು ಎದುರು ಕಂಡಾಗ ಹಾಯ್‌-ಬಾಯ್‌ಗೆ ಸೀಮಿತವಾಗಿದ್ದೇವೆ. 

Advertisement

ಇಂಟರ್ನೆಟ್‌ ಇಂದು ಪ್ರತಿಯೊಬ್ಬರ ಬದುಕನ್ನೂ ಅಗಾಧವಾಗಿ ಆವರಿಸಿಕೊಂಡಿದೆ. ಇದರ ಬಳಕೆಯಲ್ಲಿ ಯುವ ಜನತೆಯ ಪಾಲು ದೊಡ್ಡದು. ಹಸಿವು, ಬಾಯಾರಿಕೆಯಂತೆ ಇಂಟರ್‌ನೆಟ್‌ ಕೂಡ ನಿತ್ಯ ಬದುಕಿನ ಸಹಜ ಅಂಗವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈಗ ಅಂತರ್‌ಜಾಲ ದಾಸರೇ. ಐದೇ ಐದು ನಿಮಿಷ ಇಂಟರ್‌ನೆಟ್‌ ಸಂಪರ್ಕ ತಪ್ಪಿ ಹೋದರೆ ಆಗುವ ಚಡಪಡಿಕೆಯನ್ನು ನೋಡುವಾಗ ಈ ಅದೃಶ್ಯ ಶಕ್ತಿಯ ಪ್ರಭಾವ ಏನು ಎನ್ನುವುದು ಅರ್ಥವಾಗುತ್ತದೆ. ಅಂತರ್ಜಾಲದ ಆವಿರ್ಭಾವದ ಬಳಿಕ ಜನಜೀವನದಲ್ಲಿ ಭಾರೀ ಬದಲಾವಣೆಯಾಗಿದೆ. ಎಷ್ಟೆಂದರೆ ಜೀವನ ಶೈಲಿಯನ್ನೇ ಇಂಟರ್‌ನೆಟ್‌ ನಿರ್ದೇಶಿಸುವಷ್ಟು ನಾವು ಅದಕ್ಕೆ ಜೋತು ಬಿದ್ದಿದ್ದೇವೆ. ಇದೇ ವೇಳೆ ಅಂತರ್ಜಾಲ ಪ್ರತಿ ದೇಶದ ಅಗತ್ಯ ಮತ್ತು ಅಭಿವೃದ್ಧಿಗೆ ಸಹಕಾರಿ. ಭಾರತಕ್ಕೂ ಇದು ಬೇಕು, ಅನಿವಾರ್ಯ ಎನ್ನುವುದು ಒಪ್ಪತಕ್ಕ ಮಾತು. ಆದರೆ ಈ ಲೇಖನದಲ್ಲಿ ಅದರಿಂದಾಗಿರುವ ಕೆಲವು ನಕರಾತ್ಮಕ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸಿದ್ದೇನೆ. 

ಇಂಟರ್‌ನೆಟ್‌ ಮೂಲಕ ನಮ್ಮ ಯುವ ಜನತೆ, ಯೋಗ್ಯ ಮಾಹಿತಿ-ಸ್ಫೂರ್ತಿ ಪಡೆದು ಬದುಕನ್ನು ಕಟ್ಟಿಕೊಳ್ಳುವ ಬದಲು ಯೋಗ್ಯವಲ್ಲದ, ಅನಗತ್ಯ ಕೀಳು ಅಭಿರುಚಿಯ ಮಾಹಿತಿಗಳ ಸಂಗ್ರಹದ ಮೂಲಕ ತಮ್ಮ ಬುನಾದಿಗೇ ಪೆಟ್ಟು ಕೊಟ್ಟುಕೊಳ್ಳುತ್ತಿದೆ. ವಿವೇಚನೆ ಇಲ್ಲದ ಅಂತರ್ಜಾಲ ಬಳಕೆ ಸೃಷ್ಟಿಸುತ್ತಿರುವ ಅವಾಂತರ ವಿದು. ಅಂತರ್ಜಾಲಕ್ಕಿಂತಲೂ ಅದರಲ್ಲಿ ಸಿಗುವ ಪರಿಷ್ಕರಿಸದ ಯಥೇತ್ಛ ಮಾಹಿತಿ ವೀಕ್ಷಣೆಯೇ ಒಂದು ಬಗೆಯ ವ್ಯಸನವಾಗಿ ಮಾರ್ಪಟ್ಟಿದೆ. ನಮ್ಮೊಳಗೇ ಸ್ವಾರ್ಥ ಮನೋಭಾವ ಹೆಚ್ಚಾಗಲು ಕಾರಣವಾಗಿದೆ. ಸ್ವನಿಯಂತ್ರಣ ಇಲ್ಲದ ಬಳಕೆಯಿಂದ ಸೈಬರ್‌ ಕ್ರೈಂ ಸಹ ಹೆಚ್ಚಾಗಿದೆ. ಇನ್ನಷ್ಟೇ ಬಾಳಿ ಬದುಕಬೇಕಾದವರು ಚಿತ್ತ ವಿಕರ್ಷಣೆಗೆ ಒಳಗಾಗಿ ಬಾಳ ಪಯಣವನ್ನು ಅರ್ಧದಲ್ಲೇ ಮೊಟಕುಗೊಳಿಸುವಂಥ ಸಂದರ್ಭಗಳೂ ಉದ್ಭವಿಸುತ್ತಿವೆ.

