Advertisement

 ಹಿರಿಯ ನಾಗರಿಕರಿಗೆ ಬಡ್ಡಿ ಹೆಚ್ಚು, ಗೌರವ ಕಡಿಮೆ!

02:43 PM Apr 17, 2017 | |

ಭಾರತೀಯರು ಹಿಂದೂ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ನಮ್ಮಲ್ಲಿ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಕೊಡಲಾಗಿದೆ. ಬಹುಪಾಲು ಬ್ಯಾಂಕ್‌ಗಳಲ್ಲಿ ಕನಿಷ್ಟ ಶೇ. 0.5 ಬಡ್ಡಿದರದಲ್ಲಿ ಠೇವಣಿ ಬಡ್ಡಿ ಹೆಚ್ಚಳ, ಬಸ್‌, ರೈಲ್ವೆ ಟಿಕೆಟ್‌ ದರದಲ್ಲಿ ಸೋಡಿ, ಆದಾಯ ತೆರಿಗೆಯಲ್ಲಿ ವಿನಾಯಿತಿ ಮೊದಲಾದ ಅನುಕೂಲಗಳನ್ನು ನಾವು ಕಾಣಬಹುದು. ಮುಖ್ಯವಾಗಿ, ಇದು ನಮ್ಮ ಹಿರಿಯರಿಗೆ ನಾವು ನೀಡುತ್ತಿರುವ ಭಿಕ್ಷೆ ಎಂದುಕೊಳ್ಳುವ ಅಧಿಕ ಪ್ರಸಂಗವನ್ನು ನಾವು ಮಾಡಬಾರದು. ಹಿರಿಯರು ನಮಗೆ, ನಮ್ಮ ಸಮಾಜಕ್ಕೆ ಒದಗಿಸಿದ ಸೇವೆಗೆ ನಾವು ಸಲ್ಲಿಸುವ ಪುಟ್ಟ ಕೃತಜ್ಞತೆಯ ಸ್ವರೂಪವಿದಷ್ಟೇ.

Advertisement

 ಆದರೆ ಸಮಾಜದ ವರ್ತನೆ ವ್ಯತಿರಿಕ್ತವಾಗಿದೆ. ಹೆಚ್ಚು ಬಡ್ಡಿ ಕೊಟ್ಟರೆ ಆಯ್ತಲ್ಲ, ಮತ್ತೆ ಗೌರವವನ್ನೂ ಕೊಡಬೇಕೆ ಎಂಬ ಮನೋಭಾವ ಕಾಣುತ್ತಿದೆ. ಬಸ್‌, ರೈಲು ಪ್ರಯಾಣದಲ್ಲಿ  ರಿಯಾಯಿತಿಯ ಸೌಲಭ್ಯ ಕೇಳುವಾಗ ಆ ಹಿರಿಯರು ಗುಬ್ಬಚ್ಚಿಗಳಂತೆ ನಡೆದುಕೊಳ್ಳುವುದು ಹಿಂಸೆ ಅನ್ನಿಸುತ್ತದೆ. ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌ ಹಣ್ಣು ಹಣ್ಣು ಮುದುಕರಲ್ಲಿ  ಸೀನಿಯರ್‌ ಸಿಟಿಜನ್‌ ಕಾರ್ಡ್‌ನ ಒರಿಜಿನಲ್‌ ತೋರಿಸಲೇಬೇಕು ಎಂದು ಹಟ ಹಿಡಿದಿದ್ದನ್ನು  ಕಂಡಾಗ ಕಾಡಿದ್ದು ಇದೇ ಛೇ! ಇತ್ತೀಚಿನ ದಿನಗಳಲ್ಲಂತೂ ಬಸ್‌ನಲ್ಲಿ ಹಿರಿಯರು ಬಂದರೆ ಸೀಟ್‌ ಬಿಟ್ಟುಕೊಡುವ ಒಬ್ಬ ಯುವ ಜನಾಂಗದವರನ್ನು ಕಾಣಲಾಗುತ್ತಿಲ್ಲ. ಹಿರಿಯರನ್ನು ಗೌರವಿಸದಿದ್ದರೆ ನಾವು ಯಾವುದೇ ಪರಂಪರೆಯನ್ನು ಮುಂದುವರೆಸುತ್ತಿಲ್ಲ ಎಂತಲೇ ಅರ್ಥ. ಈ ಅವಸ್ಥೆ ನಾವು ವೃದ್ಧರಾದಾಗಲೂ ಮರುಕಳಿಸುತ್ತದೆ ಎಂಬುದನ್ನು  ನೆನಪಿಸಿಕೊಳ್ಳಬಹುದು. 