ನಂಬಿಕೆ ಮತ್ತು ಗುಣಮಟ್ಟ
ಅಂತರ್ಜಾಲದ ಗೋಡೆಯಲ್ಲಿ ಸರ್ಚ್‌ ಮಾಡಿದಾಗ ಬರುವ ಸುದ್ದಿಗಳೆಲ್ಲಾ ನಿಜವಾದ ಮಾಹಿತಿ ಎಂದು ತಿಳಿವ ದಿನಗಳಿವು. ಆದರೆ ಇಲ್ಲಿರಬಹುದಾದ ನಿಜವೆಂದು ನಂಬಿಸುವಂಥ ನಕಲಿ ಸುದ್ದಿಗಳು, ಮಾಹಿತಿಗಳಿಂದ ನಮ್ಮ ಬೌದ್ಧಿಕ ಮಟ್ಟವೇ ಕುಂಠಿತ ವಾಗುವ ಭಯ ಕಾಡುತ್ತಿದೆ. ನ್ಯಾಯ ಸಮ್ಮತವಲ್ಲದ ಅನೇಕ ಸುದ್ದಿಗಳು ಅಂತರ್ಜಾಲಗಳಲ್ಲಿ ಪ್ರಸರಣಗೊಳ್ಳುತ್ತವೆ. ಇದನ್ನು ಓದುತ್ತಾ ಹೋದಂತೆ ನಾವು ತಿಳಿದ ಮಾಹಿತಿಗಳೇ ಸುಳ್ಳೇನೋ, ಅಂತರ್ಜಾಲದ ಮಾಹಿತಿಯೇ ಪರಮ ಸತ್ಯ ಮತ್ತು ಗುಣಮಟ್ಟದ್ದು ಎಂಬ ಭ್ರಮೆ ಉಂಟಾಗುತ್ತದೆ. ಆ ಲೋಕದೊಳಗೆ ನಮ್ಮನ್ನು ಕರೆದೊಯ್ಯುತ್ತದೆ. ಇದೊಂದು ರೀತಿಯಲ್ಲಿ ಮನೆಯಲ್ಲಿ ಪೋಷ ಕರು ಎಷ್ಟೇ ವಿದ್ಯಾವಂತರಾಗಿದ್ದರೂ ಚಿಕ್ಕ ಮಕ್ಕಳಿಗೆ ತಮ್ಮ ಶಾಲೆಗಳಲ್ಲಿನ ಟೀಚರ್‌ ಹೇಳುವ ಅಂಶಗಳೇ ಹೆಚ್ಚು ಸರಿಯಾದದ್ದು ಎನ್ನುವ ನಂಬಿಕೆ ಇರುತ್ತದೆ. ಅದಕ್ಕಿರುವ ಕಾರಣ, ಮನೆಯಲ್ಲಿ ರುವವರು ನಮ್ಮ ಅಪ್ಪ-ಅಮ್ಮ. ಆದರೆ ಶಾಲೆಯಲ್ಲಿರುವವರು ಟೀಚರ್‌. ಟೀಚರ್‌ ಎಂದರೆ ಅವರು ಎಲ್ಲವನ್ನೂ ತಿಳಿದವರು. ಇಂಥದ್ದೇ ಒಂದು ಸಾಧ್ಯತೆ ಈ ಅಂತರ್ಜಾಲದಲ್ಲೂ ಇದೆ. ಅಂತರ್ಜಾಲದಲ್ಲಿ ಏನಿಲ್ಲ, ಎಲ್ಲವೂ ಇದೆ. ಅಂದ ಮೇಲೆ ಅದೇ ಪರಿಪೂರ್ಣ. ಇಂಥದೊಂದು ಭಾವ ನಾವು ಪಡೆಯುವ ಮಾಹಿತಿಗಳ ಕುರಿತು ವಿಶ್ವಾಸಾರ್ಹತೆ ಮೂಡಿಸುವುದರ ಜತೆಗೆ ಮತ್ತಷ್ಟು ರೋಚಕತೆಗೆ ನಮ್ಮನ್ನು ಹೊಂದಿಸಿಕೊಳ್ಳುತ್ತೇವೆ. ಅದರ ಆಜೀವ ಸದಸ್ಯತ್ವಕ್ಕೆ, ಬಿಟ್ಟು ಬಿಡಲಾದ ಸ್ಥಿತಿಗೆ ನಾವು ನಮ್ಮನ್ನು ಒಪ್ಪಿಸಿಕೊಂಡಿರುತ್ತೇವೆ. ಇದರಿಂದ ಮತ್ತೂಂದೆಡೆಯಲ್ಲಿ ಯೋಗ್ಯ ಮಾಹಿತಿಗಳು, ನ್ಯಾಯ ಸಮ್ಮತವಾದ ವಿಚಾರಗಳಿದ್ದರೂ ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ.