 ಇದೇ ವೇಳೆ ಬಹುಸಂಖ್ಯಾತ ನಿವೃತ್ತರ ನಿಲುವು ಕೂಡ ಚರ್ಚಾಸ್ಪದ ಎನ್ನಿಸುತ್ತದೆ. ಸರ್ಕಾರ, ಖಾಸಗಿ ವ್ಯವಸ್ಥೆ ಕೊಡುವ ರಿಯಾಯ್ತಿಗಳನ್ನು ಹಿರಿಯರು ಬಳಸಿಕೊಳ್ಳುವುದನ್ನು ಆಕ್ಷೇಪಿಸಬೇಕಾಗಿಲ್ಲ. ಅವರಿಗೆ ಸಲ್ಲಬೇಕಾದ ಮರ್ಯಾದೆಯನ್ನು ಒಪ್ಪಿಸೋಣ. ಆದರೆ ಹಿರಿಯರು, ಉದ್ಯೋಗದಿಂದ ನಿವೃತ್ತರು ಸಮಾಜಮುಖೀ ಚಟುವಟಿಕೆಗಳಿಂದಲೂ ವಿಮುಖರಾಗಿರುವುದು ಎಷ್ಟು ಸರಿ? ಬಹುವರ್ಷಗಳ ಕಾಲ ಉದ್ಯೋಗದಲ್ಲಿದ್ದು ಅವರು ಅನುಭವಗಳನ್ನು ಪಡೆದುಕೊಂಡಿರುತ್ತಾರೆ. ಆ ಅನುಭವವನ್ನು ಸಾಮಾಜಿಕ ಸೇವೆಯಲ್ಲಿ, ದಿನದ ಒಂದೆರಡು ಗಂಟೆ ಮಾತ್ರ ಮೀಸಲಿಟ್ಟರೂ ಸಾಕಾಗುತ್ತದೆ. ಆದರೆ ನೌಕರಿಯಿಂದ ನಿವೃತ್ತಿ ಎಂದರೆ ಇನ್ನು ತಮ್ಮ ಜೀವನದಲ್ಲಿ ಉಳಿದ ಸಮಯ ಆರಾಮವಾಗಿ ಯಾವ ಜವಾಬ್ದಾರಿಯಿಲ್ಲದೆ ಬಾಳುವುದು ಎಂದು ಅವರು ತೀರ್ಮಾನಿಸಿಬಿಟ್ಟಿರುತ್ತಾರೆ.

 ಸ್ವಾರಸ್ಯ ನೋಡಿ. ಶಿಕ್ಷಕ ವರ್ಗದ ಹಲವರು ನಿವೃತ್ತಿಯ ನಂತರ ಖಾಸಗಿ ವ್ಯವಸ್ಥೆಯಲ್ಲಿ ಮತ್ತೆ ವೇತನಕ್ಕೆ ಪಾಠ ಮಾಡಬಲ್ಲರು. ಇತರ ಕ್ಷೇತ್ರದ ಪರಿಣತರು ಖಾಸಗಿ ವ್ಯವಸ್ಥೆಯಡಿ ಉದ್ಯೋಗ ಪಡೆದುಕೊಳ್ಳಬಲ್ಲರು. ಆದರೆ ಸಾಮಾಜಿಕ ಸೇವೆಗೆ ಮಾತ್ರ ತಮ್ಮ ಸಮಯವನ್ನು ವಿನಿಯೋಗಿಸಲಾರರು. ಇದೂ ಪ್ರಶ್ನಾರ್ಹವೇ. 

 ಹಿರಿಯ ನಾಗರಿಕರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ UNO ಶೃಂಗಸಭೆಯಲ್ಲಿ ಸುದೀರ್ಘ‌ ಚರ್ಚೆಯಾಗಿ 1991ರಲ್ಲಿ ಪಂಚಶೀಲ ತತ್ವಗಳನ್ನು ಅನುಮೋದಿಸಲಾಗಿದೆ. ಇದನ್ನು ಅನುಸರಿಸಿ ಭಾರತ ಸರ್ಕಾರವೂ ಸಹ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಸಂವಿಧಾನದ ಕಲಂ 41 ಮತ್ತು 46ರಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ ವಿವಿಧ ಇಲಾಖೆಗಳಲ್ಲಿ ನಾನಾ ತರದ ವಿಶೇಷ ರಿಯಾಯಿತಿಗಳನ್ನು ಸರ್ಕಾರ ಒದಗಿಸಿದೆ. ಹಿರಿಯ ನಾಗರಿಕರೆಂದರೆ ಅವರು 60 ವರ್ಷ ತುಂಬಿದವರು. ಆದರೂ ಕೆಲವೊಂದು ಇಲಾಖೆಗಳು ಈ ವಯಸ್ಸಿನ ಮಿತಿಯನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿಕೊಳ್ಳುತ್ತಿವೆ ಹಾಗೂ ರಿಯಾಯಿತಿಗಳನ್ನು ಬದಲಾಯಿಸುತ್ತಿವೆ.

Advertisement

ಸಾರಿಗೆ ರಿಯಾಯಿತಿಗಳು
1. ಬಸ್‌: ವಯೋಮಿತಿ-65 ವರ್ಷ. ಕರ್ನಾಟಕ ಸರ್ಕಾರ ತನ್ನ ರಾಜಹಂಸದವರೆಗಿನ ಎಲ್ಲಾ ಬಸ್‌ ಪ್ರಯಾಣಕ್ಕೆ ಶೇ. 25 ರಿಯಾಯಿತಿ ನೀಡುತ್ತಿದೆ ಹಾಗೂ ಮುಂದಿನ ಎರಡು ಆಸನಗಳನ್ನು ಇವರಿಗಾಗಿಯೇ ಮೀಸಲಾಗಿರಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೀಡುವ ಹಿರಿಯ ನಾಗರಿಕ ಕಾರ್ಡ್‌ ಈ ರಿಯಾಯಿತಿ ಪಡೆಯಲು ಕಡ್ಡಾಯ ಎಂಬ ಈ ಹಿಂದಿನ ನಿಯಮವನ್ನು ತೆಗೆದುಹಾಕಲಾಗಿದೆ. ಒಂದೊಮ್ಮೆ ಅವರದೇ ಹಿರಿಯರ ಗುರುತು ಪತ್ರ ಬೇಕಿದ್ದರೆ ಕೆಎಸ್‌ಆರ್‌ಟಿಸಿಯ ಎಲ್ಲಾ ತಾಲ್ಲೂಕು ಬಸ್‌ ನಿಲ್ದಾಣಗಳಲ್ಲಿ ಕಾರ್ಡ್‌ ವಿತರಣೆ ಮಾಡುತ್ತಿದೆ.  ಅಲ್ಲಿಗೆ ಒಂದು ಅರ್ಜಿ ಎರಡು ಫೋಟೋ, ವಿಳಾಸ ಹಾಗೂ ವಯಸ್ಸಿನ ದ‌ೃಢೀಕರಣ ಮೂಲ ದಾಖಲಾತಿ (ನಕಲು ಪ್ರತಿಯೊಂದಿಗೆ) ಶುಲ್ಕ ರೂ. 1 ಸಲ್ಲಿಸಿದಲ್ಲಿ,  ಸ್ಥಳದಲ್ಲೇ ಕಾರ್ಡ್‌ ವಿತರಣೆ ಮಾಡಲಾಗುತ್ತದೆ. ದೇಶದ ಹರಿಯಾಣ, ಪಂಜಾಬ್‌, ಛತ್ತೀಸಗಢ, ತಮಿಳುನಾಡು, ರಾಜಾಸ್ತಾನ, ಹಿಮಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲಿ 60ನ್ನು ಹಿರಿಯ ನಾಗರಿಕರ ವಯೋ ಮಾನದಂಡವಾಗಿ ಬಳಸಲಾಗಿದೆ. ಕರ್ನಾಟಕದಲ್ಲೂ ಈ ವಯಸ್ಸಿನ ಮಿತಿಯನ್ನು 60ಕ್ಕೆ ಇಳಿಸಲು ಸಂಘಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.