ವರ್ತನೆ ಮೇಲೆ ಪರಿಣಾಮ 
ಅಂತರ್ಜಾಲದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡ ಮೇಲೆ ಪ್ರತಿಯೊಂದಕ್ಕೂ ಅದನ್ನೇ ಮೊರೆ ಹೋಗುವ ಪ್ರವೃತ್ತಿ ಹೆಚ್ಚುತ್ತದೆ. ಇದು ಅಂತರ್ಜಾಲದ ಮಸುಕಾದ ಆಳದಲ್ಲಿ ನಮ್ಮನ್ನು ಮತ್ತಷ್ಟು ಸಿಕ್ಕಿ ಹಾಕಬಹದು. ಭಾರತದಲ್ಲಂತೂ ಪ್ರೌಢಾವಸ್ಥೆಯಲ್ಲೇ ಅಂತರ್ಜಾಲ ಎಲ್ಲರನ್ನೂ ಸೆಳೆವಾಗ, ಯುವ ಸಮುದಾಯ ತಮ್ಮ ಬೇಕು ಬೇಡಗಳೆಲ್ಲವನ್ನೂ ಇದರಿಂದಲೇ ಕಲಿಯುತ್ತಾರೆ. ಪರಿಣಾಮ ವಯಸ್ಸಿಗೆ ಬರುತ್ತಿರುವಂತೆ ವರ್ತನೆ, ಸಂವಹನದ ರೀತಿ, ವಿಶ್ವ, ವಿಜ್ಞಾನದ, ಸಾಂಸ್ಕೃತಿಕ ಜ್ಞಾನಗಳು ಕಡಿಮೆಯಾಗುತ್ತವೆ. ಬದಲಿಗೆ ಅಂತರ್ಜಾಲ ಹೇರುವ ತನ್ನದೇ ಆದ ಸಂಪ್ರದಾಯ- ಸಂಸ್ಕೃತಿಯ ದಾಸರಾಗಿಬಿಡುತ್ತಾರೆ. 