 2. ರೈಲು: ಹಿರಿಯರಿಗೆ ಅತ್ಯಂತ ಆರಾಮದಾಯಕ ಸಾರಿಗೆ ವ್ಯವಸ್ಥೆ.  ವಯೋಮಿತಿ-ಪುರುಷರಿಗೆ-60 ವರ್ಷ. ಮಹಿಳೆಯರಿಗೆ-58 ವರ್ಷ. ರಾಜಧಾನಿ, ಶತಾಬ್ಧಿ, ತುರಂತ್‌ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲುಗಳನ್ನೊಳಗೊಂಡಂತೆ ಎಲ್ಲಾ ರೈಲುಗಳಲ್ಲಿ (ತತ್ಕಾಲ್‌ ಪ್ರಯಾಣ ಹೊರತುಪಡಿಸಿ) ಎಲ್ಲಾ ಹಂತದ ಪ್ರಯಾಣಕ್ಕೆ ಪುರುಷರಿಗೆ-ಶೇ. 40 ಮತ್ತು ಮಹಿಳೆಯರಿಗೆ-ಶೇ. 50 ರಿಯಾಯಿತಿ ದೊರೆಯಲಿದೆ. 45 ವರ್ಷ ಮೀರಿದ ಮಹಿಳೆಯರಿಗೆ ಮತ್ತು 60 ವರ್ಷ ಮೀರಿದ ಪುರುಷರಿಗೆ ಮುಂಗಡ ಬುಕ್ಕಿಂಗ್‌ನಲ್ಲಿ ಕೆಳಭಾಗದ ಸ್ಲಿàಪರ್‌ ಲಭ್ಯವಿದ್ದಲ್ಲಿ ಆದ್ಯತೆಯ ಮೇಲೆ ವಿತರಿಸಲಾಗುತ್ತದೆ. ಇವರಿಗಾಗಿಯೇ ಪ್ರತಿ ಬೋಗಿಯಲ್ಲಿ ಎರಡು ಸೀಟುಗಳನ್ನು ಕಾದಿರಿಸಲಾಗಿದೆ.

 ಮುಖ್ಯ ರೈಲು ನಿಲ್ದಾಣಗಳಲ್ಲಿ ಹಿರಿಯ ನಾಗರಿಕರಿಗಾಗಿ ವೀಲ್‌ ಚೇರ್‌ಗಳನ್ನು ಒದಗಿಸಲಾಗಿದ್ದು, ಹಣ ನೀಡಿ ಅದನ್ನು ಬಳಸಿಕೊಳ್ಳಬಹುದು. ಅತ್ಯಂತ ಬ್ಯುಸಿ ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ಗಳಲ್ಲಿ ಇವರಿಗಾಗಿ ಪ್ರತ್ಯೇಕ ಬುಕ್ಕಿಂಗ್‌ ವ್ಯವಸ್ಥೆಯಿದೆ.

ವಿಮಾನಯಾನ: ವಯೋಮಿತಿ-63 ವರ್ಷ. ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ಕೆಲವು ನಿಯಮಗಳೊಂದಿಗೆ ಅಂತಾರಾಷ್ಟೀಯ ಪ್ರಯಾಣಕ್ಕೆ ಸಾಮಾನ್ಯ ಎಕಾನಮಿ ಕ್ಲಾಸ್‌ನ ದರದಲ್ಲಿ ಶೇ. 50 ರಿಯಾಯಿತಿ ಒದಗಿಸಿವೆ. ಏರ್‌ ಇಂಡಿಯಾ ಭಾರತದೊಳಗಿನ ಪ್ರಯಾಣಕ್ಕೆ ಶೇ. 55 ರಿಯಾಯಿತಿ ನೀಡಿದೆ.

ಆದಾಯ ತೆರಿಗೆ ಇಲಾಖೆ: ವಯೋಮಿತಿ: 60-80 ವರ್ಷ, ಆದಾಯ ವಾರ್ಷಿಕ ರೂ. 2.5 ಲಕ್ಷದವರೆಗೆ  ತೆರಿಗೆ ಇಲ್ಲ. ರೂ. 2.5ರಿಂದ 5 ಲಕ್ಷದವರೆಗೆ ಶೇ. 5  ಅತ್ಯಂತ ಹಿರಿಯ ನಾಗರಿಕರು: 80 ವರ್ಷಕ್ಕೂ ಹೆಚ್ಚು.  ಆದಾಯ ವಾರ್ಷಿಕ ರೂ. 3 ಲಕ್ಷದವರೆಗೆ  ತೆರಿಗೆ ಇಲ್ಲ. 3ರಿಂದ 5 ಲಕ್ಷದವರೆಗೆ ಶೇ. 5 ಮತ್ತು 5ರಿಂದ 10 ಲಕ್ಷ ರೂ.ವರೆಗೆ ಶೇ. 20. ಅಂಚೆ ಇಲಾಖೆಯಲ್ಲಿ ಹಿರಿಯ ನಾಗರಿಕರ ಪೆನ್ಶನ್‌ ಖಾತೆಗೆ ಹತ್ತಿರಹತ್ತಿರ ಶೇ. 9 ಬಡ್ಡಿ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ವೃದ್ದಾಪ್ಯ ವೇತನ/ವಿಧವಾ ಮಾಸಾಶನ ಫ‌ಲಾನುಭವಿಯಾಗಲು ತಾಲ್ಲೂಕಿನ ತಹಶೀಲ್ದಾರ್‌ ಕಚೇರಿಯಲ್ಲಿ ಅಗತ್ಯ ದಾಖಲಾತಿ ನೀಡಿ ಕಾರ್ಡ್‌ ಪಡೆಯಲೇಬೇಕು. 

ಬ್ಯಾಂಕ್‌ ಠೇವಣಿ-ಶೇಕಡಾ ಅರ್ಧ ಬಡ್ಡಿ ಜಾಸ್ತಿ
ಸೀನಿಯರ್‌ ಸಿಟಿಜನ್‌ ಎನ್ನುವ ವರ್ಗಕ್ಕೆ ಬ್ಯಾಂಕಿಂಗ್‌ ವಲಯದಲ್ಲಿಯೂ ವಿಶೇಷ ಸವಲತ್ತುಗಳು ಇವೆ. ಜೀವನದ ಮುಸ್ಸಂಜೆಯಲ್ಲಿ ದುಡಿಯುವ ಶಕ್ತಿ ಇಂತಹವರಿಗೆ ಕಡಿಮೆಯಿರುವುದರಿಂದ ಅವರು ಕಸುವು ಇದ್ದಾಗ ದುಡಿದು ಕೂಡಿಹಾಕಿದ ಹಣಕ್ಕೆ ಎಲ್ಲಾ ಬ್ಯಾಂಕುಗಳು ಇತರರಿಗಿಂತ ಶೇ. 0.5 ಬಡ್ಡಿ ದರವನ್ನು ಹೆಚ್ಚು ನೀಡುತ್ತಿದ್ದಾರೆ. ಇದು 2001ರ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಅದೇ ರೀತಿ ಕೇಂದ್ರ ಸರ್ಕಾರ ರೂಪಿಸಿದ ಸೀನಿಯರ್‌ ಸಿಟಿಜೆನ್ಸ್‌ ಸೇವಿಂಗ್ಸ್‌ ಸ್ಕೀಮ್‌ 2004 ಸಹ ಬ್ಯಾಂಕಿನ ಮೂಲಕ ಆರಂಭಿಸಬಹುದಾಗಿದೆ.

ರಿವರ್ಸ್‌ ಮಾರ್ಟ್‌ಗೇಜ್‌
60 ವಯಸ್ಸಾದ, ಸ್ವಂತ ಮನೆ ಹೊಂದಿರುವ ಜೀವನ ನಿರ್ವಹಣೆ ಕಷ್ಟವಾದವರಿಗೆ ರಿಸರ್ವ್‌ ಬ್ಯಾಂಕ್‌ ರೂಪಿಸಿದ ಯೋಜನೆಯಿದು. ತಮ್ಮ ಸ್ವಂತ ಮನೆಯನ್ನು ಬ್ಯಾಂಕಿಗೆ ದೀಡು ಮಾಡಿದರೆ ಬ್ಯಾಂಕು ಪ್ರತಿ ತಿಂಗಳು ಆ ವೃದ್ಧಾಪ್ಯರಿಗೆ ಪಿಂಚಣಿಯಂತೆಯೇ ನಿರ್ದಿಷ್ಟ ಹಣವನ್ನು ಪ್ರತಿ ತಿಂಗಳು ಅವರ ಜೀವಿತಾವಧಿಯವರೆಗೆ ನೀಡುತ್ತದೆ. ಮನೆಯ ವಾರಸುದಾರರು ಅದೇ ಮನೆಯಲ್ಲಿ ವಾಸ ಸಹ ಮಾಡಬಹುದು. ಅವರ ಜೀವಿತಾವಧಿಯ ನಂತರ ಅದರ ವಾರಸುದಾರರು ಬ್ಯಾಂಕಿಗೆ ಬರಬೇಕಾದ ಹಣವನ್ನು ಪಾವತಿಸಿ ಮನೆ ಮರಳಿ ಪಡೆಯಬಹುದು. ಅದಿಲ್ಲದಿದ್ದಲ್ಲಿ ಬ್ಯಾಂಕು ಆ ಆಸ್ತಿಯನ್ನು ಮಾರಾಟ ಮಾಡಿ ತನಗೆ ಬರಬೇಕಾದ ಹಣವನ್ನು ಪಡೆಯುತ್ತದೆ. ಮುಖ್ಯವಾಗಿ, ಮನೆಯೊಂದನ್ನು ಮಾರಾಟ ಮಾಡದೆ ಅದರ ಬಾಬಿ¤ನಲ್ಲಿಯೇ ಜೀವನ ನಿರ್ವಹಣೆಯ ಹಣವನ್ನು ತಮ್ಮ ಕೊನೆ ಉಸಿರಿನವರೆಗೆ ಪಡೆಯುವ ಯೋಜನೆಯಿದು.