Advertisement

ಚಟದ ದಾಸ 
ದೇಶದ ಪ್ರಧಾನಿಗೇ ನೇರ ಸಂದೇಶ ಕಳಿಸುವಷ್ಟು, ಪರಸ್ಪರ ಸಂಭಾಷಿಸುವಷ್ಟು ಪ್ರಗತಿ ನಮ್ಮಲ್ಲಾಗಿದೆ. ಆದರೆ ಪ್ರತಿಯೊಬ್ಬರೂ ಇಂತಹುದಕ್ಕೇ ಅಂತರ್ಜಾಲವನ್ನು ಬಳಸುತ್ತಿದ್ದಾರೆಯೇ? ಖಂಡಿತ ಇಲ್ಲ. ತಮ್ಮ ಅಮೂಲ್ಯ ಸಮಯವನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ವ್ಯಯಿಸುತ್ತಿದ್ದಾರೆ. ಇದರಿಂದ ಮಾನವ ಸಂಬಂಧ, ಮುಖಾಮುಖೀ ಸಂವಹನಕ್ಕೆ ಅವಕಾಶವೇ ಕ್ಷೀಣಿಸಿದೆ. ಸಾಮಾಜಿಕ ಜಾಲತಾಣ ಬಳಸುವವರಂತೂ ಚಾಟಿಂಗ್‌, ಫ್ಲರ್ಟಿಂಗ್‌ನಲ್ಲೇ ಸದಾ ಬ್ಯುಸಿಯಾಗಿದ್ದಾರೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಅಷ್ಟೇ ಅಲ್ಲದೇ ಬ್ಲೂವೇಲ್‌ನಂತಹ ಪ್ರಾಣ ಹರಣ ಮಾಡುವ ಆಟಗಳಿಗೆ ದಾಸರಾಗಿದ್ದಾರೆ. ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಗೆಂದೇ ತಮ್ಮ ಸಮಯ ವ್ಯಯಿಸುತ್ತಿದ್ದಾರೆ. ಇದರಿಂದ ತಮ್ಮ ದೈನಂದಿನ ಕೆಲಸಕ್ಕೇ ಸಮಯ ಹೊಂದಿಸಲು ತಡವರಿಸುತ್ತಿದ್ದಾರೆ. 

ಬದಲಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಣ್ಣ ಸಾಮಾಜಿಕ ಜಾಲತಾಣಗಳಲ್ಲಿ, ಅಂತರ್ಜಾಲದಲ್ಲಿ ಸಕ್ರಿಯ ವಾಗಿರುವವರು, ಯಾವುದೇ ಸುದ್ದಿ, ಮಾಹಿತಿಗೆ ಪ್ರತಿಕ್ರಿಯೆ ನೀಡುವ ಪರಿಪಾಠವನ್ನೂ ಹೊಂದಿರುತ್ತಾರೆ. ಇದೇ ವೇಳೆ ಈ ಸಕ್ರಿಯತೆ ಇನ್ನೊಬ್ಬರ ಕುರಿತಾಗಿ ಹೀನ ಹೇಳಿಕೆ, ವ್ಯಕ್ತಿಯ ಮಾನ ಹಾನಿಗೆ, ನೀಚ ಭಾಷಾ ಪ್ರಯೋಗಗಳಿಗೆ ವೇದಿಕೆಯೂ ಆಗುತ್ತಿದೆ. ಇಂದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿ ಹೆಚ್ಚು ದುರುಪಯೋಗ ಆಗುತ್ತಿರುವುದೇ ಸಾಮಾಜಿಕ ಜಾಲ ತಾಣಗಳಲ್ಲಿ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬನ ಕವನ ರಾಜಕೀಯ ದೃಷ್ಟಿಗೆ ಬಿದ್ದು ಪ್ರಕರಣವೂ ದಾಖಲಾಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಬೇಕಾಬಿಟ್ಟಿ ಪ್ರತಿಕ್ರಿಯಿಸುವುದರಿಂದ ಸಂಭವಿಸ ಬಹುದಾದ ಯಾವುದೇ ಕಾನೂನು ತೊಡಕುಗಳ ಬಗ್ಗೆ ಬಳಕೆದಾರರು ಯೋಚಿಸುತ್ತಲೇ ಇಲ್ಲ. ತೋಚಿದ್ದನ್ನು ಗೀಚುವ, ಯಾವುದೇ ನಿಯಮ, ನಿರ್ಬಂಧಗಳಿಲ್ಲದ ವೇದಿಕೆ ಎಂದೇ ನಾವು ಭಾವಿಸುತ್ತೇವೆ. ಆದರೆ ಸೈಬರ್‌ಕ್ರೈಂ ತಡೆಗೆ ಭಾರತದಲ್ಲಿ ಬಹಳಷ್ಟು ಪರಿಣಾಮಕಾರಿ ಹೆಜ್ಜೆ ಇಡಲಾಗಿದೆ. ಜ್ಞಾನವನ್ನು ಅರಸಬೇಕಾದವರು, ಯಾವುದೇ ಹೇಳಿಕೆ ಆಯ್ದು ಟ್ರೋಲ್‌ ಮಾಡಲು ಮನಸ್ಸು ಮಾಡುತ್ತಾರೆ. ಇದರಿಂದ ಒಳ್ಳೆಯ ನಾಳೆಗಳಿಗಾಗಿ ಕಷ್ಟಪಡಬೇಕಾದ ಬಿಸಿರಕ್ತಗಳು ಮನರಂಜನೆಗೆ ಸಮಯ ವ್ಯಯಿಸುವುದು ಖೇದಕರ. 