 ಪಿಂಚಣಿದಾರರಿಗೆ ಬ್ಯಾಂಕಿನಲ್ಲಿ ಸಾಲ ಸೌಲಭ್ಯ
 ನೀವು ಪಿಂಚಣಿದಾರರೆಂದು ನಿರಾಶರಾಗಬೇಕಿಲ್ಲ. ನೀವು 72 ವರ್ಷದೊಳಗಿನ ಪಿಂಚಣಿದಾರರಾಗಿದ್ದಲ್ಲಿ ಹೆಚ್ಚಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ನಿಮ್ಮ ತಿಂಗಳ ಪಿಂಚಣಿಯ 10ರಿಂದ 24 ಪಟ್ಟು ಸಾಲ ನೀಡಲಿದೆ. ಅದನ್ನು 24ರಿಂದ 60 ತಿಂಗಳು ನಿಮ್ಮ ಪಿಂಚಣಿಯಿಂದ ಕಂತು ಮುರಿದುಕೊಳ್ಳುತ್ತಾರೆ. ನೆನಪಿಡಿ, ಅದಕ್ಕೆ ನಿಮ್ಮ ನಂತರ ಕುಟುಂಬ ಪಿಂಚಣಿ ಪಡೆಯುವವರು ಜಾಮೀನುದಾರರಾಗಿರುತ್ತಾರೆ. ಅವರಿಲ್ಲದಿದ್ದಲ್ಲಿ ಇತರೆಯವರು ಜಾಮೀನು ಹಾಕಬೇಕಾಗುತ್ತದೆ.

ನಾಗರಿಕ ಸನದು
ಬ್ಯಾಂಕಿನವರು ನಾಗರಿಕ ಸನದಿನ ಮೂಲಕ ತಾನು ಏನೆಲ್ಲಾ ಸೇವೆ ನೀಡುತ್ತೇನೆ ಎಂದು ಘೋಷಿಸಿಕೊಳ್ಳುತ್ತದೆ.  ಇದರಲ್ಲಿ ಬ್ಯಾಂಕ್‌ ಹಿರಿಯ ನಾಗರಿಕರಿಗೆ ವಿಶೇಷ ಸೇವೆ ನೀಡುತ್ತೇನೆ ಎಂದು ಹೇಳಿವೆ. ಅದರ ಪ್ರಕಾರ ಬ್ಯಾಂಕಿನಲ್ಲಿ ಪಿಂಚಣಿ ಪಡೆಯಲು ಹಿರಿಯ ನಾಗರಿಕರಿಗೆ ವಿಶೇಷ ಮುಂಗಟ್ಟೆ. ಎಲ್ಲರಂತೆ ಸರತಿ ಸಾಲಿನಲ್ಲಿ ನಿಲ್ಲದೆಯೇ ಅವರಿಗೆ ಹೆಚ್ಚಿನ ಸೇವೆ ಮುಂತಾದ ಹೆಚ್ಚುವರಿ ಸೇವೆ ನೀಡಲಾಗುವುದು ಎಂದು ಹೇಳಿಕೊಂಡಿವೆ. ಇದು ಚಾಲ್ತಿಯಲ್ಲಿದೆಯೇ ಎಂಬ ಮೌಲ್ಯ ಮಾಪನ ನಿಮಗೆ ಬಿಟ್ಟಿದ್ದು.

ಸೀನಿಯರ್‌ ಸಿಟಿಜನ್‌ ಕಾರ್ಡ್‌ ಬೇಕೆಂದರೆ…..
ಪ್ರತಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರುವ ಹಿರಿಯ ನಾಗರಿಕರ ಸೇವಾ ವಿಭಾಗ ಈ ಕಾರ್ಡ್‌ಗಳನ್ನು ಒದಗಿಸುತ್ತದೆ. ನಮಗೆ 60 ವರ್ಷ ಆಗಿದೆ ಎಂದು ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇದೇ ವಿಭಾಗದಿಂದ ಅಂಗವಿಕಲರ ಗುರುತು ಚೀಟಿ ಕೂಡ ವಿತರಿಸಲ್ಪಡುತ್ತದೆ.

ಹಿರಿಯರಾಗೋದು ಯಾವತ್ತು? ಬರೀ ಗೊಂದಲ!
 ಒಂದೊಂದು ಸೀನಿಯರ್‌ ರಿಯಾಯಿತಿಗೆ ಒಂದೊಂದು ವಯಸ್ಸು ಅನ್ವಯವಾಗುತ್ತದೆ. ಒಟ್ಟಾರೆ ಅರವತ್ತರ ಅರಳುಮರಳು ಸ್ಥಿತಿಯಲ್ಲಿದ್ದವರಿಗೆ ಇದು ಇನ್ನಷ್ಟು ಗೊಂದಲಕಾರಿ. 

ಈ ಸಂಬಂಧ ಕೇಂದ್ರ ಸರ್ಕಾರ ಒಂದು ಸ್ಪಷ್ಟ ಕಾನೂನನ್ನು ಜಾರಿಮಾಡಿ, ಯಾವ ವಯಸ್ಸಿಗೆ ಓರ್ವ ನಾಗರಿಕ ಹಿರಿಯನ ವ್ಯಾಖ್ಯೆಗೆ ಒಳಪಡುತ್ತಾನೆ ಎಂಬುದನ್ನು ನಿರ್ದಿಷ್ಟಪಡಿಸಬೇಕು. ಈ ನಿಯಮಗಳನ್ನು ಎಲ್ಲ ಕೇಂದ್ರ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುವಂತಾಗಬೇಕು.  ಹಿರಿಯ ನಾಗರಿಕರ ದಿನಾಚರಣೆಯಲ್ಲೂ ಇಂತದ್ದೇ ಗೊಂದಲಗಳಿವೆ. ಒಂದೆಡೆ ಆಗಸ್ಟ್‌ 21 ಹಿರಿಯ ನಾಗರಿಕರ ದಿನವೆಂದರೆ ಆಗಸ್ಟ್‌ 8, ಅಕ್ಟೋಬರ್‌ 1, ಆಗಸ್ಟ್‌ 14 ಮೊದಲಾದ ದಿನಗಳನ್ನು ಕೂಡ ಒಟ್ಟರ್ಥದಲ್ಲಿ ಹಿರಿಯರಿಗಾಗಿ ಮುಡಿಪಿಟ್ಟು ಆಚರಿಸುವ ಪರಿಯಿದೆ. ಹಿರಿಯರಾಗಿ ಬಡ್ತಿ ಪಡೆಯುವ ವಯೋಮಾನವನ್ನು ವಿಶ್ವಮಟ್ಟದಲ್ಲಿ, ಸಾಧ್ಯವಿಲ್ಲವಾದರೆ ದೇಶದಾದ್ಯಂತ ಏಕನೀತಿಯಾಗಿ ನಿಗದಿಪಡಿಸುವ ಅಗತ್ಯವಿದೆ.

ಹಿರಿಯರಿಗೊಂದು ವೆಬ್‌ ಊರುಗೋಲು…..
ಕೇಂದ್ರ ಸರ್ಕಾರ ನಿವೃತ್ತರಾದವರ ಸಹಾಯಕ್ಕೆ //pensionersportal.gov.in/  ಎಂಬ ವೆಬ್‌ಸೈಟ್‌ನೆ ನಿರ್ವಹಿಸುತ್ತದೆ. ಇದರಲ್ಲಿ ಪೆನ್ಷನ್‌ ಕ್ಯಾಲ್ಕುಲೇಟರ್‌, ಪೆನ್ಷನರ್‌ ನಿಯಮಗಳು, ಯೋಜನೆಗಳು, ಸುತ್ತೋಲೆಗಳು, ಫಾರಂಗಳು, ಹಿರಿಯ ನಾಗರಿಕರ ಸಂಪೂರ್ಣ ಸೌಲಭ್ಯಗಳ ವಿವರ ಸೇರಿದಂತೆ ಬಹುದೊಡ್ಡ ಮಟ್ಟದ ವಿಚಾರಗಳು ಲಭಿಸುತ್ತವೆ. 