ಎಲ್ಲ ಬಟಾಬಯಲು
ಅಂತರ್ಜಾಲದ ಆಗಮನದಿಂದ ಹೊಸ ಮಾಧ್ಯಮದ ಅನ್ವೇಷ ನೆಗೆ ಕಾರಣವಾಯಿತು. ಇದರಿಂದ ಇಂಟರ್‌ನೆಟ್‌ ಲೋಕದ ದಿಗ್ಗಜರಾಗಿ ಮೆರೆಯುತ್ತಿರುವ ಆ್ಯಪಲ್‌, ಗೂಗಲ್‌, ಫೇಸ್‌ಬುಕ್‌, ಟ್ವೀಟರ್‌, ಅಮೆಜಾನ್‌, ವಾಟ್ಸಾಪ್‌ ಮೊದಲಾದ ಹಲವು ಆವಿಷ್ಕಾರಗಳನ್ನು ತನ್ನ ಮಡಿಲಲ್ಲೇ ಬೆಳೆಸಿತು. ಈ ಬೆಳವಣಿಗೆಗಳ ಜತೆಗೆ ಬಳಕೆದಾರರ ಗೌಪ್ಯತೆಯು ಗೌಪ್ಯವಾಗಿ ಉಳಿಯುತ್ತಿದ್ದ ಕಾಲಘಟ್ಟ ಸರಿದು ಹೋಯಿತು. ಅಂತರ್ಜಾಲದಲ್ಲಿ ಹರಿಯಬಿಟ್ಟ ಯಾವುದೇ ಮಾಹಿತಿ ವಿಶ್ವದ ಇನ್ನೊಂದು ಮೂಲೆಯಲ್ಲಿರುವವನ ಬೆರಳ ತುದಿಯಲ್ಲಿ ಲಭ್ಯವಾಗುವ ದಿನಗಳಿವೆ. ಫೇಸ್‌ಬುಕ್‌ ಪ್ರೊಫೈಲ್‌ ಪೋಟೊಗಳೂ ಸೇರಿದಂತೆ ನಿತ್ಯದ ಚಟುವಟಿಕೆಗಳೂ ಮತ್ತೂಬ್ಬರಿಗೆ ನಮ್ಮ ಬಗ್ಗೆ ಹೇಳು ತ್ತವೆ. ಇದೇ ಮುಂದುವರಿದು, ಖಾಸಗಿ ಮಾಹಿತಿ ಸೋರಿಕೆಗೆ, ಸೆಕ್ಯುರಿಟಿ ಹ್ಯಾಕರ್, ಮೋಸದ ಜಾಲ-ನಕಲಿ ಭರವಸೆಗಳಿಗೆ ಬಲಿಯಾಗುವಂತೆ ಮಾಡಿದೆ.ಒಟ್ಟಾರೆಯಾಗಿ ಇಂಟರ್‌ನೆಟ್‌ನಲ್ಲಿ ಎಲ್ಲವೂ ಬಟಾಬಯಲಾಗುತ್ತಿದೆ. 