ಇಲ್ಲಿರುವ ಉಲ್ಲೇಖವನ್ನೇ ನಂಬುವುದಾದರೆ, ನಿರಂತರವಾಗಿ ಈ ವೆಬ್‌ ನವೀಕರಿಸಲಾಗಿದೆ. ಬದುಕಿನ ಮುಂದಿನ ಹಣ ತೊಡಗಿಸುವ ಮಾಹಿತಿ ಬೇಕು ಎನ್ನುವ ಅಂತಜಾìಲದ ಬಳಕೆದಾರ ಹಿರಿಜನಕ್ಕೆ ಈ ವೆಬ್‌ ಮಾಹಿತಿ ನೂರಾರು. ಇದರಲ್ಲಿರುವ ಮಾಹಿತಿಗಳ ಜೊತೆಗೆ ಕೊನೆಯಲ್ಲಿ ವೃದ್ಧಾಶ್ರಮಗಳ ವಿವರವನ್ನೂ ನೀಡಲಾಗಿದೆ.

 ಬ್ಯಾಂಕಿಗೆ ಬರಲಾಗದವರ ಸಹಾಯಕ್ಕೆ ಆರ್‌ಬಿಐ ನಿಯಮ
 ಹಿರಿಯರ ಸಹಾಯಕ್ಕೆ ಹಲವು ನಿಯಮಗಳಿವೆ, ಹೇಳುವವರಿಲ್ಲವಷ್ಟೇ. ತೀರಾ ವಯಸ್ಸಾದ ನಂತರ ಬ್ಯಾಂಕಿಗೂ ಬರಲಾರದ, ಸಹಿ ಮಾಡಲು ಅಸಮರ್ಥರಾದವರು ಅಥವಾ ಕಾಯಿಲೆಯಿಂದಾಗಿ ಸಹಿ ಮಾಡಲು ಆಗದ ಮತ್ತು ದೇಹದ ನಿಷ್ಕಿ$›àಯತೆಯಿಂದಾಗಿ ಹೆಬ್ಬೆಟ್ಟಿನ ಗುರುತು ಸರಿಯಾಗಿ ಹಾಕಲಾರದ ಖಾತೆದಾರರು ಹಣ ಹಿಂಪಡೆಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಅವಕಾಶ ಮಾಡಿಕೊಟ್ಟಿದೆ.

ಆರ್‌ಬಿಐ ಆದೇಶದ ಪ್ರಕಾರ (Master Circular DBOD No.Leg.BC. 21 /09.07.006/2012ಧಿ13 July  2, 2012)  ಇಂತಹ ವ್ಯಕ್ತಿಗಳು ಹಣ ಹಿಂಪಡೆಯುವ ಚೆಕ್‌ ಅಥವಾ ಹಣ ಹಿಂಪಡೆಯುವ ಫಾರಂನಲ್ಲಿ ಬ್ಯಾಂಕಿಗೆ ಗೊತ್ತಿರುವ ಎರಡು ಜನ ಸಾಕ್ಷಿಗಳ ಸಮ್ಮುಖದಲ್ಲಿ ಖಾತೆದಾರನ ಎಡ ಹೆಬ್ಬೆಟ್ಟಿನ ಗುರುತು ಹಾಕಿಸಿ ಅದಕ್ಕೆ ಸಾಕ್ಷಿಗಳ ಸಹಿ ತೆಗೆದುಕೊಳ್ಳಬೇಕು. ಅದರಲ್ಲಿ ಒಂದು ಸಾಕ್ಷಿ$ಆ ಬ್ಯಾಂಕಿನ ಅಧಿಕಾರಿಯಾಗಿರಬೇಕು. ಒಂದೊಮ್ಮೆ ಹೆಬ್ಬೆಟ್ಟಿನ ಗುರುತು ತೆಗೆದುಕೊಳ್ಳಲು ಬಾರದಿದ್ದಲ್ಲಿ ಇತರೆ ಅಂಗಗಳ ಗುರುತು ತೆಗೆದುಕೊಳ್ಳಬೇಕು. ಹಣವನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಖಾತೆದಾರರನ್ನು ವಿಚಾರಿಸಿ ಚೆಕ್‌ನಲ್ಲಿ ಅವರು ತಿಳಿಸಿದ ವ್ಯಕ್ತಿಯ ಸಹಿ ಪಡೆದು ಹಣ ಪಡೆಯುವಾತನನ್ನು ಗುರುತಿಸಲು ಬ್ಯಾಂಕಿಗೆ ಗೊತ್ತಿರುವ ಮತ್ತೆರಡು ಜನ ಸಾಕ್ಷಿಗಳ ಸಹಿ ಪಡೆದು ಆತನಿಗೆ ಹಣ ನೀಡಬೇಕಾಗುತ್ತದೆ. 

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ.

Advertisement

Udayavani is now on Telegram. Click here to join our channel and stay updated with the latest news.

Next