ಮಾತಿಗೆ ಅವಕಾಶವಿಲ್ಲ
ಇಡೀ ದಿನ ಅಂತರ್ಜಾಲದಲ್ಲೇ ವಿಹರಿಸುವುದರಿಂದ ಕುಟುಂಬ ಜೀವನ ದೂರವಾಗಿದೆ. ಬೇಕು ಬೇಡಗಳನ್ನು, ಕನಿಷ್ಠ ಪಕ್ಷ ನಮ್ಮದೇ ಹಸಿವಿನ ಪರಿಜ್ಞಾನವೂ ಇಲ್ಲವಾಗಿದೆ. ಗಂಡ-ಹೆಂಡತಿ ಪರಸ್ಪರ ಕಷ್ಟ ಸುಖದ ಸಂವಹನವೂ ಇಲ್ಲವಾಗಿ ಸಮಯ ಜಾಲತಾಣದಲ್ಲಿ ಅನ್ಯಾಯವಾಗಿ ವ್ಯಯವಾಗುತ್ತಿದೆ. ಗೆಳೆಯರು, ಸಹೋದ್ಯೋಗಿಗಳು, ಹೆತ್ತವರು ದೂರವಾಗಿದ್ದಾರೆ. ಚಾಟಿಂಗ್‌ ನಡೆಸುವವರು ಎದುರು ಕಂಡಾಗ ಹಾಯ್‌-ಬಾಯ್‌ಗೆ ಸೀಮಿತ ವಾಗಿದ್ದೇವೆ. ಚೆನ್ನಾಗಿದ್ದೀರಾ ಎಂದು ಕೇಳಲೂ ಸಮಯವಿಲ್ಲ. ಕುಟುಂಬದ ಸುಖಗಳ ಸಂವಹನಕ್ಕಾಗಿ ಮೀಸಲಿಡಬೇಕಾದ ಸಮಯ ಸಾಮಾಜಿಕ ಜಾಲತಾಣದಲ್ಲಿ ಅನ್ಯಾಯವಾಗಿ ವ್ಯಯವಾಗುತ್ತಿದೆ. ಇದರ ಬದಲು ನಿತ್ಯಜೀವನದಲ್ಲಿ ಜಾಲತಾಣವನ್ನು ಬದಿಗಿಟ್ಟು ಅಕ್ಕಪಕ್ಕದ ಪರಿಸರವನ್ನು ಕಣ್ತೆರೆದು ನೋಡುವ ಅಭ್ಯಾಸ ನಮ್ಮದಾಗಲಿ. ಜೀವನ ಅನುಭವಿಸುವುದೇ ಆಯ್ಕೆಯಾಗಲಿ 21ನೇ ಶತಮಾನದ ತಾಂತ್ರಿಕ ಮತ್ತು ಮಾಹಿತಿ ಕ್ಷೇತ್ರದಲ್ಲಾದ ಕ್ಷಿಪ್ರಗತಿಯ ಬೆಳವಣಿಗೆಯು ಮಾನವನನ್ನು ಏಂಕಾಗಿ ತನದಲ್ಲೂ ಮನರಂಜನೆ ಪಡೆಯುವಂತೆ ಮಾಡಿದೆ. ಇದರ ಜತೆಗೆ ಮಾಹಿತಿ ಮತ್ತು ಜ್ಞಾನಗಳ ಮಧ್ಯೆಯಿರುವ ವ್ಯತ್ಯಾಸ ಮರೆತು ಹೋಗಿದೆ. ಮಾಹಿತಿಗಲೇ ಜ್ಞಾನಗಳಲ್ಲ. ಮಾಹಿತಿಯನ್ನು ಪಡೆದು ಅದನ್ನು ವೃದ್ಧಿಸಿ, ಅನ್ವೇಷನೆಗೆ ಒಳಪಡಿಸಿದಾಗ ದೊರೆಯುವುದೇ ಜ್ಞಾನ. ಇಂಟರ್‌ನೆಟ್‌ ನೀಡುತ್ತಿರುವುದು ಮಾಹಿತಿಗಳಷ್ಟೆ. ಅದರಲ್ಲೂ ಶೇ. 100 ನಿಖರ ಮಾಹಿತಿಗಳ 
ಕೊರತೆ ಇದೆ. ಮನರಂಜನೆ, ಮಾಹಿತಿ ಕಲೆಹಾಕುವಿಕೆಯ ಧಾವಂತದಲ್ಲಿ ಮಾನವೀಯ ಸಂಬಂಧಗಳಿಗೆ ಬೆಲೆ ಇಲ್ಲವಾಗಿದೆ. ಅಂತರ್ಜಾಲದಲ್ಲಿ ಮುಳುಗಿರುವುದರಿಂದ ಸುಂದರ ಪ್ರಕೃತಿಯ ಮಡಿಲಿಗೆ ಹೋದರೂ ಅನುಭವಿಸದೇ ಇರುವ ನತದೃಷ್ಟರು ನಾವಾಗಿದ್ದೇವೆ. ಫೇಸ್‌ಬುಕ್‌, ವಾಟ್ಸಪ್‌ಗ್ಳಲ್ಲೇ ಮುಳುಗಿ ಎಲ್ಲಿ, ಏಕಿದ್ದೇವೆ ಎಂಬ ಅರಿವನ್ನೂ ಕಳೆದುಕೊಂಡಿದ್ದೇವೆ. ಇದರ ಬಗ್ಗೆ ಎಚ್ಚರಿಕೆಯಿಂದಿದ್ದು, ಸುಂದರ ಜೀವನವನ್ನು ಅನುಭವಿಸುವುದೇ ನಮ್ಮ ಆಯ್ಕೆಯಾಗಲಿ.

ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next